ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಟೆಲ್‌ ಕೊಟ್ಟಿರುವ ಗಾದೆಗಳ ಪಟ್ಟಿ ನೋಡಿ

By Staff
|
Google Oneindia Kannada News

ಕಿಟೆಲ್‌ ಕೊಟ್ಟಿರುವ ‘ನೀರು’ ತುಂಬಿದ ಗಾದೆಗಳ ಪಟ್ಟಿ ನೋಡಿ: ನೀರಾಟಕ್ಕೆ ಹೋಗಿ ಹೇಳಾಟ ಕಳಕೊಂಡ; ಒಕ್ಕಲಿಲ್ಲದ ಊರು, ಕೊಳೆತು ನಾರುವ ನೀರು; ಮೀನು ಬಲ್ಲುದೆ ನೀರು ಚವುಳು ಸೋದೆಂಬುದನು; ನೀರಕಡೆಗೆ ನಾಟಿಗೆ ಮರ ಚಿಗುರದೇ ಬಿಟ್ಟೀತೇ?; ನೀರಲ್ಲಿ ನೋಡಿದವನನ್ನ ಊರಲ್ಲಿ ಇಡಬಾರದು, ಎಣ್ಣೇಲಿ ನೋಡಿದವನ್ನ ಕಣ್ಣಲ್ಲಿ ನೋಡಬಾರದು; ನೀರಲ್ಲಿ ಬರೆದ ಬರಹಾನ ಹಾಗೆ; ನೀರಾದರೂ ನಾರ (ಕೆಟ್ಟ ವಾಸನೆ ಬರ/ಕೊಳೆಯ) ಬಾರದು; ನೀರ ಒಳಗಣ ಕಪ್ಪೆ ಬಯಲಿಗೆ ಹಾಕಿದ ಹಾಗೆ; ನೀರಿಲ್ಲದ ತಾವು, ಊರು ಕಟ್ಟಿದ ಹಾಗೆ; ನೀರು ಇದ್ದರೆ ಊರು, ನಾರಿ ಇದ್ದರೆ ಮನೆ; ನೀರು ಎಲ್ಲಾ ಒಂದೇ, ಬಡಿದ ಕೋಲು ಮಾತ್ರಾ ಬೇರೆ; ನೀರು ಹಳ್ಳಕ್ಕೆ ಹೋದೀತೇ ಹೊರ್ತು, ದಿನ್ನೆಗೆ ಹೋದೀತೇ?; ನೀರಿನದು ನೀರಿಗೆ ಹೋಯಿತು, ಹಾಲಿನದು ಹಾಲಿಗೆ; ನೀರು ಹೊರುವ ಬಡ್ಡಿಗೆ ಊರ ಪಾರುಪತ್ಯವು ಯಾಕೆ?; ನೀರೊಳಗಣ ಕಪ್ಪೆ ನೀರು ಕುಡಿಯದೆ ಬಿಟ್ಟೀತೆ?; ನೀರೊಳಗೆ ಮೋರೆ ನೋಡಿ, ಮರನೇರಿದ ಹಾಗೆ; ನೀರು ಸೇದಿದ ಹಾಗೆ ಬರುತ್ತೆ, ಮಾತು ಆಡಿದ ಹಾಗೆ ಬರುತ್ತೆ.

ಅವನು ಬಿಟ್ಟಿದ್ದಕ್ಕೆ ಕೊಂಚ ಕೊಸರು: ಕುಂಟೆತ್ತಿಗೆ ಕೊಳಕು ನೀರೇ ಪಂಚಾಮೃತ; ಮಾಡಿದ ಕರ್ಮಕ್ಕೆ ಮನವೇ ಸಾಕ್ಷಿ, ತೋಡಿದ ಬಾವಿಗೆ ನೀರೇ ಸಾಕ್ಷಿ; ಗಂಗೆಗೆ ಕಟ್ಟಿಲ್ಲ, ಲಿಂಗಕ್ಕೆ ಹೊಲೆಯಿಲ್ಲ (ಕೆರೆ ತೊರೆ ನದಿಯ ನೀರನ್ನ ಯಾರು ಬೇಕಾದರೂ ಉಪಯೋಗಿಸಬಹುದು, ದೇವರ ದರ್ಶನಕ್ಕೆ ಯಾರು ಬೇಕಾದರೂ ಹೋಗಬಹುದು!)

ಮಳೆ ಸುರಿಯಿತು; ನೀರು ಹರಿಯಿತು. ಒಂದು ಕ್ಷಣ ನಿಲ್ಲಿ! ಹರಿಯುವ ಸ್ವಭಾವ ಒಂದು ಪಕ್ಷ ನೀರಿಗೆ ಇಲ್ಲದೇ ಹೋಗಿದ್ದರೆ, ಯೋಚನೆ ಮಾಡಿ: ಸಸ್ಯಗಳಾಗಲೀ ಪ್ರಾಣಿಗಳಾಗಲೀ ಮನುಷ್ಯರಾಗಲೀ ಬದುಕಲು ಸಾಧ್ಯವಿತ್ತೇ? ಇದೇ ಕಾರಣಕ್ಕೇನೇ, ಹರಿಯುವ, ಹರಿದು ಬಂದು ನಿಂತ ನೀರನ್ನ- ಅದು ಎಷ್ಟೇ ಚಿಕ್ಕ ಯಾ ದೊಡ್ಡ ಪ್ರಮಾಣದಲ್ಲಿರಲಿ- ನೋಡಿದಾಗಲೆಲ್ಲಾ ಅದು ಶ್ರೀ ದೇವರ ಅನುಗ್ರಹ, ದೈವಾಂಶವುಳ್ಳದ್ದು, ದೇವರದ್ದೇ ಒಂದು ರೂಪವಿಶೇಷ ಎಂದು ನಮ್ಮ ಋಷಿ ಕವಿಗಳು ಕೊಂಡಾಡಿರುವುದು. ‘ನಿನ್ನನ್ನು ನೀರು ತರುವ ಹೆಂಗಸರೂ ನೋಡಿದ್ದಾರೆ’ ಎಂದು ಪ್ರಾರಂಭದ ಮಂತ್ರಗಳಲ್ಲೇ ಹೇಳಿ, ‘ಶಿವನೇ ನೀನು ನೀರಿನ ವಿವಿಧ ರೂಪ ವಿನ್ಯಾಸಗಳಲ್ಲಿ ಇರುವೆ; ಕಾಣ ತೋರುವೆ’ ಎನ್ನುವ ಯಜುರ್ವೇದೀಯ ‘ಶತರುದ್ರೀಯ’ದ ವಿಚಾರವನ್ನು ಇನ್ನೊಂದು ಲೇಖನಕ್ಕೆ ‘ನೀರಾಗಿ’ ಇರಿಸಿಕೊಂಡಿರುವೆ!

ಹೊಳೆ : ಎಲ್ಲರಿಗೂ ಪ್ರಿಯವಾದ, ಯಾರು ಬೇಕಾದರೂ ಹೋಗಿ ಸುಖಿಸಬಲ್ಲ ತಾಣ, ನದಿ. ‘ಹೊಳೇ ನೀರಿಗೆ ದೊಣ್ಣಪ್ಪ ನಾಯ್ಕನ ಅಪ್ಪಣೆಯೇ’ ಎನ್ನುವ ಸ್ವಾತಂತ್ರ್ಯದ ಘೋಷಣೆ ಒರಟಾದರೂ ನೇರ. ಬೆಳ್ಳಿ ಪರದೆಯ ಮೇಲೆ ನೋಡಿದ, ಕುಣಿದಾಡಿದ ಜೀನ್‌ ಕೆಲ್ಲಿ ಡೊನಾಲ್ಡ್‌ ಓ’ಕೊನ್ನೂರ್‌ ಮತ್ತು ಡೆಬ್ಬಿ ರೇಯ್‌ನಾಲ್ಡ್‌ಸ್‌ ತರಹಾ ‘ಮಳೆಯಲ್ಲಿ ಹಾಡು’ ಸಾಧ್ಯವಾಗದಿದ್ದರೂ, ಹೊಳೆಯಲ್ಲಿ ಮಿಂದು ಮುಳುಗೇಳುವ, ಈಜಾಡುವದಕ್ಕೇನೂ ಅಭ್ಯಂತರವಿಲ್ಲ! ಓಡಿ. ‘ಹೊಳೆಯ ಪರ್ಯನ್ತರ ಓಟ, ದೊರೆಯ ಪರ್ಯನ್ತರ ದೂರು’. ನೋಡಿ: ‘ಹೊಳೆ ಇದೆ ಮೂಗಾವುದ, ಕೆರಾ ಕಳಚುವುದೇ ಈಗ?’ ಯೋಚಿಸ ಬೇಡಿ: ‘ಹೊಳೆಗೆ ಇಳಿದಮೇಲೆ, ಮಳೆಯೇನು? ಚಳಿಯೇನು?’ ಹೋಗಲಿ ಬಿಡಿ: ‘ಹೊಳೆಗೆ ನೆನೆಯದೆ ಕಲ್ಲು ಮಳೆಗೆ ನೆನೆದೀತೆ?’ ಮೀನು, ಮೊಸಳೆ? ‘ಇರೋದೇ ನೀರಲ್ಲಂತೆ, ಮೀನಿನ ಜೊತೆ ಏನು ಗುದ್ದಾಟ?’ ಇಷ್ಟಕ್ಕೂ ಕೇಳಿಲ್ಲವೇ? ‘ಆನೆ ನೀರಾಟದಲಿ ಮೀನ ಕಂಡು ಅಂಜುವುದೇ?’ ಚೆನ್ನಾಗಿ ಮೈ ಮನಗಳನ್ನೆಲ್ಲಾ ಶುದ್ಧಿಗೊಳಿಸಿಕೊಂಡು ದಡಕ್ಕೆ ಬನ್ನಿ! ನೀರಾಟ ಸಧ್ಯಕ್ಕೆ ಇಷ್ಟು ಸಾಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X