ಚಂದ್ರಬೆಟ್ಟ ಎಸ್ಟೇಟ್ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು
ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರಿನಲ್ಲಿ ಇರೋದು ಚಂದ್ರಬೆಟ್ಟ ಎಸ್ಟೇಟ್. ಈ ಎಸ್ಟೇಟ್ಗಳನ್ನ ಮೊದಲ ಬಾರಿಗೆ ಕಂಡಿದ್ದು ಹಳೇ ಕನ್ನಡ ಸಿನೆಮಾದಲ್ಲಿ. ಬೆಳ್ಳಿಮೋಡ ಸಿನೆಮಾದಲ್ಲಿ ದೊಡ್ಡ ಮನೆ, ಎಸ್ಟೇಟ್, ಆಳು ಕಾಳುಗಳು, ತದನಂತರ ಬಯಲುದಾರಿಯಲ್ಲಿ ಅಲ್ಲೆಲ್ಲೋ ಎಸ್ಟೇಟ್, ಅಲ್ಲಿ ನಿಂತು ಹೀರೋಯಿನ್ ಹಾಡೋದು, ಹೀರೋ ಬರೋದು. ತೀರ ಬೆಂಗಳೂರಿನ 30X40 ವಿಸ್ತೀರ್ಣದಲ್ಲಿ ಬೆಳೆದವರಿಗೆ ಎಕರೆಗಟ್ಟೆಲೆಯ ಲೆಕ್ಕ ಗೊತ್ತಾಗೋದು ಇಂತಹ ಎಸ್ಟೇಟನ್ನ ನೋಡಿದಾಗಲೇ. ಅದರೊಳಗೆ ರಸ್ತೆ, ಅಲ್ಲಿ ಒಂದು ಟ್ರಕ್ ಓಡಾಡಬಹುದು ಎಂಬುದು ಕಲ್ಪನೆಗೂ ನಿಲುಕ್ಕದ್ದೆ.
ಇಂತಹ ದೊಡ್ಡ ಜಾಗದಲ್ಲಿ ಕೋಳಿನೂ ಇರತ್ತೆ, ಹಸುವೂ ಇರತ್ತೆ, ನಾಗರಹಾವು, ಬೆಕ್ಕು, ನಾಯಿ, ಜಿಗಣೆ, ಮಿಂಚು ಹುಳು, ಕಣ್ಣಿಗೆ ಕಾಣುವಷ್ಟು ವಿಸ್ತೀರ್ಣದಲ್ಲಿ ಅವು ಓಡಾಡುತ್ತಿರುತ್ತದೆ. ಆಗಾಗ ಹುಲಿಯೋ, ಚಿರತೆಯೂ ಸಹ ಬಂದು ಆರಾಮಾಗಿ ಓಡಾಡಿಕೊಂಡು ಇರುತ್ತದೆ. ಇವೆಲ್ಲವನ್ನ ರೆಹಮಾನ್ ಎಂಬ ಎಸ್ಟೇಟ್ ಹುಡುಗ ಆರಾಮಾಗಿ ಹೇಳುತ್ತಾ ಹೋದ. ಅತ್ತಕಡೆ ರಾಗಿಗುಡ್ಡದಲ್ಲಿ ಕೋತಿ ಬಂದರೆ ನಮ್ಮ ಮನೆಯ ಕಿಟಕಿ ಹಾಕುವ ಜಾಗದಲ್ಲಿ ಬೆಳೆದ ಸಿಟಿಯ ಹುಡುಗ ಹುಡುಗರಿಗೆ ಇದೆಲ್ಲಾ ಆಶ್ಚರ್ಯ ಪಡುವಂಥದ್ದು.

ಚಂದ್ರಬೆಟ್ಟದಲ್ಲಿ ಕಾಲಿಟ್ಟಾಗಲೇ ತಕ್ಷಣ ಕಂಡಿದ್ದು ನಾಗರಹಾವಿನ ಮರಿಗಳು. ಬೆಂಗಳೂರಿನಲ್ಲಿ ಹಾವು ಬಂತೆಂದರೆ ಅದನ್ನ 3 ಘಂಟೆ ಲೈವ್ ನಲ್ಲಿ ಅದನ್ನ ಹಿಡಿಯುವ ಕೆಲಸದವನ್ನನ್ನ, ಜ್ಯೋತಿಷಿಯನ್ನ ಮತ್ತು ವಿಷದ ಬಗ್ಗೆ ಪರಿಣಿತಿ ಹೊಂದಿರುವವರನ್ನ ಕರೆದು ಕೂಡಿಸಿ ಮಾತಾಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಲ್ಲಿದ್ದ ಹುಡುಗರು ಒಂದು ಸಣ್ಣ ಕೊಕ್ಕೆ ಮತ್ತು ಬಾಟಲಿನಲ್ಲಿ ಹಾವಿನ ಮರಿಯನ್ನ ಹಿಡಿದು ಮತ್ತೆಲ್ಲೋ ಸುತ್ತಾಡಲು ಹೊರಟಾಗ ಅದನ್ನ ಕಾಡಿಗೆ ಬಿಟ್ಟರು. ಅದಕ್ಕೆ ಮುನ್ನ ನಮ್ಮನ್ನ ನೋಡಿ ಹೆಡೆಯೆತ್ತಿ ತನ್ನ ಜಾಗ ಎಂದು ತನ್ನ ಇರುವಿಕೆಯನ್ನ ಸ್ಪಷ್ಟ ಪಡಿಸಿತ್ತು. ನಾಲಕ್ಕು ದಿವಸಕ್ಕೆ ಬಂದೋರು ನೀವು ಎಂದು ನಮ್ಮ ಅರ್ಧ ಕೈ ಅಗಲ ಉದ್ದ ಇಲ್ಲದ್ದು ಹೇಳಿ ನಮ್ಮನ್ನ ಅಲುಗಾಡಿಸಿತ್ತು.
ಇನ್ನು ಬೆಕ್ಕು ನಾಯಿಗಳು ಅದರ ಕೆಲಸದ ಮಧ್ಯದಲ್ಲಿ ಮನುಷ್ಯರನ್ನ ಮಾತಾಡಿಸುವ ಕಲೆಯನ್ನ ಅವು ಕರಗತ ಮಾಡಿಕೊಂಡಿವೆ. ಅವುಗಳಿಗೂ ನಮ್ಮಂತೆ ಕಚ್ಚುವ ಜಿಗಣೆ, ಅದರಿಂದ ನಮ್ಮನ್ನ ಪಾರು ಮಾಡುವ ಕಲೆಯೂ ಅವುಗಳಿಗೆ ಬಂದಿವೆ. ಸದಾ ನಮ್ಮ ಕಾಲಿನ ಹತ್ತಿರವೇ ಬಂದು ಕೂತು, ಜಿಗಣೆಯ ಹತ್ತಿರ ಕಚ್ಚಿಸಿಕೊಂಡು ರಕ್ತ ಸಿಕ್ತ ಕಾಲುಗಳಲ್ಲಿ ಅಂಗಳದ ತುಂಬಾ ಕೆಂಪು ಹೆಜ್ಜೆಗಳನ್ನ ಹಾಕುವ ಅವುಗಳ ಪ್ರೇಮ ದೊಡ್ಡದೇ. ಆ ಜಿಗಣೆಯೂ ರಕ್ತ ಹೀರಿ ಹೀರಿ ನಮ್ಮನ್ನ ಪ್ರಾಣ ಹಿಂಡುವುದನ್ನು ಕಂಡು ಯಾಕಲ್ಲಿ ಜನ ಇದನ್ನ ನಿರ್ಣಾಮ ಮಾಡಿಲ್ಲ ಎಂಬುವ ಸಂಗತಿ ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಥೊಪ್ ಎಂದು ಯಾವುದೆಂದರೆ ಆ ಸಮಯಕ್ಕೆ ಕೆಳಗೆ ಬೀಳುತ್ತಿದ್ದ ಡುಮ್ಮ ಜಿಗಣೆಯನ್ನ ಯಾವ ಪ್ರಾಣಿಯೂ ಸಹ ಹಿಸುಕಿ ಸಾಯಿಸುತ್ತಿರಲ್ಲಿಲ್ಲ. ಕಿರಿ ಕಿರಿ ಮಾಡಿದವರನ್ನ ಹಿಸುಕಿ ಸಾಯಿಸಬೇಕೆಂಬ ಹುನ್ನಾರ ಮನುಷ್ಯನಿಗೆ ಮಾತ್ರ ಇದೆ ಎಂದು ನನ್ನ ಅರಿವಿಗೆ ಬಂತು. ಇನ್ನೂ ಜಾಸ್ತಿ ಸಿಟಿಯಲ್ಲಿ ಬೆಳೆದಂಥವರಿಗೆ ಎಂದು ಮನದಟ್ಟಾಯಿತು. ಜಿಗಣೆಯನ್ನು ಕಾಲಿಂದ ಬಿಡಿಸುವ ರೀತಿಯನ್ನ ಸಹ ನಮಗೂ ಅದಕ್ಕೂ ಹಾನಿಯಾಗದೇ ಇರುವ ಹಾಗೆ ಎನ್ನುವ ತರಬೇತಿ ಅಲ್ಲಿ ಸಿಕ್ಕಿತ್ತು. ಕಿರಿ ಮಾಡುವವರನ್ನ ಜಾಣತನದಿಂದ ಬಿಡಿಸಿಕೊಳ್ಳಬೇಕೆಂಬ ಸತ್ಯವೂ ಮನವರಿಕೆಯಾಯ್ತು.

***
"ಒಂದು ಹೊಸ ಕರ ಇದೆ ನೋಡ್ ಬನ್ರಿ" ಅಂದ ರೆಹಮಾನ್. ಆ ಕರುವಿಗೆ ನಾಚಿಕೆ ಜಾಸ್ತಿ, ಭಯವೂ ಸಹ. ಕೊಟ್ಟಿಗೆಯ ಬೇರೆ ಹಸುವನ್ನ ಮೇಯಿಸಲಿಕ್ಕೆ ಕಳಿಸಿದ್ದ ಮಾಲೀಕರು ಬರಿ ಪುಟ್ಟ ಕಂದಮ್ಮನನ್ನ ಇಲ್ಲಿ ಇರಿಸಿಕೊಂಡಿದ್ದರು. ಭಯವಾಗಿ ಕುಸುಕುಸು ಸದ್ದು ಮಾಡಿ ಅದರ ಭಾಷೆಯಲ್ಲಿ ಸದ್ದು ಮಾಡುತ್ತಿದ್ದಾಗ ಮೆಟ್ಟಿಲಿಳಿದುಕೊಂಡು ಬಂದದ್ದು ದೊಡ್ಡ ಹಸು. ಅದರಮ್ಮ ಎಂದು ಹೆದರಿದಾಗ ರೆಹಮಾನ್ ಅಂದದ್ದು "ಅದರಮ್ಮ ಅಲ್ಲ ರೀ, ಕೊಟ್ಟಿಗೆಯ ಯಾವುದಕ್ಕೆ ಹಾನಿ ಆದ್ರೂ ಎಲ್ಲಾ ಬರ್ತದೆ" ನೋಡ್ರಿ ಎಂದು. ಕತ್ತಿಗೆ ಕಟ್ಟಿದ್ದ ಘಂಟೆ ಸದ್ದು ಮಾಡಿಕೊಂಡು ಜಾಗ ಮಾಡಿಕೊಂಡು ಕೊಟ್ಟಿಗೆಗೆ ವಾಪಸ್ಸು ಬಂದಿತು. ತನ್ನ ಥರವೇ ಮಗುಗೆ ಕಾವಲಾಗಲು ಬಂದಿತ್ತು.
***
ಅಲ್ಲಿದ್ದ ಕೋಳಿಗಳ ಜಾಗಕ್ಕೆ ಹೋದಾಗ ಅದೇ ಬೇರೆ ಪ್ರಪಂಚ. ಕೋಳಿಗಳನ್ನೆಲ್ಲಾ ಮೈದಾನದಲ್ಲಿ ಬಿಟ್ಟು ಹುಂಜಗಳನ್ನ ಕೂಡಿಹಾಕಿದ್ದರು. "ಗಂಡು ಭಾರಿ ಗಲಾಟೆ, ಸುಮ್ನೆ ಹೆಣ್ಣಿಗೆ ಹಾನಿ ಮಾಡತ್ತೆ, ಅದಿಕ್ಕೆ ಕೂಡಿ ಹಾಕ್ತೀವಿ ನೋಡಿ" ಅಂದ್ರು ರೆಹಮಾನ್ ಮತ್ತೆ. ಮನುಷ್ಯರಲ್ಲಿ ಹಾನಿ ಮಾಡೋರ್ನ ಕೂಡಿಹಾಕಲ್ಲ, ಹಾನಿಗೊಳಗಾಗೋರ್ನ ಮನೇಲಿರು ಅಂತಾರೆ. ಒಂದು ಗಂಡು ಟರ್ಕಿ ಕೋಳಿ ಹೆಣ್ಣನ್ನ ಒಲಿಸಿಕೊಳ್ಳೋಕೆ ತನ್ನ ಮೈ ಬಣ್ಣವನ್ನೆಲ್ಲಾ ಬದಲಾಯಿಸಿ ಹಿಂದೆ ಹಿಂದೆ ತಿರುಗಿ ತಿರುಗಿ ಹೆಣ್ಣಿಗೆ ಹಿಂಸೆ ಕೊಡುತ್ತಿತ್ತು. ಅಕಸ್ಮಾತ್ ಯಾವುದೇ ಬೇರೆ ಗಂಡು ಬಂದರೆ ಅದನ್ನ ಕೊಕ್ಕಲ್ಲಿ ಕಚ್ಚಿ ಕಚ್ಚಿ ಒಡಿಸೋಕೆ ನೋಡುತ್ತಿತ್ತು.

"ಇದೊಂದೆ ಮನುಷ್ಯರ ಥರ ತನ್ನವರನ್ನೇ ಸಾಯಿಸೋದು ನೋಡಿ" ಅಂದ ರೆಹಮಾನ್. ಅಲ್ಲೇ ಇದ್ದ ಗಿರಿರಾಜ ತಳಿ ಕೋಳಿ ತೋರಿಸುತ್ತ ಇದು ನಮ್ಮದೇ ತಳಿ. ಎಷ್ಟು ಒಳ್ಳೆ ಮೊಟ್ಟೆ ಗೊತ್ತಾ ಎಂದು ಆಕಾರ ಅಗಲವನ್ನ ತೋರಿಸುತ್ತಿರುವಾಗ ಮೊಟ್ಟೆ ಬಿದ್ದು ಒಡೆದು ಹೋಯ್ತು. ಅಲ್ಲೇ ಓಡಾಡುತ್ತಿದ್ದ ಕೋಳಿಗಳು ಬಂದು ಅವೆಲ್ಲವನ್ನ ಚೊಕ್ಕಟವಾಗಿ ತಿಂದು ಖಾಲಿ ಮಾಡಿದವು. ಅದರ ಜಾತಿಯನ್ನ ಅದೇ ತಿನ್ನೋದು ನೋಡಿ ಒಮ್ಮೆ ಮೈ ಝುಂ ಅಂತು. ರೆಹಮಾನ್ ಹೇಳಿದ್ರು "ಎಲ್ಲ ಮರಿಗಳನ್ನ ಕಾವು ಕೊಡಲ್ಲ, ಕೆಲವೊಂದು ಸರಿಯಾಗಿ ಬೆಳೆಯದೇ ಇದ್ದದ್ದನ್ನು ಅದೇ ತಿನ್ನತ್ತೆ, ಸರಿಯಾಗಿದ್ದದ್ದು ಮಾತ್ರ ಭೂಮಿಗೆ ಬರೋಕೆ ಬಿಡೋದು" ಎಂದಾಗ ದಂಗು ಬಡಿದು ಕೂತೆ.

ಆನೆಗಳ ಹಾದಿಗೆ ಬೆಳೆಗಳನ್ನ ಬೆಳೆಸದೆ ಜಾಗ ಬಿಡೋದು, ಬೆಳೆದಿದ್ದೆಲ್ಲವನ್ನು ಮಾರದೇ ಇರೋದು, ಮನುಷ್ಯರೇ ಪ್ರಾಣಿಗಳಿಗೆ ಅಡ್ಜೆಸ್ಟ್ ಮಾಡಿಕೊಳ್ಳೋದನ್ನ ನೋಡಿದ್ದು ಪ್ರಥಮ ಬಾರಿಗೆ. ಜೀವನ ಕಲಿಸುವ ಪಾಠಗಳು ಬಹಳ, ಅದಕ್ಕೆ ಅಲ್ಲವೇ ದೇಶ ಸುತ್ತಬೇಕು ಅನ್ನೋದು...












Click it and Unblock the Notifications