ಮೌನಿ ಅಮಾವಾಸ್ಯೆ: ನದಿ ಸ್ನಾನ, ವಸ್ತ್ರ ದಾನ, ಮೌನ- ಧ್ಯಾನ ಶ್ರೇಷ್ಠ
ಅಮಾವಾಸ್ಯೆ ಹಾಗೂ ಪೌರ್ಣಮಿಗೆ ವಿಶೇಷ ಸ್ಥಾನವಿದೆ. ಇವೆರಡನ್ನೂ ಪೂರ್ಣ ತಿಥಿ ಎಂದು ಕರೆಯುತ್ತೇವೆ. ಉಳಿದದ್ದನ್ನು ರಿಕ್ತ ತಿಥಿ ಎಂದು ಕರೆಯುತ್ತೇವೆ. ಈ ರೀತಿ ತುಂಬ ವಿಶೇಷ ಎನಿಸುವಂತೆ ವರ್ಷದಲ್ಲಿ ಮೂರು ಅಮಾವಾಸ್ಯೆಗಳಿಗೆ ಪ್ರಾಶಸ್ತ್ಯವಿದೆ.
ಮೊದಲ ವಿಶೇಷ ಶನೈಶ್ಚರ ಅಮಾವಾಸ್ಯೆ, ಎರಡನೆಯದು ಸೋಮವಾರದಂದು ಅಮಾವಾಸ್ಯೆ ಬಂದಾಗ ಹಾಗೂ ಮೂರನೆಯ ವಿಶೇಷ ಮೌನಿ ಅಮಾವಾಸ್ಯೆ
ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?
ಆದರೆ, ಉತ್ತರ ಭಾರತೀಯರ ಮಾಸದ ಲೆಕ್ಕಾಚಾರ ಬೇರೆಯಾದ್ದರಿಂದ ಇದನ್ನು ಮಾಘ ಅಮಾವಾಸ್ಯೆ ಅಂತ ಅವರು ಕರೆಯುತ್ತಾರೆ. ನಮಗೆ ಇದು ಪೌಷ ಮಾಸದ ಅಮಾವಾಸ್ಯೆ. ಈ ಬಾರಿ ಜನವರಿ 16ರಂದು ಮಂಗಳವಾರ ಅಂದರೆ ಇಂದು ಆರಂಭವಾಗಿರುವ ಈ ಅಮಾವಾಸ್ಯೆ ನಾಳೆ (ಬುಧವಾರ) ಬೆಳಗ್ಗೆ ತನಕ ಇರುತ್ತದೆ.
ಮೌನಿ ಅಮಾವಾಸ್ಯೆ ಅಂದರೆ ಅದರ ಹೆಸರೇ ಹೇಳುವಂತೆ ಹೆಚ್ಚು ಮೌನವಾಗಿರಬೇಕು ಎಂಬುದೇ ಈ ದಿನದ ವಿಶೇಷ. ಅಂದರೆ ಇವತ್ತು ಮೌನವಾಗಿದ್ದು, ದೇವರ ಧ್ಯಾನದಲ್ಲಿ ಸಮಯ ಕಳೆಯಬೇಕು. ಮೌನಿ ಅಮಾವಾಸ್ಯೆಯಂದು ನದಿ ಸ್ನಾನ ಶ್ರೇಷ್ಠ. ಅದರಲ್ಲೂ ಸಂಗಮ ಸ್ನಾನಕ್ಕೆ ಹೆಚ್ಚಿನ ಮಹತ್ವ.
ಏಕೆಂದರೆ, ಸಮುದ್ರ ಮಂಥನದ ವೇಳೆಯಲ್ಲಿ ಒಂದೆರಡು ಹನಿ ಅಮೃತ ಸಂಗಮದಲ್ಲಿ ಬಿತ್ತು ಎಂಬುದು ನಂಬಿಕೆ. ಆದ್ದರಿಂದ ಸಂಗಮದಲ್ಲಿನ ಸ್ನಾನ ನಾಲ್ಕೈದು ಪಟ್ಟು ಹೆಚ್ಚು ಫಲ ಕೊಡುತ್ತದೆ. ಆದರೆ ಹುಣ್ಣಿಮೆ- ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಮೌನಿ ಅಮಾವಾಸ್ಯೆಯಂದು ಕಂಬಳಿ, ಹತ್ತಿ ವಸ್ತ್ರಗಳನ್ನು ದಾನ ಮಾಡಿದರೆ ಹೆಚ್ಚು ಫಲ. ಅದರಲ್ಲೂ ಅಶಕ್ತರಿಗೆ, ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿದರೆ ಶ್ರೇಷ್ಠ. ಈ ಮೌನಿ ಅಮಾವಾಸ್ಯೆಯಂದು ಮಹಾವಿಷ್ಣು- ಶಿವನ ಆರಾಧನೆಗೆ ಪ್ರಾಮುಖ್ಯ ಇದೆ. ಕಳಶ ಸ್ವರೂಪದಲ್ಲಿ ಆರಾಧನೆ ಮಾಡಿದರೂ ಸರಿ, ಬೇರೆ ಯಾವುದೇ ರೂಪದಲ್ಲಾದರೂ ಸರಿ ಇಬ್ಬರ ಆರಾಧನೆ ಮಾಡಬೇಕು.