ಕೋಟಿ ತಿಂದವರೇ ರೆಡ್ಡಿಯನ್ನು ಹೂತು ಹಾಕಿದರು
ಎಂಥ ಪರಿಸ್ಥಿತಿ ನಿರ್ಮಾಣವಾಯಿತೆಂದರೆ, ರಾಜ್ಯದ ಇಡೀ ಲಿಂಗಾಯತ ಸಮೂಹ ಬಿಜಿಪಿಗೆ ಅಧಿಕಾರ ಕೈಯೆತ್ತಿ ಕೊಡಲು ಸಿದ್ಧವಾಗಿತ್ತು. ಧಾರಾಳವಾಗಿ ದುಡ್ಡು ಚೆಲ್ಲಲು ರೆಡ್ಡಿಗಳು ಸಿದ್ಧವಾಗಿದ್ದರು. ಅವರಿಂದ ಸಾವಿರಾರು ಕೋಟಿ ತಂದುಕೊಂಡು ಸಿಂಹಾಸನವೇರಲು ಯಡಿಯೂರಪ್ಪ ತಹತಹಿಸುತ್ತಿದ್ದ. ಅದೆಲ್ಲದರ ಅಂತಿಮ ಪರಿಣಾಮವೆಂದರೆ-ಯಡಿಯೂರಪ್ಪನಿಗೆ ಕುರ್ಚಿ, ಕುಮಾರಸ್ವಾಮಿಗೆ ಕಸದ ಬುಟ್ಟಿ, ಕಾಂಗ್ರೆಸ್ಸಿಗೆ ದೈನೇಸಿ ಸ್ಥಿತಿ ಮತ್ತು ರೆಡ್ಡಿಗೆ ಕುಬೇರನ ತಿಜೋರಿಯ ಕೀಲಿ ಕೈ ಸಂದಾಯವಾದವು. ಬಳ್ಳಾರಿ ಜಿಲ್ಲೆಯನ್ನು ತುಂಡು ಗುತ್ತಿಗೆ ಆಧಾರದ ಮೇಲೆ ಜನಾರ್ದನ ರೆಡ್ಡಿಯ ಕೈಗೆ ಬಿಟ್ಟು ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅದರಿಂದ ಕೋಟ್ಯಾಂತರ ರೂಪಾಯಿ ಗೋರಿಕೊಂಡ. ಅಷ್ಟೇ ಅಲ್ಲ; ಆತ ರೆಡ್ಡಿಗಳಿಂದ ಹೊಸ ರಾಜಕೀಯ ಪಾಠ ಕಲಿತುಕೊಂಡ. ಪಾಠದ ಹೆಸರೇ ದುಡ್ಡು. ದುಡ್ಡಿದ್ದರೆ ಮಾತ್ರ ರಾಜಕಾರಣ ಮಾಡಬಹುದು ಮತ್ತು ದುಡ್ಡೊಂದಿದ್ದರೆ ಏನು ಬೇಕಾದರೂ ಮಾಡಬಹುದು! ಹಾಗಂತ ರೆಡ್ಡಿಗಳೇ ತೋರಿಸಿ ಕೊಟ್ಟಿದ್ದರು.
ತಮಾಷೆ ಕೇಳಿ : ಇವತ್ತು ಲೋಕಾಯುಕ್ತರು ಯು.ವಿ.ಸಿಂಗ್ ಅಥವಾ ಸಿ.ಬಿ.ಐ ಅಧಿಕಾರಿಗಳು ಏನೇನು ಸಾಕ್ಷ್ಯ ಸಂಗ್ರಹಿಸಿದ್ದೇವೆ ಅಂತ ಹೇಳಿಕೊಳ್ಳುತ್ತಿದ್ದಾರೋ, ಅವೆಲ್ಲವನ್ನೂ ಮೊದಲಬಾರಿಗೆ ಸಂಪಾದಿಸಿದ್ದು ಇನ್ ಕಮ್ ಟ್ಯಾಕ್ಸ್ ಇಂಟಲಿಜೆನ್ಸ್ ವಿಭಾಗದ ಒಬ್ಬ ನಿಸ್ಪೃಹ ಅಧಿಕಾರಿ ಗುರುಪ್ರಸಾದ್ ಎಂಬವರು. ರೆಡ್ಡಿ ಮತ್ತು ಅವರ ಆಸುಪಾಸಿನವರ ವಿರುದ್ಧ ಈ ತನಕ ನಡೆಯುತ್ತಿರುವ ತನಿಖೆಯ ಬೇರುಗಳಿರುವುದೇ ಟ್ಯಾಕ್ಸ್ ಅಧಿಕಾರಿ ಗುರುಪ್ರಸಾದ್ ನಡೆಸಿದ ದಾಳಿ ಮತ್ತು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ. ಜನಾರ್ದನ ರೆಡ್ಡಿಯನ್ನು ಹಣಿಯಲಿಕ್ಕಾಗಿ ಸಲೀಸಾಗಿ ಸಿಕ್ಕಿರುವ ಎರಡು ಆಯುಧಗಳೆಂದರೆ ರೆಡ್ಡಿಯ ಆಪ್ತ ಸಿಬ್ಬಂದಿಯವನೇ ಆದ ಅಲೀಖಾನ್ ಮತ್ತು ಹೊಸಪೇಟೆಯ ಪರಮ ಕುಖ್ಯಾತ ಟ್ರಾನ್ಸ್ ಪೋರ್ಟರ್ ಖಾರಪುಡಿ ಮಹೇಶ. ಇವರಿಬ್ಬರವೂ ಕಂತೆ ಕಂತೆ ದಾಖಲೆಗಳು, ಹಣದ ವಹಿವಾಟಿನ ವಿವರಗಳು ಸಿಕ್ಕುಬಿದ್ದಿವೆ. ಇವರಿಗಿಂತ ದೊಡ್ಡಮಟ್ಟದಲ್ಲಿ ಗಾಲಿ ಜನಾರ್ದನ ರೆಡ್ಡಿಯ ವಿರುದ್ಧ ಸಾಕ್ಷ್ಯ ದೊರಕಿರುವುದು ಕೂಡ್ಲಗಿಯ ಶಾಸಕ ಗುಮ್ಮನೂರು ನಾಗೇಂದ್ರನ ಬ್ಯಾಂಕ್ ವಹಿವಾಟಿನಲ್ಲಿ. ಕೊನೆಯದಾಗಿ ಜನಾರ್ದನ ರೆಡ್ಡಿಯನ್ನು ಸಿಕ್ಕಿ ಹಾಕಿಸಬಲ್ಲ ಹುಡುಗನೆಂದರೆ, ಕಂಪ್ಲಿಯ ಶಾಸಕ ಸುರೇಶ್ ಬಾಬು. ಬೆರಳೆಣಿಕೆಯಷ್ಟೇ ಜನರಿರುವ ಒಂದು ಪಟಾಲಂ ಜನಾರ್ದನ ರೆಡ್ಡಿಯನ್ನು ಕಾನೂನಿನ ಚಕ್ರಸುಳಿಗೆ ಸಿಲುಕಿಸಿ ಮುಳುಗಿಸಲಿದೆ.
ನಿಮಗೆ ಆಶ್ಚರ್ಯವೆನ್ನಿಸಬಹುದು. ಗಣಿಗಾರಿಕೆಯ ವ್ಯವಹಾರದಲ್ಲಿ ಜನಾರ್ದನ ರೆಡ್ಡಿ ತುಂಬ ಹಿಂದೆಯೇ ತನ್ನ ಸೋದರರಾದ ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿಯನ್ನು ದೂರವಿರಿಸಿದ್ದ. ಈ ಸೋದರರು ಅಕ್ಷರಶಃ ಕುಟುಂಬದ ಆಸ್ತಿ ಪಾಲುಮಾಡಿಕೊಂಡು ವ್ಯವಹಾರಿಕವಾಗಿ ದೂರವಾಗಿದ್ದಾರೆ. ರಾಜಕೀಯದ ವಿಷಯಕ್ಕೆ ಬಂದರೆ ಶ್ರೀರಾಮುಲುವೂ ಸೇರಿದಂತೆ ಎಲ್ಲರೂ ಬಳ್ಳಾರಿ ಬ್ರದರ್ಸ್ ಅಥವಾ ರೆಡ್ಡಿ ಬ್ರದರ್ಸ್ ಅಂತಲೇ ಗುರುತಿಸಲ್ಪಡುತ್ತಾರೆ. ಮಾನಸಿಕವಾಗಿ ಅವರು ಒಟ್ಟಿಗಿದ್ದಾರೆಯೇ ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಎಂಬುದಂತೂ ನಿಜ.