ಸ ರಘುನಾಥ ಅಂಕಣ; ಕೆರೆಯಲ್ಲಿ ನಿಂತು ನಕ್ಕಳು ಗಂಗಮ್ಮ
ಒಂದು ವಾರವೆಂದುಕೊಂಡಿದ್ದ ಕೆಲಸ ಹತ್ತು ದಿನಕ್ಕೇರಿತು. ಕೂಲಿಯಿಂದ ಬದುಕುತ್ತಿದ್ದರೂ ಈ ಹೆಚ್ಚುವರಿ ಮೂರು ದಿನಗಳ ಕೆಲಸಕ್ಕೆ ದವಸ ಬೇಡೆಂದರು. ಅಂದುಕೊಂಡಂತೆ ಹೂಳೆತ್ತುವ ಕಾರ್ಯ ಸುಸೂತ್ರವಾಗಿ ನೆರವೇರಿತು.
ದೀಪಾವಳಿಗೆ ಎರಡು ದಿನ ಮುಂಚಿತವಾಗಿ ಜಡಿಮಳೆ ಪ್ರಾರಂಭವಾಯಿತು. ಆ ಎರಡು ದಿನದಲ್ಲಿ ಗಜಾಗುಂಡ್ಲ ತುಂಬಿ ಶುಭ ಸೂಚನೆ ನೀಡಿತು. ಹನಿ ಬಿರುಸಾಗಲಿ ದೇವರೇ ಎಂದು ಜನ ಮನದಲ್ಲೇ ಬೇಡಿಕೊಂಡರು. ಹಬ್ಬದ ಮೂರು ದಿನವೂ ಜಡಿಯೇ. ಈ ಸಲದ ಜಡಿ ಕೊಂಚ ಬಿರುಸನ್ನು ತಂದುಕೊಂಡಿತು. ಎರಡು ದಿನ ಚೆನ್ನಾಗಿ ನೆನೆದಿದ್ದ ನೆಲ ಬಿದ್ದ ನೀರನ್ನೆಲ್ಲ ಹರಿಯಲು ಬಿಟ್ಟಿತ್ತು. ಅರ್ಧ ಕೆರೆಗೂ ಕೊಂಚ ಹೆಚ್ಚಿಗೆ ನೀರು ತುಂಬಿ ಸಂತಸ ಉಕ್ಕಿಸಿತು. ಗಂಗಮ್ಮನ ಅಲೆನಗೆ ಊರಿಗೆ ಕೇಳಿಸುತ್ತಿತ್ತು.
ಕೆರೆಗೆ ನೀರು ಬಂತೆಂದು ಗದ್ದೆ ಕೆಲಸಗಳಿಗೆ ಇಳಿಯುವುದು ಬೇಡ. ಬಾವಿಗಳಿಗೆ ನೀರು ಬರಲಿ. ಬೇಸಿಗೆಯಲ್ಲಿ ದನಕರುಗಳಿಗೆ ನೀರಿರಲಿ ಎಂದು ಮುನಿನಾರಾಯಣಿ ಕೈಲಿ ಸಾರಿಸಿದರು. ಮೊದಲಿಗೆ ಕೆಲವರು ಗೊಣಗಾಡಿದರೂ ನಾಲ್ಕು ಜನರ ದಾರಿ ಬಿಟ್ಟು ಹೋಗಲಾಗದೆ ಸಹಕರಿಸಿದರು.

ಈ ದಿನಗಳಲ್ಲೇ ತೆಪ್ಪೋತ್ಸವದ ಮಾತು ಬಂದಿತು. ಎಂಎಲ್ ಎಯನ್ನು ಕರೆಸುವ ಬಗ್ಗೆ ಚರ್ಚೆ ನಡೆಯಿತು. ಕೆಲವರು ಕರೆಸುವುದೆಂದು, ಕೆಲವರು ಬೇಡವೆಂದು ವಾದಿಸಿದರು. ಇದು ಎರಡು ದಿನದ ಚರ್ಚೆಯಾಯಿತು. ನಿರ್ಣಯಿಸಲು ಒಂಬತ್ತು ಜನರ ನಿರ್ಣಯ ಕಮಿಟಿಯನ್ನು ರಚಿಸಲಾಯಿತು. ಅದರಲ್ಲಿ ಹಿರಿಯರು ಮುವ್ವರು, ಯುವಕರು ಮುವ್ವರು, ಮಹಿಳೆಯರು ಮುವ್ವರು ಸದಸ್ಯರೆಂದಾಯಿತು.
ನರಸಿಂಗರಾಯ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಲ್ಲಿ ಪಿಯುಸಿಯ ಇಬ್ಬರನ್ನು ವಿದ್ಯಾರ್ಥಿ ಪ್ರತಿನಿಧಿಗಳಾಗಿ ಸೇರಿಸಬೇಕೆಂದ. ಅವು ಇನ್ನೂ ಬಚ್ಚಾಗಳು. ಅವಕ್ಕೇನು ತಿಳಿಯುತ್ತೆ ಅಂದ ರಂಗ. ಅದಕ್ಕೆ ಬೋಡೆಪ್ಪ, ನೀನು ಸುಮ್ಮನಿರೋದು ಕಲ್ಕೊ. ಅವು ಮಾತಾಡಿದ್ರಿಂದಲೇ ಅಲ್ವ ಹೂಳೆತ್ತೊ ಮಾತ್ ಗೆ ಕೊಂಚ ಬಲ ಬಂದಿದ್ದು ಅಂದ. ರಂಗ ಹೌದಲ್ಲಾ ಎಂದು ತಲೆ ಕೆರೆದುಕೊಂಡ.
ಚಲ್ಲಾಪುರಮ್ಮನ ಗುಡಿಯಲ್ಲಿ ಕಮಿಟಿ ಸಭೆ ಸೇರಿ ಚರ್ಚಿಸಿತು. ಕೈಯೆತ್ತುವ ಮೂಲಕ ತೀರ್ಮಾನವಾಗಲಿ ಅಂದ ನರಸಿಂಗರಾಯ. ಎಂಎಲ್ ಎ ಕರೆಸಬೇಕು ಅನ್ನೋರು ಮೊದಲು ಕೈಯೆತ್ತಲಿ ಅಂದ. ದುಗ್ಗಪ್ಪ, ಅಪ್ಪಯ್ಯ, ಮುನೆಂಕಟೇಗೌಡ, ಮುನೆಕ್ಕ ಕೈ ಎತ್ತಿದರು. ಮೋಟಪ್ಪ, ನರಸಿಂಗರಾಯನೂ ಸೇರಿ ಕೈ ಎತ್ತದವರ ಸಂಖ್ಯೆ ಏಳಾಗಿ, ಹಿರಿಯರ ಕೊಂಚ ಮಾತ್ರದ ಅಸಮಾಧಾನದೊಂದಿಗೆ ಎಂಎಲ್ ಎಯನ್ನು ಕರೆಸದ ತೀರ್ಮಾನವಾಯಿತು. ಜನರ ಒಗ್ಗಟ್ಟಿನ ಮುಂದೆ ನೀನೇನೂ ಅಲ್ಲವೆಂಬ ಸಂದೇಶ ಎಂಎಲ್ ಎಗೆ ಪರೋಕ್ಷವಾಗಿ ರವಾನಿಸುವಲ್ಲಿ ನರಸಿಂಗರಾಯ ಸಫಲನಾಗಿದ್ದ.
ಆದರೆ ಕುಳ್ಳಪ್ಪ ಎಮೆಲ್ಯೆಯನ್ನು ಕರೆಸಲು ಒಳಗೊಳಗೆ ಮಾಡಿದ ಪಿತೂರಿಯನ್ನು ನರಸಿಂಗರಾಯನ ಗೆಳೆಯರು ಭಗ್ನಗೊಳಿಸಿದರು. ತೆಪ್ಪೋತ್ಸವ ಸಂಭ್ರಮದಿಂದ ಮುಕ್ತಾಯಗೊಂಡಿತು. ತೆಪ್ಪೋತ್ಷವದಿಂದ ಹೆಚ್ಚು ಸಂತೋಷವಾದುದು ಮುನಿನಾರಾಯಣಿಯ ಹೆಂಡತಿ ಬಯಚಮ್ಮನಿಗೆ. ಏಕೆಂದರೆ, ಅವಳು ಬಯಸುತ್ತಿದ್ದ ಬಲಿಮರಿಯ ತಲೆಯನ್ನು ಮುನಿನಾರಾಯಣಿ ಮನೆಗೆ ತೆಗೆದುಕೊಂಡು ಹೋಗಿದ್ದ.












Click it and Unblock the Notifications