ಮೇಷ ರಾಶಿಯವರಿಗೆ ಗುರು, ಶನಿಯಿಂದ ಆಗುವ ಪರಿಣಾಮಗಳಿವು
Recommended Video
ಅಕ್ಟೋಬರ್ 11ಕ್ಕೆ ಗುರು ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶ ಮಾಡುವ ವಿಚಾರ ನಿಮಗೆ ಈಗಾಗಲೇ ಗೊತ್ತಾಗಿರಬಹುದು. ತುಲಾ ರಾಶಿಯಲ್ಲಿ ಕಳೆದ ಒಂದು ವರ್ಷದಿಂದ ಸಂಚಾರದಲ್ಲಿ ಬೃಹಸ್ಪತಿ ಈಗ ವೃಶ್ಚಿಕವನ್ನು ಪ್ರವೇಶಿಸಲಿದ್ದಾನೆ. ಅಲ್ಲಿಗೆ ಪ್ರವೇಶಿಸುವ ಗುರು ನೀಡುವ ಶುಭಾಶುಭ ಫಲಗಳ ಬಗ್ಗೆ ಕೂಡ ಒನ್ಇಂಡಿಯಾ ಕನ್ನಡದಲ್ಲೇ ಓದಿರುತ್ತೀರಿ.
ಈಗ ನಾನು ನಿಮಗೆ ತಿಳಿಸಲು ಹೊರಟಿರುವುದು ಗುರು ಹಾಗೂ ಶನಿ ಎರಡೂ ಗ್ರಹಗಳ ಸಂಚಾರದ ಫಲ ಮಾಹಿತಿ. ಸದ್ಯಕ್ಕೆ ಶನಿ ಧನುಸ್ಸು ರಾಶಿಯಲ್ಲಿದ್ದು, 2020ರ ಜನವರಿ ತನಕ ಅಲ್ಲೇ ಇರುತ್ತದೆ. ಇನ್ನು ಒಂದು ವರ್ಷದಲ್ಲಿ ವೃಶ್ಚಿಕದ ಗುರು ಹಾಗೂ ಧನು ರಾಶಿಯ ಶನಿ ಯಾವ ರಾಶಿಗೆ ಯಾವ ಫಲ ನೀಡಲಿದ್ದಾರೆ ಎಂಬುದನ್ನು ತಿಳಿಸಲಾಗುತ್ತಿದೆ.
ಅಕ್ಟೋಬರ್ 11ಕ್ಕೆ ವೃಶ್ಚಿಕಕ್ಕೆ ಗುರು ಗ್ರಹ ಪ್ರವೇಶ: ದ್ವಾದಶ ರಾಶಿ ಫಲ ವಿಶೇಷ
ಕೇವಲ ಗುರು ಸಂಚಾರ ಒಂದೇ ಅಲ್ಲದೇ ಶನಿಯ ಸ್ಥಾನ ಹಾಗೂ ಗುರು ಸಂಚಾರ ಈ ಎರಡೂ ವಿಚಾರಗಳನ್ನು ಒಟ್ಟಿಗೆ ನಾವು ಪರಾಮರ್ಶಿಸಿದಾಗ ಸಿಗುವ ಗೋಚಾರ ಫಲ ಇನ್ನೂ ಸ್ವಲ್ಪ ಹೆಚ್ಚಿಗೆ ನಿಖರವಾಗಿ ಇರುತ್ತದೆ ಎಂದು ಹೇಳಬಹುದು ಅದೇ ತಳಹದಿಯಲ್ಲಿ ನೋಡಿದಾಗ ಮೇಷ ರಾಶಿಯವರಿಗೆ ಈ ಸಂಚಾರ ಏನು ನೀಡುತ್ತದೆ ಎಂಬುದರೊಂದಿಗೆ ಈ ಲೇಖನ ಸರಣಿ ಶುರು ಆಗುತ್ತಿದೆ.
ಶತ್ರುಗಳೇ ಮಿತ್ರರಂತೆ ವರ್ತಿಸಿ ಗೊಂದಲ ಮೂಡಿಸುತ್ತಾರೆ
ಈ ಬಾರಿಯ ಗುರು ಸಂಚಾರ ವಿಚಿತ್ರ ಅದಲಿ ಬದಲಿ ಫಲ ನೀಡುತ್ತದೆ. ಗುರು ಎಂಟನೇ ಮನೆಗೆ ಬರುತ್ತಿರುವುದರಿಂದ ಹಾಗೂ ಶನಿ ಒಂಬತ್ತನೇ ಮನೆಯಲ್ಲಿ ಈಗಾಗಲೇ ಸ್ಥಿತ ಇರುವುದರಿಂದ ವಿಚಿತ್ರ ಅದಲಿ ಬದಲಿ ಎಂದು ಹೇಳಲಾಗುತ್ತಿದೆ. ಇಷ್ಟು ದಿನ ನಿಮಗೆ ಬಹಳ ಸಹಕಾರಿಯಾಗಿ, ಮಾರ್ಗದರ್ಶಕರಾಗಿ ಇದ್ದ ಹಿರಿಯರು ನಿಮ್ಮನ್ನು ಹಾಗೂ ನಿಮ್ಮ ನಡೆಯನ್ನು ವಿರೋಧಿಸುತ್ತಾರೆ. ಇಷ್ಟು ದಿನ ನಿಮ್ಮ ಶತ್ರು ಅಥವಾ ನಿಮ್ಮ ವಿರೋಧಿ ಎಂದು ಯಾರನ್ನು ಅಂದುಕೊಂಡಿದ್ದಿರೋ ಅವರೇ ನಿಮ್ಮ ಮಿತ್ರರಂತೆ ವರ್ತಿಸಿ, ಅನುಕೂಲ ಮಾಡಿಕೊಡಲು ಆರಂಭಿಸುತ್ತಾರೆ. ಒಟ್ಟಿನಲ್ಲಿ ನೀವು ಒಂಥರಾ ಗೊಂದಲದ ವಾತಾವರಣದಲ್ಲಿ ಸಿಲುಕುತ್ತೀರಿ ಎಂದು ಮಾತ್ರ ಹೇಳಬಹುದು.
ಪ್ರಮುಖವಾಗಿ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು
ಒಂದು ವರ್ಷದಿಂದ ಸಪ್ತಮದಲ್ಲಿ ಗುರು ಇದ್ದು, ಪೂರ್ಣ ಗುರುಬಲ ಲಭಿಸಿ ಉತ್ತಮ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು, ಎಲ್ಲ ವಿಧದ ಸಮಸ್ಯೆಗಳಿಂದ ನಿರಾಯಾಸವಾಗಿ ಪಾರಾಗುತ್ತಿದ್ದ ನಿಮಗೆ ಇನ್ನು ಸದ್ಯ ಒಂದು ವರ್ಷ ಕಾಲ ಆ ಸೌಭಾಗ್ಯ ಇಲ್ಲ. ನಿಮ್ಮ ರಾಶಿಯಿಂದ ಗುರು ಎಂಟನೇ ಮನಗೆ ಪ್ರವೇಶ ಆಗುತ್ತಿರುವುದರಿಂದ ಹಲವಾರು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಆರೋಗ್ಯ! ಇನ್ನು ಒಂದು ವರ್ಷ ಕಾಲ ನೀವು ಆರೋಗ್ಯವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಅದರಲ್ಲಿಯೂ ಅಸಿಡಿಟಿ, ಗ್ಯಾಸ್ಟ್ರಿಕ್, ಅಜೀರ್ಣ ಮುಂತಾದ ಸಮಸ್ಯೆ ಇದ್ದಲ್ಲಿ ನಿಮ್ಮ ಆಹಾರ ಪದ್ಧತಿ ಸರಿ ಮಾಡಿಕೊಳ್ಳಿ.
ಸಾಲ ಕೊಡಬೇಡಿ ಹಾಗೂ ಕೊಡಿಸಬೇಡಿ
ಅತೀ ಅನಿವಾರ್ಯ ಇಲ್ಲದಿದ್ದರೆ ದೂರ ಪ್ರಯಾಣಗಳನ್ನು ವರ್ಜಿಸಿ. ನಿಮಗೆ ರೂಢಿ ಇಲ್ಲದ ಹವಾಮಾನ ಇರುವ ಸ್ಥಳಗಳಿಗೆ ಭೇಟಿ ಮಾಡಬೇಡಿ. ಬಡತನ ನಿಮಗೆ ಕಾಡಬಹುದು. ಕೈಯಲ್ಲಿ ಈ ಹಿಂದಿನಂತೆ ಹೆಚ್ಚು ದುಡ್ದು ಓಡಾಡುವುದಿಲ್ಲ. ಸಾಲ ಕೊಡಲು ಅಥವಾ ಕೊಡಿಸಲು ಹೋಗಬೇಡಿ. ಕೆಲ ಅಪವಾದಗಳು ನಿಮ್ಮ ಮೇಲೆ ಬಂದು, ಮಾನಸಿಕ ಸ್ಥೈರ್ಯ ಕುಗ್ಗಬಹುದು. ಕೆಲವರಿಗೆ ಅವರಿಗೆ ಇಷ್ಟ ಇಲ್ಲದ ಕಾರ್ಯವನ್ನು ಒತ್ತಾಯ ಮಾಡಿ, ಅನಿವಾರ್ಯ ಸೃಷ್ಟಿಸಿ ಮಾಡಿಸಲಾಗುತ್ತದೆ. ಇಲ್ಲಿ ಶುಭ ಫಲವನ್ನು ಸಹ ನೋಡುವುದಾದಲ್ಲಿ ನಿಮಗೆ ಅಪಮೃತ್ಯು ಭಯ ಇರುವುದಿಲ್ಲ. ಪ್ರಾಣಾಂತಕ ಅಥವಾ ಮಾರಣಾಂತಿಕ ಇದ್ದರೂ ಪ್ರಾಣಕ್ಕೆ ಕುತ್ತಿಲ್ಲ.
ಅನ್ಯರ ಸಹಾಯದಿಂದ ಸುಲಭವಾಗಿ ಕೆಲಸಗಳು ಆಗುತ್ತವೆ
ಇಲ್ಲಿ ಚಿಂತೆ ಮಾಡುವ ವಿಚಾರ ಎಂದರೆ, ನಿಮ್ಮವರೇ ನಿಮಗೆ ಶತ್ರುಗಳು ಆಗುತ್ತಾರೆ. ಎಷ್ಟೇ ಕಷ್ಟ ಆದರೂ ಸದ್ಯಕ್ಕೆ ಇರುವ ಕೆಲಸ ಬಿಟ್ಟು ಹೊಸ ಉದ್ಯೋಗ ಹುಡುಕುವ ಸಾಹಸ ಮಾಡಬೇಡಿ. ಹೊಸದಾಗಿ ವ್ಯಾಪಾರ ಪ್ರಾರಂಭಿಸುವ ಆಲೋಚನೆಗಳು ಇರುವವರು ಒಮ್ಮೆ ನಿಮ್ಮ ಜಾತಕ ಪರಿಶೀಲನೆ ಮಾಡಿಸಿ. ದುಡುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಬುದ್ಧಿ ತಕ್ಷಣ ಬಿಡಬೇಕು. ಇಷ್ಟು ಎಲ್ಲಾ ಅಶುಭ ಫಲಗಳ ಮಧ್ಯದಲ್ಲಿ ನಿಮ್ಮ ಕೈ ಹಿಡಿಯುವ ಗ್ರಹವೇ ಶನಿ ಎಂದು ಹೇಳಿದರೆ ತಪ್ಪು ಆಗೋದಿಲ್ಲ. ಭಾಗ್ಯ ಸ್ಥಾನದಲ್ಲಿ ಶನಿ ನಿಮಗೆ ಆರೋಗ್ಯ ಕೊಡದೇ ಇದ್ದರೂ ಅನಾರೋಗ್ಯ ಅಥವಾ ಇತರೆ ಕಾರಣಗಳಿಂದ ನೀವು ಮಾಡಲು ಆಗದ ಕೆಲಸಗಳನ್ನು ಯಾರೋ ನಿಮ್ಮ ಸಹಾಯಕ್ಕೆ ಬಂದು, ಅವುಗಳು ಆಗುವಂತೆ ನೋಡಿಕೊಳ್ಳುತ್ತಾನೆ. ಅದೃಷ್ಟವಷಾತ್ ನಾನು ಬಚಾವ್ ಆದೆ, ಆ ಕೆಲಸ ಆಯಿತು, ನನಗೆ ಒಳ್ಳೆಯದೇ ಆಯಿತು ಎಂದು ನಿಮಗೆ ಅನಿಸುವಂತೆ ಮಾಡುತ್ತಾನೆ. ಒಟ್ಟಿನಲ್ಲಿ ಹೇಳಬೇಕು ಎಂದರೆ ಗುರು ಬಲ ಕಳೆದುಕೊಂಡ ಲೋಪವನ್ನು ಶನಿಯು ತಕ್ಕಮಟ್ಟಿಗೆ ತುಂಬುತ್ತಾನೆ.