ಸ.ರಘುನಾಥ ಅಂಕಣ: ನರಸಿಂಗ ಅಪ್ಪನ ಜೊತೆ ಬಣ್ಣ ಹಚ್ಕೊತಾನಂತೆ
ಹತ್ತನೆಯ ತರಗತಿಯಲ್ಲಿ ನರಸಿಂಗ ಫೇಲಾದ. ನಾನು ಪಾಸಾದೆ. ನಿನ್ನ ಮಗನ ಇದು ಎಂದು ನಕ್ಕು, ಅಮ್ಮಯ್ಯನ ಮನಸ್ಸನ್ನು ಅಪ್ಪ ನೋಯಿಸಿದನಂತೆ. ಅವಳು ಅಳುತ್ತ ಹೇಳಿದಾಗ, ಅಪ್ಪಯ್ಯ, ತನ್ನ ಸಹಜ ಮುಗುಳುನಗೆ ಬೀರಿದನಂತೆ. ಮೊದಲ ಸಲ ನನಗೆ ನರಸಿಂಗನ ಬಗ್ಗೆ ಅಯ್ಯೋ ಅನ್ನಿಸಿತು. ಅವನು ದಾರಿಯಲ್ಲಿ ಎದುರಾದಾಗ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸು ಮಾಡಬಹುದು. ಚಿಂತಿಸಬೇಡ ಎಂದು ಹೇಳಿದೆ. ಅದಕ್ಕವನು ಚಿಂತೆ ಯಾಕೆ ಅಂದ. ಗಟ್ಟಿ ಮನಸ್ಸಿನವನು ಅಂದುಕೊಂಡೆ.
ನಾನು ಪಿಯುಸಿ ಮುಗಿಸಿದೆ. ನರಸಿಂಗ ಹತ್ತನೆಯ ತರಗತಿ ಪಾಸು ಅನ್ನಿಸಿಕೊಂಡ. ಕಾಲೇಜು ಸೇರಿದ ಮೇಲೆ ನಾನು ಊರಿನ ಸಂಪರ್ಕದಿಂದ ದೂರಾಗುತ್ತಾ ಹೋದೆ. ಅಪ್ಪನ ಇಚ್ಚೆಯೂ ಇದೇ ಆಗಿತ್ತು. ಅಂದು ಅವನ ದೃಷ್ಟಿಯಲ್ಲಿ ನಾನಷ್ಟೇ ಪ್ರಯೋಜಕ.
ಸ.ರಘುನಾಥ ಅಂಕಣ: ನರಸಿಂಗರಾಯನ ಕಥೆಯ ಆರಂಭ ಅವನ ಬಾಲ್ಯದಿಂದಲೆ
ಹಾಸಿದರೆ ಹೊದೆಯೋಕಿರಲ್ಲ ಎಂಬ ಅಪ್ಪನ ವ್ಯಂಗ್ಯ
ನರಸಿಂಗ ದನಕಾಯೋಕೆ ಹೋಗ್ತಿದ್ದಾನೆ. ಇನ್ನೇನು ಮಾಡ್ತಾನೆ ಹೇಳು. ಅಪ್ಪನ ಜೊತೆ ಬಣ್ಣ ಹಚ್ಕೊತಾನಂತೆ. ಅದರಿಂದ ಹೊದ್ದರೆ ಹಾಸೋಕಿರಲ್ಲ, ಹಾಸಿದರೆ ಹೊದೆಯೋಕಿರಲ್ಲ ಎಂದ ಅಪ್ಪನ ವ್ಯಂಗ್ಯದ ಮಾತು ಅತೀ ಎನ್ನಿಸಿತು. ನನಗೆ ನರಸಿಂಗ ಬೇರೊಂದು ರೀತಿಯಲ್ಲಿ ಪರಿಚಯವಾದ.
ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ ನರಸಿಂಗನ ಬಗ್ಗೆ ನನ್ನಲ್ಲಿದ್ದ ಕಹಿಭಾವನೆ ಕಡಿಮೆಯಾಗುತ್ತಿತ್ತು. ಈಗಂತೂ ಸಂಪೂರ್ಣವಾಗಿ ಇಲ್ಲವಾಗಿತ್ತು. ಇದಕ್ಕೆ ಅವನ ವ್ಯಕ್ತಿತ್ವ ಹಾಗು ಏನಾದರೂ ಮಾಡಬಲ್ಲೆನೆಂಬ ಆತ್ಮವಿಶ್ವಾಸ, ಎಂದಿಗೂ ಗೆಳೆಯರ ಪರ ನಿಲ್ಲುವ ಗುಣ ಕಾರಣ. ನನಗೆ ಇಂಥ ಗೆಳೆಯರಿಲ್ಲವಲ್ಲ ಎಂದು ಕೊರಗಿದ್ದೂ ಉಂಟು.
ಊರಿನ ಯಾರದೇ ಏಳಿಗೆ ಕಂಡರೂ ಹಿಗ್ಗುತ್ತಿದ್ದ
ನಾನು ಊರಿಗೆ ಹೋದಾಗ, ಎದುರಾದಾಗ ಅವನೇ ಮುಂಚಿತವಾಗಿ ನಕ್ಕು, ಕೈ ಕುಲುಕಿ ಮನೆಗೆ ಕರೆದೊಯ್ಯುತ್ತಿದ್ದ. ಅಪ್ಪಯ್ಯ, ಅಮ್ಮಯ್ಯ ಇಬ್ಬರೂ ಆಪ್ಯಾಯತೆಯಿಂದ ಮಾತನಾಡಿಸಿ ಉಪಚರಿಸುತ್ತಿದ್ದರು. ಇದು ತಿಳಿದ ಅಪ್ಪ, ಆ ಮನೆಯವರನ್ನು ನಂಬಿಕೆಗೆ ಯೋಗ್ಯರಲ್ಲ. ಏನಾದರು ಹೇಳಿದರೆ ಕಿವಿಗೆ ಹಾಕಿಳ್ಳಬೇಡ, ಹುಷಾರು ಎನ್ನುತ್ತಿದ್ದ. ಈ ಮಾತಿಗೆ ನನ್ನದು ಮೌನವಷ್ಟೆ.
ನರಸಿಂಗ ಊರಿನ ಯಾರದೇ ಏಳಿಗೆ ಕಂಡರೂ ಹಿಗ್ಗುತ್ತಿದ್ದ. ಬೆನ್ನು ತಟ್ಟುತ್ತಿದ್ದ. ಅನೇಕ ಸಲ ನನ್ನ ಬೆನ್ನು ತಟ್ಟಿದ್ದ. ಅವನು ಇಷ್ಟು ಎತ್ತರದವನೆಂದು ತಿಳಿಯುತ್ತಿದ್ದುದು ಇಂಥ ಸಂದರ್ಭಗಳಲ್ಲಿ.
ಅವನಲ್ಲಿ ಒಬ್ಬ ನಟನಿದ್ದಾನೆ
ಬಾಲ್ಯದಲ್ಲಿಯೇ ನರಸಿಂಗನ ಒಳಗೆ ಈ ಗುಣಗಳ ಮೊಳಕೆ ಇತ್ತು. ಅದನ್ನವನು ತನ್ನ ವರ್ತನೆಗಳ ಅಡಿಯಲ್ಲಿ ತುಳಿದಿಟ್ಟುಬಿಟ್ಟಿದ್ದ. ಇದನ್ನು ಮೊದಲಿಗೆ ಕಂಡಿದ್ದ ಮೂವರಲ್ಲಿ ನಾನೂ ಒಬ್ಬನೆಂದುಕೊಳ್ಳುವೆ. ಇನ್ನಿಬ್ಬರು ಅಪ್ಪಯ್ಯ ಹಾಗು ಗಜೇಂದ್ರರಾಜು ಮೇಷ್ಟ್ರು. ನನಗೆ ಆ ವಯಸ್ಸಿನಲ್ಲಿ ಗ್ರಹಿಸಲಾಗದ ಇನ್ನೊಂದು ಸಂಗತಿಯೆಂದರೆ ಅವನಲ್ಲಿ ಒಬ್ಬ ನಟನಿದ್ದಾನೆ ಅನ್ನುವುದು. ಅದನ್ನು ಆ ಇಬ್ಬರು ಕಂಡಿದ್ದರು.
ನನ್ನ ಅಪ್ಪನ ಮಾತಿನಲ್ಲಿದ್ದ ವ್ಯಂಗ್ಯವನ್ನು ಕೊಂಚ ಪಕ್ಕಕ್ಕೆ ಸರಿಸಿ ನೋಡಿದರೆ, ನರಸಿಂಗ ನಾಟಕಗಳಿಂದ ಗಳಿಸಿದ್ದು ಸೊನ್ನೆಯೇ. ಅವನು ಬದುಕಿಗಾಗಿ ಏನಾದರೂ ಗಳಿಸಿದ್ದರೆ ಅದು ಬೇಸಾಯದಿಂದಲೇ. ಅದೂ ಗೆಳೆಯರ ಜೊತೆಯಾಗಿ.
ಕೆಲವು ವರ್ಷಗಳು ಕಳೆದು, ನರಸಿಂಗ ಯಶಸ್ಸು ಕಾಣುತ್ತ ಊರಿನ ಕೀರ್ತಿ ಬೆಳಗಿಸುತ್ತಿದ್ದ ದಿನಗಳಲ್ಲಿ ನನಗೆ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುತ್ತಿದ್ದವು.