ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಸಿ ರೂಪಿಸಿದ ಗುರುಋಣಕ್ಕೆ ಏನ ಕೊಟ್ಟೇವು?

By Staff
|
Google Oneindia Kannada News

People taking holy bathಪ್ರೀತಿಯ ಗುರುವಿಗೆ ಏನು ದಕ್ಷಿಣೆ ಕೊಡುವುದು?- ಎಂಬ ಸಂದೇಹ ಶಿಷ್ಯನಿಗೆ ಕಾಡುವುದು ಸಹಜ. ಅದಕ್ಕಿಲ್ಲಿದೆ ಉತ್ತರ:

ಏಳೇಳು ಕಡಲೊಳಗೆ ಕೂಡಿರುವ ಭೂಮಿಯನು
ಕೊಡುವೆ ಗುರುವಿಗೆ ನಾನು ಎನುವೆಯೇನು?
ಕತ್ತಲಿಗೆ ಸೊಡರಂತೆ ಕಲಿಸಿರಲಿ ಒಂದೆ ಒಂದಕ್ಷರವನ್ನ
ಅಂಥವಗೆ ಏನೆಲ್ಲವಿತ್ತರೂ, ಹೇಳು, ಆ ಋಣ ಎಂದಿಗೂ ಹರಿವುದೇನು?

(‘ಸಪ್ತದ್ವೀಪವತೀ ಭೂಮಿಂ ದಕ್ಷಿಣಾರ್ಥಂ ನ ಕಲ್ಪತೇ।’- ತಾಪನೀಯ ಶ್ರುತಿ. ‘ಏಕಂ ಅಪಿ ಅಕ್ಷರಂ ಯಸ್‌ ತು ಗುರು: ಶಿಷ್ಯೇ ನಿವೇದಯಾತ್‌। ಪೃಥಿವ್ಯಾಂ ನಾಸ್ತಿ ತದ್‌ ದ್ರವ್ಯಂ, ಯದ್‌ ದತ್ವಾ ತು ಅನೃಣೋ ಭವೇತ್‌।।’- ಲಘುಹಾರೀತ ಸ್ಮೃತಿ) ಶಿಷ್ಯನ ಪೇಚಾಟವನ್ನು ಕಂಡು ಗುರು ಹೇಳಿಯಾನು :

ಇರಲಿ ಬಿಡು, ಬಾ ಕಂದ, ನೀ ತಂದ ಹಣದಿಂದ
ನಿನ್ನ ಗುರುಭಕ್ತಿಯನೇನು ಅಳೆವೆನೇ ನಾನು?
ಛೆ, ಇಲ್ಲ ; ನಿನ್ನ ಗುಣದತಿಶಯಕೇನೆ ನಾ ಸಂತುಷಿಸುವೆನು!

(ಅಲಂ ಅರ್ಥೇನ, ಮೇ ವತ್ಸ, ತ್ವದ್‌ ಗುಣೈರ್‌ ಅಸ್ಮಿ ತೋಷಿತ :।।- ವೀರಮಿತ್ರೋದಯ ಸಂಸ್ಕಾರಪ್ರಕಾಶ). ಆಮೇಲೆ, ಹೊರಡುತ್ತಾನೆ ಛಾತ್ರ ತನ್ನ ಈ ವಿಶೇಷ ಸಮಾವರ್ತನ ಸ್ನಾನಕ್ಕೆ. ಮಾವಿನ ಚಿಗುರಿನಿಂದ ಮೊದಲ ಕಲಶದ ನೀರನ್ನು ತನ್ನಮೇಲೆ ಸಿಂಪಡಿಸಿಕೊಳ್ಳುತ್ತ ಹೇಳುತ್ತಾನೆ :

ಈ ನೀರ ಒಳಹೊಕ್ಕ, ಮುಚ್ಚಿ ಅಡಗಿದ ಬಡಬ,
ಪ್ರಖರ ತೀಕ್ಷ್ಣದ ಕಿರಣ, ಮನಮುರಿವ ಬರಸಿಡಿಲು,
ತಡೆಯಲಾರದ ನೋವು, ಒಡಲ ಹುಡಿಮಾಡುವದ
ಇಂದ್ರಿಯಗಳೆಲ್ಲವ ಸುಡುವ ಬಗೆ ಬಗೆಯ ಅಗ್ನಿಗಳ
ಬಿಟ್ಟು ಕಳಚಿದೆ, ನಾನಿದೋ ಈಗ ಈಗಲೇ ಹೊರಟೆ.
ಹೊಳೆ ಹೊಳೆವ ಬೆಳಕನ್ನ ಹಿಡಿದು ಮುಂದಕೆ ನಡೆವೆ.
ಸಿರಿ ಯಶಸ್ಸಿನ ಬಯಕೆ, ಬ್ರಹ್ಮ ವರ್ಚಸ್ಸಿನ ಹರಕೆ,
ಆ ಬ್ರಹ್ಮನನೆ ತಲುಪುವಾಕಾಂಕ್ಷೆಯಿಂ ನೀರ ಸಿಂಪಡಿಸಿಕೊಳುವೆ!

(ಯೇ ಅಪ್ಸು ಅನ್ತರ್‌ ಅಗ್ನಯ:, ಪ್ರವಿಷ್ಟಾ , ಗೋಹ್ಯ, ಉಪಗೋಹ್ಯೋ, ಮಯೂಖೋ, ಮನೋಹಾಸ್‌, ಖಲೋ, ವಿರಜಸ್‌, ತನೂದೂಷುರ್‌, ಇಂದ್ರಿಯಹಾ- ತಾನ್‌ ವಿಜಹಾಮಿ। ಯೋ ರೋಚನಸ್‌
ತಂ ಇಹ ಗೃಹ್ಣಾಮಿ (ಇತಿ ಮನ್ತ್ರೇಣ ಆಪೋ ಗೃಹೀತ್ವಾ) ಓಂ ತೇನ ಮಾಂ ಅಭಿಷಿಂಚಾಮಿ, ಶ್ರೀಯಂ ಯಶಸೇ, ಬ್ರಹ್ಮಣೇ ಬ್ರಹ್ಮವರ್ಚಸಾಯ।।- ಪಾರಸ್ಕರ ಗೃಹ್ಯಸೂತ್ರ 2.6.8-10)

ಇಂದ್ರಾದಿ ದೇವತೆಗಳೇ, ನಮ್ಮ ಹೊಸ ಹೆಜ್ಜೆಗಳಿಗೆ ಜೊತೆಯಾಗಿ ಬನ್ನಿ

ನೀರ ಬಗ್ಗೆ ಸ್ತುತಿಪರವಾದ ಹಲವಾರು ಮಂತ್ರಗಳನ್ನು ಹೇಳಿಕೊಳ್ಳುತ್ತಾ ಮಿಂದು, ಕೊನೆಗೆ ಒದ್ದೆ ಬಟ್ಟೆಯನ್ನು ಕಳಚಿ, ಒಣ ಬಟ್ಟೆಯನ್ನು ಉಟ್ಟುಕೊಳ್ಳುತ್ತಾ ಇಂದ್ರಾದಿ ದೇವತೆಗಳನ್ನು ತಾನಿಡುವ ಹೊಸ ಹೆಜ್ಜೆಗಳಿಗೆ ರಕ್ಷಣೆಕೋರಿ ಹೇಳುವ ಈ ಕಳಕಳಿಯ ಮಾತುಗಳನ್ನು ಕೇಳಿ:

ಹೊಳೆವ ವಜ್ರಾಯುಧವನ್ನ ಎತ್ತಿಹಿಡಿದಿಹ ಇಂದ್ರ
ಸುತ್ತ ಮರುತ್ತುಗಳೊಡನೆ ಸಗ್ಗಿಗರ ಜೊತೆಗೂಡಿ
ನಿಂತಿಹನು; ಮುಂಜಾನೆ, ಹಗಲು, ಮುಚ್ಚಂಜೆಯಲಿ
ಆಗಸದಿ ಸಂಚರಿಸಿ ಎಲ್ಲ ಗೆಲ್ಲುವ ದೈವಾಂಶಗಳೆ, ಸುರರೆ,
ಹತ್ತಾರು ನೂರಾರು ಸಾವಿರ ಬಗೆ ಬಗೆ ಬಗೆಯ ನಡೆಯ
ಬಾಳ ಸಂಘರ್ಷದಲಿ ನನ್ನ ಗೆಲುವಿಗೆ ನಿಮ್ಮ ಹರಕೆ ನೀಡಿ;
ಹೆಸರ ನಾ ಪಡೆಯುವ ಕಡೆಗೆ ದಾರಿ ತೋರಿ!
(ಉದ್ಯನ್‌ಭ್ರಾಜ- ಭ್ರಷ್ಣುರ್‌, ಇಂದ್ರೋ ಮರುದ್ಭಿರ್‌ ಅಸ್ಥಾತ್‌। ಪ್ರಾಥರ್‌ ಯೋ ಅರ್ಭಿರ್‌ ಅಸ್ಥಾದ್‌ ದಶಸನಿರ್‌ ಅಸಿ, ದಿವಾ ಶತನಿರ್‌, ಸಾಯಂ ಸಹಸ್ರಸನಿರ್‌। ದಶಸನಿಂ ಮಾ ಕುರು ಆವಿದನ್‌, ಶತಸನಿಂ, ಸಹಸ್ರನಿಮ್‌।। -ಪಾರಸ್ಕರ ಗೃಹ್ಯಸೂತ್ರ 2.6.8)

(ನೀರಿನಲ್ಲಿ ಸ್ನಾನವಾದುದರಿಂದ ಇದಕ್ಕೆ ‘ವಾರುಣ ಸ್ನಾನ’ ಎನ್ನುತ್ತೇವೆ. ಇದಲ್ಲದೆ, ವಾಯುಸ್ನಾನ, ಸೂರ್ಯಸ್ನಾನ, ಆಗ್ನೇಯಸ್ನಾನ, ತೈಜಸ ಸ್ನಾನ, ಮೃತ್ತಿಕಾಸ್ನಾನ, ಭಸ್ಮಸ್ನಾನಗಳೂ ಇವೆ. ಸ್ಮೃತಿಗಳಲ್ಲಿ, ಆಗಮಕೋಶಗಳಲ್ಲಿ ತುಂಬಾ ಸಾಮಗ್ರಿ ಈ ಬಗ್ಗೆ ಇವೆ. ಮನೆಯಲ್ಲಿನ ವೃಷ್ಟಿಸ್ನಾನ (ಷವರ್‌ ಬಾತ್‌), ಅಭ್ಯಂಜನ, ಆವಿಯ ಸ್ನಾನ, ತೊಟ್ಟಿಯಸ್ನಾನ, ಸ್ಪಂಜಿನಸ್ನಾನ, ಚಿಕಿತ್ಸೆಯ ಅಂಗವಾಗಿ ಬೇರೆ ಬೇರೆ ಅಂಗಾಂಗಸ್ನಾನಗಳೂ ಇವೆ. ಇವಲ್ಲದೆ, ಅರಿಶಿನದ ಸ್ನಾನ, ವಧೂವರರಿಗೆ ಸ್ನಾನ, ಮುಟ್ಟುನೀರು, ಶವಸ್ನಾನಗಳೂ ಇವೆ. ಸಧ್ಯಕ್ಕೆ ಅವು ಬೇಡ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X