ಎಲ್ಲವನ್ನೂ ಕೊಡುವ ಶನಿದೇವನಿಗೆ ಹೆದರಬೇಕಾಗಿಲ್ಲ
ಹೌದು, ಶನಿಯು ಸಾಡೇಸಾತಿಯ ಅಂತಿಮ ಹಂತದಲ್ಲಿ ತುಂಬಾ ಒಳ್ಳೆಯದನ್ನು ಮಾಡಿ ಹೋಗುತ್ತಾನೆ. ಸಕಲ ಸೌಭಾಗ್ಯ ಕೊಟ್ಟು ದಯಪಾಲಿಸುತ್ತಾನೆ. ಆದರೆ ಶನಿಕೃಪೆಯಿಂದ ಸಿಕ್ಕ ಎಲ್ಲ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಹೋಗಬೇಕು. ಶನಿಗೆ ತುಲಾ ರಾಶಿಯು ಉಚ್ಚ ಕ್ಷೇತ್ರವಾಗಿದ್ದರಿಂದ ಅವರಿಗೆ ಅಷ್ಟೇನೂ ತೊಂದರೆ ಕೊಡದಿದ್ದರೂ, ಕರ್ಮಫಲವಂತೂ ಕೊಟ್ಟೇ ಕೊಡುತ್ತಾನೆ. ಇನ್ನು ಸಾಡೇಸಾತಿಯಲ್ಲಿನ ರಾಶಿಗಳವರು ಕೆಲವು ಮುಂಜಾಗೃತೆಗಳನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಒಳ್ಳೆಯದು.
ದಿನನಿತ್ಯ ಕನಿಷ್ಠ ಪಕ್ಷ 10 ನಿಮಿಷವಾದರೂ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಸಿಟ್ಟನ್ನಂತೂ ಮರೆತೇ ಬಿಡುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ನಮ್ಮ ಸಿಟ್ಟು ನಮಗೇ ಮುಳುವಾಗುವುದು. ಇನ್ನು ಮದ್ಯ-ಮಾಂಸಾಹಾರ ಸೇವನೆಯನ್ನು ಬಿಡಬೇಕು. ಹನುಮಾನ ಚಾಲೀಸಾ ನಿತ್ಯ ಪಠಣ ಮಾಡಲು ಕೇವಲ 5 ನಿಮಿಷವಾಗುತ್ತದೆ, ಪಠಣ ಮಾಡಬೇಕು. ಜೊತೆಗೆ ಮಹಾಮೃತ್ಯುಂಜಯ ಮಂತ್ರವನ್ನು ಪಠಣ ಮಾಡಬೇಕು. ಆದಷ್ಟು ಸಹನೆ ಮತ್ತು ತಾಳ್ಮೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅನ್ಯರೊಂದಿಗೆ ಜಗಳ, ಅಪರಿಚಿತರಿಗೆ ವ್ಯವಹಾರದಲ್ಲಿ ಸಹಾಯ ಅಥವಾ ಜಾಮೀನು ಆಗುವುದು ಬೇಡವೇ ಬೇಡ. ಅನವಶ್ಯಕವಾಗಿ ಸಾಲ ಮಾಡಿ ದುಂದುವೆಚ್ಚ ಮಾಡುವುದನ್ನು ನಿಲ್ಲಿಸಬೇಕು. ಇದ್ದ ಹಣವನ್ನೇ ಕೂಡಿಟ್ಟು, ಖರ್ಚು ಕಮ್ಮಿ ಮಾಡಿಕೊಂಡು ಜೀವನ ನಡೆಸಲು ಪ್ರಯತ್ನಿಸಬೇಕು.
ಕಷ್ಟವಿದೆಯೆಂದು ದೇವರು, ಹಿರಿಯರನ್ನು ನಿಂದಿಸುವುದನ್ನು ಮಾಡಲೇಬೇಡಿ. ನಮ್ಮ ಒಳ್ಳೆಯತನವನ್ನು ಪರೀಕ್ಷೆ ಮಾಡಲು ಶನಿ ಬಂದಿರುವನು ಎಂದು ತಿಳಿದುಕೊಂಡು ಎಂದಿನ ಜೀವನಶೈಲಿಯನ್ನು ನಡೆಸುತ್ತ ಇದ್ದರೆ ಒಳ್ಳೆಯದು. ಆಮೇಲೆ ಅತೀ ಹೆಚ್ಚು ಶನಿ ಮಹಾರಾಜನ ತೊಂದರೆ ಬಗ್ಗೆ ಚಿಂತಿಸದಿರುವುದೇ ಒಳ್ಳೆಯದು. ಇಲ್ಲವಾದಲ್ಲಿ ತೊಂದರೆಗಳು ಉಲ್ಬಣಗೊಂಡು ಮಾನಸಿಕ ನೆಮ್ಮದಿ ಹಾಳಾಗುವುದು ನಮ್ಮದೇ.
ನವಗ್ರಹ ಸ್ತೋತ್ರವನ್ನೂ ಕೂಡ ಪಠಿಸಬಹುದು. ಒಟ್ಟಿನಲ್ಲಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೇ ಎಲ್ಲರೊಂದಿಗೆ ಬೆರೆತು, ಶನಿಕಾಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜಾಗೃತೆಯಿಂದ ಇರುವುದು ಲೇಸು. ಮಂತ್ರಗಳ ಪಠಣದಿಂದ ಮಾನಸಿಕ ಸ್ಥೈರ್ಯ ಹೆಚ್ಚಿ ಬಂದಿರುವ ಮತ್ತು ಬರುವ ಸಮಸ್ಯೆಗಳನ್ನು ಎದುರಿಸುವ ಮನೋಬಲ ಸಹಜವಾಗಿಯೇ ಹೆಚ್ಚಾಗುತ್ತದೆ.
ಶನಿಕೃಪೆಗೆ : ಅಪ್ಪಿತಪ್ಪಿಯೂ ಕೆಟ್ಟಹಾದಿಯಿಂದ ಹಣ ಸಂಪಾದಿಸುವುದು ಬೇಡ. ಆದಷ್ಟು ಅನ್ಯರ ಬಗ್ಗೆ ಚಾಡಿ, ಚುಚ್ಚುಮಾತು ಆಡುವುದು, ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಬೇಕು. ದೈನಂದಿನ ಚಟುವಟಿಕೆಗಳಿಗೆ ದಿನಚರಿ ಪಟ್ಟಿ ಅಳವಡಿಸಿಕೊಳ್ಳಲು ಆರಂಭಿಸಬೇಕು.
ವಾಸ್ತು ಟಿಪ್ಸ್ : ಮನೆಯಲ್ಲಿ ಅನವಶ್ಯಕ ಹಳೆಯ ವಸ್ತುಗಳು ಇರಲೇಬಾರದು, ಉಪಯೋಗಿಸದೇ ವರ್ಷಾನುಗಟ್ಟಲೇ ಮನೆಯಲ್ಲೇ ಬಿದ್ದಿರುವ ಅನುಪಯುಕ್ತ ವಸ್ತುಗಳನ್ನು ಗುಜರಿಗೆ ಹಾಕುವುದೇ ಲೇಸು. ಇನ್ನು ಬಾಗಿಲು, ಕಿಟಕಿಗಳು ತೆರೆಯುವಾಗ ಸದ್ದು ಮಾಡದಂತಿರಬೇಕು. ಆದಷ್ಟು ಮನೆಯಲ್ಲಿ ಜೇಡರಬಲೆ ಮುಂತಾದ ಹುಳುಗಳಿಗೆ ಮನೆ ಮಾಡಲು ಜಾಗ ಕೊಡಬಾರದು. [ಲೇಖಕರ ಮೊಬೈಲ್ : 9481522011]