ಮದುವೆಯಿಂದ ಉದ್ಯೋಗದವರೆಗೆ ಸಿಂಪಲ್ ಜ್ಯೋತಿಷ್ಯ ಪರಿಹಾರ!
ಹಲವು ಮಂದಿಗೆ ತಮ್ಮ ಜನ್ಮ ದಿನಾಂಕ, ಸಮಯ ಗೊತ್ತಿರುವುದಿಲ್ಲ. ಇನ್ನೂ ಕೆಲವರಿಗೆ ತಮ್ಮ ಜನ್ಮ ಸ್ಥಳದ ಬಗ್ಗೆ ಕೂಡ ಖಚಿತವಾದ ಮಾಹಿತಿ ಇರುವುದಿಲ್ಲ. ಆದರೆ ಯಾವುದೋ ಒಂದು ಸಮಸ್ಯೆಗೆ ಸಿಲುಕಿಕೊಂಡು, ಜ್ಯೋತಿಷಿಗಳ ಬಳಿ ಪರಿಹಾರ ಕೇಳುವ ಸಲುವಾಗಿ ಹೋದಾಗ ಜನ್ಮ ದಿನಾಂಕ, ವರ್ಷ, ಸ್ಥಳ, ಸಮಯ ಇತ್ಯಾದಿಯನ್ನು ಕೇಳುತ್ತಾರೆ.
ಏಕೆಂದರೆ, ಯಾವುದೇ ವ್ಯಕ್ತಿಯ ಜಾತಕ ಸಿದ್ಧಪಡಿಸುವುದಕ್ಕೆ ಇವೆಲ್ಲ ಬೇಕಾಗುತ್ತವೆ. ಎಲ್ಲ ಮಾಹಿತಿ ಪಡೆದು, ಜಾತಕ ಸಿದ್ಧಪಡಿಸಿ ಪರಿಹಾರ ಹೇಳಬೇಕು ಎಂಬುದು ಅವರ ಉದ್ದೇಶ ಆಗಿರುತ್ತದೆ. ಆದರೆ ಮುಖ್ಯ ಮಾಹಿತಿ ಇಲ್ಲದಿದ್ದಾಗ ಸಮಸ್ಯೆಗೆ ಪರಿಹಾರ ಸೂಚಿಸುವುದಾದರೂ ಹೇಗೆ ಎಂಬುದು ಬಹುತೇಕರ ಪ್ರಶ್ನೆ.
ಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರ
ಅದಕ್ಕಾಗಿಯೇ ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಎಲ್ಲರಿಗೂ ಅನ್ವಯಿಸುವಂಥ ಪರಿಹಾರವನ್ನು ಇಂದು ಸೂಚಿಸಲಾಗುತ್ತಿದೆ. ರಾಶಿ- ನಕ್ಷತ್ರ ಅಥವಾ ಜಾತಕ ಯಾವುದೂ ಇಲ್ಲದಂಥವರು ಈ ಪರಿಹಾರವನ್ನು ಮಾಡಿಕೊಂಡು, ಸಮಸ್ಯೆಯಿಂದ ಮುಕ್ತರಾಗಬಹುದು. ಏನು ಆ ಪರಿಹಾರಗಳು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮಾರಾಟ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಹೀಗೆ ಮಾಡಿ
ಬಹಳ ಮಂದಿಗೆ ತಮ್ಮ ವ್ಯಾಪಾರದಲ್ಲಿ ಮಾರಾಟ ಕುಸಿಯುತ್ತಿದೆ ಅಂತಲೋ ಅಥವಾ ಮುಂಚಿನಷ್ಟು ಆಗುತ್ತಿಲ್ಲ ಅಂತಲೋ ಅಥವಾ ಹೇಗಾದರೂ ಮಾರಾಟ ಹೆಚ್ಚು ಮಾಡಲೇಬೇಕು ಎಂಬ ಒತ್ತಡವೋ ಏರ್ಪಟ್ಟಿರಬಹುದು. ಅಂಥವರು ಶುಕ್ಲ ಪಕ್ಷದ ಶನಿವಾರದ ಸಂಜೆ ನಿಂಬೆಹಣ್ಣಿನ ರಸವನ್ನು ಒಂದು ಬಟ್ಟಲು ಅಥವಾ ತಂಬಿಗೆಗೆ ಹಿಂಡಿಕೊಳ್ಳಿ. ಅದನ್ನು ನಿಮ್ಮ ಮಳಿಗೆ ಅಥವಾ ಕಚೇರಿ ಅಥವಾ ಕಾರ್ಖಾನೆಯಲ್ಲಿ ಚಿಮುಕಿಸಿ. ಉಳಿದ ನಿಂಬೆ ರಸವನ್ನು ಮಣ್ಣಿರುವ ಜಾಗದಲ್ಲಿ ಚೆಲ್ಲಿ. ಹಾಗೆ ಮಾಡುವುದರಿಂದ ದೃಷ್ಟಿ ದೋಷ ಮತ್ತಿತರ ದೋಷಗಳು ಆಗಿದ್ದರೆ ಅದರ ನಿವಾರಣೆ ಆಗಿ, ಹಲವು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ.
ಉದ್ಯೋಗ ಸಮಸ್ಯೆಗೆ ಪರಿಹಾರ
ತುಂಬ ಪ್ರಾಮಾಣಿಕ ಪ್ರಯತ್ನ ಮಾಡಿದ ನಂತರವೂ ಉದ್ಯೋಗ ಗಿಟ್ಟಿಸುವುದಕ್ಕೆ ಆಗುತ್ತಿಲ್ಲವೆ? ಹಾಗಿದ್ದರೆ ಈ ಪರಿಹಾರವನ್ನು ಪ್ರಯತ್ನಿಸಿ. ನಾಲ್ಕು ರಸ್ತೆ ಕೂಡುವ ಜಾಗಕ್ಕೆ ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹೋಗಿ. ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ನೆನಪಿಸಿಕೊಳ್ಳಿ. ಒಂದು ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ, ನಾಲ್ಕು ರಸ್ತೆಗೆ ಎಸೆದು ಬನ್ನಿ. ಹ್ಞಾಂ, ಒಂದು ಮಾತು. ಹಾಗೆ ನಿಂಬೆಹಣ್ಣು ನಾಲ್ಕು ರಸ್ತೆಗೆ ಎಸೆದ ಮೇಲೆ ಅಲ್ಲಿ ನಿಲ್ಲಬೇಡಿ. ಸೀದಾ ಮನೆಗೆ ಬಂದು ಬಿಡಿ. ಇದೇ ರೀತಿ ಏಳು ದಿನಗಳ ಕಾಲ ಸತವಾಗಿ ಸೂರ್ಯೋದಯಕ್ಕೆ ಮುಂಚೆ ಮಾಡಬೇಕು.
ಲಕ್ಷ್ಮಿ ಅನುಗ್ರಹ, ಹಣಕಾಸು ಸ್ಥಿತಿ ಉತ್ತಮವಾಗಲು...
ಶುಕ್ಲ ಪಕ್ಷದ ಗುರುವಾರದಂದು ಏಳು ಗೋಮತಿ ಚಕ್ರ, ಏಳು ಸ್ಪಟಿಕ, ಹನ್ನೊಂದು ಕವಡೆಯನ್ನು ತೆಗೆದುಕೊಳ್ಳಿ. ಎಲ್ಲದಕ್ಕೂ ಅರಿಶಿನ- ಕುಂಕುಮ ಹಚ್ಚಿ. ಅವುಗಳನ್ನೆಲ್ಲ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ. ಆ ನಂತರ ಒಂದು ಅರಿಶಿನದ ಬಟ್ಟೆಯಲ್ಲಿ ಅವೆಲ್ಲವನ್ನೂ ಕಟ್ಟಿ, ಗಲ್ಲಾ ಪೆಟ್ಟಿಗೆಯಲ್ಲಿ ಇಡಿ. ಇದರಿಂದ ಹಣಕಾಸಿನ ಸಮಸ್ಯೆ ನಿವಾರಣೆ ಆಗಿ, ಲಕ್ಷ್ಮಿ ಅನುಗ್ರಹ ಆಗುತ್ತದೆ.
ಮಾತಿಗೆ ಸಂಬಂಧಿಸಿದ ತೊಂದರೆ ನಿವಾರಣೆಗೆ
ಯಾರಿಗೆ ಮಾತಿಗೆ ಸಂಬಂಧಿಸಿದ ತೊಂದರೆಗಳಿರುತ್ತವೋ, ಅಂದರೆ ತೊದಲಿನಂಥ ಸಮಸ್ಯೆ ಇರುವವರು ಶಂಖದಲ್ಲಿ ನೀರನ್ನು ಹಾಕಿಟ್ಟು ಬೆಳಗ್ಗೆ ಹಾಗೂ ಸಂಜೆ ಕುಡಿಯಬೇಕು. ಇನ್ನು ಶುಕ್ಲಪಕ್ಷದ ಬುಧವಾರದಂದು ಹನ್ನೊಂದು ಕವಡೆಗಳನ್ನು ಬೂದಿ ಆಗುವ ತನಕ ಸುಟ್ಟು, ಆ ನಂತರ ಬೂದಿಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಹೀಗೆ ಐದು ಬುಧವಾರ ಮಾಡಬೇಕು. ಈ ಪರಿಹಾರವನ್ನು ದೀಪಾವಳಿಯಂದು ಮಾಡಬಹುದು.
ಸುಖ ವೈವಾಹಿಕ ಜೀವನಕ್ಕೆ
ವೈವಾಹಿಕ ಸಂಬಂಧಗಳಲ್ಲಿ ಈಚೆಗೆ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ದಂಪತಿ ಮಧ್ಯೆ ನೆಮ್ಮದಿಯೇ ಹಾಳಾಗುತ್ತಿದೆ. ಅಂಥ ಸಮಸ್ಯೆ ಇದ್ದಲ್ಲಿ ಶುಕ್ಲ ಪಕ್ಷದಲ್ಲಿ ಹನ್ನೊಂದು ಗೋಮತಿ ಚಕ್ರವನ್ನು ಒಂದು ಕೆಂಪು ಪೆಟ್ಟಿಗೆಯಲ್ಲಿ ಹಾಕಿ. ಅದನ್ನು ಮನೆಯಲ್ಲಿ ಇಡಿ. ಇದರಿಂದ ಕುಟುಂಬದಲ್ಲಿ ದೀರ್ಘಾವಧಿಗೆ ನೆಮ್ಮದಿ- ಸಂತೋಷ ನೆಲೆಸುತ್ತದೆ.
ವಿವಾಹ ವಿಳಂಬ ಸಮಸ್ಯೆಗೆ ಪರಿಹಾರ
ಮದುವೆ ಪ್ರಸ್ತಾವಗಳು ಬರುತ್ತವೆ. ಆದರೆ ಅವು ಮುಂದುವರಿಯುತ್ತಿಲ್ಲ ಎಂಬ ಚಿಂತೆ ನಿಮ್ಮದಾಗಿದ್ದರೆ, ಯಾವ ಯುವಕ ಅಥವಾ ಯುವತಿಗೆ ಸಮಸ್ಯೆ ಆಗುತ್ತಿದೆಯೋ ಅಂಥವರಿಗೆ, ಶನಿವಾರ ಸಂಜೆಯ ಸಮಯದಲ್ಲಿ ಏಳು ಒಣಕೊಬ್ಬರಿಯನ್ನು ತೆಗೆದುಕೊಂಡು, ಅವರ ತಲೆ ಸುತ್ತ ಸುತ್ತುಬರಿಸಿ, ಆ ನಂತರ ಹರಿಯುವ ನದಿಯಲ್ಲಿ ಬಿಡಬೇಕು. ಹೀಗೆ ಏಳು ಶನಿವಾರಗಳಂದು ಮಾಡಬೇಕು.
ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕೆ..
ಗ್ರಾಹಕರ ಸಂಖ್ಯೆ ಹೆಚ್ಚಳ ಆಗಬೇಕು ಅನ್ನೋದು ನಿಮ್ಮ ಉದ್ದೇಶ ಆದರೆ ಒಂದು ಉಂಡೆ ಅಡಿಕೆ, ತಾಮ್ರದ ನಾಣ್ಯ, ಏಳು ಗೋಮತಿ ಚಕ್ರವನ್ನು ದೀಪಾವಳಿ ರಾತ್ರಿ ಅಥನಾ ಗ್ರಹಣದ ದಿನಗಳಂದು ತೆಗೆದುಕೊಂಡು, ಆ ನಂತರ ಎಲ್ಲವನ್ನೂ ಒಟ್ಟು ಮಾಡಿ, ಅಶ್ವತ್ಥ ಮರದ ಕೆಳಗೆ ಇಟ್ಟುಬನ್ನಿ. ಆ ನಂತರ ಬರುವ ಸೋಮವಾರದಂದು ಆ ಮರದ ಎಲೆಯನ್ನು ತಂದು ಮಳಿಗೆಯ ಗಲ್ಲಾ ಪೆಟ್ಟಿಗೆಯಲ್ಲೋ ಅಥವಾ ಗ್ರಾಹಕರೂ ಕೂರುವ ಕುರ್ಚಿಯ ಕುಷನ್ ಕೆಳಗೆ ಇಡಿ.
ವಾಮಾಚಾರ ಪ್ರಯೋಗ ನಿವಾರಣೆಗೆ ಹೀಗೆ ಮಾಡಿ
ಬುಧವಾರದಂದು ಎಂಟು ಗೋಮತಿ ಚಕ್ರ ತೆಗೆದುಕೊಂಡು, ಎರಡು ಗೋಮತಿ ಚಕ್ರವನ್ನು ನಿಮ್ಮ ತಲೆ ಸುತ್ತ ಸುತ್ತುಬರಿಸಿ, ಒಂದು ದಿಕ್ಕಿಗೆ ಎಸೆಯಿರಿ. ಅದೇ ರೀತಿ ಬೇರೆ ಗೋಮತಿ ಚಕ್ರಗಳನ್ನೂ ಮಾಡಿ ನಾಲ್ಕು ದಿಕ್ಕಿಗೆ ಎಸೆಯಿರಿ. ಹೀಗೆ ಮಾಡುವುದರಿಂದ ವಾಮಾಚಾರ ಪ್ರಯೋಗಗಳು ನಡೆದಿದ್ದರೆ ಪರಿಹಾರ ಆಗುತ್ತದೆ.
ಶೀಘ್ರ ಆರೋಗ್ಯ ಸುಧಾರಣೆಗಾಗಿ
ರೋಗಿಯು ಔಷಧಗಳನ್ನು ತೆಗೆದುಕೊಂಡ ನಂತರವೂ ಚೇತರಿಕೆ ಕಾಣದಿದ್ದಲ್ಲಿ ಹನ್ನೊಂದು ಗೋಮತಿ ಚಕ್ರಗಳನ್ನು ಆ ರೋಗಿಯ ತಲೆ ಸುತ್ತ ಸುತ್ತುಬರಿಸಿ, ಅವುಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ನೀರಿಗೆ ಬಿಡುವ ಸಂದರ್ಭದಲ್ಲಿ ಆ ರೋಗಿಯು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ. ಹಾಗೆ ಮಾಡಿದರೆ ಬೇಗ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಹೀಗೆ ಸತತ ಐದು ಸೋಮವಾರದಂದು ಮಾಡಬೇಕು. ಇದನ್ನು ಮಾಡುತ್ತಿದ್ದೇವೆ ಎಂದು ಯಾವುದೇ ಕಾರಣಕ್ಕೂ ರೋಗಿಗೆ ನೀಡುವ ಔಷಧಗಳನ್ನು ನಿಲ್ಲಿಸಬಾರದು.
ಒಳ್ಳೆ ವ್ಯಾಪಾರ ಆಗುವುದಕ್ಕೆ ಹೀಗೆ ಮಾಡಿ
ನಿಮ್ಮ ವೃತ್ತಿ ಅಥವಾ ವ್ಯಾಪಾರದಲ್ಲಿ ವಿಪರೀತ ನಷ್ಟ ಅನುಭವಿಸುತ್ತಿದ್ದರೆ, ನಿಮಗೆ ದೃಷ್ಟಿ ದೋಷ ಆಗಿದ್ದರೆ ಹನ್ನೊಂದು ಗೋಮತಿ ಚಕ್ರವನ್ನು ಕೆಂಪು ಬಟ್ಟೆಯೊಂದರಲ್ಲಿ ಕಟ್ಟಿ, ಅದನ್ನು ಮಳಿಗೆ ಮುಖ್ಯದ್ವಾರದ ಬಳಿ ಅಥವಾ ವಾಸ್ ಕಲ್ಲಿಗೆ ಕಟ್ಟಿ. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.