ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಎಲ್ಲ ಓದುಗ ಭಕ್ತ ಬಾಂಧವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು "ಸಾಮೇರ್" ಕಡೆಯಿಂದ. ಈಗಾಗಲೇ ವರ್ಷಭವಿಷ್ಯ ಓದಿರುವ ನೀವು ಯುಗಾದಿ ವರ್ಷಫಲವನ್ನೂ ಓದಬೇಕಾ ಎಂಬ ಪ್ರಶ್ನೆ ಉದ್ಭವಿಸಬಹುದು. ಅದಕ್ಕುತ್ತರ ಹೀಗಿದೆ. ಹೇಗೆಂದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬದಿಂದ ಹೊಸ ವರ್ಷಾಚರಣೆ ಮಾಡಲಾಗುತ್ತಿದೆ, ಅನಾದಿ ಕಾಲದಿಂದಲೂ. ಅಂದು ಹೊಸ ಪಂಚಾಂಗ ತೆಗೆದುಕೊಂಡು ಮನೆ ಹಿರಿಯ ವ್ಯಕ್ತಿ ಪಂಚಾಂಗ ಓದಿ ಮನೆಮಂದಿಗೆಲ್ಲ ಅವರವರ ರಾಶಿಗಳ ಭವಿಷ್ಯ, ಆಯವ್ಯಯ ಮತ್ತು ಮಳೆ- ಬೆಳೆ ಹೇಗಿದೆ ಹಾಗೂ ಗ್ರಹಣಗಳ ಫಲವೇನು ಎಂಬುದನ್ನು ತಿಳಿಸುತ್ತಾರೆ.
ನಮ್ಮ ಮನೆಯಲ್ಲಿ ಈ ಪದ್ಧತಿ ಇಲ್ಲ ಸಾಮೇ ಎನ್ನಬೇಡಿ. ಪದ್ಧತಿ ಇಲ್ಲವೆಂದಾದರೆ ಈ ವರ್ಷದ ಯುಗಾದಿಯಿಂದಲೇ ಈ ಹೊಸ ಪದ್ಧತಿಯನ್ನು ಮನೆಯಲ್ಲಿ ಆರಂಭಿಸಿ. ಪಂಚಾಂಗ ಓದಿಕೊಂಡು ವರ್ಷ ಭವಿಷ್ಯ ತಿಳಿದುಕೊಳ್ಳಲು ಯಾವುದೇ ಜಾತಿ, ಮತದ ಭೇದವಿಲ್ಲ. ಇಷ್ಟಕ್ಕೂ ಈ ಪದ್ಧತಿಯನ್ನು ಪ್ರತಿ ವರ್ಷದಂತೆ ಪಾಲಿಸಿಕೊಂಡು ಹೋದರೆ ಒಳ್ಳೆಯದು. ಜೊತೆಗೆ ಮನೆಯಲ್ಲೊಂದು ಪಂಚಾಂಗವಿದ್ದರೆ ಎಲ್ಲ ಕಾರ್ಯಕ್ಕೂ ನೀವೇ ನೋಡಿಕೊಳ್ಳಬಹುದು ಮುಹೂರ್ತವನ್ನು. ಇದಕ್ಕೇನು ಡಿಗ್ರಿ ಬೇಕಾಗಿಲ್ಲ. ಕನ್ನಡ ಪಂಚಾಂಗಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಇರಲಿ, ಈಗ ದುರ್ಮುಖನಾಮ ಸಂವತ್ಸರದ ವರ್ಷಭವಿಷ್ಯವನ್ನು ಸಾಮೇರ್ ಕಡೆಯಿಂದ ತಿಳಿದುಕೊಳ್ಳಿ. [2016 ವರ್ಷ ಭವಿಷ್ಯ : ಮೇಷ ರಾಶಿಗೆ ಮೊದಲರ್ಧ ಸೂಪರ್]
ಮೇಷ : ಈ ರಾಶಿಯವರಿಗೆ ಅಷ್ಟಮ ಶನಿಕಾಟವಿರುವುದರಿಂದ ಆರೋಗ್ಯದೆಡೆಗೆ ಹೆಚ್ಚಿನ ಗಮನ ನೀಡಬೇಕು ವರ್ಷಪೂರ್ತಿ. ಹಣಕಾಸಿನ ವಿಷಯದಲ್ಲಿ ಖರ್ಚೇ ಹೆಚ್ಚಾಗುವುದರಿಂದ ಉಳಿತಾಯ ಯೋಜನೆಗಳಲ್ಲಿ ಹಣವನ್ನು ತೊಡಗಿಸಿಟ್ಟುಕೊಳ್ಳಬೇಕು ಕಷ್ಟಕಾಲಕ್ಕೆಂದು. ಆರೋಗ್ಯ ವಿಮೆ ತಪ್ಪಿಸದೇ ಮಾಡಿಸಿಕೊಳ್ಳಬೇಕು. ಅಶ್ವಿನಿ ನಕ್ಷತ್ರದವರಿಗೆ ಜುಲೈ ತಿಂಗಳವರೆಗೆ ಲಾಭದಾಯಕವೆನಿಸುವ ದಿನಗಳಿದ್ದರೆ, ಮುಂದಿನ 8 ತಿಂಗಳು ಅಷ್ಟಕ್ಕಷ್ಟೇ ಎನ್ನುವಂತಿರುತ್ತದೆ.
ಯಾವ ನಕ್ಷತ್ರಗಳಿಗೆ ಹೇಗೆ? : ಆದರೂ ಹೆಚ್ಚಿನ ಹಣಕಾಸಿನ ತೊಂದರೆಗಳು ಕಾಣಿಸಿಕೊಳ್ಳುವುದರಿಂದ ಎಚ್ಚರಿಕೆಯಿರಲಿ. ಭರಣಿ ನಕ್ಷತ್ರದವರಿಗೆ ಮೊದಲ 8 ತಿಂಗಳು ಸಮಾಧಾನಕರವಿದ್ದರೆ ಮುಂದಿನ ನಾಲ್ಕು ತಿಂಗಳು ಉತ್ತಮ ದಿನಗಳೆನಿಸುವ ಸಮಯವಾಗಿರುತ್ತದೆ. ಹಣದ ತೊಂದರೆಗಳು ಉದ್ಭವಿಸುವುದರಿಂದ ಈ ನಕ್ಷತ್ರದವರು ಹೂಡಿಕೆಯಲ್ಲಿ ತೊಡಗಿಸಿಕೊಳ್ಳಬಹುದು. [ಭರಣಿ ನಕ್ಷತ್ರ ವಿಶೇಷ : ಬೆಂಕಿಯೊಂದಿಗೆ ಸರಸ!]
ಕೃತ್ತಿಕಾ ನಕ್ಷತ್ರದ ಒಂದನೇ ಚರಣದವರು ಜುಲೈ ತಿಂಗಳವರೆಗೆ ಶುಭಫಲಗಳನ್ನು ಅನುಭವಿಸಿದರೆ, ನಂತರದ ನಾಲ್ಕು ತಿಂಗಳು ಲಾಭವೂ ಇಲ್ಲ ನಷ್ಟವೂ ಇಲ್ಲ ಎನ್ನುವಂತಾಗಿರುತ್ತದೆ. ಆದರೆ ವರ್ಷದ ಕೊನೆಯ ನಾಲ್ಕು ತಿಂಗಳು ಅಂದರೆ ಯುಗಾದಿಯಿಂದ ವರ್ಷವೆಂದುಕೊಂಡು ಲೆಕ್ಕ ಹಾಕಿದಲ್ಲಿ ಸಮಾಧಾನಕರ ಜೀವನಶೈಲಿಯಿರುತ್ತದೆ. [ಕೃತಕತೆ ಕಂಡರಾಗದ ಕೃತ್ತಿಕಾ ನಕ್ಷತ್ರದವರು]
ಇನ್ನು ಯಾವುದೋ ರೂಪದಲ್ಲಿ ಈ ವರ್ಷದಲ್ಲಿ ಈ ನಕ್ಷತ್ರದವರಿಗೆ ಭಾರಿ ಪ್ರಮಾಣದ ಹಣದ ಲಾಭವಾಗುತ್ತದೆ. ಅದ್ಯಾವ ರೂಪದಲ್ಲಿ ಬರುತ್ತೋ ಅವರವರ ವೈಯಕ್ತಿಕ ಜಾತಕದ ಮೇಲೆ ಅವಲಂಬಿತವಾಗಿರುತ್ತದೆ. ಈ ಮೇಲ್ಕಂಡ ವಿಷಯಗಳು ಮೇಲ್ನೋಟಕ್ಕೆ ಕಂಡು ಬರುವ ಅಂಶಗಳಾದರೆ. ಇನ್ನಷ್ಟು ವಿವರಗಳು ಹೀಗಿವೆ.
ಪರಿಹಾರ : ಗುರುವು 5 ಸ್ಥಾನದಲ್ಲಿರುವುದರಿಂದ ಆಗಸ್ಟ್ ವರೆಗೂ ಚಿಂತಿಸುವ ಹಾಗಿಲ್ಲ. ಒಂಥರಾ ಗುರುಬಲವಿದ್ದಂಗೆ. ಈ ಸಮಯದಲ್ಲಿ ಎಲ್ಲ ರೀತಿಯಿಂದಲೂ ಸಂತಸವಿರುತ್ತದೆ ಮನಕ್ಕೆ ಮತ್ತು ತನಕ್ಕೆ. ಆ ನಂತರ ಗುರುಬಲ ಹೋಗುವುದರಿಂದ ಸ್ವಲ್ಪ ಜೀವನದುತ್ಸಾಹ ಇಳಿಮುಖವೆನಿಸಿದರೂ ಚಿಂತಿಸುವ ಅಗತ್ಯವಿಲ್ಲ. ಆದರೆ ಶನಿಯ ಕಿರಿಕಿರಿಯಿಂದ ಪಾರಾಗಲು ಸೂಕ್ತ ಪರಿಹಾರೋಪಾಯಗಳನ್ನು ಮಾಡಿಕೊಳ್ಳಲೇಬೇಕು. ಇದು ಅನಿವಾರ್ಯವೂ ಹೌದು. [ರಾಶಿಗಳಿಗನುಗುಣವಾಗಿ ಗುರುಬಲ ಹೀಗಿದೆ]
ಇಲ್ಲವಾದರೆ ಹಣವೂ ನೀರಿನಂತೆ ಹೆಂಗೆಂಗೋ ಖರ್ಚಾಗಿ ಪರಿಹಾರಗಳನ್ನು ಮಾಡಿಕೊಳ್ಳಲೂ ಕೂಡ ಹಣವಿಲ್ಲದಂತಾಗುತ್ತದೆ. ಇದೇ ಶನಿಕಾಟವೆನ್ನುತ್ತಾರೆ ಅರಿವಿರಲಿ. ಒಟ್ಟಿನಲ್ಲಿ ಈ ವರ್ಷ ನೂರರಲ್ಲಿ ಶೇ.75ರಷ್ಟು ಅಶುಭ ಫಲಗಳೇ ಕಂಡು ಬರುವುದರಿಂದ ಆಧ್ಯಾತ್ಮಿಕದೆಡೆಗೆ ಮನಸ್ಸನ್ನು ವಾಲಿಸಿಕೊಳ್ಳಬೇಕು, ಬಿಡದಂಗೆ.