Get Updates
Get notified of breaking news, exclusive insights, and must-see stories!

ಸ ರಘುನಾಥ ಅಂಕಣ; ಹಾರುಗುದುರೆ ಬೆನ್ನು ಏರಿದ ನಾಟಕದ ಉತ್ಸಾಹ

ಕಷ್ಟಗಳಿದ್ದಾಗಿನ ಆಲೋಚನೆಗಳೆ ಬೇರೆ. ಅವು ಕಳೆದ ನಂತರದ ಆಲೋಚನೆಯ ಬಗೆಯೆ ಬೇರೆ. ಊರಿನಲ್ಲಿ ಆದುದು ಹೀಗೆಯೇ. ಬಂದ ಆಲೋಚನೆಗಳಲ್ಲಿ ನಾಟಕದ್ದೂ ಒಂದು. ಹಿಂದೆ ನಾಟಕ ನಿಂತು ನಿರಾಸೆಯಾದುದು ನರಸಿಂಗರಾಯನಿಗೇ ಹೆಚ್ಚು. ಈಗ ನಾಟಕವಾಡಲು ಅನುಕೂಲವಿದೆ. ಅವನು ಬಯಸಿದ ಆಟ ಕಟ್ಟಬಹುದು ಎಂದು ಹಿರಿಯರು, ಯುವಕರು ಆಸಕ್ತರಾದರು. ಅವರವರಲ್ಲೆ ಮಾತು ನಡೆದು, ಅಪ್ಪಯ್ಯನ ಅಭಿಪ್ರಾಯ ಕೇಳಿದರು.

ಆತ ಓಹೋ ಎಂದದ್ದೆ ಆತನ ಸಮ್ಮತಿಯಾಯಿತು. ಮುನೆಕ್ಕನ ಅಂಗಡಿಯಲ್ಲಿದ್ದ ನರಸಿಂಗರಾಯನಿಗೆ ಮುನಿ ನಾರಾಯಣಿಯ ಮೂಲಕ ಅರ್ಜೆಂಟು ಬುಲಾವು ಹೋಯಿತು. ಕುತೂಹಲದೊಂದಿಗೆ ಮುನೆಕ್ಕ, ಸುನಂದಾಳೂ ಅವನ ಹೆಜ್ಜೆಗೆ ಹೆಜ್ಜೆ ಹಾಕಿದರು.

ಜನರನ್ನು ನೋಡಿ ಯಾವುದೋ ತಕರಾರು ಬಂದಿರಬೇಕೆಂದು ಮುನೆಕ್ಕ ಆತಂಕದಿಂದ ಸುನಂದಾಳ ಕಿವಿಯಲ್ಲಿ ಹೇಳಿದಳು. ಅಪ್ಪಯ್ಯನಿರುವಾಗ ನರಸಿಂಗ ಇಂಥದಕ್ಕೆ ತಲೆಕಾವುದಿಲ್ಲವಲ್ಲ ಅಂದಳು ಸುನಂದಾ. ನಿಜಾನೆ. ಆದರೆ ಕರೆಸಿದ್ದಾರೆ ನೋಡೋಣ ತಾಳು ಎಂದಳು ಮುನೆಕ್ಕ. ನರಸಿಂಗನ ಜೊತೆಗಿರಬೇಕಾದ ಬೋಡೆಪ್ಪ, ಪಿಲ್ಲಣ್ಣ, ರಂಗ, ಅಲ್ಲಿವುರುವುದನ್ನು ಕಂಡು ಇಬ್ಬರಿಗೂ ಆಶ್ಚರ್ಯ.

Narasingaraya And Friends Decided To Conduct Shakuntale Drama

ನಾಟಕ ಆಡುವ ತೀರ್ಮಾನವನ್ನು ದುಗ್ಗಪ್ಪ ನರಸಿಂಗರಾಯನಿಗೆ ನೇರವಾಗಿ ಹೇಳಿದ. ಅವನು ಅಪ್ಪಯ್ಯ, ಅಮ್ಮಯ್ಯರ ಮುಖ ನೋಡಿದ. ಅಲ್ಲಿ ಮುಗುಳುನಗೆಯಿತ್ತು. ಮುನೆಕ್ಕ, ಸುನಂದಾರ ಮನಸ್ಸಿನಲ್ಲಿ ನವಿಲು ನರ್ತಿಸಿತು. ಯಾವ ನಾಟಕವೆಂದ ನರಸಿಂಗರಾಯ. ಎಲ್ಲರೂ ನಿನಗಿಷ್ಟವಾದುದು ಎಂದರೋ ಇಲ್ಲವೊ ನರಸಿಂಗರಾಯನಿಗೆ ಮಾತಿಗೆ ಅವಕಾಶವಿಲ್ಲದಂತೆ, ಗೆಳೆಯರು ರಿಹರ್ಸಲ್ ಮಾಡಿಕೊಂಡವರಂತೆ ಒಂದೆ ಧ್ವನಿಯಲ್ಲಿ ಇನ್ನಾವುದು? ಅವನಿಗೆ ಇಷ್ಟವಾದುದು ಶಕುಂತಲೆಯೇ ಎಂದರು. ನರಸಿಂಗರಾಯ ಹೂಂ ಅಂದ. ಅವನ, ಸುನಂದಾರ ಎದೆಗಳ ಗುಟ್ಟಾದ ಪ್ರೀತಿಯನ್ನು ಈ ಮೂಲಕ ರಟ್ಟು ಮಾಡುವ ಅವರ ಹುನ್ನಾರು ತಿಳಿದುದು ಮುನೆಕ್ಕನಿಗೆ ಮಾತ್ರ.

ಪಾತ್ರಧಾರಿಗಳ ಆಯ್ಕೆ, ಕಲಿಸುವುದು ನರಸಿಂಗರಾಯ ಮತ್ತು ಮೊಟಪ್ಪನ ಹೆಗಲಿಗೆ ಬಿತ್ತು. ಸಲಹೆ, ಸೂಚನೆಗಳಿಗೆ ಅಪ್ಪಯ್ಯನಿದ್ದ. ಖರ್ಚುವೆಚ್ಚಗಳ ಜವಾಬ್ದಾರಿ ದುಗ್ಗಪ್ಪ, ಬೀರಣ್ಣ, ಮುನೆಂಕಟೇಗೌಡ ಹೊತ್ತರು. ಬೀರಣ್ಣನ ಹನಿಗೂಡಿದ ಕಣ್ಣು ಎಲ್ಲರಿಗೂ ಸೋಮೇಶನ ನೆನಪು ತಂದಿತು.

ಈ ಸುದ್ದಿ ಊರು ಸುದ್ದಿಯಾಯಿತು. ಶಕುಂತಲೆ ಎಂಬ ಹೆಸರು ಕೇಳಿ, ಇದೂ ಸದಾರಮೆ ನಾಟಕದಂತಹ ಇನ್ನೊಂದು ನಾಟಕ ಇದ್ದೀತು ಅಂದುಕೊಂಡವರು ಬಹಳ ಮಂದಿ. ಆಗಲೇ ಕೆಲವರು 'ಜಮಾಯಿಂಪಿಗೆ' ಹೋಗಲು ತೀರ್ಮಾನಿಸಿದರು. ನಾಟಕ ಗೋಪಾಲಸ್ವಾಮಿ ಗುಡಿ ಮುಂದೆಯೆ, ಚಲ್ಲಾಪುರಮ್ಮನ ಗುಡಿ ಮುಂದೆಯೆ, ಊರಿನ ಅರಳಿಕಟ್ಟೆಯ ಹತ್ತಿರವೆ, ದೊಡ್ಡಕೃಷ್ಣಪ್ಪನ ಮನೆ ಜಮೀನಲ್ಲಿಯೆ? ಎಂಬ ಚರ್ಚೆಗಳೂ ಹೊಲಗದ್ದೆಗಳ ಕೆಲಸಗಳ ನಡುವೆಯೂ ನಡೆದವು.

ನರಸಿಂಗರಾಯ, ಗೆಳೆಯರು, ಮೋಟಪ್ಪ ಚರ್ಚಿಸಿ, ಆಸಕ್ತರನ್ನು ಗುರುತಿಸಿ ಅವರನ್ನು ಹುಣಿಸೆ ತೋಪಿನಲ್ಲಿ ಸೇರಿಸಿದರು. ಸುನಂದಾ, ಮುನೆಕ್ಕ ಮೆಣಸಿನಕಾಯಿ ಬಜ್ಜಿ, ನೀರಿನ ಬಿಂದಿಗೆಯೊಡನೆ ಬಂದರು. ತಿಂದು ಮಾತನಾಡುವುದೆ, ಮಾತನಾಡಿ ತಿನ್ನುವುದೆ, ಮಾತನಾಡುತ್ತ ತಿನ್ನುವುದೆ ಎಂಬ ಪ್ರಶ್ನೆ ಮುಂದಿಟ್ಟ ಮುನಿಕೃಷ್ಣಪ್ಪ. ತಿನ್ನುತ್ತ ಮಾತನಾಡೋಣ ಅಂದ ರಂಗ. ಬೋಡೆಪ್ಪ ನೆನಪಿನಲ್ಲಿದ್ದ 'ಮಂಗಗಳ ಉಪವಾಸ' ಪದ್ಯವನ್ನು ಹೇಳಿ ನಗಿಸಿದ.

ನರಸಿಂಗರಾಯ ಶಕುಂತಲೆಯ ಕಥೆಯನ್ನು ವಿವರವಾಗಿ ಹೇಳಿದ. ಶಕುಂತಲೆಯ ಪಾರ್ಟು ಸುನಂದಾಳಿಗೆ, ದುಶ್ಯಂತ ನರಸಿಂಗರಾಯ. ಇದಕ್ಕೆ ಯಾರ ತಕರಾರೂ ಕೂಡದು. ಉಳಿದದ್ದು ನಿಮಗೆ ಬಿಟ್ಟಿದ್ದು. ನನಗೆ ಯಾವ ಪಾರ್ಟು ಬೇಡವೆಂದ ಬೋಡೆಪ್ಪ. ನರಸಿಂಗರಾಯ ನಿನ್ನ ವಿಷಯ ಮುಂದೆ ನೋಡೋಣವೆಂದ. ಮೋಟಪ್ಪ 'ಶುಭಂ' ಅಂದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+