ಎಲ್ಲ ಹೆಣ್ಮಕ್ಕಳು ಕೆಲಸಕ್ಕೆ ಹೋಗುವವರೇ, ಕೆಲವರಿಗೆ ಮಾತ್ರ ಸಂಬಳ!
"ಅಮ್ಮ, ಇದು ಆನ್ಲೈನ್ ಆರ್ಡರ್ ಬರತ್ತೆ, ಇಸ್ಕೋ."
"ಲೇ ವಾಟರ್ ಅವ್ನೇನೋ ಬರ್ತಾನೆ, ಎಷ್ಟೊತ್ತಿಗೆ ಅಂತ ಗೊತ್ತಿಲ್ಲ, ಸ್ವಲ್ಪ ನೋಡ್ಕೋ."
"ಅಯ್ಯೋ ನಂಗೆ ಈರುಳ್ಳಿ ಹಾಕಿರೋ ಉಪ್ಪಿಟ್ಟು ಬೇಡ, ಬೇರೇದೇನಾದ್ರೂ ಮಾಡಮ್ಮ."
"ಐದು ದಿವಸ ಕೆಲಸ ಮಾಡಿ ಸಾಕಾಗೋಗಿದೆ, ನಂಗೆ ರೆಸ್ಟ್ ಬೇಕು, ಪ್ಲೀಸ್ ಎಬ್ಬಿಸಬೇಡ."
ಇವಷ್ಟು ಮಾತುಗಳು ನಾವು ಎಲ್ಲರ ಮನೆಯಲ್ಲಿಯೂ ಕೇಳಿಯೇ ಇರ್ತೀವಿ ಅಲ್ವಾ? ಗಾಣದೆತ್ತಿನ ಹಾಗೆ ದುಡಿಯುವ ಅಮ್ಮನಿಗೂ ಕೊಂಚ ಬಿಡುವು ಬೇಕು ಎಂಬ ವಿಷಯ ನಮಗೆ ಅರಿವಿಗೇ ಬರುವುದಿಲ್ಲ. ಎಲ್ಲಾ ಸಮಯದಲ್ಲಿಯೂ ನಮಗೆ ಅವೈಲೇಬಲ್ ಆಗಿರಬೇಕು ಎಂಬ ವಿಚಿತ್ರ ಹುಚ್ಚು ಕಲ್ಪನೆ ನಮಗೆಲ್ಲಿ ಬಂತೋ ನನಗೆ ಗೊತ್ತಿಲ್ಲ.
ನಾ ಬಾರ್ಸಿಲೋನಾದಲ್ಲಿದ್ದಾಗ ನನ್ನ ಮನೆ ಒಡತಿ ಸಿಂಗಲ್ ಪೇರೆಂಟ್, ಅವಳು ತಡರಾತ್ರಿ ಫೋಟೋಗ್ರಫಿ ಮಾಡಿಮುಗಿಸಿ ಮನೆ ಸೇರುತ್ತಿದ್ದಳು. ಅವಳ 10 ವರ್ಷದ ಮಗಳು ಬೆಳಗ್ಗೆ ಬೇಗ ಎದ್ದು ತನ್ನ ತಿಂಡಿ ತಾನೆ ಮಾಡಿಕೊಂಡು ತಿಂದು, ಡಬ್ಬಿಗೂ ಏನೋ ತೆಗೆದುಕೊಂಡು ಹೋಗುತ್ತಿದ್ದಳು. 25 ವರ್ಷದ ನಾನು ದಿನಾ ಮನೆಗೆ ಫೋನು ಮಾಡಿ, ಅಯ್ಯೋ ಅಡುಗೆ ತಿಂಡಿ ಎಲ್ಲಾ ನಾನೇ ಮಾಡಿಕೊಳ್ಳಬೇಕು ಎಂದು ಅಳುತ್ತಿದ್ದೆ. ಶಾಲೆ ಮುಗಿದ ಮೇಲೂ ಅವಳೇ ಬೀಗ ತೆಗೆದು ಮನೆಗೆ ಬಂದು ತನ್ನ ಪಾಡಿಗೆ ತಾನಿರುತ್ತಿದ್ದಳು. ಮಿಲ್ಲಿಸಾಗೆ ಅವಳಮ್ಮ ಯಾವಾಗಲೂ ಮನೆಯಲ್ಲಿಯೇ ಇರುತ್ತಾಳೆ ಎಂಬ ಕಲ್ಪನೆ ಹುಟ್ಟಿನಿಂದಲೂ ಬಂದಿಲ್ಲ. ಅವಳಿಗೆ ಶಾಲೆ, ಆಟ, ಓದು, ಪೇಂಟಿಂಗ್ ಹವ್ಯಾಸ ಇರುವಂತೆ ಅವಳಮ್ಮನಿಗೂ ಫೋಟೋಗ್ರಫಿ, ನೃತ್ಯ ಮತ್ತು ಕಸೂತಿಯ ಹವ್ಯಾಸವಿದೆ ಎಂದು ತಿಳಿದೆ. ಅಮ್ಮನಿಗೆ ಬಿಡುವಿದ್ದರೆ ಅಮ್ಮ ಅಡುಗೆ ಮಾಡುತ್ತಾಳೆ, ಇಲ್ಲದಿದ್ದರೆ ಇವಳು ಮಾಡುತ್ತಾಳೆ.

ಇದೇ ನಮ್ಮೆಲ್ಲರ ಮನೆಯಲ್ಲಿ ನೋಡಿದರೆ ಬೆಳಗ್ಗೆ 4 ಘಂಟೆಗೆ ಎಲ್ಲೋ ಹೊರಡಬೇಕಿದ್ದರೂ, 3 ಘಂಟೆಗೆ ಎದ್ದ ಅಮ್ಮ ಎಲ್ಲರಿಗೂ ಅಡುಗೆ ಮಾಡಿ ಹೋಗಬೇಕು. ಇಲ್ಲ ಅದಕ್ಕೆ ಯೋಚಿಸಿ ಮತ್ತಿನ್ಯಾರಿಗೋ ಹೇಳಿ ವ್ಯವಸ್ಥೆ ಮಾಡಿಸಬೇಕು. ಇದು ಅಮ್ಮನಿಂದ ಮಗಳಿಗೆ, ಅತ್ತೆಯಿಂದ ಸೊಸೆಗೆ ಮಾತ್ರ ಹರಿದಾಡುವ ಪಾಠ. ಮಧ್ಯದಲ್ಲಿ ಇರುವ ಗಂಡ, ಮಗ, ಅಳಿಯ ಎಲ್ಲರೂ ಮನೆಯ ಖಾಯಂ ಅತಿಥಿಗಳು. ಕಡೇ ಪಕ್ಷ ಮನೆಯಲ್ಲಿ ಇದ್ದೀಯಾ ಎಂದು ಕರೆ ಮಾಡಿ ಕೇಳುವಷ್ಟು ಅವರಿಗೆ ಪುರುಸೊತ್ತು ಇರುವುದಿಲ್ಲ.
ನಮ್ಮ ಶಾಲೆಯಲ್ಲಿ ಸೋಷಿಯಲ್ ಸ್ಟಡೀಸ್ ಪಠ್ಯದಲ್ಲಿ ಸಹ ಮನೆಯಲ್ಲಿ ಇರುವ ಹೆಂಗಸರನ್ನ ಹೌಸ್ ವೈಫ್ ಎನ್ನುತ್ತಿದ್ದರು ಎಂಬ ಪಾಠವಿತ್ತು. ನನಗೆ ಅರ್ಥವೇ ಆಗುತ್ತಿರಲ್ಲಿಲ್ಲ. ಮನೆಗೆ ಹೆಂಡತಿ ಹೇಗಿರಲು ಸಾಧ್ಯವೆಂದು. ಅಮ್ಮ ಅದನ್ನ ಹೋಂ ಮೇಕರ್ ಎಂದು ಸರಿ ಪಡಿಸಿ ಕಳಿಸಿದ್ದಳು. ಅವಳು ತನ್ನನ್ನ ಹೋಂ ಮೇಕರ್ ಎಂದೇ ಎಲ್ಲರಿಗೂ ಹೇಳುತ್ತಿದ್ದಳು.

ಆಗಿನ ಕಾಲದ ಹೆಣ್ಣುಮಕ್ಕಳ ಕೆಲಸದ ನಿರ್ಧಾರವನ್ನ ಮನೆಯವರೆಲ್ಲರೂ ತೆಗೆದುಕೊಳ್ಳುತ್ತಿದ್ದ ಕಾರಣ ಅವಳು ಕೆಲಸಕ್ಕೆ ಹೋಗುವಷ್ಟು ಓದಿದ್ದರೂ ಹೋಗೋದಕ್ಕೆ ಸಾಧ್ಯವಿರುತ್ತಿರಲ್ಲಿಲ್ಲ. ಆದರೂ ಕೆಲವರು ಅದನ್ನ ಜಯಿಸಿದ್ದರಿಂದ ಹೆಣ್ಣುಮಕ್ಕಳಲ್ಲಿಯೇ ಕೀಳುರಿಮೆ ಬರುವ ಹಾಗೆ ಮಾಡಿದ್ದರು. "ಓಹ್ ನೀವು ಹೌಸ್ ವೈಫಾ" ಅನ್ನೋದು, "ನಿಮಗೆ ಎರಡು ಹೆಣ್ಣು ಮಕ್ಕಳಾ" ಎಂಬಷ್ಟೇ ಸಹಜವಾಗಿ ಪ್ರಶ್ನೆಗಳನ್ನ ಕೇಳುತ್ತಿದ್ದರು. ಎಲ್ಲ ವಿದ್ಯೆ, ಸಾಮರ್ಥ್ಯ ಇದ್ದೂ ಒಬ್ಬರನ್ನು ಕಟ್ಟಿ ಹಾಕಿ ತಮಾಷೆ ನೋಡುವ ವಿಲಕ್ಷಣ ಸಂತೋಷ ಯಾವ ಸಮಾಜಕ್ಕೆ ಬರದಿರಲಿ ಅನ್ನೋದೆ ನನಗೆ ಈಗಲೂ ಅನ್ನಿಸೋದು.
ಈಗ ಹೊಸದಾಗಿ ಮದುವೆಯಾಗಿರುವ ಗೆಳತಿಯರು ಸಿಕ್ಕಾಗ ನಮ್ಮಷ್ಟು ಅವಕಾಶ, ಸೌಲಭ್ಯಗಳು ನಮ್ಮ ಅಮ್ಮಂದರಿಗೆ ಸಿಕ್ಕಿದ್ದರೆ ಅವರೆಲ್ಲಾ ಎಲ್ಲಿ ಇರುತ್ತಿದ್ದರು ಎಂಬ ಪ್ರಶ್ನೆಯನ್ನ ಹಾಕಿಕೊಂಡಾಗ ನಮಗೆ ಉತ್ತರ ಸಿಕ್ಕಿದ್ದು, ಅವರು ಇಲ್ಲಿದ್ದಕ್ಕಿಂತ ಅವರ ಜೀವನವನ್ನ ಮತ್ತಷ್ಟು ಉತ್ತಮಗೊಳಿಸುತ್ತಿದ್ದರು ಎಂಬುದನ್ನು, ಹಾಗೆಯೇ ನಮಗೂ ಕೆಲಸ ಬರುತ್ತಿತ್ತೆಂದು.

ವಾಟ್ಸಾಪಿನಲ್ಲಿ ಮೊನ್ನೆ ಒಂದು ಫಾರ್ವರ್ಡ್ ಬಂದಿತ್ತು, ಎಲ್ಲ ಹೆಣ್ಣುಮಕ್ಕಳು ಕೆಲಸಕ್ಕೆ ಹೋಗುವವರೇ, ಆದರೆ ಕೆಲವರಿಗೆ ಮಾತ್ರ ಸಂಬಳ ಸಿಗುತ್ತದೆ ಎಂದು. ಅದು ಬಹಳ ಸತ್ಯ. ಮನೆಯಲ್ಲಿ ತಾವೇ ಮೊದಲು ಎದ್ದು ಕಡೆಗೆ ಮಲಗಿಕೊಳ್ಳುವ ಅಮ್ಮಂದಿರು, ಅತ್ತೆಯಂದಿರು, ಅಜ್ಜಿಯಂದರಿಗೆ ಅವರ ಮೌಲ್ಯ ಅವರಿಗೇ ತಿಳಿಯುತ್ತಿಲ್ಲ. ಈಗಲೂ ತಲೆ ಬಗ್ಗಿಸಿಕೊಂಡು ಕೆಲಸ ಮಾಡುತ್ತಾ ಕೂತಿದ್ದಾರೆ. ನಾವು ಇವತ್ತು ಅವರಿಗೆ ಹೇಳಬೇಕಾಗಿದೆ ನಿಮ್ಮ ಕೆಲಸಕ್ಕೆ ಮನೆಯಲ್ಲಿ ಸಹಾಯ ಮಾಡಬೇಕು, ನಿಮ್ಮನ್ನ ಗೌರವದಿಂದ ಕಾಣಬೇಕು, ಗಂಡು ಹೆಣ್ಣು ಎಂಬ ಭೇದವಿಲ್ಲದೇ ಎಲ್ಲರೂ ಮನೆಯ ಕೆಲಸ ಮಾಡಬೇಕು ಮತ್ತು ನಾವು ಹೌಸ್ ವೈಫ್ ಎಂದು ಹೇಳುವ ವಿಷಯವನ್ನ ಬಿಡಬೇಕು. ಅವರು ಮನೆಯಲ್ಲಿ ಯಾವುದೇ ಟೈಮಿಂಗ್ಸ್ ನೋಡದೇ, ರಜೆಯೂ ಇಲ್ಲದೇ ಕೆಲಸ ಮಾಡುವವರಿಗೆ ಟೈಮಿಂಗ್ಸ್ ಮತ್ತೆ ರಜೆ ಹಾಗೂ ವೇತನವನ್ನ ನೀಡಿದಾಗಲೇ ಅವರ ಕೆಲಸದ ಮಹತ್ವ ನಮಗೆ ಅರಿವಾಗೋದು.
ನೋಡಿದಕ್ಕಿಂತ ಅನುಭವಿಸಿದ್ದನ್ನ ಬರೆಯೋದು ಸುಲಭವಲ್ಲವಾ ಅದಕ್ಕೆ ಬರೆದದ್ದು. ಹಳೆ ಕಂಪೆನಿಯನ್ನ ಬಿಟ್ಟು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಸಲುವಾಗಿ ಒಂದಷ್ಟು ದಿವಸ ಮನೆಯಲ್ಲಿದ್ದೆ. ಆಗ ನೋಡಿದ್ದು ಅನುಭವಿಸಿದ್ದು. ಇನ್ನು ಮುಂದೆ ಮನೆಯ ಕೆಲಸ ಹೆಣ್ಣು ಮಕ್ಕಳ ಭಾಗವಾಗಿರಲಿ, ಅದೇ ಅವರ ಕೆಲಸವಾಗದಿರಲಿ. ಇನ್ನು ಹೊಸ ಕಂಪನಿಗೆ ದೂರ ಪಯಣ! ಬಸ್ಸು, ಆಟೋದಲ್ಲಿ ಸಿಕ್ಕಾಗ ಹೈ ಅನ್ನಿ!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications