ಮುಂದಿನ ಅಸೆಂಬ್ಲಿ ಚುನಾವಣೆ: ಈ 5 ಕ್ಷೇತ್ರಗಳ ಪೈಕಿ ಒಂದರಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಖಚಿತ?
ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಸೋತ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೇಸರದ ಮಾತನ್ನಾಡಿದ್ದೂ ಉಂಟು. ಆ ಸೋಲು ಅವರನ್ನು ಅಷ್ಟರ ಮಟ್ಟಿಗೆ ಕಾಡಿದ್ದಂತೂ ಹೌದು.
ಅಲ್ಲಿ ಸೋಲಿನ ವಾಸನೆಯನ್ನು ಅರಿತಿದ್ದ ಸಿದ್ದರಾಮಯ್ಯ ಬಾದಾಮಿಯಲ್ಲೂ ಸ್ಪರ್ಧಿಸಿದ್ದರು. ಅಲ್ಲೂ, ಕೊನೆಯವರೆಗೂ ಚಂಚಲೆಯಾಗಿದ್ದ ವಿಜಯಲಕ್ಷ್ಮಿ ಸಣ್ಣ ಅಂತರದ ಮೂಲಕ ಸಿದ್ದರಾಮಯ್ಯನವರ ಕಡೆ ವಾಲಿದ್ದಳು.
ಇದಾದ ನಂತರ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು ಎನ್ನುವ ವಿಚಾರ ಬಂದಾಗ, ಅವರಿಂದ ಸರಿಯಾದ ಹೇಳಿಕೆಗಳು ಬಂದಿರಲಿಲ್ಲ. ಯಾವುದು ಸೇಫ್ ಕ್ಷೇತ್ರ ಎನ್ನುವ ಲೆಕ್ಕಾಚಾರವನ್ನು ತಮ್ಮ ಆಪ್ತರ ಮೂಲಕ ಸಿದ್ದರಾಮಯ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ, ಮತ್ತೆ ಸಿಎಂ ಆಗುವ ಕನಸನ್ನು ಹೊತ್ತಿರುವ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಹಳಷ್ಟಿದೆ. ಸಿದ್ದರಾಮಯ್ಯನವರು ಸ್ಲೈಡಿನಲ್ಲಿ ಮುಂದುವರಿಸಲಾಗಿರುವ ಐದು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು - ಬಾದಾಮಿ
ತಮಗೆ ರಾಜಕೀಯ ಮರುಜೀವ ಕೊಟ್ಟ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲೇ ಮತ್ತೆ ಸಿದ್ದರಾಮಯ್ಯ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಇಲ್ಲಿಂದ ಗೆದ್ದ ನಂತರ ಕ್ಷೇತ್ರಾವಾರು ಅನುದಾನವನ್ನು ಹೆಚ್ಚಿಗೆ ಪಡೆದುಕೊಂಡು, ಕ್ಷೇತ್ರದ ಅಭಿವೃದ್ದಿಯ ಗಮನ ಕೊಟ್ಟಿರುವ ಸಿದ್ದರಾಮಯ್ಯನವರಿಗೆ ಈ ಆಧಾರದ ಮೇಲೆ ಬಾದಾಮಿಯೇ ಸೇಫ್ ಎನ್ನುವ ಮಾತಿದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು - ಚಾಮರಾಜಪೇಟೆ
ಮುಸ್ಲಿಂ ಪ್ರಾಬಲ್ಯದ ಬೆಂಗಳೂರು ನಗರ ವ್ಯಾಪ್ತಿಯ ಚಾಮರಾಜಪೇಟೆಯಿಂದಲೂ ಸಿದ್ದರಾಮಯ್ಯನವರ ಹೆಸರು ಕೇಳಿ ಬರುತ್ತಿದೆ. ತಮ್ಮ ಬಲಗೈ ಬಂಟ ಜಮೀರ್ ಅಹ್ಮದ್ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದರೂ, ಸಿದ್ದರಾಮಯ್ಯನವರಿಗೆ ಈ ಕ್ಷೇತ್ರವನ್ನು ಬಿಟ್ಟು ಕೊಡುವುದು ಮತ್ತು ಅವರನ್ನು ಚಾಮರಾಜಪೇಟೆಯಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಜಮೀರ್ ಹೊತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು - ಕೋಲಾರ
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರುವ ಜಿಲ್ಲೆಯೆಂದರೆ ಅದರಲ್ಲಿ ಕೋಲಾರ ಕೂಡಾ ಒಂದು. ಈ ಭಾಗದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಬಹುದು ಎನ್ನುವ ಮಾತು ಕೇಳಿಬರುತ್ತಿತ್ತು. ಇತ್ತೀಚಿನ ಅವರ ಭೇಟಿಯ ವೇಳೆ ಕಾರ್ಯಕರ್ತರು ಬಹಿರಂಗವಾಗಿಯೇ ಈ ಒತ್ತಾಯವನ್ನು ಮಾಡಿದ್ದರು. ಕೋಲಾರದಿಂದಲೂ ಸಿದ್ದರಾಮಯ್ಯನವರ ಹೆಸರು ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು -ಚಾಮುಂಡೇಶ್ವರಿ
ತಮ್ಮ ಸ್ವಕ್ಷೇತ್ರದ ಮೇಲಿನ ವ್ಯಾಮೋಹ ಹೇಗೆ ಹೋಗಲು ಸಾಧ್ಯ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಸೋಲು ಉಣಿಸಿದ್ದ ಜಿ.ಟಿ.ದೇವೇಗೌಡ ಮತ್ತು ಇವರ ನಡುವೆ ಮಾತುಕತೆ ನಡೆದಿದೆ. ಅದರಂತೆ, ಜಿಟಿಡಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಿಗೆ, ಹುಣಸೂರಿನಿಂದ ಜಿಟಿಡಿ ಮಗನಿಗೆ ಕಾಂಗ್ರೆಸ್ ಸೀಟು ನೀಡಬೇಕು ಎನ್ನುವ ವಿಷಯ ಪ್ರಸ್ತಾವನೆ ಆಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಚಾಮುಂಡೇಶ್ವರಿಯಿಂದಲೂ ಸಿದ್ದರಾಮಯ್ಯ ಸ್ಪರ್ಧಿಸಬಹುದು.
Recommended Video

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸಬಹುದು - ಚಿಕ್ಕನಾಯಕನಹಳ್ಳಿ
ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರಿನಲ್ಲಿ ಬಿಜೆಪಿ ಸದ್ದು ಮಾಡುತ್ತಿರುವುದು ಗೊತ್ತಿರುವ ವಿಚಾರ. ಉದಾಹರಣೆಗೆ ಶಿರಾ ಉಪಚುನಾವಣೆ. ಸಿದ್ದರಾಮಯ್ಯನವರು ತುಮಕೂರು ಜಿಲ್ಲಾ ವ್ಯಾಪ್ತಿಯ ಕ್ಷೇತ್ರದಿಂದಲೇ ಸ್ಪರ್ಧಿಸಲಿ, ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಲಿ ಎನ್ನುವ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications