ಧನಸ್ಸು ರಾಶಿಯವರಿಗೀಗ ಶನಿಬಲ, ಮುಟ್ಟಿದ್ದೆಲ್ಲ ಚಿನ್ನ
ದೈವ ಪ್ರಭಾವ ಅರಿವಿರದ ಮೂಢರು, "ಏನ್ರೀ ಸಾಮಿ, ಎಲ್ಲ ರಾಶಿಗಳವರ ಬಗ್ಗೆ ಕೆಟ್ಟದ್ದೇ ಹೇಳ್ತಿರಲ್ಲ, ಶನಿರಾಜರಿಂದ ಯಾವ ರಾಶಿಯವರಿಗೂ ಒಳ್ಳೆಯದೇ ಆಗಲ್ವಾ" ಎಂದು ಕೇಳುತ್ತಾರೆ. ಇಂಥ ಪ್ರಶ್ನೆ ನಿಮ್ಮಲ್ಲೂ ಮೂಡಿದ್ದರೆ, "ಸಾಡೇಸಾತಿ ಎಂದರೇನು" ಎಂಬ ಲೇಖನದಿಂದ ಮತ್ತೊಮ್ಮೆ ಓದಿಕೊಂಡು ಶನಿದೇವನ ಪ್ರಭಾವ ಅರ್ಥೈಸಿಕೊಳ್ಳಿ. ನಿಮ್ಮಲ್ಲಿ ತಿಳಿವಳಿಕೆ ಇದ್ದರೆ ನಿಮ್ಮ ಪ್ರಶ್ನೆಗೆ ಪರಿಪೂರ್ಣ ಉತ್ತರ ಸಿಗುತ್ತದೆ.
ಯಾಕೆಂದರೆ ಶನಿದೇವನ ಪ್ರಭಾವ ಯಾವ ರಾಶಿಯವರಿಗೆ ಹೇಗಿದೆಯೊ ಹಾಗೆಯೇ ಹೇಳಬೇಕಾಗುತ್ತದೆ. ಅವನ ಪ್ರಭಾವ ಮರೆಮಾಚಿ ಬೇರೆ ರೀತಿ ಹೇಳಲು ಸಾಧ್ಯವೇ ಇಲ್ಲ. ಅಂತೂ ಹೇಳಿದರೆನ್ನಿ. ಹೇಳಿದವರ ಅಧೋಗತಿ ತಪ್ಪಿದ್ದಲ್ಲ. ಕೆಲ ಮಹಾನ್ ಪಂಡಿತರು ಯಾವ ಶನಿ? ಎಂದು ಮಹಾತ್ಮನಿಗೆ ತೊಡೆ ತಟ್ಟಿ, ಸೆಡ್ಡು ಹೊಡೆದು ಶನಿಪ್ರಭಾವವನ್ನೇ ಅಣುಕಿಸುತ್ತಾರೆ. ಆದರೆ ಅವರವರ ಕರ್ಮ ಅನುಭವಿಸುತ್ತಾರೆ ಬಿಡಿ ಎನ್ನಬೇಕಾಗುತ್ತದೆ.
ಶನಿಮಹಾತ್ಮನಿಲ್ಲದೆ ಜೀವನವೆ ಇಲ್ಲ. ಅವನಿಲ್ಲದಿದ್ದರೆ ಇಡೀ ಸಮಾಜದಲ್ಲಿ ಬರಿ ಕೆಟ್ಟವರೆ ತುಂಬಿ ತುಳುಕುತ್ತಿದ್ದರು. ಎಲ್ಲೆಡೆ ಮೋಸ ಮಾಡೋದು, ಸುಳ್ಳು ಹೇಳೋದು, ಕಳ್ಳತನ ಮಾಡೋದು, ನಂಬಿಸಿ ಕುತ್ತಿಗೆ ಕೊಯ್ಯೋದು, ಹುಡುಗಿಯರಿಗೆ ಫ್ಲರ್ಟ್ ಮಾಡೋದು ಹೇಗೆ ಎಂದು ಕಲಿಸುವ ಸಾಕಷ್ಟು ಸ್ಕೂಲ್ಗಳು ಹುಟ್ಟಿಕೊಳ್ಳುತ್ತಿದ್ದವು. ಅದೂ ಅಲ್ಲದೆ ಅಪರಾಧ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿಕೊಡಿ ಎಂದು ದೊಡ್ಡ ದೊಡ್ಡ ಅಪರಾಧಿಗಳಿಗೆ ಎಲ್ಲರೂ ಬೆನ್ನು ಬೀಳುತ್ತಿದ್ದರು. ಆದರೆ ಕಾನೂನಿನಿಂದ ತಪ್ಪಿಸಿಕೊಂಡರೂ ಶನಿದೇವನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವನಂತೂ ಅಪರಾಧಿಗಳ ಬೆನ್ನು ಬಿಡುವುದೇ ಇಲ್ಲ. ಬೆನ್ನೇರಿ ಕುಳಿತು ಅವರನ್ನು ಕುಕ್ಕರಿಸಿ ಬಿಡುತ್ತಾನೆ.
ಶನಿದೇವನ ಶಿಕ್ಷೆ ಶತಸಿದ್ಧವಾಗಿರುವುದರಿಂದ ಕೆಟ್ಟತನಕ್ಕೆ ಉಳಿಗಾಲವಿಲ್ಲವೆಂದು ಎಲ್ಲರೂ ಅರಿತುಕೊಂಡಿರುವುದರಿಂದ ನಮ್ಮ ಸಮಾಜ ಸಮಾಧಾನದಿಂದಿದೆ. ಆದರೂ ಮಾನವೀಯತೆ ಇಲ್ಲದ ಕೆಲ ದೊಡ್ಡವರು ಶನಿದೇವನ ಭಯವಿಲ್ಲದೆ ಕೆಟ್ಟತನ ಮಾಡುತ್ತಲೆ ಇದ್ದಾರೆ. ಸುಳ್ಳು, ಮೋಸ, ವಂಚನೆ ಮಾಡುವುದು ಕೂಡ ಒಂದು ಉತ್ತಮವಾದ ಕಲೆ ಎಂದು ಅಂದುಕೊಂಡಿದ್ದಾರೆ. ಸತ್ಯ, ನ್ಯಾಯ, ನೀತಿ, ಧರ್ಮದಿಂದ ಜೀವಿಸುವವರನ್ನು ಮೂರ್ಖರಂತೆ ನೋಡುತ್ತಿರುತ್ತಾರೆ. ಅಂಥವರು ಯಾರೆಂದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅವರ ಪ್ರಭಾವದ ಮುಂದೆ ಏನೂ ಮಾಡಲು ಆಗುವುದಿಲ್ಲ. ಅಂಥವರಿಗೆ ಶನಿದೇವನೇ ಬರೋಬ್ಬರಿ ಪಾಠ ಕಲಿಸುತ್ತಾನೆ. "ಮುಳ್ಳನ್ನು ಮುಳ್ಳಿನಿಂದಲೇ" ತೆಗೆಯಬೇಕು ಎಂಬ ಮಾತು ಇಂಥದಕ್ಕೆಂದೇ ಹುಟ್ಟಿಕೊಂಡಿದೆ. ಶನಿದೇವನ ಪಾಶದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕೆಂದೆ "ಉರೀರಿ ಎಷ್ಟು ಉರೀತೀರಿ, ಒನ್ ಫೈನ್ ಮಾರ್ನಿಂಗ್" ಬರುತ್ತೆ ಎನ್ನುತ್ತಾರೆ ದೊಡ್ಡವರಿಂದ ನೊಂದವರು. ಎಲ್ಲಾ ನಮ್ಮ ಕಣ್ಣೆದುರೆ ನೋಡುತ್ತೇವೆ.
ಪೂರ್ವಾಷಾಢ, ಉತ್ತರಾಷಾಡ 1, 2ನೇ ಪಾದ ಹಾಗೂ ಮೂಲಾ ನಕ್ಷತ್ರದಲ್ಲಿ ಜನಿಸಿದವರು ಧನಸ್ಸು ರಾಶಿಯವರಾಗುತ್ತಾರೆ. ಶನಿರಾಜನು ಇವರಿಗೆ 11ನೇ ಸ್ಥಾನದಲ್ಲಿದ್ದು ಲಾಭದಾಯಕನಾಗಿದ್ದಾನೆ. ಕೆಲ ತಿಂಗಳುಗಳಲ್ಲಿ 12ನೇ ಸ್ಥಾನಕ್ಕೆ ಬರುವ ಶನಿದೇವನು ಸಾಡೇಸಾತಿಯಾಗಿ ಧನಸ್ಸು ರಾಶಿಗೆ ವಕ್ಕರಿಸಲಿದ್ದಾನೆ. (ಈಗ ವೃಶ್ಚಿಕ ರಾಶಿಗೆ 12ನೇ ಸ್ಥಾನದಲ್ಲಿದ್ದಾನೆ). ಆದರೆ ಒಂದು ವಿಶೇಷ ಸಂಗತಿಯೆಂದರೆ ಸಾಡೇಸಾತಿಯಾಗಿ ಬರುವ 6 ತಿಂಗಳು ಮೊದಲೇ ಶನಿದೇವನು ಧನಸ್ಸು ರಾಶಿಯವರಿಗೆ ತನ್ನ ಪ್ರಭಾವ ತೋರಿಸುತ್ತಾನೆ. ಆದ್ದರಿಂದ ಈ ರಾಶಿಯವರು ತಮ್ಮ ಜಾತಕದ ಮೂಲಕ ಮೊದಲೇ ತಮ್ಮ ದಶಾ-ಭುಕ್ತಿ ಹೇಗಿದೆ ಎಂದು ತಿಳಿದುಕೊಂಡು ಮುಂಜಾಗೃತೆ ವಹಿಸಿಕೊಳ್ಳಬೇಕು. "ಟೈಮ್ ಚೆನ್ನಾಗಿದೆ" ಎಂದು ಅನ್ಯಾಯದ ಕೆಲಸ ಮಾಡುತ್ತಿರುವವರಿಗೆ ಶನಿದೇವನು ಬರುತ್ತಿದ್ದಾನೆ ಅವರ ಜೀವನ ಹದಗೆಡಿಸಲು. ಅಂಥವರೇನಾದರೂ ಧನಸ್ಸು ರಾಶಿಯವರಿದ್ದರೆ ಅವರಿಗೆ "ಕೇಡುಗಾಲ ಬರುತ್ತಿದೆ" ಎಂದರ್ಥ.
ಈಗಂತೂ ಧನಸ್ಸು ರಾಶಿಯವರನ್ನು ಮಾತನಾಡಿಸುವ ಹಾಗೆ ಇಲ್ಲ. ಯಾಕೆಂದರೆ ಅಷ್ಟೊಂದು ಬಿಜಿಯಾಗಿರುತ್ತಾರೆ ಎನ್ನಬಹುದು. ಸ್ನೇಹಿತರಿಂದ ಹಾಗೂ ಪಾಲುದಾರಿಕೆಯಿಂದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಯಸಿದ್ದೆಲ್ಲವೂ ಸಿಗುತ್ತಿದೆ. ಎಲ್ಲ ಆಸೆ, ಕನಸು ಈಡೇರಿಸಿಕೊಳ್ಳುತ್ತ ಜೀವನದಾನಂದ ಅನುಭವಿಸುವ ಸುಸಮಯ ಧನಸ್ಸು ರಾಶಿಯವರಿಗೆ. ಹೀಗಾಗಿ ಈ ಉತ್ತಮ ಸಮಯದಲ್ಲಿ ಹಣ ಕೂಡಿಟ್ಟುಕೊಳ್ಳಬಹುದು ಅಥವಾ ಹೂಡಿಕೆ ಮಾಡಬಹುದು. ಇದು ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ. ಇವರಿಗ್ಯಾರ ಭಯವೂ ಇರುವುದಿಲ್ಲ. ಶನಿದೇವನ ಅಭಯಹಸ್ತವೇ ಇವರಿಗಿದೆ ಈಗ.
ಈಗ ಶನಿದೇವನು ತುಲಾ ರಾಶಿಯಲ್ಲಿ ಉಚ್ಚನಾಗಿರುವುದರಿಂದ ಧನಸ್ಸು ರಾಶಿಯವರಿಗೆ ಎಲ್ಲ ರೀತಿಯ ಸೌಖ್ಯ ಸಿಗುತ್ತಿದೆ. ಸರಕಾರದಿಂದ ಕೆಲವರಿಗೆ ಲಾಭ ಸಿಗುತ್ತಿದ್ದರೆ, ಆರೋಗ್ಯವೂ ಚೆನ್ನಾಗಿರುತ್ತದೆ. ಕೀರ್ತಿವಂತರಾಗುವ ಸಮಯವಿದು. ಇವರಿಗೆ 2 ವರ್ಷಗಳಿಂದ ತುಂಬಾ ಲಕ್ಕಿ ಟೈಮ್ ಇದೆ ಎನ್ನಬಹುದು. "ಲಕ್" ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಈಗ ಧನಸ್ಸು ರಾಶಿಯವರನ್ನು ಕೇಳಿಕೊಳ್ಳಬಹದು.
ಇದನ್ನು ಅರ್ಥ ಮಾಡಿಕೊಂಡು ಬೇಕಾದ್ದನ್ನು ಸಾಧಿಸಿಕೊಂಡು ಬುದ್ಧಿವಂತರೆನಿಸಿಕೊಳ್ಳಬೇಕು. ಒಳ್ಳೆಯ ಟೈಮ್ ಯಾವಾಗ ಬರುತ್ತಾಪ್ಪಾ ಎಂದು ಕಾಯುತ್ತಿದ್ದವರಿಗೆ ಇದೇ ಒಳ್ಳೆಯ ಟೈಮ್. ಶತ್ರುಗಳೂ ಕೂಡ ಸ್ನೇಹದ ಹಸ್ತ ಚಾಚುತ್ತಾರೆ. ವಿದ್ಯಾರ್ಥಿಗಳಿಗೆ ತುಂಬಾ ಶುಭಕರ ಈ ಸಮಯ. ಯಾವುದಕ್ಕೂ ಇನ್ನೂ ಕೆಲ ತಿಂಗಳುಗಳು ಕಾಲ ಶನಿದೇವನು ಶುಭಫಲ ನೀಡುವುದರಿಂದ ಧನಸ್ಸು ರಾಶಿಯವರು ಸದುಪಯೋಗ ಪಡಿಸಿಕೊಳ್ಳಬೇಕು. ಏಕೆಂದರೆ ಶನಿದೇವನ ಸಾಡೇಸಾತಿ ಆರಂಭವಾಗುವ ಸಮಯ ಹತ್ತಿರದಲ್ಲಿಯೇ ಇದೆ!
ಶನಿದೇವನು ಕೇವಲ ಕೆಟ್ಟದ್ದನ್ನೆ ಮಾಡುತ್ತಾನಾ ಎಂದು ಕೇಳುವವರಿಗೆ ಧನಸ್ಸು ರಾಶಿಯವರಿಗೆ ಅವನೆಷ್ಟು ಒಳ್ಳೆಯದನ್ನು ಮಾಡಿದ್ದಾನೆ ಎಂದು ಕೇಳಿಕೊಳ್ಳಿ. ಗೊತ್ತಾಗತ್ತೆ ಶನಿದೇವನ ವರಪ್ರಸಾದ ಯಾವ ರೀತಿ ಇರುತ್ತದೆ ಎಂದು. ಧನಸ್ಸು ರಾಶಿಯವರು ಈ ಸುಖಕರ ಸಮಯ ಹೀಗೆ ಇರಬೇಕೆಂದರೆ ಶನಿಕೃಪೆಯನ್ನು ಪಡೆದುಕೊಳ್ಳಬೇಕು. ಮಹಾತ್ಮನು "ಕೊಟ್ಟು ನೋಡುತ್ತಾನೆ, ಕಸಿದುಕೊಂಡು ನೋಡುತ್ತಾನೆ" ಎಂಬ ಮಾತು ಈಗ ಪಡೆದುಕೊಳ್ಳುತ್ತಿರುವ ಧನಸ್ಸು ಹಾಗೂ ಕಳೆದುಕೊಳ್ಳುತ್ತಿರುವ ವೃಶ್ಚಿಕ ರಾಶಿಯವರನ್ನು ಕೇಳಿದರೆ ಗೊತ್ತಾಗುತ್ತದೆ ಶನಿಪ್ರಭಾವ.
ಖರ್ಚಿಲ್ಲದೇ ಶನಿಕೃಪೆ ಪಡೆದುಕೊಳ್ಳಬೇಕೆನ್ನುವವರು ಈ ಹಿಂದಿನ ಲೇಖನಗಳಲ್ಲಿರುವ "ಶನಿಕೃಪೆ"ಯಲ್ಲಿರುವಂತೆ ಮಾಡಿ.
ಮಕರ ರಾಶಿಗೆ ಶನಿಪ್ರಭಾವ ಹೇಗೆ? ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮಲಗುವ ಮಂಚ ದಕ್ಷಿಣ ಮತ್ತು ಪಶ್ಚಿಮ ಗೋಡೆಗೆ ಮಾತ್ರ ತಗುಲುವಂತಿರಬೇಕು.
ಶನಿದೇವನ ಕೃಪೆಗೆ : ಶನಿವಾರದಂದು ಎಳ್ಳೆಣ್ಣೆ ಸ್ನಾನ ಮಾಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)