ಮಹಾತ್ಮ ಗಾಂಧೀ ಚುನಾವಣೆಗೆ ನಿಂತರೂ ಗೆಲ್ಲೋಕೆ ಐದು ಕೋಟಿ ಬೇಕು
ಬೆಳಗಾವಿ, ಡಿ 18: ತಮ್ಮ ಹಾಸ್ಯಭರಿತ ಮಾತಿನ ಶೈಲಿಗೆ ಹೆಸರುವಾಸಿಯಾಗಿರುವ ಸದ್ಯ ಕಾಂಗ್ರೆಸ್ಸಿನಲ್ಲಿರುವ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ, ಈಗಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರದ ಮಾತನ್ನಾಡಿದ್ದಾರೆ.
"ನಮ್ಮ ವ್ಯವಸ್ಥೆಯನ್ನೇ ಹಾಳು ಮಾಡಿ ಇಟ್ಟಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಚುನಾವಣೆಗೆ ನಿಂತರೂ, ಅವರು ಗೆಲ್ಲೋಕೆ ಕನಿಷ್ಠ ಐದು ಕೋಟಿಯಾದರೂ ಖರ್ಚು ಮಾಡಬೇಕು"ಎಂದು ಹೇಳಿದರು.
"ದೇವೇಗೌಡರು ಹಾನೆಸ್ಟ್ ರಾಜಕಾರಣಿ ಎನ್ನುವುದು ನನ್ನ ಅಭಿಪ್ರಾಯ. ಅವರನ್ನು ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದೇನೆ. ಬಿಜೆಪಿಯವರದ್ದು ಕೇಶವಕೃಪಾ ಸಂಸ್ಕೃತಿ, ನನ್ನದು ಬಸವಕೃಪಾ"ಎಂದು ಇಬ್ರಾಹಿಂ ಹೇಳಿದರು.

ನಾವೆಲ್ಲಾ ಬಸವತತ್ವವನ್ನು ನಂಬಿ ಸರ್ವರಿಗೂ ಸಮಬಾಳು ಎಂದು ರಾಜಕೀಯ ಮಾಡಿದವರು. ನಾವು ಸಾಬ್ರು, ಹೊಸ ಕಾರು ತೆಗೆದುಕೊಳ್ಳಲು ಸಾಧ್ಯವೇ. ಗುಜುರಿ ಅಂಗಡಿಯಲ್ಲಿ ಸಾಮಾನು ತೆಗೆದುಕೊಂಡು ಬಂದು ಕಾರು ಮಾಡುತ್ತೇವೆ" ಎಂದು ಇಬ್ರಾಹಿಂ ಹೇಳಿದರು.
"ಎಲ್ಲಾ ಪಕ್ಷದಲ್ಲೂ ಒಳ್ಳೆಯವರಿದ್ದಾರೆ, ಬಿಜೆಪಿಯಲ್ಲೂ ಉತ್ತಮರಿದ್ದಾರೆ. ನನಗೆ ಆರ್ ಎಸ್ ಎಸ್ ಎಂದರೆ ಮಾತ್ರ ಅಲರ್ಜಿ. ನನ್ನ ರಾಜಕೀಯ ನಿಲುವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ"ಎಂದು ಇಬ್ರಾಹಿಂ ಹೇಳಿದರು.
"ನನಗೆ ಈಗಲೂ, ಮುಂದೆಯೂ ಸಿದ್ದರಾಮಯ್ಯನವರು ಆತ್ಮೀಯರೇ, ನಮ್ಮ ಸಂಬಂಧ ಹಾಗೇ ಇರುತ್ತದೆ. ಆದರೆ, ನನ್ನ ಮತ್ತು ಅವರ ಚಿಂತನೆ ಬೇರೆ ಬೇರೆ. ಒಂದೇ ಮನೆಯಲ್ಲಿದ್ದೇವೆ, ಆದರೆ ಬೇರೆ ಬೇರೆ ಬಾತ್ ರೂಂಗೆ ಹೋಗುತ್ತೇವೆ"ಎಂದು ಇಬ್ರಾಹಿಂ ಹೇಳಿದರು.












Click it and Unblock the Notifications