Rashmika Mandanna: ನನಗಿಂತ ಮೊದಲೇ ನನ್ನ ಪ್ರತಿಭೆ ಗುರುತಿಸಿದ್ದು ಅಪ್ಪು ಸರ್: ರಶ್ಮಿಕಾ ಮಂದಣ್ಣ
ಕರ್ನಾಟಕದ ಕೊಡಗು ಮೂಲಕ ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಆದರೆ, ತಮ್ಮ ಈ ಯಶಸ್ಸಿನ ಪಯಣದ ಆರಂಭಿಕ ದಿನಗಳಲ್ಲಿ ತಮಗೆ ಆತ್ಮವಿಶ್ವಾಸ ತುಂಬಿ, ತಮ್ಮೊಳಗಿನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಯಾರು ಎಂದು ರಶ್ಮಿಕಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಭಾವುಕರಾಗಿ ಸ್ಮರಿಸಿದ್ದಾರೆ. ಅದು ಬೇರೆ ಯಾರೂ ಅಲ್ಲ, ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (ಅಪ್ಪು) ಎಂದು ರಿವೀಲ್ ಮಾಡಿದ್ದಾರೆ.
ರಶ್ಮಿಕಾ ತಮ್ಮ ವೃತ್ತಿಜೀವನದ ತಿರುವುಗಳ ಬಗ್ಗೆ ಮಾತನಾಡುವಾಗ ಅಪ್ಪು ಅವರೊಂದಿಗಿನ ಒಡನಾಟ ಇಂದಿಗೂ ತಮ್ಮ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸಿನಿಮಾರಂಗಕ್ಕೆ ಹೊಸಬರಾಗಿದ್ದ ಆರಂಭದ ದಿನಗಳಲ್ಲಿ ರಶ್ಮಿಕಾ ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಸಾಕಷ್ಟು ಆತಂಕ ಇತ್ತು. ತಮಗೆ ಸಿಗುತ್ತಿರುವ ಅವಕಾಶಗಳು ಕೇವಲ ಅದೃಷ್ಟದಿಂದ ಸಿಗುತ್ತಿವೆಯೇ ಹೊರತು, ಸ್ವಂತ ಪ್ರತಿಭೆಯಿಂದಲ್ಲ ಎಂದು ಭಾವಿಸಿದ್ದಾಗಿ ನೆನೆದಿದ್ದಾರೆ.

ಅಂಜನಿ ಪುತ್ರ ಶೂಟಿಂಗ್ ವೇಳೆ ನಡೆದಿದ್ದೇನು?
ಇಂತಹ ಗೊಂದಲದಲ್ಲಿದ್ದ ಸಮಯದಲ್ಲಿ ಅಪ್ಪು ಅವರ 'ಅಂಜನಿ ಪುತ್ರ' ಸಿನಿಮಾ ಚಿತ್ರದ ಚಿತ್ರೀಕರಣ ಆರಂಭವಾಯಿತು. ಆ ಸೆಟ್ನಲ್ಲಿ ಪುನೀತ್ ರಾಜ್ಕುಮಾರ್ ಅವರು ಕೇವಲ ಒಬ್ಬ ದೊಡ್ಡ ಸ್ಟಾರ್ ಆಗಿ ಉಳಿಯದೆ, ತಮ್ಮ ಸುತ್ತಲಿರುವವರನ್ನು ಗಮನಿಸಿ ಪ್ರೋತ್ಸಾಹಿಸುವ ದೊಡ್ಡ ಗುಣವನ್ನು ತೋರಿಸಿದ್ದರು. ಶೂಟಿಂಗ್ ವೇಳೆ ಪುನೀತ್ ಅವರು ರಶ್ಮಿಕಾ ಅವರಲ್ಲಿನ ವಿಶೇಷ ಪ್ರತಿಭೆಯನ್ನು ಗಮನಿಸಿ, ಹೇಳಿದ ಸರಳ ಮಾತುಗಳು ತನಗೆ ಒಂದು ತಿರುವು ನೀಡಿದ್ದಾಗಿ ರಶ್ಮಿಕಾ ಸ್ಮರಿಸಿದ್ದಾರೆ.
ಯಾವುದಕ್ಕೂ ಹಿಂಜರಿಯಬೇಡ
"ನಿನ್ನ ಪ್ರತಿಭೆಯ ಮೇಲೆ ನಂಬಿಕೆ ಇಡು, ಕೆಲಸವನ್ನು ಗಂಭೀರವಾಗಿ ಪರಿಗಣಿಸು ಮತ್ತು ಯಾವುದಕ್ಕೂ ಹಿಂಜರಿಯಬೇಡ" ಎಂದು ಅಪ್ಪು ಕಿವಿಮಾತು ಹೇಳಿದ್ದರು. ನನಗಿಂತ ಮೊದಲೇ ನನ್ನಲ್ಲಿದ್ದ ಶಕ್ತಿಯನ್ನು ಅವರು ಕಂಡುಕೊಂಡಿದ್ದರು ಎಂದು ರಶ್ಮಿಕಾ ನೆನಪಿಸಿಕೊಂಡಿದ್ದಾರೆ. ಆ ಸಣ್ಣ ಪ್ರೋತ್ಸಾಹದ ಮಾತುಗಳೇ ನನ್ನ ಆಲೋಚನಾ ಕ್ರಮವನ್ನು ಬದಲಿಸಲು ಪ್ರೇರಣೆಯಾದವು ಎಂದಿದ್ದಾರೆ ರಶ್ಮಿಕಾ.
"ಅಪ್ಪು ಅವರು ಕೇವಲ ಒಬ್ಬ ಸಹ-ನಟನಾಗಿ ಮಾತ್ರವಲ್ಲ, ನನ್ನಲ್ಲಿರುವ ಸಾಮರ್ಥ್ಯವನ್ನು ನನಗೆ ಪರಿಚಯಿಸಿದ ಮಾರ್ಗದರ್ಶಕರಾಗಿ ಇಂದಿಗೂ ನೆನಪಾಗುತ್ತಾರೆ" ಎಂದು ರಶ್ಮಿಕಾ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಪ್ರೋತ್ಸಾಹವೇ ತಮಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮತ್ತು ವೃತ್ತಿಜೀವನವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಲು ಅಡಿಪಾಯವಾಯಿತು ಎಂದು ಅವರು ಹೇಳಿದ್ದಾರೆ. ಅಪ್ಪು ಅವರು ನೀಡಿದ ಆ ದೃಢವಾದ ನಂಬಿಕೆಯು ರಶ್ಮಿಕಾ ಅವರಿಗೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗದೆ, ಬೇರೆ ಭಾಷೆಗಳತ್ತಲೂ ಗಮನ ಹರಿಸುವ ಧೈರ್ಯ ನೀಡಿತು. ಇದರ ಪರಿಣಾಮವಾಗಿ ಅವರು ತೆಲುಗು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು, ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ರಶ್ಮಿಕಾ
ರಶ್ಮಿಕಾ ಮಂದಣ್ಣ ಅವರ ಸಿನಿಮಾ ಬದುಕು ಆರಂಭವಾಗಿದ್ದು ಕನ್ನಡದ 'ಕಿರಿಕ್ ಪಾರ್ಟಿ' ಮೂಲಕ. ಈ ಚಿತ್ರದಲ್ಲಿನ 'ಸಾನ್ವಿ' ಪಾತ್ರದ ಮೂಲಕ ಅವರು ಕನ್ನಡಿಗರ ಮನೆಮಾತಾದರು. ನಂತರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೊಂದಿಗೆ 'ಅಂಜನಿ ಪುತ್ರ' ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ 'ಚಮಕ್' ಚಿತ್ರಗಳಲ್ಲಿ ನಟಿಸಿದರು. ತೆಲುಗು ಚಿತ್ರರಂಗಕ್ಕೆ 'ಚಲೋ' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ವಿಜಯ್ ದೇವರಕೊಂಡ ಜೊತೆ ನಟಿಸಿದ 'ಗೀತಾ ಗೋವಿಂದಂ'. ಈ ಚಿತ್ರದ ಅಭೂತಪೂರ್ವ ಯಶಸ್ಸು ಅವರನ್ನು ರಾತ್ರೋರಾತ್ರಿ ಟಾಲಿವುಡ್ನ ಟಾಪ್ ನಟಿಯರ ಸಾಲಿಗೆ ಸೇರಿಸಿತು. ನಂತರ ಬಂದ 'ಸರಿಲೇರು ನೀಕೆವ್ವರು', 'ಭೀಷ್ಮ' ಚಿತ್ರಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದವು.
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ 'ಶ್ರೀವಲ್ಲಿ' ಪಾತ್ರ ರಶ್ಮಿಕಾ ಅವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿತು. ಈ ಚಿತ್ರದ ಯಶಸ್ಸು ಅವರನ್ನು ಬಾಲಿವುಡ್ಗೆ ಕರೆದೊಯ್ಯಿತು. ಅಮಿತಾಭ್ ಬಚ್ಚನ್ ಅವರೊಂದಿಗೆ 'ಗುಡ್ಬೈ' ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ನಂತರ 'ಮಿಷನ್ ಮಜ್ನು' ಮತ್ತು ಬ್ಲಾಕ್ಬಸ್ಟರ್ 'ಅನಿಮಲ್' ಚಿತ್ರಗಳಲ್ಲಿ ನಟಿಸಿ ಬಾಲಿವುಡ್ನಲ್ಲೂ ಸೈ ಎನಿಸಿಕೊಂಡರು.













Click it and Unblock the Notifications