ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಾಗ್ಯದಲ್ಲಿ ಮೂರು ಬಗೆ, ಯಾವುದು ಹಿತ ಎನ್ನುತ್ತೀರಾ?

By Staff
|
Google Oneindia Kannada News

ಪ್ರಸವ ವೈರಾಗ್ಯ, ಸ್ಮಶಾನ ವೈರಾಗ್ಯ ಮತ್ತು ಅಭಾವ ವೈರಾಗ್ಯ. ಹೆರಿಗೆಯ ನೋವನ್ನು ಕಂಡು ಅಥವಾ ಅನುಭವಿಸಿ, ತನಗದು (ಇನ್ನು) ಬೇಡ ಎನ್ನುವ ಆತಂಕ-ಜನಿತ ಮನಸ್ಸಿನ ಬಿಮ್ಮು ; ‘ಏನಾದರೂ ಗಳಿಸಬೇಕಾದರೆ ಇಷ್ಟೆಲ್ಲಾ ಎಷ್ಟೊಂದು ಕಷ್ಟ ಪಡಬೇಕೆ’, ಎಂಬ ಶಂಕೆಯೇ- ಪ್ರಸವ ವೈರಾಗ್ಯ.

ಆಪ್ತರಾಗಿದ್ದ ಸತ್ತವರನ್ನು ಹೂಳಿ, ಸುಟ್ಟವರ ಕಂಡು, ‘ಎಲ್ಲಾ ಇಷ್ಟಕ್ಕೇನೆ ಮುಗಿಯುವುದಾದರೆ, ಜೀವನದಲ್ಲಿ ಏಕಷ್ಟು ಒದ್ದಾಡಿ ಗುದ್ದಾಡಿ ನಾನು ಕೂಗಾಡಿದ್ದು ? ಕೊಟ್ಟ ಕೊನೆಗೆ, ತುಟ್ಟ ತುದಿಗೆ ಉಳಿದಿದ್ದೇನು?’, ಎಂಬ ಚಿಂತನ, ಹಣ ಹೂಡಿ ಕೈಸುಟ್ಟುಕೊಂಡವರ, ಸೋತ ಅನಾಥರ ಕತೆಗಳನ್ನೇ ಕಿವಿತುಂಬ ಕೇಳಿ, ‘ಇದೆಲ್ಲ ಬೇಕಿತ್ತೇ’- ಎಂಬ ಕರಿ ನೆರಳು ಕಾಡುವ ಅನುಮಾನವೇ ಸ್ಮಶಾನ ವೈರಾಗ್ಯ.

ಮೂರನೆಯದು, ‘ತನ್ನ ಕೈ ಮೀರಿದ್ದು, ತನಗದು ಸಿಗಲು ಸಾಧ್ಯವೇ ಇಲ್ಲ ; ಏಕೆ ಬೇಕು ಈ ವ್ಯರ್ಥ ಪ್ರಯತ್ನ’- ಎಂಬೆಲ್ಲ ಹುಸಿವಾದದಿಂದ, ಆತ್ಮ ವಿಶ್ವಾಸವನ್ನು ಕುಡಿಯಲ್ಲೇ ಚುಗುಟಿಹಾಹುವ ಪ್ರವೃತ್ತಿಯೇ- ಅಭಾವ ವೈರಾಗ್ಯ! ‘ಯತ್ನೇ ಕೃತೇ ಯದಿ ನ ಸಿಧ್ಯತಿ, ಕೋ ಅತ್ರ ದೋಷ:?’ ಎಂಬ ಸುಭಾಷಿತ ತನಗಲ್ಲ, ಆದ್ದರಿಂದ ಎತ್ತರದ ಮರ ಹತ್ತಲು ನನ್ನ ಕೈಲಾಗದು; ಹತ್ತಿದರೂ, ಕಿತ್ತು , ಸಿಪ್ಪೆ ಸುಲಿದು, ಚಿಪ್ಪು ಒಡೆದು, ಕುಡಿದರೂ ಎಳನೀರು ಸಿಹಿಯಾಗಿರುವ ಭರವಸೆ ಎಲ್ಲಿದೆ? ತಾನಾಗಿಯೇ ನನಗದು ಸಿಕ್ಕಿಲ್ಲ ; ಆದ್ದರಿಂದ ತನಗೆ ಅದು ಬೇಡ- ಎಂಬ ಪೊಳ್ಳು ಕಾರಣದ ವಿತಂಡವಾದದಿಂದ, ಇಲ್ಲದ್ದನ್ನು ಗಳಿಸಿಕೊಳ್ಳುವ ಮುನ್ನುಗ್ಗುತನಕ್ಕೆ ತಿಲಾಂಜಲಿ ಬಿಡುವ ಮನೋಭಾವ- ಅಭಾವ ವೈರಾಗ್ಯ.

ತೊಡರುಗಳ ಗೆದ್ದು ಓಡಿದವರಿಗೆ ಬೆಳ್ಳಿಯ ಢಾಲು

ಮೂರೂ ಬಗೆಯ ವೈರಾಗ್ಯಗಳು ಪ್ರಗತಿಯ ನಡೆಯಲ್ಲಿ ಅಡೆ ತಡೆಗಳು ; ಕಾಲ್ತೊಡರುಗಳು. ಇವನ್ನು ಅತಿಕ್ರಮಿಸಿ, ಓಡಿ ಗೆದ್ದವರಿಗೇ ಬೆಳ್ಳಿಯ ಢಾಲು! ಕ್ರಿಯಾಸಿದ್ಧಿ ನಾಣ್ಯಕ್ಕೆ ಆತ್ಮವಿಶ್ವಾಸಪೂರಿತ ಯೋಜನೆ ಮತ್ತು ಸಾಹಸ ಪ್ರವೃತ್ತಿಗಳು ಎರಡು ಮುಖಗಳು! ಈಗ ಕವನಕ್ಕೆ ಹಿಂತಿರುಗೋಣ :

‘ನಾನು ಮಾತ್ರ ಆಗ ಹೇಗೋ
ಹಾಗೆಯೇ ಈಗಲೂ
ಆರೆಂದರೆ ಹಿಗ್ಗಲಿಲ್ಲ , ಮೂರೆಂದರೆ ಕುಗ್ಗಲಿಲ್ಲ ;
ನಾನು ಅಚ್ಯುತ, ನಾ ನಿರ್ಜರ, ನಾನೆ ಅದ್ವಿತೀಯ;
ಒಂದೇ ರೀತಿ, ಒಂದೇ ನೀತಿ,
ಒಂದೇ ಸಮ, ನೆಲಮಟ್ಟ-
ಅರಿತಿರೇನು ನೀವು ನನ್ನ ಹೆಬ್ಬಾಳಿನ ಗುಟ್ಟ?’

- ಎಂದು ಕೊನೆಗೊಳ್ಳುವ ಈ ಕವನ, ಕಣ್ಣಿದ್ದೂ ಕುರುಡನಾದ ಕಿವಿಯಿದ್ದೂ ಕಿವುಡನಾದ, ಬಾಯಿದ್ದೂ ಮೂಕನಾದ, ಕಾಲಿದ್ದೂ ಹೆಳವನಾದ, ಜೀವ ಇದ್ದೂ ಸತ್ತವನ ಕೆಣಕಿ, ಚುಚ್ಚಿ ಹಂಗಿಸಿ ಹೀಯಾಳಿಸುತ್ತದೆ ; ಮುಸುಕಿನಲ್ಲೆ ಗುದ್ದುತ್ತದೆ ; ಕಣ್ಣು ತೆರೆದು ನಡೆಯುವವರಿಗೆ ಬಾಳದಾರಿಯ ಕೈ ಮರವೂ ಆಗುತ್ತದೆ.

** ** ** ‘ರಾಮನ ಬಳಿ ಇದ್ದೆ ನಾನು’ ಅವನ ಜೊತೆಯೇ ನಾನೂ ಬೆಳೆದೆ, ದೈಹಿಕವಾಗಿ. ಅವನು ಪುರುಷೋತ್ತಮನಾದ, ಹೆಜ್ಜೆ ಹೆಜ್ಜೆಗೂ ಗೆಲ್ಲುತ್ತಲೇ ಹೋದ. ನಾನು? ಉಳಿದೆ. ‘ಎಲ್ಲರೂ ಹತ್ತುತ್ತಾರೆ ಎಂದಲ್ಲ , ಎಲ್ಲರೂ ಹತ್ತಬೇಕೆಂದು’ ಸಾರಿ ಕೂಗುತ್ತದೆ ಬೆಟ್ಟ ! ದೂರ ದೂರದಿಂದ ಬಂದು ಈ ಬೆಟ್ಟ ಹತ್ತಿದವರುಂಟು. ನನ್ನ ಪಾಲಿಗೆ, ಅದು ‘ಅತಿ ಪರಿಚಯಾತ್‌ ಅವಜ್ಞಾ’ ಆಯಿತು. ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬೀಳುವುದರೊಳಗಾಗಿ ತಪ್ಪಿತೆಂದು ಪರಿತಪಿಸದೆ, ತಂದೆಯ ಮಾತನ್ನು ಉಳಿಸುವುದೊಂದೇ ಮಗನ ಕರ್ತವ್ಯವೆಂದು, ನಾನು ನೋಡುತ್ತಲೇ ಇದ್ದೆ, ರಾಮ ಕಾಡಿಗೆ ಹೊರಟೇ ಬಿಟ್ಟ . ಜನ ಹೇಳಿದ್ದನ್ನು ಕೇಳಿದ್ದೀರೇನು? ‘ರಾಮನಂಥವರು ಹುಟ್ಟಿದಾಗಲೆಲ್ಲ ವನವಾಸ ತಪ್ಪದಂತೆ’ (‘ಜಬ್‌ ಜಬ್‌ ರಾಮ್‌ ನೇ ಜನ್ಮ್‌ ಲಿಯಾ ಥಾ, ತಬ್‌ ತಬ್‌ ಪಾಯಾ ಬನವಾಸ್‌!’) ಅಲ್ಲಿ ಘೋರಾರಣ್ಯದಲ್ಲಿ ರಾಕ್ಷಸರನ್ನು ಸದೆಬಡಿದು, ತನ್ನ ಹೆಂಡತಿಯನ್ನು ಅಪಹರಿಸಿದವನನ್ನೂ ಅವರ ಕಡೆಯವರನ್ನೂ ಕೊಂದು, ಹದಿನಾಲ್ಕು ವರ್ಷಗಳ ಬಳಿಕ ಅಯೋಧ್ಯೆಗೆ ಮರಳಿದಾಗ ಇಲ್ಲಿ ನಾನಿದ್ದೆ . ವಿಜಯಯಾತ್ರೆಯ ಮೆರವಣಿಗೆ ನಮ್ಮ ರಸ್ತೆಗೆ ಬಂದಾಗ, ಇಕ್ಕೆಲಗಳಲ್ಲಿ ನಿಂತು ಜೈಕಾರ ಹಾಕಿದ ಜನಸ್ತೋಮದಲ್ಲಿ ನಾನೂ ಇದ್ದೆ, ಗೊತ್ತಾ? ಏನು ಮಾಡಲಿ. ಅರ್ಹತೆ ಇದ್ದಕಡೆ, ನಾಲ್ಕು ಒಳ್ಳೆಯ ಮಾತನಾಡಲು ನನ್ನ ನಾಲಗೆ ಆಡದಲ್ಲ! ; ‘ಉಳಿದೆ, ಆಗಲೂ ಈಗ ಇಲ್ಲಿ ಕೊಳೆವೊಲು’. ಕೊಳೆ, ಕಳೆಯದ ಕೊಳೆಯ ಮಳೆಬಿದ್ದು ಹರಿದ ಹೊಳೆ ನಾನಾಗಿ ಉಳಿದೆ!


ನನ್ನ ಅವತಾರ

ವಾರ್ತಾ ಸಂಚಯ
ಅಡಿಗರ ಸಂಕ್ರಾಂತಿ ಸೂರ್ಯ
ಅಡಿಗರ ಕವನಗಳು ನವ್ಯವೋ? ನವೋದಯವೋ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X