Get Updates
Get notified of breaking news, exclusive insights, and must-see stories!

ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು!

Manmohan Singh, Prime Minister of India
ವಿಷಯದಲ್ಲಿ ಮಾತ್ರ ಡಾ. ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಅಂತ ಅನಿಸಿದ್ದು ನಿಜ. ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಸತತವಾಗಿ ಡಾ. ಮನಮೋಹನ್ ಸಿಂಗ್ ಈ ದೇಶ ಕಂಡ ದುರ್ಬಲ ಪ್ರಧಾನಿ' ಎಂದು ಜರೆಯುತ್ತಿದ್ದಾಗ, ಮೇಲ್ನೋಟಕ್ಕೆ ಇದು ರಾಜಕೀಯ ಹೇಳಿಕೆಯಿದ್ದಿರಬಹುದು ಎಂದು ಅನೇಕರಿಗೆ ಅನಿಸಿರಲಿಕ್ಕೆ ಸಾಕು. ಡಾ. ಸಿಂಗ್ ದುರ್ಬಲ ಪ್ರಧಾನಿ ಹೇಗೆ ಮತ್ತು ಏಕೆ ಎಂಬ ಬಗ್ಗೆ ಆಡ್ವಾಣಿಯವರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ನಿಜವಿರಬಹುದು, ಕೆಲವು ರಾಜಕೀಯ ಪ್ರೇರಿತವಾಗಿರುವುದರಿಂದ ಉತ್ಪ್ರೇಕ್ಷಿತವೂ ಆಗಿರ ಬಹುದು. ಇನ್ನು ಕೆಲವು ಅವರ ಮೂಗಿನ ನೇರಕ್ಕೂ ಇರಬಹುದು. ಕಾಂಗ್ರೆಸ್ಸಿನ ಪ್ರತಿ ನಡೆಯಲ್ಲೂ ದೋಷ ಹುಡುಕುವ ಬಿಜೆಪಿ ನಾಯಕರ ನಿಂದನೆಯ ಹೊಸ ವರಸೆ ಇರಬಹುದು. ಆದರೆ ಒಂದು ವಿಷಯದಲ್ಲಿ ಮಾತ್ರ ಡಾ. ಸಿಂಗ್ ದುರ್ಬಲ ಪ್ರಧಾನಿ ಅಲ್ಲ' ಅಂತ ಹೇಳಿದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ.

ಯಾವಾಗ ತಾವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ರಾಜ್ಯಸಭೆ ಸದಸ್ಯನಾಗಿಯೇ ಪ್ರಧಾನಿಯಾಗುತ್ತೇನೆ ಎಂದು ಪುನರುಚ್ಚರಿಸಿದರೋ, ಆ ಕ್ಷಣದಲ್ಲಿ ಡಾ. ಸಿಂಗ್ ದುರ್ಬಲ ವ್ಯಕ್ತಿ' ಎಂದು ಅನಿಸಿದ್ದು ಮಾತ್ರ ಸುಳ್ಳಲ್ಲ. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಕರೆಸಿಕೊಳ್ಳುವ ಭಾರತದ ಪ್ರಧಾನಮಂತ್ರಿ ಜನರಿಂದ ನೇರವಾಗಿ ಚುನಾಯಿತರಾಗದೇ, ಹಿಂಬಾಗಿಲಿನಿಂದ ಸಂಸತ್ತನ್ನು ಪ್ರವೇಶಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇಲ್ಲಿ ಒಂದು ಸೂಕ್ಷ್ಮ ಸಂಗತಿಯಿದೆ. ಸಂವಿಧಾನದಲ್ಲಿ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿಲ್ಲದವರು ಅಥವಾ ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಲು ಅವಕಾಶವಿದೆ. ರಾಜ್ಯಸಭೆಯ ಸದಸ್ಯರಾಗುವುದರ ಮೂಲಕ ಪ್ರಧಾನಿಯಾದವರಲ್ಲಿ ಡಾ. ಮನಮೋಹನ್ ಸಿಂಗ್ ಅವರೇ ಮೊದಲಿಗರೇನೂ ಅಲ್ಲ. ಇಲ್ಲಿ technicalityಗಿಂತ morality ಪ್ರಶ್ನೆ ಪ್ರಮುಖವಾಗುತ್ತದೆ. ಪ್ರಧಾನಿಯಂಥ ಉನ್ನತ ಹುದ್ದೆಗೇರುವವರು ಜನರಿಂದಲೇ ಆಯ್ಕೆಯಾಗಬೇಕು. ಹಾಗಾದರೆ ಅವರು ಲೋಕಸಭೆ ಸದಸ್ಯರಾಗಬೇಕು. ಯಾಕೆಂದರೆ ಪ್ರಧಾನಿಯಾದವರು ಲೋಕಸಭೆಗೆ ಉತ್ತರದಾಯಿಯಾಗಿರುತ್ತಾರೆ.

ನೈತಿಕವಾಗಿ, ಲೋಕಸಭೆ ಸದಸ್ಯನೇ ಪ್ರಧಾನಿಯಾಗಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಲೋಕಸಭೆಗೆ ಆಯ್ಕೆಯಾದವರು ನೇರವಾಗಿ ಜನರಿಂದಲೇ ಆಯ್ಕೆಯಾಗಿರುತ್ತಾರೆ. ಅವರಿಗೆ ಬಹುಶ್ರುತರ ಕಷ್ಟ-ಸುಖ, ನೋವು-ನಲಿವು ಗೊತ್ತಿರುತ್ತದೆ. ನಾಯಕನಾದವನು ಜನರಿಂದಲೇ ಆಯ್ಕೆಯಾಗಬೇಕು, ಜನರ ಮಧ್ಯದಿಂದಲೇ ಮೂಡಿಬರಬೇಕೆಂಬ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಇದು ಕಳಶವಿಟ್ಟಂತೆ. ಈ ಪೈಕಿ ಬಹುಮತ ಪಡೆದ ಪಕ್ಷದ ಲೋಕಸಭೆ ಸದಸ್ಯರ ನಾಯಕ ಪ್ರಧಾನಿಯಾಗುವುದು ಜನತಂತ್ರದ ಉನ್ನತ ಹಾಗೂ ಉಜ್ವಲ ಸಂಪ್ರದಾಯ.

ಸಂವಿಧಾನ ರಚಿಸುವಾಗಲೂ ಈ ಪ್ರಶ್ನೆ ಗಹನವಾಗಿ ಕಾಡಿತ್ತು. ಪ್ರಧಾನಿಯಾಗುವವರು ಲೋಕಸಭೆ ಅಥವಾ ರಾಜ್ಯಸಭೆ ಸದಸ್ಯರಾಗಿರಬೇಕೋ? ಕೇವಲ ಲೋಕಸಭೆಯ ಸದಸ್ಯರಾಗಿರಬೇಕೋ? ಉಭಯ ಸದನಗಳ ಸದಸ್ಯರಾಗಿಲ್ಲ ದವರೂ ಪ್ರಧಾನಿಯಾಗಬಹುದಾ? ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿ' ಸದಸ್ಯರಾದ ಕೆ.ಟಿ. ಶಹಾ ಅವರಂತೂ ಲೋಕಸಭೆಯ ಸದಸ್ಯರು ಮಾತ್ರ ಪ್ರಧಾನಿಯಾಗಬೇಕು ಎಂಬ ಅಂಶಕ್ಕೆ ಕಟ್ಟುಬಿದ್ದಿದ್ದರು. ಅಷ್ಟೇ ಅಲ್ಲ, ಅದನ್ನು ಸಂವಿಧಾನದಲ್ಲಿ ಲಿಖಿತವಾಗಿ ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಈ ವಿಷಯದಲ್ಲಿ ಎದುರಾಗಬಹುದಾದ practical ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಗೆ ಡಾ. ಅಂಬೇಡ್ಕರ್ ಅವರ ವಾದಕ್ಕೆ ಎಲ್ಲರೂ ತಲೆಯಾಡಿಸಿದರು. ಆ ಪ್ರಕಾರ ಲೋಕಸಭೆ, ರಾಜ್ಯಸಭೆಯ ಸದಸ್ಯರಲ್ಲದ ಹೊರಗಿನವರೂ ಪ್ರಧಾನಿಯಾಗಬಹುದು ಹಾಗೂ ಆರು ತಿಂಗಳೊಳಗೆ ಒಂದಿಲ್ಲೊಂದು ಸದನದ ಸದಸ್ಯರಾಗಬೇಕು ಎಂದು ಸಂವಿಧಾನದಲ್ಲಿ ಅಳವಡಿಸಲಾಯಿತು.

ಮೊದಲ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಹೇಳಿದ ಮಾತನ್ನು ಗಮನಿಸಬೇಕು- ವಿಶಾಲ ಅರ್ಥದಲ್ಲಿ ನಮ್ಮ ಸಂವಿಧಾನ ನಿರ್ಮಾತೃರು ಲೋಕಸಭೆ, ರಾಜ್ಯಸಭೆ ಸದಸ್ಯರಲ್ಲದವರೂ ಸಹ ಪ್ರಧಾನಿಯಾಗಬಹುದು ಎಂಬ ನಿಯಮ ರೂಪಿಸಿದ್ದರೂ, ಪ್ರಧಾನಿಯಾಗುವವರು ಜನರಿಂದಲೇ ನೇರವಾಗಿ ಆಯ್ಕೆಯಾಗಬೇಕು. ಅಂದರೆ ಲೋಕಸಭೆ ಸದಸ್ಯರಾಗಿರಬೇಕು. ಆಗಲೇ ಜನತಂತ್ರದ ಆಶಯದಂತೆ ಪ್ರಧಾನಿ ಆಯ್ಕೆ ನೈತಿಕವಾಗಿ ಸಮರ್ಥನೀಯ ಎಂದೆನಿಸಿಕೊಳ್ಳುತ್ತದೆ."

ಆರಂಭದಲ್ಲಿ ಈ ಪ್ರಜಾಸತ್ತಾತ್ಮಕ ಸನ್ನಡತೆ ನೈತಿಕಪ್ರಜ್ಞೆಯ ತಳಹದಿಯಲ್ಲಿಯೇ ಆಚರಣೆಗೆ ಬಂದಿತು. ಜವಾಹರಲಾಲ್ ನೆಹರು ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಲೋಕಸಭೆಯಲ್ಲಿ ಬಹುಮತ ಹೊಂದಿದ ಪಕ್ಷದ ನಾಯಕರಾಗಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದರು. ಮೊದಲಬಾರಿಗೆ ಅಡ್ಡದಾರಿ ಹಿಡಿದವರು ಇಂದಿರಾಗಾಂಧಿ, 1965ರಲ್ಲಿ ಶಾಸ್ತ್ರಿಯವರು ಹಠಾತ್ ನಿಧನರಾದಾಗ, ಇಂದಿರಾ ಮುಂದಿನ ಪ್ರಧಾನಿಯಾದರು. ಆಗ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕಾದ ಅಗತ್ಯವಿರಲಿಲ್ಲ. ಯಾಕೆಂದರೆ ಅವರ ರಾಜ್ಯಸಭೆ ಸದಸ್ಯತ್ವ ಅವಧಿ ಕೊನೆಗೊಂಡಿರಲಿಲ್ಲ. ಆದರೆ ಇಂದಿರಾಗಾಂಧಿಯವರನ್ನು ಇಲ್ಲಿ ಕಾಡಿದ್ದು ನೈತಿಕತೆ ಪ್ರಶ್ನೆ. ಹೀಗಾಗಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಪುನಃ ಪ್ರಧಾನಿಯಾದರು. ಅನಂತರವೂ ಅವರು ಲೋಕಸಭೆಗೆ ಸೆಣಸಿಯೇ (1972 ಹಾಗೂ 1980) ಪ್ರಧಾನಿಯಾದದ್ದು.

ತರುವಾಯ ಪ್ರಧಾನಿಯಾದ ಮೊರಾರ್ಜಿ ದೇಸಾಯಿ (1977), ಚರಣ್ ಸಿಂಗ್ (1979), ರಾಜೀವ್ ಗಾಂ (1984), ವಿ.ಪಿ. ಸಿಂಗ್ (1989), ಚಂದ್ರಶೇಖರ್ (1990) ನರಸಿಂಹರಾವ್ (1991) ಹಾಗೂ ಅಟಲ್ ಬಿಹಾರಿ ವಾಜಪೇಯಿ (1996) ಲೋಕಸಭೆ ಮೂಲಕವೇ ಪ್ರಧಾನಿ ಕಾರ್ಯಾಲಯಕ್ಕೆ ಪ್ರವೇಶ ಪಡೆದರು. ನರಸಿಂಹರಾವ್ ಪ್ರಧಾನಿಯಾದಾಗ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರಲಿಲ್ಲ. ಹಾಗೆಯೇ ನಮ್ಮ ಎಚ್.ಡಿ. ದೇವೇಗೌಡರು ಕೂಡ. ಆದರೆ ನರಸಿಂಹರಾಯರು ಆರು ತಿಂಗಳೊಳಗೆ ಆಂಧ್ರದ ನಂದ್ಯಾಲ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ದಾಖಲೆ ಮತಗಳ ಅಂತರದಿಂದ ಗೆದ್ದರು. ಅದೇ ನಮ್ಮ ಗೌಡರು ಉಸಾಬರಿ ಯಾಕೆಂದು ಹಿಂಬಾಗಿಲ ಮೂಲಕ ಪ್ರಧಾನಿಯಾದರು.

ಗೌಡರ ಬಳಿಕ ಪ್ರಧಾನಿಯಾದ (1997ರಲ್ಲಿ) ಐ.ಕೆ. ಗುಜ್ರಾಲ್, ಆ ಉನ್ನತ ಹುದ್ದೆ ಸ್ವೀಕರಿಸುವಾಗ ರಾಜ್ಯಸಭೆ ಸದಸ್ಯರಾಗಿದ್ದರು. ಹೀಗಾಗಿ ಅವರು ಲೋಕಸಭೆ ಸದಸ್ಯರಾಗುವ ಗೋಜಿಗೆ ಹೋಗಲಿಲ್ಲ. 2004ರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗುವ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ಹೀಗಾಗಿ ಲೋಕಸಭೆಗೆ ಸೆಣಸಲಿಲ್ಲ. ಅನಂತರವೂ ಅವರು ಮುಗುಮ್ಮಾಗಿ ಉಳಿದುಬಿಟ್ಟರು. ರಾಜ್ಯಸಭೆ ಸದಸ್ಯತ್ವ ಅವ ಮುಗಿದಾಗಲೂ ಅವರು ಸದಸ್ಯತ್ವ ನವೀಕರಿಸಿಕೊಂಡರೇ ಹೊರತು ಲೋಕಸಭೆಗೆ ಸೆಣಸುವ ಗೋಜಿಗೆ ಹೋಗಲಿಲ್ಲ. ನರಸಿಂಹರಾಯರ ಸಂಪುಟದಲ್ಲಿ ಅವರು ಹಣಕಾಸು ಸಚಿವರಾದಾಗಲೂ ಡಾ. ಸಿಂಗ್ ಆಯ್ದುಕೊಂಡ ಮಾರ್ಗ ರಾಜ್ಯಸಭೆ. ಹಾಗೆ ನೋಡಿದರೆ, ಅವರು ನೇರ ಚುನಾವಣೆಯಲ್ಲಿ ಸೆಣಸಿ ಜನರಿಂದ ಚುನಾಯಿತರಾಗಿಯೇ ಇಲ್ಲ. ಮೊದಲ ಬಾರಿಗೆ ಚುಂಬಿಸಲು ಹೋಗಿ ಹಲ್ಲುಮುರಿದುಕೊಂಡ' ಎಂಬಂತೆ 1999ರಲ್ಲಿ ಡಾ. ಸಿಂಗ್ ದಕ್ಷಿಣ ದಿಲ್ಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿಯ ವಿಜಯಕುಮಾರ್ ಮಲ್ಹೋತ್ರ ವಿರುದ್ಧ 30 ಸಾವಿರ ಮತಗಳಿಂದ ದಯನೀಯವಾಗಿ ಸೋತಿದ್ದರು! ಅನಂತರ ಅವರು ಆ ತಂಟೆಗೇ ಹೋಗಲಿಲ್ಲ- ಈ ಸಲವಾದರೂ ಡಾ. ಸಿಂಗ್ ಚುನಾವಣೆಗೆ ನಿಲ್ಲಬಹುದು ಅಂದುಕೊಂಡರೆ... ಪ್ಚ್... ನಾಲಿಗೆ ಕಡಿಯಿತು... ಉಹುಂ, ಚುನಾವಣೆಗೆ ನಿಲ್ಲುವುದಿಲ್ಲ, ರಾಜ್ಯಸಭೆ ಸದಸ್ಯತ್ವ ಇನ್ನೂ ಇದೆ ಅಂತಿದಾರೆ ಭಂಡ ಧೈರ್ಯದಿಂದ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಂತೂ ಈಗಾಗಲೇ ಘೋಷಿಸಿಬಿಟ್ಟಿದ್ದಾರೆ- ಡಾ. ಸಿಂಗ್ ಅವರೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು. ಎಂಥ ವಿಪರ್ಯಾಸ ನೋಡಿ, ಮಂತ್ರಿಯಾಗುವವರೆಲ್ಲ ಚುನಾವಣೆ ಕಣದಲ್ಲಿದ್ದಾರೆ. ಪ್ರಧಾನಿ ಅಭ್ಯರ್ಥಿ ಮಾತ್ರ ಚುನಾವಣೆಗೂ, ತಮಗೂ ಏನೇನೂ ಸಂಬಂಧವೇ ಇಲ್ಲ ಎಂಬಂತೆ ದೂರ ಉಳಿದುಬಿಟ್ಟಿದ್ದಾರೆ. ಈಗ ಹೇಳಿ ಡಾ. ಮನಮೋಹನ್ ಸಿಂಗ್ ಬಲಿಷ್ಠರಾ? ದುರ್ಬಲರಾ?

ಮನಮೋಹನ್ ಸಿಂಗ್ ಬಲಿಷ್ಠರಾ? ದುರ್ಬಲರಾ? ಮುಂದೆ ಓದಿ »

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+