Tamilnadu Election 2026: ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಸಂಕಷ್ಟ, ಯಾಕೆ
Tamilnadu Election 2026: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಉಳಿದ ವಿಧಾನಸಭೆ ಚುನಾವಣೆಗಳಿಗಿಂತಲೂ 2026ನೇ ಸಾಲಿನ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಈ ಬಾರಿ ತಮಿಳಗ ವೆಟ್ರಿ ಕಳಗಂ ಎನ್ನುವ ಪಕ್ಷವನ್ನು ನಟ ದಳಪತಿ ವಿಜಯ್ ಅವರು ಸ್ಥಾಪಿಸಿದ್ದು, ರಾಜಕೀಯಕ್ಕೆ ಧುಮುಕ್ಕಿದ್ದಾರೆ.
ದುರಂತ ಹಾಗೂ ವಿವಾದಗಳ ನಡುವೆಯೂ ನಟ ವಿಜಯ್ ಹಾಗೂ ಅವರ ಪಕ್ಷಕ್ಕೆ ಜನರಿಂದ ಅದರಲ್ಲೂ ಯುವ ಸಮೂಹದಿಂದ ಭಾರೀ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಹೀಗಾಗಿ, ಈ ಬಾರಿ ವಿಜಯ್ಗೆ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಸ್ಥಾನಗಳು ಸಿಗಲಿವೆ ಎನ್ನುವ ಕುತೂಹಲ ಇದೆ. ಮುಂದುವರಿದು ಆಡಳಿತರೂಢ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಗ್ಯಾರಂಟಿ ಯೋಜನೆಗಳ ಜನರ ಮನಸ್ಸು ಗೆಲ್ಲುವ ಪ್ರಯತ್ನದಲ್ಲಿದೆ. ಆದರೆ ಯಾವುದೇ ಪಕ್ಷ ತಮಿಳುನಾಡಿನಲ್ಲಿ ಗೆದ್ದರೂ ಕರ್ನಾಟಕಕ್ಕೆ ಸಂಕಷ್ಟ ತಪ್ಪಿದ್ದಲ್ಲ; ಇಲ್ಲ ಕರ್ನಾಟಕಕ್ಕೆ ಲಾಭವಂತೂ ಆಗಲ್ಲ. ಯಾಕೆ ಎನ್ನುವ ವಿವರ ಈ ಲೇಖನದಲ್ಲಿ ನೋಡೋಣ.

ತಮಿಳುನಾಡಿನ ವಿಧಾನಸಭೆ ಚುನಾವಣೆ 2026ರಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಕನಿಷ್ಠ 15ಕ್ಕೂ ಹೆಚ್ಚು ಪಕ್ಷಗಳು ಸ್ಪರ್ಧೆ ಮಾಡಿವೆ. ತಮಿಳುನಾಡಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದಲೂ ಪ್ರಾದೇಶಿಕ ಪಕ್ಷಗಳದ್ದೇ ಹವಾ. ಅದು ತಮಿಳುನಾಡಿನ ವಿಧಾನಸಭೆ ಚುನಾವಣೆ ಇರಲಿ ಅಥವಾ ಲೋಕಸಭೆ ಚುನಾವಣೆಯೇ ಇರಲಿ. ತಮಿಳುನಾಡಿನ ಜನ ಪ್ರಾದೇಶಿಕ ಪಕ್ಷಕ್ಕೇ ಆದ್ಯತೆ ನೀಡುತ್ತಾರೆ. ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲೇ ಸಾಗಬೇಕಾದ ಪರಿಸ್ಥಿತಿ ಇದೆ. ಕಾಂಗ್ರೆಸ್ ಪಕ್ಷ ಡಿಎಂಕೆಯೊಂದಿಗೆ - ಬಿಜೆಪಿಯು ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿವೆ.
ನೆರೆಯ ರಾಜ್ಯವಾದ ತಮಿಳುನಾಡು - ಕರ್ನಾಟಕದ ನಡುವೆ ಮೊದಲಿನಿಂದಲೂ ಕೆಲವೊಂದು ವಿಚಾರದಲ್ಲಿ ವಿವಾದ - ಭಿನ್ನಾಭಿಪ್ರಾಯವಿದೆ. ಈ ವೈಮನಸ್ಸು ಇತ್ತೀಚಿನ ದಿನಗಳಲ್ಲಿ ತುಸು ಇಳಿಕೆಯಾಗಿದೆಯಾದರೂ, ಸಂಪೂರ್ಣವಾಗಿ ನಿಂತಿಲ್ಲ. ಅದರಲ್ಲೂ ಮಳೆ ಬರದೆ ಇದ್ದಾಗ ಕರ್ನಾಟಕ - ತಮಿಳುನಾಡಿನ ನಡುವೆ ಸಂಘರ್ಷ ಏರ್ಪಡುತ್ತದೆ.
ಕಾವೇರಿ - ಮೇಕೆದಾಟು ಯೋಜನೆ ಸಂಘರ್ಷ
ತಮಿಳುನಾಡಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ - ಎಐಎಡಿಎಂಕೆ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೆಚ್ಚು ಮನ್ನಣೆ ತಂದು ಕೊಟ್ಟ ವಿಚಾರವೇ ಕಾವೇರಿ ನದಿ ನೀರು ಹಂಚಿಕೆ ವಿಚಾರ. ಈ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಎಂಕೆ ಪಕ್ಷವು ಸಹ ಪಟ್ಟು ಬಿಡುತ್ತಿಲ್ಲ. ಇದರ ಹಿಂದೆ ಇರುವುದು ರಾಜಕೀಯ ಮಾತ್ರವಲ್ಲ; ಡಿಎಂಕೆ ಪಕ್ಷವು ತನ್ನ ಸ್ಥನ ಭದ್ರ ಪಡಿಸಿಕೊಳ್ಳುವ ತಂತ್ರವೂ ಹೌದು. ತಮಿಳುನಾಡಿಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷದ ನಡುವೆ ಮೈತ್ರಿ ಇದೆಯಾದರೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡಲಾಗುತ್ತಿದೆ. ಮುಂದುವರಿದು ಈ ಬಾರಿಯ ತಮಿಳುನಾಡಿನ ಡಿಎಂಕೆ ಪ್ರಣಾಳಿಕೆಯಲ್ಲೇ ಕರ್ನಾಟಕದ ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಉಲ್ಲೇಖಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಮೇಕೆದಾಟು ಯೋಜನೆ ಸಂಘರ್ಷ ಮುಂದುವರಿಯಲಿದೆ.
ಯಾರೇ ಅಧಿಕಾರಕ್ಕೆ ಬಂದರೂ ಕರ್ನಾಟಕಕ್ಕೆ ಸಂಕಷ್ಟ
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ತಮಿಳುನಾಡಿನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕರ್ನಾಟಕಕ್ಕೆ ಲಾಭವಿಲ್ಲ. ಡಿಎಂಕೆ - ಎಐಎಡಿಎಂಕೆ ನೇತೃತ್ವದ ಯಾರೇ ಅಧಿಕಾರಕ್ಕೆ ಬಂದರೂ ಕರ್ನಾಟಕಕ್ಕೆ ಲಾಭವಿಲ್ಲ. ಇನ್ನು ಟಿವಿಕೆ ಅಧಿಕಾರಕ್ಕೆ ಬಂದರೂ, ಕರ್ನಾಟಕಕ್ಕೆ ಅಲ್ಪ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದರೆ ಟಿವಿಕೆ ಪಕ್ಷವು ಕರ್ನಾಟಕ - ತಮಿಳುನಾಡಿನ ನಡುವೆ ಇರುವ ಜಲ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ಹೀಗಾಗಿ, ಟಿವಿಕೆ ಅಧಿಕಾರಕ್ಕೆ ಬಂದರೆ ಹೇಗೆ ಎನ್ನುವ ಕುತೂಹಲ ಉಳಿದಿದೆ.













Click it and Unblock the Notifications