ಬಿಜೆಪಿ ನಾಯಕರಿಗೆ ಸಾಮಾಜಿಕ ಬಹಿಷ್ಕಾರ ಮುಂದುವರಿಸುತ್ತೇವೆ; ಸಂಯುಕ್ತ ಕಿಸಾನ್ ಮೋರ್ಚಾ
"ಹೋರಾಟನಿರತ ರೈತರು ಮತ್ತು ರೈತ ಚಳವಳಿಯ ಬೆಂಬಲಿಗರು ಭಾರತೀಯ ಜನತಾ ಪಕ್ಷ ಮತ್ತು ಭಾಜಪ ಬೆಂಬಲಿಸುವ ನಾಯಕರುಗಳಿಗೆ ಸಾಮಾಜಿಕ ಬಹಿಷ್ಕಾರ ಮುಂದುವರೆಸುತ್ತೇವೆ" ಎಂದು ಇತ್ತೀಚೆಗೆ ನಡೆದ ಕೆಲವು ಘಟನೆಗಳು ಹಾಗೂ ಮಾಧ್ಯಮ ಸಂವಾದಗಳ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದೆ.
ಈ ನಿರ್ಧಾರವನ್ನು ಶುಕ್ರವಾರ ನಡೆದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಒಕ್ಕೊರಲಿನಿಂದ ಅಂಗೀಕರಿಸಲಾಯಿತು.

"ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯವಾಗುವುದಿಲ್ಲ. ಹೋರಾಟನಿರತ ರೈತರು ಜನವರಿ 26 ರಂದು ಕೆಂಪು ಕೋಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರೆಂಬ ಆರೋಪದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಜೂನ್ 17ರಂದು ಪೂರಕ ಚಾರ್ಜ್ ಶೀಟ್ ಹಾಕಿದ್ದಾರೆ. ಈ ವಿಷಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಸ್ಪಷ್ಟಪಡಿಸಿರುವಂತೆ ಆ ಕೃತ್ಯವು ಚಳವಳಿ ನಿರತ ರೈತರಿಗೆ ಮಸಿ ಬಳಿಯಲು ಭಾಜಪ ಸರ್ಕಾರವೇ ನಡೆಸಿರುವ ಷಡ್ಯಂತರವಾಗಿದೆ" ಎಂದು ದೂರಿದ್ದಾರೆ.
ಎಸ್.ಕೆ.ಎಂ ಘನ ನ್ಯಾಯಾಲಯಕ್ಕೆ ಕೋರುವುದೇನೆಂದರೆ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ಧ ಹೋರಾಡುವ ರೈತರ ಹಕ್ಕನ್ನು ಎತ್ತಿಹಿಡಿದು, ಈ ಚಳವಳಿಗೆ ಕಳಂಕ ತರುವ ಕೆಲಸ ಮಾಡಿದ ಅಥವಾ ಹುನ್ನಾರ ನಡೆಸಿದವರ ಬಣ್ಣ ಬಯಲು ಮಾಡಬೇಕು ಎಂದರು.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೇಂದ್ರ ತಂದಿರುವ ಮೂರು ಹೊಸ ಕೃಷಿ ನೀತಿಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಈ ಕಾನೂನುಗಳು ರೈತರನ್ನು ದೊಡ್ಡ ದೊಡ್ಡ ಕಂಪನಿಗಳ, ಮಾರುಕಟ್ಟೆಯ ಮರ್ಜಿಯಲ್ಲಿ ಬದುಕುವುದಂತೆ ಮಾಡುವುದಲ್ಲದೆ ಯಾವುದೇ ಇಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ನಿಲ್ಲದ ಸ್ಥಿತಿ ತಲುಪಲಿದೆ. ರೈತರು ತಮ್ಮ ಬದುಕು-ಸಾವಿನ ಹೋರಾಟದಲ್ಲಿ ನಿರತರಾಗಿದ್ದಾಗ್ಯೂ ಸರ್ಕಾರ ರೈತರನ್ನು ಲೆಕ್ಕಿಸದೆ ಅಸಡ್ಡೆ ತೋರುತ್ತಿರುವುದು ಸರಿಯಲ್ಲವೆಂದು ಎಸ್.ಕೆ.ಎಂ ಆಕ್ರೋಶ ವ್ಯಕ್ತಪಡಿಸಿದೆ.











Click it and Unblock the Notifications