'ಜೀವಿ' ಕುಲಕರ್ಣಿ ಅವರು ಮಾಡಿಸಿದ ಬೇಂದ್ರೆ ದರ್ಶನ !

' ಜೀವಿ" ಅವರ ' ನಾ ಕಂಡ ಬೇಂದ್ರೆ- ಜೀವನ ಮತ್ತು ಸಾಹಿತ್ಯ" ಒಂದು ಗಮನಾರ್ಹ ಕೃತಿ. ಇದು ಬೇಂದ್ರೆ ಶತಮಾನೋತ್ಸವದ ನಿಮಿತ್ತ ಹೊರಬಂದ ಹೊತ್ತಗೆ. ಇದರಲ್ಲಿ, ಬೇಂದ್ರೆ : ಜೀವನ ದರ್ಶನ, ಬೇಂದ್ರೆ ಕಾವ್ಯ : ಸ್ವಾದ- ಆಸ್ವಾದ, ಬೇಂದ್ರೆ : ಸಂಗ - ಸಾನ್ನಿಧ್ಯ, ಬೇಂದ್ರೆ : ಒಲವು ನಿಲುವು ಮತ್ತು ಬೇಂದ್ರೆ : ಸಿದ್ಧಾಂತ - ಸಂದೇಶ ಎಂಬ ಐದು ಅಧ್ಯಾಯಗಳಲ್ಲಿ ಬೇಂದ್ರೆಯವರ ಬಹುಮುಖ ಪ್ರತಿಭೆಯನ್ನು ಜೀವಿಯವರು ನಮಗೆ ಪರಿಚಯಿಸುತ್ತಾರೆ.
(ಬೇಂದ್ರೆಯವರ ಕಾವ್ಯ ಮೀಮಾಂಸೆಯನ್ನು ಪರಿಚಯ ಮಾಡಿಕೊಳ್ಳಲೂ, ತಿಳಿದು ಸವಿಯಲೂ ಸಹಾಯಕವಾಗುವ ಪ್ರಬಂಧಗಳ ಮತ್ತು ಪುಸ್ತಕಗಳ ಪಟ್ಟಿ ದೊಡ್ಡದಿದೆ. ' ಶ್ರಾವಣ ಪ್ರತಿಭೆ"(ಪ್ರೊ. ಕೀರ್ತಿನಾಥ ಕುರ್ತಕೋಟಿ ಮತ್ತು ಡಾ. ವಾಮನ ಬೇಂದ್ರೆ, ಮನೋಹರ ಗ್ರಂಥ ಮಾಲೆ), ' ದ ರಾ ಬೇಂದ್ರೆ " (ಎನ್ಕೆ ಕುಲಕರ್ಣಿ, ನವಕರ್ನಾಟಕ ಪ್ರಕಾಶನ), ' ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು" (ಡಾ. ಸುಮತೀಂದ್ರ ನಾಡಿಗ, ಕರ್ನಾಟಕ ಬುಕ್ ಏಜೆನ್ಸಿ, ಬೆಂಗಳೂರು)- ಇವು ಪ್ರಾತಿನಿಧಿಕವಾಗಿವೆ ಎನ್ನಬಹುದು.)
ಮಾತುಗಾರನಿಗೆ ಶಿಷ್ಯಕೋಟಿಗೆಲ್ಲಿಯ ಬರ!
ಒಳ್ಳೆಯ ಮಾತುಗಾರರಾದ 'ಜೀವಿ" ಕುಲಕರ್ಣಿಯಂಥ ಪ್ರಾಧ್ಯಾಪಕರಿಗೆ ಅಪಾರ ಅಭಿಮಾನೀ ಶಿಷ್ಯಕೋಟಿ; ಅಮೆರಿಕಾದಲ್ಲೂ ಸಹ. ಹೀಗಾಗಿ ಅಮೆರಿಕಾದಲ್ಲಿ ಹೋದ ವರುಷ, 2000ದಲ್ಲಿ ನಡೆದ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನಕ್ಕೆ ಇವರು ವಿಶೇಷ ಆಹ್ವಾನಿತರಾಗಿದ್ದರು. ಅಲ್ಲಿ ಸೊಗಸಾಗಿ ಜನ ಮನ ರಂಜಿಸಿದರು. ಸಮ್ಮೇಳನದ ನಂತರ, ಅಭಿಮಾನಿಗಳ ಒತ್ತಾಯದ ಕರೆಯ ಮೇರೆಗೆ, ತಮ್ಮ ಸೌಕರ್ಯ ಸೌಲಭ್ಯಗಳನ್ನು ಅನುಸರಿಸಿ, ಅಮೆರಿಕಾದ ಹಲವಾರು ನಗರಗಳಿಗೆ ಭೇಟಿ ಇತ್ತು ಅಲ್ಲಿನ ಕನ್ನಡಿಗರನ್ನು ಉದ್ದೇಶಿಸಿ, ಸಾಹಿತ್ಯ ವಿಚಾರ ಸಂಕಿರಣಗಳನ್ನೂ ಯೋಗಾಭ್ಯಾಸಗಳನ್ನೂ ನಡೆಸಿ ದಿಗ್ವಿಜಯ ಮಾಡಿದರು.
ತಮ್ಮ 'ಅಮೆರಿಕಾ ಪ್ರವಾಸದ ಅನುಭವಗಳ"ನ್ನು ಧಾರಾವಾಹಿಯಾಗಿ " ಕರ್ನಾಟಕ ಮಲ್ಲ " ದಿನಪತ್ರಿಕೆಯ ತಮ್ಮ ಅಂಕಣದಲ್ಲಿ 'ಜೀವಿ" ಅವರು ಬರೆಯುತ್ತಿದ್ದಾರೆ; ಆ ಅಂಕಣದ 39 ಮತ್ತು 44ನೆಯ ಲೇಖನಗಳು ಅವರು ಇಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ನಮ್ಮೊಂದಿಗೆ ಕಳೆದ ರಸನಿಮಿಷಗಳ, ಮತ್ತು ಅವರು ನಮಗೆ ಕಾಣಿಸಿದ ಬೇಂದ್ರೆ ಅವರ ದರ್ಶನದ ನೆನಪನ್ನು ಉಕ್ಕಿಸಿ, ಮೆಲುಕಾಡುವಂತೆ ಮಾಡುತ್ತಿದೆ. ಯಥಾವತ್ತಾಗಿ ಆ ಲೇಖನದ ಭಾಗಗಳನ್ನು ಮುಂದೆ ಉದ್ಧರಿಸುತ್ತಿದ್ದೇನೆ. ಸಂಘಟಕರನ್ನು ನೆನೆವಾಗ, ಸೌಜನ್ಯ ತುಂಬಿದಂಥ ಅವರ ಪ್ರಶಂಸೆಯ ಮಾತುಗಳು ಅಲ್ಲಲ್ಲಿ ಸ್ವಲ್ಪ ಹೆಚ್ಚಾಯಿತೆಂದು ಭಾಸವಾಗಬಹುದೇನೋ; ಆದರೆ, ಹೆಚ್ಚಾದರೂ ಪರವಾಗಿಲ್ಲ, ಕೆಲವರು ಸಾರ್ವಜನಿಕವಾಗಿ ' ಜಾಲಾ"ಡುವ ಹೀಯಾಳಿಕೆಗಿಂತ ಹೊಗಳಿಕೆಯೇ ಹೆಚ್ಚು ಸಹನೀಯವೇನೋ ! ಈಗ 'ಜೀವಿ" ಅವರ ಮಾತುಗಳಲ್ಲೇ ಅವರ ಅನುಭವಗಳನ್ನು ಕೇಳೋಣ.












Click it and Unblock the Notifications