ಕರ್ಕಾಟಕ ರಾಶಿ ಯುಗಾದಿ ಫಲ: ಸಾಲ- ಸ್ನೇಹದಲ್ಲಿ ಮೈಯೆಲ್ಲಾ ಕಣ್ಣಾಗಿರಿ
ಪುನರ್ವಸು ನಕ್ಷತ್ರ ನಾಲ್ಕನೇ ಪಾದ, ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದ ಹಾಗೂ ಪುಷ್ಯಾ ನಕ್ಷತ್ರದ ನಾಲ್ಕೂ ಪಾದ ಕರ್ಕಾಟಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಚಂದ್ರ. ಇನ್ನು ಈ ಸಂವತ್ಸರದ ಗೋಚಾರ ಫಲ ನೋಡಬೇಕು ಅಂದರೆ, ಜನ್ಮ ಸ್ಥಾನದಲ್ಲಿ ರಾಹು, ಏಳನೇ ಮನೆಯಲ್ಲಿ ಕೇತು, ಆರರಲ್ಲಿ ಶನಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಗುರು ಗ್ರಹ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಶನಿಯು ಅನುಕೂಲ ಸ್ಥಾನದಲ್ಲೇ ಇದ್ದರೂ ಜನ್ಮ ರಾಶಿಯಲ್ಲಿರುವ ರಾಹು ಹಾಗೂ ಏಳನೇ ಸ್ಥಾನದಲ್ಲಿರುವ ಕೇತು ಶುಭ ಫಲ ನೀಡುವುದಿಲ್ಲ. ಇನ್ನು ಗುರು ಸಹ ನಾಲ್ಕನೇ ಸ್ಥಾನದಲ್ಲಿ ಒಳ್ಳೆ ಫಲಗಳೇನೂ ನೀಡುವುದಿಲ್ಲ. ಅದರಲ್ಲೂ ಬಾಳ ಸಂಗಾತಿ ಜತೆಗೆ ಉತ್ತಮವಾದ ಮಾತುಕತೆಗೆ ಅಡೆತಡೆ ಏರ್ಪಟ್ಟು, ಸಂಬಂಧದಲ್ಲಿ ಗೊಂದಲ ಕಾಣಿಸಿಕೊಳ್ಳುತ್ತದೆ.
ಇನ್ನು ರಾಹುವಿನ ಕಾರಣಕ್ಕೆ, ನನಗೆ ಏನೋ ಆಗಿದೆ. ಆರೋಗ್ಯ ಸಮಸ್ಯೆ ಇರಬಹುದು ಎಂಬ ಭ್ರಮೆ ಸೃಷ್ಟಿ ಆಗುತ್ತದೆ. ಕೆಲವರಿಗೆ ಚರ್ಮ ವ್ಯಾಧಿ ಹಾಗೂ ತಲೆ ಹೊಟ್ಟು ಹೆಚ್ಚಾಗುವುದು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಖರ್ಚಿನ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಂತಾಗುತ್ತದೆ. ಆದ್ದರಿಂದ ಈ ವಿಚಾರಗಳಲ್ಲಿ ಎಚ್ಚರವಾಗಿರಿ.
ವಿಳಂಬಿ ನಾಮ ಸಂವತ್ಸರದ ಫಲ ಹೇಗಿದೆ?
ಈಗ ವಿಳಂಬಿ ನಾಮ ಸಂವತ್ಸರದ ಫಲ ಏನು ಹೇಳುತ್ತದೆ ಎಂದು ನೋಡೋಣ. ನಿಮ್ಮ ಆದಾಯ 14 ಇದ್ದರೆ, ವ್ಯಯ 8 ಇದೆ. ಇನ್ನು ಆರೋಗ್ಯ 6 ಇದ್ದರೆ, ಅನಾರೋಗ್ಯ 5 ಇದೆ. ರಾಜ ಪೂಜಾ 6, ರಾಜ ಕೋಪ 3 ಇದೆ. ಇನ್ನು ಸುಖ 3 ಇದ್ದರೆ, ದುಃಖ 3 ಇದೆ. ಇದರರ್ಥ ಈ ವರ್ಷ ಒಂದಿಷ್ಟು ದುಡ್ಡು ಉಳಿಸಿಕೊಳ್ಳಬಹುದು. ಆದರೆ ಆರೋಗ್ಯ ವಿಚಾರದಲ್ಲಿ ಆಗಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಸುಖ-ದುಃಖದ ವಿಚಾರಕ್ಕೆ ಬಂದರೆ, ಸಮ ಸಮವಾಗಿ ಇದೆ.
ಯಾವುದೇ ಹೊಸ ಸಾಲ, ಹಣ ಕಾಸಿನ ಜವಾಬ್ದಾರಿ ವಹಿಸಿಕೊಳ್ಳಬೇಡಿ
ಮುಖ್ಯವಾಗಿ ಪುನರ್ವಸು ನಕ್ಷತ್ರದವರು ಯಾರಿದ್ದೀರಿ, ಅವರಿಗೆ ಈ ಸಂವತ್ಸರದ ಮೊದಲ ನಾಲ್ಕು ತಿಂಗಳು ಅಡ್ಡಿಯಿಲ್ಲ. ಆ ನಂತರದ ಎಂಟು ತಿಂಗಳು ಆದಾಯದ ವಿಚಾರದಲ್ಲಿ ಬಹಳ ಏರುಪೇರಾಗುತ್ತದೆ. ವ್ಯಾಪಾರ ಮಾಡುತ್ತಿರುವವರಾದರೆ ಇಷ್ಟು ಕಾಲದ ಆದಾಯವನ್ನು ಲೆಕ್ಕ ಇಟ್ಟುಕೊಂಡು, ಯಾವುದೇ ಹಣಕಾಸಿನ ರಿಸ್ಕ್ ತೆಗೆದುಕೊಳ್ಳಬೇಡಿ. ಉದ್ಯೋಗಿಗಳಾಗಿದ್ದಲ್ಲಿ ಮುಂದೆ ಬರಬಹುದಾದ ಬಡ್ತಿ, ವೇತನ ಹೆಚ್ಚಳ ಮತ್ತೊಂದನ್ನು ನಂಬಿ ಸಾಲ ಮಾಡಬೇಡಿ. ಒಟ್ಟಾರೆ ಆದಾಯದ ಹರಿವಿಗೆ ಅಡ್ಡಿ ಆಗುತ್ತದೆ.
ಅಕ್ಟೋಬರ್ ನಂತರ ಮಾರ್ಚ್ ತನಕ ಶುಭ ಸುದ್ದಿ ನಿರೀಕ್ಷಿಸಬಹುದು
ಇನ್ನು ಪುಷ್ಯ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಉತ್ತಮ ಫಲ ಗೋಚರಿಸುತ್ತಿದೆ. ವೇತನ ಹೆಚ್ಚಳ ಅಥವಾ ಬಾಕಿಯಿದ್ದ ಹಣ ಬರುವ ಸಾಧ್ಯತೆಗಳಿವೆ. ಆ ನಂತರದ ನಾಲ್ಕು ತಿಂಗಳು ಸುಮಾರಾಗಿರುತ್ತದೆ. ಕೊನೆಯ ನಾಲ್ಕು ತಿಂಗಳಲ್ಲಿ ಸುಧಾರಿಸುತ್ತದೆ. ಆದರೆ ಆಶ್ಲೇಷಾ ನಕ್ಷತ್ರದವರಿಗೆ ಇಡೀ ವರ್ಷದ ಆದಾಯ ಆರಕ್ಕೇಳದ ಮೂರಕ್ಕಿಳಿಯದ ಸ್ಥಿತಿಯಲ್ಲಿರುತ್ತದೆ. ಈ ವರ್ಷದ ಅಕ್ಟೋಬರ್ ನಂತರ ಮಾರ್ಚ್ ತನಕ ಕರ್ಕಾಟಕ ರಾಶಿಯವರು ಶುಭ ಸುದ್ದಿ ನಿರೀಕ್ಷಿಸಬಹುದು.
ಹೆಚ್ಚಿನ ಬಡ್ಡಿ ಆಸೆಗೆ ಹಣವನ್ನು ಸಾಲ ಕೊಡಬೇಡಿ
ಕರ್ಕಾಟಕ ರಾಶಿಯವರು ಮಾನಸಿಕ ಒತ್ತಡಕ್ಕೆ ಸಿಲುಕಿದರೆ, ಬಾಳ ಸಂಗಾತಿ ಜತೆಗೆ ಪದೇಪದೇ ಜಗಳ ಆಗುತ್ತಿದೆ ಅಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಮುಖ್ಯವಾಗಿ ಮಾತು ಮುಂದುವರಿಸಬೇಡಿ. ಇಲ್ಲದ್ದನ್ನು ಕಲ್ಪಿಸಿಕೊಳ್ಳದಿದ್ದರೆ ಅರ್ಧ ಸಮಸ್ಯೆ ನಿವಾರಣೆ ಆದಂತೆಯೇ. 2018ರ ಮಾರ್ಚ್- ಏಪ್ರಿಲ್ ನಲ್ಲಿ ಹೆಚ್ಚಿನ ಬಡ್ಡಿ ಆಸೆಗೆ ಯಾರಿಗೂ ಹಣ ನೀಡಬೇಡಿ. ನೀವು ಬುದ್ಧಿವಂತರೇನೋ ನಿಜ. ಆದರೆ ಗ್ರಹಚಾರ ಯಾರನ್ನು ಬಿಟ್ಟೀತು?