''ಜೀ.ವಿ.''ಅವರು ಮಾಡಿಸಿದ ಬೇಂದ್ರೆ ದರ್ಶನ!- ಪುಟ 2
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಸಭೆಯಲ್ಲಿ ಭಾಷಣ
'' ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ' ಬೇ ಏರಿಯಾ- ಕನ್ನಡ ಕೂಟ"ವೆಂದೇ ಪ್ರಸಿದ್ಧವಾಗಿದೆ. ಇದು ಮುಖ್ಯವಾಗಿ ಉತ್ತರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ, ಫ್ರೀಮಾಂಟ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೋಜೆ. ಹಾಗೂ ಸನ್ನಿವೇಲ್ ಮತ್ತು ಇವುಗಳ ಸುತ್ತಮುತ್ತಣ ಉಪನಗರಗಳಲ್ಲಿ ವಾಸಿಸುವ ಕನ್ನಡಿಗರ ಒಕ್ಕೂಟವಾಗಿದೆ. (ಆ ವರ್ಷದ 1900-2000ರ) ಇದರ ಅಧ್ಯಕ್ಷೆ ವಿಮಲಾ ನಾಗರಾಜ್ ಅವರು ನನ್ನೊಂದಿಗೆ ಫೋನ್ನಲ್ಲಿ ಮಾತಾಡಿ ಕಾರ್ಯಕ್ರಮದ ವಿವರ ತಿಳಿಸಿದ್ದರು. ಸನ್ನಿವೇಲ್ನಲ್ಲಿರುವ ಹಿಂದೂದೇವಾಲಯದ ಸಭಾಗೃಹದಲ್ಲಿ ಕನ್ನಡ ಕೂಟದ ಕಾರ್ಯಕ್ರಮವಿತ್ತು. ಕಟ್ಟಡದ ನಿರ್ಮಾಣದ ಸಮಯದಲ್ಲಿ ಅನೇಕರು ಧನ ಸಹಾಯ ಮಾಡಿದ್ದಾರೆ. ಇಲ್ಲಿಯ ಸಾಫ್ಟ್ವೇರ್ ಉದ್ಯಮದಲ್ಲಿ ಹೆಸರು ಮಾಡಿದ ಬಿ.ವಿ. ಜಗದೀಶ ಒಬ್ಬರು ದಾನಿ. ಅವರು (ತುಂಬಾ ದೊಡ್ಡ ಮೊತ್ತದ ಒಂದು) ಡೊನೇಶನ್ ಕೊಡುವಾಗ ಒಂದು ಕರಾರು ಹಾಕಿದ್ದರಂತೆ. ' ಕನ್ನ ಡ ಕೂಟದ" ಕಾರ್ಯಕ್ರಮಗಳಿಗೆ ವರ್ಷದಲ್ಲಿ ಮೂರು ಸಲ ಉಚಿತವಾಗಿ ಬಳಸಲು ಸಭಾಗೃಹ ಕೊಡಬೇಕು ಎಂದು. ಅದೊಂದು ವರವಾಗಿ ಪರಿಣಮಿಸಿದೆ ಇಂದು. ಇತರ ಸಂಸ್ಥೆಯ ಜನರು ಅಧಿಕ ಬಾಡಿಗೆಯ ಹಣ ತೆತ್ತು ಈ ಹಾಲ್ ಬುಕ್ ಮಾಡುವ ದಿನಗಳಲ್ಲಿ ಕನ್ನಡ ಕೂಟ ಯಾವ ತೊಂದರೆಯಿಲ್ಲದೆ ಸಭಾಗೃಹ ಉಚಿತವಾಗಿ ಪಡೆಯುತ್ತಿರುವುದು ಸುದೈವದ ಸಂಗತಿ. ಇದರಲ್ಲಿ ಜಗದೀಶ ಅವರ ದೂರದೃಷ್ಟಿಯನ್ನು ಯಾರಾದರೂ ಮೆಚ್ಚಬೇಕು.
ರವಿವಾರ (ನವೆಂಬರ್ 19, 2000) ಮುಂಜಾನೆ ಪ್ರೊ. ಅನಂತ ಅವರು ತಮ್ಮ ಮನೆಯಲ್ಲಿ ಪರೋಟಾ ತಿನಿಸಿ ಉದಯನ ಮನೆಗೆ ತಂದು ಬಿಟ್ಟರು. ಅಲ್ಲಿ ಊಟ ಮಾಡಿ ನಾವು ಮೂರು ಗಂಟೆಯ ಸುಮಾರಿಗೆ ಸಭಾಗೃಹಕ್ಕೆ ಬಂದೆವು. ಸಭಾಗೃಹದ ತುಂಬೆಲ್ಲ ಅನೇಕ ಸ್ಪರ್ಧೆಗಳು ನಡೆಯುತ್ತಿದ್ದವು. ಹನ್ನೆರಡು ಗಂಟೆಗೆ ಮಹಿಳೆಯರಿಗಾಗಿ ಬಿಸಿ ಬೇಳೆ-ಭಾತ್ ತಯಾರಿಸುವ ಸ್ಪರ್ಧೆಯಿತ್ತಂತೆ. ಮಕ್ಕಳಿಗಾಗಿ ಹಲವಾರು ಆಟಗಳು ಇದ್ದವು. ಮಕ್ಕಳಿಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಯೂ ಇತ್ತು. ಮಧ್ಯದಲ್ಲಿ ಇರಿಸಲಾಗಿದ್ದ ಖುರ್ಚಿಯ ಮೇಲೆ ಕುಳಿತೆವು. ಅಷ್ಟರಲ್ಲಿ ಹರಿಹರೇಶ್ವರ ಬಂದರು. ಅವರ ಜೊತೆಗೆ ಡಾ. ಶಿವಪ್ರಕಾಶ ಬಂದಿದ್ದರು. ಅವರ ಪರಿಚಯ ಮಾಡಿಕೊಟ್ಟರು. ಅವರು ಪ್ರಸಿದ್ಧ ನಾಟಕಕಾರರೆಂದೂ, ಕವಿಗಳೆಂದೂ ಅರಿತಿದ್ದೆ ಆದರೆ ಪ್ರತ್ಯಕ್ಷ ನೋಡಿರಲಿಲ್ಲ. ಅವರು ಈಗ ಸಾಹಿತ್ಯ ಅಕಾಡೆಮಿಯ ತ್ರೆೃಮಾಸಿಕ ಪತ್ರಿಕೆಯ ಸಂಪಾದಕರಾಗಿ ದೆಹಲಿಯಲ್ಲಿದ್ದಾರೆ. ಅಮೇರಿಕೆಯ ಒಂದು ವಿಶ್ವವಿದ್ಯಾಲಯಕ್ಕೆ ಅತಿಥಿ ಭಾಷಣಗಳನ್ನು ನೀಡಲು ಬಂದಿದ್ದರು. ಹರಿಹರೇಶ್ವರರು ನನ್ನ ' ನಾ ಕಂಡ ಬೇಂದ್ರೆ" ಪುಸ್ತಕ ಒದಿದ್ದರು. 'ಜೀವಿ" ಯವರು ಬೇಂದ್ರೆ ಗೋಕಾಕರ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು " ಎಂದು ಹೇಳತೊಡಗಿದರು. ನಾನೆಂದೆ, '' ಅದೆಲ್ಲ ದೊಡ್ಡ ಮಾತು. ನಾನು ಈ ಮಹಾನುಭಾವರನ್ನು ಹತ್ತಿರದಿಂದ ಬಲ್ಲ ಒಬ್ಬ ವಿದ್ಯಾರ್ಥಿ, ಶಿಷ್ಯ ಎನ್ನಬಹುದು"" ನಾನು ಶಿವಪ್ರಕಾಶರ ಜೊತೆ ಕುಳಿತೆ. ಅವರಿಗೂ ಬೇಂದ್ರೆಯವರು ನೆಚ್ಚಿನ ಕವಿಯಾಗಿದ್ದರು. ಬೇಂದ್ರೆಯವರ ಬಗ್ಗೆ ಕೆಲವು ಉಪಕತೆಗಳನ್ನು ಹೇಳಲು ಶುರು ಮಾಡಿದರು. ಅದರಲ್ಲಿ ಒಂದು ಹೀಗಿತ್ತು : ಸುಮತೀಂದ್ರ ನಾಡಿಗರು ಬೇಂದ್ರೆಯವರ ಮೇಲೆ ಥೀಸಿಸ್ ಬರೆಯುವಾಗ ಬೇಂದ್ರೆಯವರ ಮಗ ಡಾ. ವಾಮನ ಬೇಂದ್ರೆಯವರಿಗೆ ಹೇಳಿದರಂತೆ, '' ನನ್ನ ಕನಸಿನಲ್ಲಿ ಬೇಂದ್ರೆ ಬಂದು ಹೇಳಿದರು, ನಿನಗೆ ಬೇಕಾದ ಎಲ್ಲ ಪುಸ್ತಕಗಳನ್ನು ನನ್ನ ಲೈಬ್ರರಿಯಿಂದ ಪಡೆದುಕೊ" ಎಂದು. ಆದ್ದರಿಂದ ನೀವು ನನಗೆ ಬೇಕಾದ ಎಲ್ಲ ಪುಸ್ತಕ- ಸಾಮಗ್ರಿ ಕೊಡಬೇಕು ""- ಎಂದರು. ಆಗ ವಾಮನ ಅವರು ಉತ್ತರಿಸಿದರಂತೆ, '' ನನ್ನ ಕನಸಿನಲ್ಲಿ ಕೂಡ ನನ್ನ ತಂದೆ ಬಂದಿದ್ದರು, ಆದರೆ ಅವರು ಹಾಗೇನೂ ಹೇಳಲಿಲ್ಲವಲ್ಲ, ಅವರು ಹೇಳಲಿ ಆಮೇಲೆ ಕೊಡುವೆ""-ಈ ಕತೆ ಸರಿಯೋ, ಯಾರದೋ ಕಟ್ಟುಕತೆಯೋ ಗೊತ್ತಿಲ್ಲ. ಆದರೆ ಕತೆ ರೋಚಕವಾಗಿತ್ತು. (ಹರಿಹರೇಶ್ವರನ ಟಿಪ್ಪಣಿ : ಡಾ. ಸುಮತೀಂದ್ರ ನಾಡಿಗರ ಮಹಾ ಪ್ರಬಂಧದ ಪುಸ್ತಕ ರೂಪ ' ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು" (1998) ಗ್ರಂಥದಲ್ಲಿ ಪುಟ, 3ರಲ್ಲಿ ಡಾ. ನಾಡಿಗರ ಮಾತು ಹೀಗಿದೆ :
'' ಒಂದು ದಿನ, ನಾನು ಹೋಟೆಲ್ ಧಾರವಾಡದ ಕೋಣೆಯಲ್ಲಿದ್ದಾಗ, ಸ್ವತಃ ಬೇಂದ್ರೆಯವರೇ, '' ನೀ ಯಾಕ ಕಾಳಜಿ ಮಾಡ್ತಿ. ನಿಂಗೇನು ಬೇಕೋ ನಾನು ಕೊಡ್ತೀನಿ"" - ಎಂದು ಹೇಳಿದ ಹಾಗಾಗಿ, ಅದನ್ನೂ ವಾಮನ ಬೇಂದ್ರೆಯವರಿಗೆ ಹೇಳಿ ನೋಡಿದೆ. '' ಬೇಂದ್ರೆಯವರಿಗೇ ಪ್ರಾರ್ಥನೆ ಮಾಡಿ, ಅವರೇ ಕೊಡ್ತಾರೆ""- ಎಂದು ವಾಮನ ಬೇಂದ್ರೆ ಹೇಳಿದರು !"") ಅನೇಕ ವಿಷಯ ಮಾತನಾಡುತ್ತಾ ಕುಳಿತೆವು.
ನಾನೂ ಅನೇಕ ಕತೆ ಉಪಕತೆ ಹೇಳಿದೆ. ನನಗೆ ಶಿವಪ್ರಕಾಶರ ತಂದೆ ಕೀರ್ತನಕೇಸರಿ ಪಂಡಿತ ಬಿ.ಶಿವಮೂರ್ತಿಶಾಸ್ತ್ರಿಗಳ ಪರಿಚಯವಿತ್ತು. ನಾನು ಬಳ್ಳಾರಿ ಸಾಹಿತ್ಯ ಸಮ್ಮೇಲನದಲ್ಲಿ ಓದಿದ ಕವಿತೆ ('ನೀರು") ಅವರು ಮೆಚ್ಚಿದ್ದರು, ತಮ್ಮ 'ಶರಣ ಸಾಹಿತ್ಯ" ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆಗ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಶಿವಪ್ರಕಾಶರಿಗೆ ಯೋಗ, ರೇಕಿ, ವಿಪಶ್ಯನಾ, ಧ್ಯಾನ, ನಿಸರ್ಗಚಿಕಿತ್ಸೆ ಮುಂತಾದ ವಿಷಯಗಳಲ್ಲಿ ನನ್ನಂತೆ ಆಸಕ್ತಿಯಿತ್ತು. ಕೋಡಿಮಠದಶ್ರೀಗಳು ನನಗೆ ಸನ್ಮಾನ ಮಾಡಿದ ವಿಷಯವನ್ನು ಹೇಳಿದೆ, ಶಿವಪ್ರಕಾಶರು ಸ್ವಾಮಿಗಳ ಪ್ರೀತಿಪಾತ್ರರಾಗಿದ್ದರೆಂಬ ವಿಷಯ ನನಗೆ ತಿಳಿದಿತ್ತು.
ಸಭೆ ನಾಲ್ಕೂವರೆಗೆ ಪ್ರಾರಂಭವಾಯಿತು. ನನ್ನ ಪರಿಚಯ ಮಾಡಿಕೊಟ್ಟರು. ಬೇಂದ್ರೆ-ಗೋಕಾಕರ ಬಗ್ಗೆ ಮಾತಾಡಲು ಹೇಳಿದರು. 20 ನಿಮಿಷ ಕೊಟ್ಟರು. ಸಭೆಯಲ್ಲಿ ಮಕ್ಕಳು, ಸ್ತ್ರೀಯರು, ಕನ್ನಡ ಸಾಹಿತ್ಯದ ಹಿನ್ನೆಲೆಯಿಲ್ಲದ ಯುವಪೀಳಿಗೆಯವರು ಇದ್ದರು. ಎಲ್ಲರೂ 'ಫೆಸ್ಟಿವಲ್ ಮೂಡ್"ನಲ್ಲಿದ್ದರು. ನಾನು ಹೆಚ್ಚಾಗಿ ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಿದೆ. ಐದು ನಿಮಿಷ ಗೋಕಾಕರ ಕೊಡುಗೆಯ ಬಗ್ಗೆ ಹೇಳಿದೆ.
ಆಭಾರ ಮನ್ನಣೆಗೆ ಮೊದಲು ಐದು ನಿಮಿಷ ನನಗೆ ಯೋಗದ ಬಗ್ಗೆ ಮಾತಾಡಲು ಅವಕಾಶ ಕೊಟ್ಟರು. ನಾನು ನಡೆಸಲಿರುವ 'ಯೋಗಶಿಬಿರ"ದ ಬಗ್ಗೆ ಹೇಳಿದೆ. ಅನೇಕರು ನನ್ನನ್ನು ಕಂಡು ಯೋಗ ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು. ಬೇಂದ್ರೆ ಹಾಗೂ ಗೋಕಾಕರ ಬಗ್ಗೆ ನಾನು ಬರೆದ ಪುಸ್ತಕಗಳನ್ನು ಕೆಲವರು ಕೊಂಡರು. ನರೇಂದ್ರ ಕುನ್ಹೋಡಿ ಎಂಬ ಸಾಫ್ಟ್ವೇರ್ ಎಂಜಿನಿಯರ್, ಮೋಹನ್ ಶರ್ಮಾ (ಒಂದು ಸಾಫ್ಟ್ವೇರ್ ಕಂಪನಿಯ ಉಪಾಧ್ಯಕ್ಷ) ಮೊದಲು ನನ್ನನ್ನು ಕಂಡು ಪುಸ್ತಕ ಪಡೆದರು. ಕೆಲವರ ವಿಳಾಸ ಪಡೆದು ನಂತರ ಕಳಿಸುವುದಾಗಿ ಹೇಳಿದೆ.
ಜಗದೀಶ ಮಯ್ಯ ಎಂಬ ಸಿಸ್ಕೊದಲ್ಲಿ ಕೆಲಸಮಾಡುವ ಎಂಜಿನಿಯರ್ ನನ್ನ ಭಾಷಣವನ್ನು ಬಹಳೇ ಮೆಚ್ಚಿದ್ದರು. ''ಸರ್, ನೀವು ಬೇಂದ್ರೆಯವರ ಕಾವ್ಯ ಉದ್ಧರಿಸುತ್ತಿರುವಾಗ ನನಗೆ ಮೈಯಲ್ಲಿ ರೋಮಾಂಚನವಾಯಿತು. ಇಪ್ಪತ್ತು ನಿಮಿಷ ಬಹಳ ಕಡಿಮೆ ಸಮಯವಾಯಿತು. ನೀವು ಎರಡು ಗಂಟೆ ಮಾತಾಡಬೇಕು. ಒಂದು ಶುಕ್ರವಾರ ಸಂಜೆ ಕೆಲ ಕಾವ್ಯಾಸಕ್ತ ಮಿತ್ರರನ್ನು ಕೂಡಿಸಿ ವಿಶೇಷ ಸಭೆ ಕರೆಯುತ್ತೇವೆ""- ಎಂದನು. ಯೋಗಶಿಬಿರದ ಬಗ್ಗೆ ಕೂಡ ವಿಶೇಷ ಆಸಕ್ತಿಯನ್ನು ವಹಿಸಿದನು. .. ..""