Get Updates
Get notified of breaking news, exclusive insights, and must-see stories!

ಜೋಕು ಜೋಕಾಲಿ, ನಗು ಸದಾ ಜೀಕಲಿ !

Vishweshwar Bhat ವಿಶ್ವೇಶ್ವರ ಭಟ್‌

ನಾಳೆ ಮೂರ್ಖರ ದಿನ. ಅಂದರೆ ನಮ್ಮ-ನಿಮ್ಮೆಲ್ಲರ ದಿನ. ಹಾಗೆ ನೋಡಿದರೆ ಎಲ್ಲರಿಗೂ ಅನ್ವಯವಾಗುವ ದಿನ ಇದೊಂದೇ.

ಕೆಲವರು ವರ್ಷದಲ್ಲಿ ಅನೇಕ ಸಲ ಮೂರ್ಖರಾಗುವುದುಂಟು. ಆದರೆ ಅಧಿಕೃತವಾಗಿ ಆಚರಿಸಿಕೊಳ್ಳವುದು ಏಪ್ರಿಲ್‌ ಒಂದರಂದು ಮಾತ್ರ. ಆದರೆ ಯಾರೂ ಸಹ ತಾವು ಮೂರ್ಖರೆಂದು ಭಾವಿಸಲು ಒಪ್ಪುವುದಿಲ್ಲ. ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಅದು ಬೇರೆ ಮಾತು. ಅದೇನೇ ಇರಲಿ, ಮೂರ್ಖರ ದಿನದ ಮುನ್ನಾದಿನ ಕೆಲವು ಹಾಸ್ಯಗಳು, ವಕ್ರತುಂಡೋಕ್ತಿಗಳನ್ನು ಸವಿಯಬಹುದು. ಈ ಜೋಕುಗಳಲ್ಲಿ, ವಕ್ರತುಂಡೋಕ್ತಿಗಳಲ್ಲಿ ನಾವೆಲ್ಲ ಪಾತ್ರಧಾರಿಗಳಾಗಿದ್ದೇವೆ. ಅದನ್ನು ನಾವೇ ಹುಡುಕಬೇಕು.

ಒಂದು ದಿನ ಬರೀ ರಾಜಕಾರಣಿಗಳೇ ತುಂಬಿದ್ದ ಬಸ್‌ ಕಮರಿಗೆ ಬಿತ್ತು. ಅದನ್ನು ನೋಡಿದ ರೈತನೊಬ್ಬಅಪಘಾತ ಸ್ಥಳಕ್ಕೆ ಓಡಿದ. ಸ್ವಲ್ಪ ಸಮಯದ ಬಳಿಕ ಪೊಲೀಸರೂ ಬಂದರು.

ಪೊಲೀಸ್‌-‘ಈ ಬಸ್ಸಿನೊಳಗಿದ್ದ ರಾಜಕಾರಣಿಗಳೆಲ್ಲ ಎಲ್ಲಿ ಹೋದರು?’
ರೈತ-‘ನಾನು ಅವರೆಲ್ಲರನ್ನೂ ಸಮಾಧಿ ಮಾಡಿಬಿಟ್ಟೆ’
ಪೊಲೀಸ್‌-‘ ಹಾಗಾದ್ರೆ ಅವರೆಲ್ಲ ಸತ್ತಿದ್ದರಾ?’
ರೈತ-‘ತಾವು ಸತ್ತಿಲ್ಲ ಅಂತ ಜೋರಾಗಿ ಕೂಗುತ್ತಿದ್ದರು. ನಿಮಗೆ ಗೊತ್ತಲ್ಲ ರಾಜಕಾರಣಿಗಳು ಹೇಳೋದೇ ಸುಳ್ಳು ಅಂತ. ಹೀಗಾಗಿ ಸಮಾಧಿ ಮಾಡಿದೆ.’

*

ಎಷ್ಟೇ ಗಮನ ಸೆಳೆಯಲು ಪ್ರಯತ್ನಿಸಿದರೂ ಕೆಲವು ಹುಡುಗಿಯರು ನೋಡುವುದೇ ಇಲ್ಲ. ನಿಜಕ್ಕೂಪ್ರೀತಿ ಕುರುಡು.

*

ಮದುವೆ ರಾತ್ರಿಯಲ್ಲಿ ಬರುವ ಟೆಲಿಫೋನ್‌ ಕಾಲ್‌ ಇದ್ದಂತೆ. ರಿಂಗ್‌ ಆಗುತ್ತದೆ. ರಾತ್ರಿಯೆಲ್ಲ ಎದ್ದೇ ಇರಬೇಕಾಗುತ್ತದೆ.

*

ಪಂಜಾಬಿನ ಹೋಷಿಯಾರಪುರದಲ್ಲಿ ಬೃಹತ್‌ ಸಮಾವೇಶ.‘ಸರ್ದಾರ್ಜಿಗಳು ಮೂರ್ಖರಲ್ಲ’ ಎಂಬ ವಿಷಯ ಕುರಿತು ಚರ್ಚಿಸಲು ಒಂದ ಲಕ್ಷ ಸರ್ದಾರ್ಜಿಗಳು ಜಮಾಯಿಸಿದ್ದರು. ಸಮಾವೇಶದ ಸಂಚಾಲಕ ಸಂತಾ ಹೇಳಿದ- ‘ನಾವು ಮೂರ್ಖರಲ್ಲ ಎಂಬುದನ್ನು ಸಾಬೀತುಪಡಿಸಲು ಸೇರಿದ್ದೇವೆ. ನಾನು ಕೆಲವು ಪ್ರಶ್ನೆಗಳನ್ನು ಕೇಳುವೆ. ಯಾರಾದರೂ ವೇದಿಕೆಗೆ ಬರಬಹುದು’

ಒಬ್ಬ ಸರ್ದಾರ್ಜಿ ಬಂದ. ಸಂತಾ ಹೇಳಿದ- 20 ಪ್ಲಸ್‌ 20 ಎಷ್ಟು? ಎರಡು ನಿಮಿಷ ಯೋಚಿಸಿ ಹೇಳಿದ-‘38’. ಎಲ್ಲರಿಗೂ ಅತೀವ ಬೇಸರವಾಯಿತು. ಆದರೆ ಅಲ್ಲಿ ಸೇರಿದ್ದ ಒಂದು ಲಕ್ಷ ಸರ್ದಾರ್ಜಿಗಳು ಕೂಗಿದರು.

‘ಮತ್ತೊಂದು ಛಾನ್ಸ್‌ ಕೊಡಿ, ಮತ್ತೊಂದು ಛಾನ್ಸು’ ಸಂತಾ ಹೇಳಿದ-‘ಆಯಿತು. ಮತ್ತೊಂದು ಛಾನ್ಸ್‌. 10 ಪ್ಲಸ್‌ 10 ಎಷ್ಟು ? ಸರ್ದಾರ್ಜಿ ಸರಿ ಉತ್ತರ ಹೇಳಬಹುದೆಂದು ಎಲ್ಲರೂ ಉಸಿರು ಬಿಗಿಹಿಡಿದು ಕುಳಿತಿದ್ದರು. ಎರಡು ನಿಮಿಷ ಯೋಚಿಸಿ ಸರ್ದಾರ್ಜಿ ಹೇಳಿದ- ‘ಹದಿನೆಂಟು.’ ಮತ್ತೆ ಎಲ್ಲರಿಗೂ ನಿರಾಸೆಯಾಯಿತು. ಸೇರಿದ ಲಕ್ಷ ಸರ್ದಾರ್ಜಿಗಳೆಲ್ಲ ಒಕ್ಕೊರಲಿನಿಂದ ಕೂಗಿದರು- ‘ ಮತ್ತೊಂದು ಛಾನ್ಸ್‌ ಕೊಡಿ, ಕೊಡಿ’

ಸಂತಾ ಹೇಳಿದ -‘ಆಯಿತು. ಕೊಡ್ತೇನೆ. ಇದು ಕೊನೆ ಛಾನ್ಸ್‌. 5ಪ್ಲಸ್‌ 5 ಎಷ್ಟು?’ ಸರ್ದಾರ್ಜಿ ಮೂರು ನಿಮಿಷ ಯೋಚಿಸಿ ಹೇಳಿದ-‘ಹತ್ತು’.

ಸೇರಿದ ಒಂದು ಲಕ್ಷ ಸರ್ದಾರ್ಜಿಗಳೆಲ್ಲ ಒಕ್ಕೊರಲಿನಿಂದ ಕೂಗಿದರು -‘ಮತ್ತೊಂದು ಛಾನ್ಸ್‌ ಕೊಡಿ, ಮತ್ತೊಂದು ಛಾನ್ಸು’

*

ಮದುವೆ ಹಾಗೂ ಸುಖದ ಬಗ್ಗೆ ಓದಬೇಕೆನಿಸಿದರೆ ಎರಡು ಪ್ರತ್ಯೇಕ ಪುಸ್ತಕಗಳನ್ನೇ ಓದಬೇಕಾಗುತ್ತದೆ.

*

ಹೆಂಡತಿ ಹೇಳಿದ್ದೆಲ್ಲವನ್ನೂ ಗಂಡ ಮರೆಯುತ್ತಾನೆ. ಆದರೆ ಹೆಂಡತಿಗಂಡ ಹೇಳಿದ್ದೆಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾಳೆ. ಹಾಗೆ ಹೇಳದಿರುವುದನ್ನೂ.

*

ಕಚೇರಿಯ ಕಪಾಟನ್ನು ಸ್ಪಚ್ಛಗೊಳಿಸುವಾಗ ನೌಕರನೊಬ್ಬನಿಗೆ ಪುಟ್ಟ ಹಿತ್ತಾಳೆ ತಂಬಿಗೆ ಸಿಕ್ಕಿತು. ಅದನ್ನು ಸ್ವಚ್ಛಗೊಳಿಸುವಾಗ ತಟ್ಟನೆ ಒಂದು ಆಕೃತಿ ಹೊರ ಬಂತು.

‘ನನ್ನನ್ನು ಬಂಧಮುಕ್ತಗೊಳಿಸಿದ್ದಕ್ಕೆ ಥ್ಯಾಂಕ್ಸ್‌. ನೀನು ಮೂರು ವರ ಕೇಳಬಹುದು ಕೊಡುತ್ತೇನೆ’ ಎಂದಿತು ಆಕೃತಿ. ಸರ್ಕಾರಿ ನೌಕರ ಮೊದಲ ವರ ಕೇಳಿದ -‘ನನಗೆ 10 ಬಾಟಲ್‌ ರಮ್‌ ಬೇಕು’ ತಕ್ಷಣ 10ಬಾಟಲ್‌ಗಳು ಬಂದವು. ಎರಡನೇ ವರವನ್ನು ಕೇಳಿದ -’ಸುಂದರ ಹುಡುಗಿಯರ ಜತೆ ದ್ವೀಪದಲ್ಲಿ ನಾನೊಬ್ಬನೇ ಕಳೆಯಬೇಕು’ ಈ ವರವನ್ನೂ ಆಕೃತಿ ಈಡೇರಿಸಿತು. ಕ್ಷಣಾರ್ಧದಲ್ಲಿ ಆತ ಸುಂದರ ಹುಡುಗಿಯರ ಜತೆ ಇದ್ದ.

ಮೂರನೇ ವರ ಕೇಳು ಎಂದು ಆಕೃತಿ ಹೇಳಿತು. ಸರ್ಕಾರಿ ನೌಕರ ಮೂರನೇ ವರ ಕೇಳಿದ- ‘ನಾನು ಯಾವತ್ತೂ ಕೆಲಸ ಮಾಡುವಂಥ ಪರಿಸ್ಥಿತಿ ಎದುರಾಗಬಹುದು.’ ಮೂರನೇ ವರವೂ ಈಡೇರಿತು. ಕ್ಷಣ ಮಾತ್ರದಲ್ಲಿ ಆತ ಸರ್ಕಾರಿ ಕಚೇರಿಯಲ್ಲಿದ್ದ.

*

ನಿಮ್ಮ ಹೆಂಡತಿ ಅಥವಾ ಗರ್ಲ್‌ಫ್ರೆಂಡ್‌(ಡ್ಸ್‌) ಮೂವತ್ತು ವರ್ಷಗಳ ನಂತರ ಹೇಗೆ ಕಾಣಬಹುದೆಂದು ಅನಿಸಿದರೆ ಅವರ ತಾಯಂದಿರನ್ನು ನೋಡಬಹುದು.

*

ಮದುವೆ ಅಂದ್ರೆ ಒಂದು ಸಂಸ್ಥೆ (institution) ಮದುವೆ ಅಂದ್ರೆ ಪ್ರೀತಿ. ಪ್ರೀತಿ ಯಾವತ್ತೂ ಕುರುಡು. ಹಾಗಾದ್ರೆ ಮದುವೆ ಅಂದ್ರೆ ಅಂಧರ ಸಂಸ್ಥೆ.

*

ಲಾಲೂ, ರಾಬ್ಡಿ ಅಮೆರಿಕದ ವೈಟ್‌ಹೌಸ್‌ಗೆ ಹೋಗಿದ್ದರು. ಊಟವಾದ ಬಳಿಕ ಲಾಲೂ ಟಾಯ್ಲೆಟ್‌ಗೆ ಹೋದ. ಎರಡು ನಿಮಿಷಗಳ ಬಳಿಕ ವಾಪಸ್‌ ಬಂದ. ವೈಟ್‌ಹೌಸ್‌ನಿಂದ ಹೊರಬಂದ ಬಳಿಕ ಲಾಲೂ ರಾಬ್ಡಿಗೆ ಹೇಳಿದ-‘ಈ ಜಾರ್ಜ್‌ ಬುಷ್‌ ಮಹಾ ವಿಲಾಸಿ. ಟಾಯ್ಲೆಟ್‌ನಲ್ಲಿ ಕೊಳವೆಗಳೆಲ್ಲ ಬಂಗಾರದ್ದೇ. ಅಲ್ಲೇ ಮೂತ್ರ ವಿಸರ್ಜಿಸಿದೆ’.

ಹೀಗೆಲ್ಲ ಇರಲಿಕ್ಕಿಲ್ಲ. ಏನೋ ಯಡವಟ್ಟಾಗಿರಬೇಕು ಎಂದುಕೊಂಡಳು ರಾಬ್ಡಿ. ವಾಪಸ್‌ ಹೋಟೆಲ್‌ಗೆ ಹೋಗಿ ಜಾರ್ಜ್‌ ಬುಷ್‌ ಹೆಂಡತಿಗೆ ರಾಬ್ಡಿ ಕೇಳಿದಳು-‘ಯುರಿನಲ್‌ ಎಲ್ಲಾ ಬಂಗಾರದ್ದೇ ಅಂತೆ ಹೌದಾ?’ ಬುಷ್‌ ಹೆಂಡತಿ ಹೇಳಿದಳು-‘ ಹಾಗಾದರೆ ಸ್ಯಾಕ್ಸೊಫೋನ್‌ನಲ್ಲಿ ಮೂತ್ರ ವಿಸರ್ಜಿಸಿದ್ದು ನಿನ್ನ ಗಂಡನೇನಾ? ’

*

ಎರಡು ಸಂದರ್ಭದಲ್ಲಿ ಗಂಡಸಿಗೆ ಹೆಣ್ಣನ್ನು ಅರ್ಥಮಾಡಿ ಕೊಳ್ಳುವುದು ಕಷ್ಟ- ಮದುವೆಗೆ ಮೊದಲು ಹಾಗೂ ನಂತರ.

*

ಯಾವುದೇ ವಾದದ ಕೊನೆಯ ಮಾತು ಹೆಂಡತಿಯದೇ. ಅದಾದ ಬಳಿಕವೂ ಗಂಡ ಮಾತಾಡಿದರೆ ಅದು ಮುಂದಿನ ವಾದದ ಆರಂಭ.

*

ಗಂಡ : ಸೀರೆ ತಗೋಬೇಕು ಅಂತಿದ್ಯಲ್ಲಾ ಹೋಗೋಣವಾ?
ಹೆಂಡತಿ : ಈಗ ಬೇಡ, ಹದಿನೈದು ದಿನ ಬಿಟ್ಟು ಹೋಗೋಣ.
ಗಂಡ : ಬಳೆ, ನೆಕ್ಲೇಸ್‌ ಬೇಕು ಅಂತಿದ್ದೆ. ಹೋಗೋಣವಾ?
ಹೆಂಡತಿ : ಈಗ ಬೇಡ, ಹದಿನೈದು ಬಿಟ್ಟು ಹೋಗೋಣ.
ಗಂಡ : ಈಗ ಯಾಕೆ ಬೇಡ?
ಹೆಂಡತಿ : ಬ್ಯೂಟಿ ಪಾರ್ಲರ್‌ಗೆ ಹೋಗಬೇಕು.

*

ಗಂಡ-ಹೆಂಡತಿ ಮಧ್ಯೆ ಜಗಳವಾದಾಗ ಗಂಡ ಮರೆತುಬಿಡುಬೇಕು. ಒಂದೇ ವಿಷಯವನ್ನು ಇಬ್ಬರು ನೆನಪಿಟ್ಟುಕೊಳ್ಳಬಾರದು.

*

ಮನುಷ್ಯನ ಎಲ್ಲ ಗುಣಗಳಿಗೂ ಸರ್ಟಿಫಿಕೇಟ್‌ ಕೊಡಬಹುದು ಮೂರ್ಖತನದ ಹೊರತಾಗಿ.

*

ಡಾ. ರಾಮನಾಥನ್‌ ಚಿಕ್ಕಮಗಳನ್ನು ‘ನಿನ್ನ ಹೆಸರೇನಮ್ಮಾ’ ಅಂತ ಕೇಳಿದರೆ ಡಾ. ರಾಮನಾಥನ್‌ ಮಗಳು ಎಂದು ಹೇಳುತ್ತಿದ್ದಳು. ಇದನ್ನು ಕೇಳಿ ತಾಯಿಗೆ ಕಿರಿಕಿರಿಯಾಗುತ್ತಿತ್ತು. ‘ಯಾರಾದರೂ ನಿನ್ನ ಹೆಸರೇನೆಂದು ಕೇಳಿದರೆ ಗೀತಾ ರಾಮನಾಥನ್‌ ಎಂದು ಹೇಳು, ಹೊರತು ಡಾ. ರಾಮನಾಥನ್‌ ಮಗಳು ಎಂದು ಹೇಳಬೇಡ’ ಎಂದು ತಾಯಿ ಹೇಳಿದಳು.

ಒಂದು ದಿನ ಗೀತಾ ರಾಮನಾಥನ್‌ಳನ್ನು ಯಾರೋ ಕೇಳಿದರು. ‘ ನೀನು ಡಾ. ರಾಮನಾಥನ್‌ ಮಗಳಾ?’ ಅದಕ್ಕೆ ಆಕೆ ಹೇಳಿದಳು.‘ನಾನು ಡಾ. ರಾಮನಾಥನ್‌ ಮಗಳೆಂದೇ ಭಾವಿಸಿದ್ದೆ. ಆದರೆ ನನ್ನ ತಾಯಿ ಹಾಗೆ ಹೇಳಬೇಡ ಅಂತಿದ್ದಾಳೆ.’

*

ತಮ್ಮ ತಪ್ಪುಗಳಿಗೆ ಬೇರೆಯವರನ್ನು ನಿಂದಿಸುವುದೇ ಯಶಸ್ಸಿನ ಗುಟ್ಟು .

*

ಹೆಂಡತಿ ಖರ್ಚು ಮಾಡುವುದಕ್ಕಿಂತ ಹೆಚ್ಚು ದುಡಿಯುವವನೇ ಯಶಸ್ವಿ ಗಂಡ.

*

ಸ್ನೇಹಿತರಿಬ್ಬರು ಐದು ವರ್ಷಗಳ ಬಳಿಕ ಭೇಟಿಯಾದರು. ಒಬ್ಬ ಮದುವೆಯಾಗಿದ್ದ ಮತ್ತೊಬ್ಬ ಅವಿವಾಹಿತ. ಆದರೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ. ವಿವಾಹಿತ ಸ್ನೇಹಿತನ ಅನುಭವ ಕೇಳಲು ‘ಹೇಗಿದೆ ವಿವಾಹ ಜೀವನ? ಎಂದ. ಅದಕ್ಕೆ ವಿವಾಹಿತ ಸ್ನೇಹಿತ ಹೇಳಿದ-‘ಚೆನ್ನಾಗಿದೆ. ದೊಡ್ಡ ಸಂಗತಿಗಳ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಸಣ್ಣ ಪುಟ್ಟ ವಿಷಯಗಳ ಬಗ್ಗೆ ಹೆಂಡತಿಯದೇ ನಿರ್ಧಾರ. ಈ ಅರೇಂಜ್‌ಮೆಂಟ್‌ ಚೆನ್ನಾಗಿ ಕೆಲಸ ಮಾಡುತ್ತಿದೆ’.

ಅವಿವಾಹಿತ ಸ್ನೇಹಿತ ಕೇಳಿದ- ಯಾವುದು ದೊಡ್ಡ ಸಂಗತಿ,‘ ಯಾವುದು ಸಣ್ಣಪುಟ್ಟ ವಿಷಯ?’. ವಿವಾಹಿತ ಸ್ನೇಹಿತ ಹೇಳಿದ- ‘ಯಾರು ಅಡುಗೆ ಮಾಡಬೇಕು, ಬಟ್ಟೆ ಬಗೆಯ ಬೇಕು. ಪಾತ್ರೆ ತೊಳೆಯಬೇಕೆಂಬುದು ಸಣ್ಣ ಸಂಗತಿ. ಯಾರು ಪ್ರಧಾನಿಯಾದರೆ ಒಳ್ಳೆಯದು, ಇರಾಕ್‌- ಅಮೆರಿಕ ಸಮರದಲ್ಲಿ ವಿಶ್ವಸಂಸ್ಥೆ ಪಾತ್ರ ಹೇಗಿರಬೇಕಿತ್ತು ಇತ್ಯಾದಿಯೆಲ್ಲ ದೊಡ್ಡ ವಿಷಯ’.

*

ಆತ ಬದಲಾಗಬಹುದೆಂದು ಹೆಣ್ಣು ಗಂಡನ್ನು ಮದುವೆಯಾಗುತ್ತಾಳೆ. ಆದರೆ ಆತ ಬದಲಾಗುವುದಿಲ್ಲ. ಆಕೆ ಬದಲಾಗಲಿಕ್ಕಿಲ್ಲವೆಂದು ಗಂಡು ಹೆಣ್ಣನ್ನು ಮದುವೆಯಾಗುತ್ತಾನೆ. ಆದರೆ ಬದಲಾಗುತ್ತಾಳೆ.

*

ಸಂದರ್ಶಕ : ನೀನೇನು ಓದಿದ್ದೀಯಾ?
ಸರ್ದಾರ್ಜಿ : ಬಿಎ ಪೋಸ್ಟ್‌ ಗ್ರಾಜುಯೇಟ್‌.
ಸಂದರ್ಶಕ : ಬಿಎ ಪೋಸ್ಟ್‌ ಗ್ರಾಜುಯೇಟ್‌? ಅದ್ಯಾವ ಡಿಗ್ರಿ?
ಸರ್ದಾರ್ಜಿ : ಬಿಎ ಕರೆಪ್ಪಾಂಡೆನ್ಸ್‌.

*

ಒಂದೇ ತಪ್ಪನ್ನು ಒಂದು ಸಲವೂ ಮಾಡದವ ಅವಿವಾಹಿತ.

*

ಹೆಂಡತಿ ಜತೆ ಸಂತಸವಾಗಿರಲು ಹೆಚ್ಚು ಪ್ರೀತಿಸಬೇಕು. ಆಕೆಯನ್ನು ಕಡಿಮೆ ಅರಿಯಲು ಪ್ರಯತ್ನಿಸಬೇಕು.

*

ಪ್ರಧಾನಿ ದೇವೇಗೌಡ ಹಾಗೂ ಅಧ್ಯಕ್ಷ ಕ್ಲಿಂಟನ್‌ಭೇಟಿಯಾದರು. ಊಟಕ್ಕೆ ಕುಳಿತಾಗ ಕ್ಲಿಂಟನ್‌ ಭಾರತದ ಸೇನೆಯನ್ನು ಪ್ರಶಂಸಿಸಿದ. ದೇವೇಗೌಡರೂ ಅಮೆರಿಕದ ಸೇನೆಯನ್ನು ಹೊಗಳಿದರು. ಅದಕ್ಕೆ ಕ್ಲಿಂಟನ್‌ ಹೇಳಿದ- ‘ಹಾಗಾದ್ರೆ ಒಂದು ಕೆಲ್ಸ ಮಾಡೋಣ. ನಮ್ಮ ನಮ್ಮ ಸೇನೆಯ ಜನರಲ್‌ಗಳನ್ನು ಬದಲಿಸಿಕೊಳ್ಳೋಣ’. ಆಯ್ತು ಎಂದರು ಗೌಡರು. ಕ್ಲಿಂಟನ್‌ ಹೇಳಿದ -‘ಜನರಲ್‌ ಹೋಷಿಯಾರ್‌ ಸಿಂಗ್‌, ಜನರಲ್‌ ಬಹಾದ್ದೂರ್‌ ಸಿಂಗ್‌ ನಮಗಿರಲಿ’. ಅದಕ್ಕೆ ಗೌಡರು ಹೇಳಿದರು -‘ನಮಗೆ ಜನರಲ್‌ ಮೋಟಾರ್ಸ್‌, ಜನರಲ್‌ ಎಲೆಕ್ಟ್ರಿಕಲ್ಸ್‌ ಇರಲಿ’.(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+