ಶರತ್ ಕಾಲದ ಶ್ವೇತ ಮೋಡದೊಳಗೂ ನೀನಿದ್ದೀಯಲ್ಲ !
ಮಳೆ ತರದ ಮೋಡ, ಶರತ್ ಕಾಲದ ಬಿಳಿ ಮೋಡ (ಈಧ್ರ), ಮಂಜು, ಮಂಜಿನ ನೀರು(ನಿವೇಷ್ಪ), ಮಳೆ ತರುವ ಮೇಘ, ಗುಡುಗು, ಜೊತೆಗೆ ಕಣ್ಣು ಕೋರೈಸುವ ಮಿಂಚು(ವಿದ್ಯುತ್)ಸುರಿಮಳೆ (ವರ್ಷಾ)- ಎಲ್ಲಾ ನೀನೆ. ನೀರು ಹರಿದು ಗುಂಡಿ(ಅವಟ), ಚಿಕ್ಕ ಕೆರೆ(ವೇಶಂತ)ಗಳು ತುಂಬಿದವು; ಹೊಳೆಗಳೂ ತುಂಬಿದವು, ನೀನೇ ಗಾಳಿಯಲ್ಲಿ ಒಳಸುಳಿದೆ(ವಾತ್ಯ); ಅಗಾಧವಾದ ನೀರಿನ (ಹೃದಯ್ಯ) ಮಡಿಲಿನಿಂದ ಹೊರ ಹೊರಟು, ನೊರೆ ತುಂಬಿ, ಅಲೆಗಳು ದಡಕ್ಕೆ (ಕೂಲ)ಕ್ಕೆ ಅಪ್ಪಳಿಸುತ್ತಿವೆ, ಆಹಾ, ಎಂಥ ಸುಂದರವಾದ ಅಲೆಗಳು (ಸು-ಊರ್ಮಿ) ಅವು ! ಅಲ್ಲೆಲ್ಲಾ , ಶಿವನೇ, ನೀನು ನೀನೇ !
***
ತನ್ನ ಸುತ್ತಮುತ್ತಣ ಚರ-ಅಚರ ಎಲ್ಲವನ್ನೂ ಒಂದೊಂದನ್ನೂ ಹೆಸರಿಸಿ, ನೀನಲ್ಲಿದ್ದೀಯೆ, ನೀನಿಲ್ಲಿದ್ದೀಯ, ನೀನೇ ಅದು, ಆ ನಿನಗೆ ‘ನಮೋ, ನಮೋ’ ಎಂದು ಹೇಳುವ ರುದ್ರನ ಸ್ತುತಿಯ ಒಂದು ಭಾಗ ‘ನಮಕ’ವೆನಿಸಿಕೊಂಡಿತು; ಒಂದೊಂದಾಗಿ ಎಲ್ಲವನ್ನೂ ಹೆಸರಿಸುತ್ತಾ, ಅದು, ಇದು, ಮತ್ತದು, ಆ ಅದು, ಈ ಇದು- ಹೀಗೆ ಇವೆಲ್ಲಾ ನಿನಗಾಗಿ ನಾನು ಮಾಡುವ ಯಜ್ಞಕ್ಕೆ ಮೀಸಲಾಗಿರಲಿ (‘ಚ ಮೇ’ ಯಜ್ಞೇನ ಕಲ್ಪನ್ತಾಮ್)ಎಂಬ ಪಲ್ಲವಿಯು ಇನ್ನೊಂದು ಭಾಗಕ್ಕೆ ‘ಚಮಕ’ ಹೆಸರನ್ನು ಕೊಟ್ಟಿತು.
ನಿಗೂಢತೆಯಲ್ಲಿ ಮುಳುಗೇಳಿಸಿ ಪಟ್ಟು ಹಾಕುವ ಶತರುದ್ರೀಯ
‘ಶತರುದ್ರೀಯ’ ಚಿಂತಿಸಿದಷ್ಟೂ ಆಳವನ್ನು ಹೆಚ್ಚಿಸುವ ಮಹಾಸಾಗರದ ಒಂದು ಮಡುವಾಗಿ ನಿಗೂಢತೆಯಲ್ಲೇ ನಮ್ಮನ್ನು ಮುಳುಗೇಳಿಸುತ್ತದೆ !
ಮೋಡ, ಗುಡುಗು, ಸಿಡಿಲು, ಮಿಂಚು, ಮಳೆ, ನೀರು, ಕೆರೆ, ಕೊಳ, ಬಾವಿ, ಹೊಳೆ, ಸಮುದ್ರ- ಹೀಗೆ ‘ನೀರಿ’ಗೆ ಕಾರಣನಾದವನೂ, ನೀರಲ್ಲಿಯೇ ಇದ್ದು ಪ್ರಾಣರಕ್ಷಣೆ ಮಾಡುವವನೂ, ನೀರು ನೆಲ ನಭಗಳನ್ನು ಹೊತ್ತವನೂ, ನೀರೆರೆದರೆ ನಲಿವವನೂ, ಸುಲಭವಾಗಿ ಒಲಿಯುವವನೂ, ನಮಗಾಗಿ ತಾನು ಅತ್ತು, ಒಳ್ಳೆಯದಕ್ಕೆ ಕುತ್ತಾದವರನ್ನು ಬಿಡದೇ ಅಳಿಸುವವನೂ, ಒಳಗೂ ಹೊರಗೂ ಇದ್ದು ಎಲ್ಲರನ್ನೂ ಎಲ್ಲವನ್ನೂ ಆಳುವವನೂ, ಕೊಟ್ಟ ಕೊನೆಗೆ ಎಲ್ಲದನ್ನೂ ‘ಅಳಿಸಿ’ ಹಾಕಿಬಿಡುವವನೂ ಆದ ಆ ರುದ್ರ ‘ಶಂ’ಕರ ನಿಮಗೆ, ನಮಗೆ, ಈ ಪ್ರಪಂಚಕ್ಕೆಲ್ಲ ನೆಮ್ಮದಿಯ ಮಳೆಗರೆಯಲಿ!