ಕೃಷಿಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಅವೈಜ್ಞಾನಿಕ ಎನ್ನಬಾರದು: ಭಾಗವತ್
ನಾಗ್ಪುರ, ಜೂನ್ 21: ಸಾವಯವ ಮತ್ತು ಪ್ರಾಚೀನ ಕೃಷಿ ವಿಧಾನಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಂತಹ ಸ್ಥಳೀಯ ಜ್ಞಾನವನ್ನು ಪರಿಶೀಲಿಸದೆ ಅವೈಜ್ಞಾನಿಕ ಎಂದು ತಿರಸ್ಕರಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಷನಲ್ ಅಕಾಡೆಮಿ ಆಫ್ ವೆಟರ್ನರಿ ಸೈನ್ಸಸ್ (ಭಾರತ), ನವದೆಹಲಿ ಮತ್ತು ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ನಾಗ್ಪುರ ಜಂಟಿಯಾಗಿ ಆಯೋಜಿಸಿದ್ದ ವಾರ್ಷಿಕ 'ಘಟಿಕೋತ್ಸವ ಮತ್ತು ವೈಜ್ಞಾನಿಕ ಸಮಾವೇಶ'ದಲ್ಲಿಅವರು ಮಾತನಾಡಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಗೆ ಭಾಗವತ್ ಮತ್ತು ರಾಜ್ಯ ಸಚಿವ ಸುನೀಲ್ ಕೇದಾರ್ ಗೌರವ ಫೆಲೋಶಿಪ್ ನೀಡಿ ಗೌರವಿಸಿದರು.

ಭಾರತದ ಕೃಷಿ ಮತ್ತು ಪಶುಸಂಗೋಪನೆ ವಿಧಾನಗಳು ಅತ್ಯಂತ ಹಳೆಯದು, ಆಧುನಿಕ ವಿಜ್ಞಾನವು ಅಡ್ಡ ಪರಿಣಾಮಗಳನ್ನು ಹೊಂದಿದೆ ಆದರೆ ನಮ್ಮ ಪ್ರಾಚೀನ ಜ್ಞಾನ ಮತ್ತು ವಿಧಾನಗಳು ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು ಭಾಗವತ್ ಹೇಳಿದರು.
"ಸಂಶೋಧನೆ ಮತ್ತು ಸ್ಥಳೀಯ ಜ್ಞಾನದ ಬಳಕೆಯಲ್ಲಿ ಹೊಂದಾಣಿಕೆ ಮೇಲೆ ಕೇಂದ್ರೀಕರಿಸಬೇಕು. ಸ್ಥಳೀಯ ಜ್ಞಾನವನ್ನು ಅವೈಜ್ಞಾನಿಕ ಎಂದು ಹೇಳುವ ಮೂಲಕ ತಿರಸ್ಕರಿಸುವುದು ತಪ್ಪು. ಅದನ್ನು ಪರಿಶೀಲಿಸಿದ ನಂತರ ನೀವು ತಿರಸ್ಕರಿಸಬಹುದು, ಅದು ಸರಿಯಿಲ್ಲದಿದ್ದರೆ ತಿರಸ್ಕರಿಸಲು ನೀವು ಸ್ವತಂತ್ರರು" ಎಂದು ಭಾಗವತ್ ಕಾರ್ಯಕ್ರಮದಲ್ಲಿ ಹೇಳಿದರು.
ಯಾಂತ್ರೀಕೃತ ಕೃಷಿ ರೈತರಿಗೆ ಪ್ರಯೋಜನಕಾರಿಯಲ್ಲ
"ಯಾಂತ್ರೀಕೃತ ಕೃಷಿ ಹೆಚ್ಚು ಕಾಲ ಉಳಿಯುವುದಿಲ್ಲ. ಇಂದಿಗೂ ಶೇ.65ರಷ್ಟು ರೈತರು ಸಣ್ಣ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಯಾಂತ್ರೀಕೃತ ಕೃಷಿ ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ರಸಗೊಬ್ಬರ ಇತ್ಯಾದಿಗಳಿಂದಾಗಿ, ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಮತ್ತು ನಂತರ ಆತ್ಮಹತ್ಯೆಯಂತ ದಾರಿ ಹಿಡಿಯುತ್ತಾನೆ. ಅವರಿಗೆ ಅರ್ಥವಾಗುವ ಸುಸ್ಥಿರ ಕೃಷಿಯನ್ನು ಕಲಿಸಬೇಕು" ಎಂದು ಆರ್ಎಸ್ಎಸ್ ಮೋಹನ್ ಭಾಗವತ್ ಹೇಳಿದ್ದಾರೆ.

ನಮ್ಮ ಜಿಡಿಪಿಯನ್ನು ಹೆಚ್ಚಿಸುವ 'ಭಾರತ ಕೇಂದ್ರಿತ' ಕೃಷಿ ವಿಧಾನವನ್ನು ಒತ್ತಿ ಹೇಳಿದ ಅವರು, ಕ್ರಿ.ಶ. 1700 ರವರೆಗೆ ದೇಶವು ವಿಶ್ವದ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿತ್ತು ಎಂದು ಹೇಳಿದ್ದಾರೆ.
"ನಾವು ಕೃಷಿ ಆರ್ಥಿಕತೆಯನ್ನು ಹೊಂದಿದ್ದೇವೆ, ಸಮಯ ಮತ್ತು ಉದ್ಯಮ ಮತ್ತು ವಾಣಿಜ್ಯವು ಕೃಷಿಗೆ ಸಂಬಂಧಿಸಿದೆ. ಜಿಡಿಪಿ ಹೆಚ್ಚಳ ಮಾಡಲು ನಾವು ಭಾರತ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.
ಭಾಷಾ ಸಮಸ್ಯೆ ಹೋಗಲಾಡಿಸಬೇಕು
ಎಲ್ಲಾ ಇಲಾಖೆಗಳಿಗೆ ಹಣವನ್ನು ಒದಗಿಸುವಷ್ಟು ಸರ್ಕಾರವು ಶ್ರೀಮಂತವಾಗಿಲ್ಲದಿರುವುದರಿಂದ ಸುಸ್ಥಿರತೆಗಾಗಿ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೈತರು ಎದುರಿಸುತ್ತಿರುವ "ಭಾಷಾ ನಿರ್ಬಂಧ" ಕುರಿತು ಭಾಗವತ್ ಮಾತನಾಡಿದ್ದಾರೆ. ಪಶುಸಂಗೋಪನೆಯ ಹೆಚ್ಚಿನ ಮಾಹಿತಿಯು ಇಂಗ್ಲಿಷ್ನಲ್ಲಿದೆ, ಇದು ಸಾಮಾನ್ಯ ರೈತರಿಗೆ ಅರ್ಥವಾಗುವುದಿಲ್ಲ" ಎಂದು ಹೇಳಿದ್ದಾರೆ.
ಹೊಸ ಶಿಕ್ಷಣ ನೀತಿಯು ತಾಂತ್ರಿಕ ವಿಷಯಗಳಲ್ಲಿ ಸ್ಥಳೀಯ ಭಾಷೆಯ ಬಳಕೆಯನ್ನು ಒಳಗೊಂಡಿದೆ. ಕೃಷಿ, ಪಶುಸಂಗೋಪನೆ ಜ್ಞಾನವನ್ನು ನಾವು ಸ್ಥಳೀಯ ಭಾಷೆಗಳಲ್ಲಿ ಹರಡಬೇಕಾಗಿದೆ ಎಂದು ಭಾಗವತ್ ಹೇಳಿದರು.












Click it and Unblock the Notifications