ಚಿತ್ರ ನಟಿ ರಮ್ಯಾಳ ಜನ್ಮ ರಹಸ್ಯ
ಪೊಲೀಸರಿಗೆ ದೂರು : ಹಾಗೆ ನಾನು ರಂಜಿತಾ ಮತ್ತು ಡಿಪ್ಪಿಯೊಂದಿಗೆ ಇರುವ ಕಾಲಾವಧಿಯಲ್ಲೇ ನನಗೆ ವ್ಯಾಪಾರ ನಷ್ಟವಾಯಿತು. ವ್ಯಾಪಾರದೆಡೆಗೆ ಗಮನ ಕೊಡಬೇಕಾಗಿ ಬಂದುದರಿಂದ ರಂಜಿತಾಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ಆಗಾಗ ಜಗಳಗಳಾಗತೊಡಗಿದವು. ಇದರ ಪರಿಣಾಮವಾಗಿ ನನ್ನ ಪತ್ನಿ ರಂಜಿತಾ ತನ್ನ ತಾಯಿ ಮನೆಗೆ ಹೊರಟು ಹೋದಳು. ಇದರಿಂದ ತುಂಬ ವಿಚಲಿತನಾದ ನಾನು ವಿಪರೀತವಾಗಿ ಕುಡಿಯಲಾರಂಭಿಸಿದೆ. ಆಗ ನನ್ನ ಪರಿಸ್ಥಿತಿ ನೋಡಲಾಗದೆ ನನ್ನ ನೆಂಟರಿಷ್ಟರು ಒತ್ತಾಯ ಮಾಡಿ ರಂಜಿತಾಳನ್ನು ವಾಪಸ್ಸು ನನ್ನಲ್ಲಿಗೆ ಕರೆತಂದರು. ನಾನು ನನ್ನ ತಂದೆ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಟೆಕ್ಸ್ಟೈಲ್ಸ್ ಮಿಲ್ನಲ್ಲಿಯೇ ಸಾರಿಗೆ ವಿಭಾಗದ ಮೇನೇಜರಾಗಿ ಕೆಲಸಕ್ಕೆ ಸೇರಿಕೊಂಡೆ. ಆದರೆ ನನ್ನ ಪತ್ನಿ ರಂಜಿತಾ ಐಷಾರಾಮಿಯ ಜೀವನ ಬೇಕಾಗಿತ್ತು. ನಾನು ಆರ್ಥಿಕವಾಗಿ ತುಂಬ ಬಲಹೀನನಾಗಿದ್ದೆ. ಕಡೆಗೊಂದು ದಿನ ರಂಜಿತಾ ಹೋಗಿ ಸುಬ್ರಮಣ್ಯಪುರದ ಪೊಲೀಸ್ ಠಾಣೆಯಲ್ಲಿ ಅಂದು ಸಬ್ ಇನ್ಸ್ಪೆಕ್ಟರ್ ಆಗಿದ್ದ ಪೂವಯ್ಯನವರಿಗೆ ನನ್ನ ಮೇಲೆ ದೂರುಕೊಟ್ಟಳು. ಅವರು ಪ್ರತೀ ತಿಂಗಳು ನಾನು ರಂಜಿತಾಗೆ 500 ರುಪಾಯಿ ಕೊಡುವಂತೆ ತಾಕೀತು ಮಾಡಿದರು.
ಎಲ್ಲಿಗೆ ಹೋದಳೋ ? : ಆದರೆ ತಕ್ಷಣಕ್ಕೆ ನನ್ನಲ್ಲಿ ಹಣವಿರಲಿಲ್ಲ, ನನ್ನನ್ನು ಯಾರೂ ಬೆಂಬಲಿಸಲೂ ಇಲ್ಲ. ಹೀಗಾಗಿ ರಂಜಿತಾ ನಮ್ಮ ಮಗಳು ಡಿಪ್ಪಿಯನ್ನು (ದಿವ್ಯಾ) ಕರೆದುಕೊಂಡು ಮನೆಯಿಂದ ಹೊರಟುಹೋದಳು. ಅವಳು ಕೆಲ ಕಾಲ ಕುಮಾರಸ್ವಾಮಿ ಲೇಔಟ್ನಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಇದ್ದಳು. ಆ ನಂತರ ಮನೆ ಖಾಲಿ ಮಾಡಿಕೊಂಡು ಹೋದವಳು, ಎಲ್ಲಿಗೆ ಹೋದಳೋ ಗೋತ್ತಾಗಲಿಲ್ಲ. ರಂಜಿತಾ ತಂದೆತಾಯಿಯೂ ನನಗೆ ಅವಳ ಕುರಿತ ಮಾಹಿತಿ ನೀಡಲಿಲ್ಲ. ಸುಮಾರು ಒಂದು ವರ್ಷವಾದ ಮೇಲೆ ಅದೊಂದು ದಿನ ಅವಳೇ ಫೋನ್ ಮಾಡಿ ನನ್ನ ಯೋಗಕ್ಷೇಮ ವಿಚಾರಿಸಿದಳು. ತಾನು ಮತ್ತು ಮಗಳು ಚೆನ್ನಾಗಿರುವುದಾಗಿಯೂ, ತಮ್ಮ ಬಗ್ಗೆ ಯೋಚನೆ ಮಾಡಬಾರದಾಗಿಯೂ ರಂಜಿತಾ ತಿಳಿಸಿದಳು. ಅಷ್ಟಾದರೂ ತಾನು ಎಲ್ಲಿದ್ದಾಳೆಂಬುದನ್ನು ರಂಜಿತಾ ತಿಳಿಸಿಲಿಲ್ಲ. ಬಹುಶಃ ಅವಳು ತನ್ನ ತಂದತಾಯಿಂದಿರ ಆರೈಕೆಯಲ್ಲಿರಬೇಕೆಂದುಕೊಂಡು ನಾನು ಸುಮ್ಮನಾದೆ.
ಮದರಾಸಿಗೆ ಹೋದಳು : ಮುಂದೆ 1987 ನವೆಂಬರ್ 2ರಂದು ನಾನು ಮೋಟಾರ್ ಸೈಕಲ್ ಮೇಲೆ ಹೋಗುವಾಗ ಅಪಘಾತವಾಯಿತು. ಸಂಜಯಗಾಂಧಿ ಆಸ್ಪತ್ರೆಯಲ್ಲಿ ನಾನು ದಾಖಲಾಗಿದ್ದೆ. ವಿಷಯ ಅದು ಹೇಗೋ ರಂಜಿತಾಳಿಗೆ ಗೊತ್ತಾಗಿ ಅವಳೇ ಬಂದು ನನ್ನ ಯೋಗಕ್ಷೇಮ ವಿಚಾರಿಸಿದಳು. ಒಂದು ತಿಂಗಳ ಕಾಲ ನನ್ನನ್ನು ನೋಡಿಕೊಂಡು ನಾನು ಬದುಕುಳಿಯುವಂತೆ ಮಾಡಿದಳು. ನನಗೆ ಮಗುವನ್ನು ನೋಡಿ ತುಂಬ ಸಂತೋಷವಾಯಿತು. ರಂಜಿತಾಳ ಮನೆಯವರೂ ಆಗ ನಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ನನ್ನ ಮೂದಲ ಪತ್ನಿ ಪಾರ್ವತಿಗೂ ಮಗುವಿನೆಡೆಗೆ ತುಂಬ ಅಟ್ಯಾಚ್ಮೆಂಟ್ ಬೆಳೆದಿತ್ತು. ನಾನು ಆಗ ಕುಡಿಯುವುದನ್ನು ಬಿಟ್ಟುಬಿಟ್ಟೆ. ಈ ದಿನಗಳಲ್ಲಿ ರಂಜಿತಾ ಯಡಿಯೂರಿನಲ್ಲಿ ಒಂದು ಮನೆ ಮಾಡಿದಳು. ನಾನು ಮಗು ಹಾಗೂ ರಂಜಿತಾಳೊಂದಿಗೆ ಇರತೊಡಗಿದೆ. ಮುಂದೆ 1988ರಲ್ಲಿ ಆಕೆ ನಮ್ಮ ಮಗುವನ್ನು ಊಟಿಯ ರೆಸಿಡೆನ್ಸಿಯಲ್ ಶಾಲೆಯಲ್ಲಿ ಬಿಡುವ ತೀರ್ಮಾನಕ್ಕೆ ಬಂದಳು. ತಾನು ಯಾವುದೋ ಕೆಲಸಕ್ಕೆ ಸೇರಿಕೊಂಡಿದ್ದು, ಮದರಾಸಿಗೆ ಹೋಗುತ್ತಿರುವುದಾಗಿ ತಿಳಿಸಿದಳು. "ಒಟ್ಟಿಗೆ ಇರುವುದು ಮುಖ್ಯವಲ್ಲ. ಪ್ರೀತಿ ವಿಶ್ವಾಸದಿಂದ ಇರೋದೂ ಮುಖ್ಯ" ಎಂದು ಅವಳು ನನ್ನನ್ನು ಒಪ್ಪಿಸಿದಳು. ಅದೊಂದು ದಿನ ಅವಳು ಮಗುವನ್ನು ಕರೆದುಕೊಂಡು ಮದರಾಸಿಗೆ ಹೊರಟು ಹೋದಳು.
ಊಟಿಯ ಶಾಲೆಯಲ್ಲಿ : ಈ ಮಧ್ಯೆ ನಾನು ಕೂಡ ಜೀವನದಲ್ಲಿ ಪ್ರವರ್ಧಮಾನಕ್ಕೆ ಬಂದೆ. ಗಳೆಯರ ನೆರವಿನಿಂದ ಒಂದು ಜಲ್ಲಿ ಕ್ರಷರ್ ಹಾಕಿದೆ. ಮುಂದೆ 1996ರಲ್ಲಿ ರಂಜಿತಾಳ ತಾಯಿ ತೀರಿಹೋದ ಮೇಲೆ ಆಕೆಯ ಸ್ವಲ್ಪ ಆಸ್ತಿ ರಂಜಿತಾಗೆ ಬಂತು. ಆ ಹಣದಿಂದ ಅವಳು ಏರ್ಪೋರ್ಟ್ ರಸ್ತೆಯಲ್ಲಿ ಒಂದು ಅಪಾರ್ಟ್ಮೆಂಟ್ ಖರೀದಿಸಿದಳು. ಆಗಲೂ ನಾನು ರಂಜಿತಾ ಒಟ್ಟಿಗೆ ಇದ್ವಿ. ಆದರೆ ಮಗು ನಮ್ಮ ಜೊತೆಗೆ ಇರಲಿಲ್ಲ. ಅವಳು ಊಟಿಯ ಶಾಲೆಯಲ್ಲಿ ಓದ್ತಾ ಇದಾಳೆ ಅಂತಲೇ ರಂಜಿತಾ ಹೇಳುತ್ತಿದ್ದಳು. ಅವಳು ಸ್ಕೇಟಿಂಗ್ನಲ್ಲಿ ಛಾಂಪಿಯನ್ ಅಗಿದ್ದಾಳೆಂದೂ, ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ತಂದುಕೊಂಡಿದ್ದಾಳೆಂದೂ ಹೇಳುತ್ತಿದ್ದಳು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಮಗುವನ್ನು ವಾಪಸು ಕರೆ ತರುವ ವಿಷಯದಲ್ಲಿ ತಕರಾರು ಬಂದು ನನ್ನ ಹೆಂಡತಿ ಮತ್ತೆ ನನ್ನನ್ನು ಬಿಟ್ಟು ಹೋದಳು.
ಡಿಪ್ಪಿ ಸತ್ತು ಹೋದಳು : ಆದರೆ 1997ನೇ ಇಸವಿಯಲ್ಲಿ ಅದೊಂದು ದಿನ ಭೋರಿಟ್ಟು ಅಳುತ್ತಾ ಫೋನ್ ಮಾಡಿದ ನನ್ನ ಹೆಂಡತಿ ರಂಜಿತಾ "ವಿಮಾನಾಪಘಾತದಲ್ಲಿ ನಮ್ಮ ಮಗಳು ಡಿಪ್ಪಿ ಸತ್ತು ಹೋದಳು" ಅಂಥ ಹೇಳಿದಳು. ಅಪಘಾತ ಎಲ್ಲಾಯಿತು. ಮಗುವಿನ ಶವ ಎಲ್ಲಿದೆ ಅಂತ ಕೇಳಿದರೆ ಏನೂ ಉತ್ತರಿಸದೆ ಅವಳು ಫೋನ್ ಇಟ್ಟುಬಿಟ್ಟಳು. ಆ ವಾರ್ತೆಯನ್ನು ಕೇಳಿ ಆಘಾತವಾಗಿ ನಾನೂ ಖಾಯಿಲೆ ಬಿದ್ದೆ. ಆ ನಂತರವೂ ರಂಜಿತಾ ಟೆಲಿಫೋನ್ ಮೂಲಕ ಸಂಪರ್ಕದಲ್ಲಿದ್ದಳಾದರೂ ನಮ್ಮ ಮಧ್ಯೆ ಬಾಂಧವ್ಯ ಉಳಿಯಲಿಲ್ಲ. ಸುಮಾರು 2003-2004 ಹೊತ್ತಿಗೆ ನಮ್ಮ ನಡುವೆ ಸಂಪರ್ಕವೇ ಇಲ್ಲದಂತಾಯಿತು. ಆ ನಂತರ ಕೆಲವು ಗೆಳೆಯರು ನನಗೆ ರಂಜಿತಾಳ ಬಗ್ಗೆ ವಿಷಯಗಳನ್ನು ಹೇಳುತ್ತಿದ್ದರು. ಅವಳು ಸದಾ ಶಿವನಗರದಲ್ಲಿ ಇರುವುದಾಗಿಯೂ, ಅವಳಿಗೆ ಕೆಲವು ರಾಜಕಾರಣಿಗಳೊಂದಿಗೆ ಸಂಪರ್ಕ ಇರುವುದಾಗಿಯೂ ತಿಳಿಸುತ್ತಿದ್ದರು. ಆದರೆ ಮಗುವೇ ತೀರಿ ಹೋಗಿದ್ದುದರಿಂದ ನನಗೆ ರಂಜಿತಾಳಲ್ಲಿ ಮೂದಲಿನ ಆಸಕ್ತಿ ಉಳಿದಿರಲಿಲ್ಲ.
ಯಾಕೆ ಬಂದೆ? : ಇತ್ತೀಚೆಗೆ ನಾನು ಗೃಹಪ್ರವೇಶವೊಂದಕ್ಕೆ ಹೋದಾಗ ಅಲ್ಲಿ ರಂಜಿತಾಳಿಗೂ ನನಗೂ ತುಂಬಾನೇ ಪರಿಚಯವಿದ್ದ ಶೈಲಜಾ ಭೇಟಿಯಾದರು. ನಾನು, 1997ರಲ್ಲಿ ಸ್ಪರ್ಧೆಯೊಂದನ್ನು ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ವಿಮಾನ ಅಫಘಾತದಲ್ಲಿ ನಮ್ಮ ಮಗು ತೀರಿಕೊಂಡತೆಂಬ ವಿಷಯ ತಿಳಿಸಿದಾಗ ಆಕೆ "ನಿಮಗೇನು ಹುಚ್ಚಾ ? ತಾಯಿ ಮಗಳು ಇಬ್ಬರೂ ಫಸ್ಟ್ ಕ್ಲಾಸಾಗಿ ಇದ್ದಾರೆ. ಸದಾಶಿವನಗರದಲ್ಲಿ ಇದ್ದಾರೆ. ನಿಮ್ಮ ಮಗಳು ಅವಳೀಗ ದೊಡ್ಡ ನಟಿಯಾಗಿದ್ದಾಳೆ " ಅಂದಳು. ಮಗು ಬದುಕಿದೆಯಲ್ಲಾ ಅಂತ ನನಗೆ ಸಂತೋಷವೇ ಆಯಿತು. ನನ್ನಲ್ಲಿ ಆಸಕ್ತಿ ಮೂಡಿದಂತಾಗಿ ಜನವರಿ 6, 2008ರಂದು ವಿಳಾಸ ಪತ್ತೆ ಮಾಡಿ ರಂಜಿತಾಳ ಸದಾಶಿವ ನಗರದ ಮನಗೆ ಹೋದೆ. ನನ್ನನ್ನು ನೋಡಿದವಳೇ ರಪ್ಪನೆ ಬಾಗಿಲು ಹಾಕಿಕೊಂಡ ರಂಜಿತಾ, ತುಂಬ ಒತ್ತಾಯ ಮಾಡಿ ವಿನಂತಿಸಿದಾಗ "ಇಲ್ಲಿಗ್ಯಾಕೆ ಬಂದೆ? ನಮ್ಮಿಬ್ಬರಿಗೂ ನಿನ್ನ ಬಗ್ಗೆ ಆಸಕ್ತಿಯಿಲ್ಲ. ಇನ್ನೊಂದು ಸಲ ಈ ಮನೆಗೆ ಬಂದರೆ ಪರಿಣಾಮ ನೆಟ್ಟಗಾಗೋದಿಲ್ಲ" ಅಂದಳು. ಆ ನಂತರ ನನಗೆ ಗೊತ್ತಾದುದೆನೆಂದರೆ, ನನ್ನ ಅನುಮತಿ ಇಲ್ಲದೆಯೇ ನನ್ನ ಮಗಳನ್ನು 'ದತ್ತು' ಕೊಟ್ಟಿದ್ದಾಳೆ. ಅವಳಿಗೀಗ 26 ವರ್ಷ. ದಿವ್ಯಾ ಅಥವಾ ಡಿಪ್ಪಿ ಎಂದಿದ್ದ ಹೆಸರನ್ನು ಬದಲಾಯಿಸಿಕೊಂಡು ಅವಳೀಗ ರಮ್ಯಾ ಎಂಬ ಹೆಸರಿನಲ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ.
ನನಗೆ ಹಿಂತಿರುಗಿಸಿ : "ನ್ಯಾಯಾಲಯದ ಮುಂದೆ ನಾನು ವಿನಂತಿಸುವುದೇನೆಂದರೆ, ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಹಣಕಾಸಿನ ತೊಂದರೆ ಹೊರತುಪಡಿಸಿದರೆ ನಾನು ಮತ್ತು ನನ್ನ ಪತ್ನಿ ಮೂದಲು ಅನೋನ್ಯವಾಗಿಯೇ ಇದ್ದೆವು. ದೂರದೂರವಿದ್ದಾಗ್ಯೂ ಒಳ್ಳೆಯ ಸ್ನೇಹಿತರಾಗಿದ್ದೆವು. ಈಗ ನಾನು ಆರ್ಥಿಕವಾಗಿ ಚೆನ್ನಾಗಿದ್ದೇನೆ. ನನ್ನ ಪತ್ನಿ ಮತ್ತು ಮಗಳನ್ನು ಭೇಟಿಯಾಗಲಿಕ್ಕೆ, ಅವರೊಂದಿಗೆ ಸಂಸಾರ ಮಾಡಲಿಕ್ಕೆ ಕಾತರನಾಗಿದ್ದೇನೆ. ಹಿಂದೆ 1987ರಲ್ಲಿ ನನ್ನ ಪತ್ನಿ ತಾನಾಗಿಯೇ ಮನೆಯಿಂದ ಮಗುವನ್ನು ಕರೆದುಕೊಂಡು ಹೊರಟುಹೋಗಿದ್ದಳು. ಈ ಬಗ್ಗೆ ನನಗಾಗಲೀ, ಮನೆಯವರಿಗಾಗಲೀ ಏನೂ ತಿಳಿಸಿರಲಿಲ್ಲ. ಮಗಳು ಸತ್ತುಹೋದಳೆಂಬ ಸುಳ್ಳು ಸುದ್ದಿಕೊಟ್ಟಳು. ನನ್ನೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿರಲಿಲ್ಲ. ಆ ಮೂಲಕ ಆಕೆ ನನ್ನ ವೈವಾಹಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾಳೆ. ತನ್ನ ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ವಿಫಲಳಾಗಿದ್ದಾಳೆ. ಆದ್ದರಿಂದ ರಂಜಿತಾಳನ್ನು, ನನ್ನ ಮಗಳಾದ ದಿವ್ಯಾ ಅಲಿಯಾಸ್ ಡಿಪ್ಪಿ ಅಲಿಯಾಸ್ ರಮ್ಯಾಳನ್ನು ನನ್ನಲ್ಲಿಗೆ ಹಿಂತಿರುಗಿಸಬೇಕೆಂದು ನ್ಯಾಯಾಲಯವನ್ನು ಕೋರುತ್ತಿದ್ದೇನೆ" ಎಂದು ಸದರಿ ವೆಂಕಟೇಶ್ ಬಾಬು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ರಂಜಿತಾಳನ್ನು ಸಂಪರ್ಕಿಸಲು ಹೋದರೆ ಆರ್.ಟಿ.ನಾರಾಯಣ್ ಸಮ್ಮುಖದಲ್ಲೇ ಆಕೆ ಉರಿದು ಬೀಳುತ್ತಾರೆ. ಈ ವಿಷಯದಲ್ಲಿ ಆಕೆ ಮಾತನಾಡಲು ಒಲ್ಲರು. ಶತ ಪ್ರಯತ್ನ ಮಾಡಿದರೂ ರಮ್ಯಾ ಸಂಪರ್ಕಕ್ಕೆ ಸಿಕ್ಕಲಿಲ್ಲ.
(ಸ್ನೇಹಸೇತು
:
ಹಾಯ್
ಬೆಂಗಳೂರು)