ಕೇಂದ್ರ ಸರ್ಕಾರದ ಸಮಿತಿ ಸೇರಲ್ಲ ಎಂದಿದ್ದೇಕೆ ಸಂಯುಕ್ತ ಕಿಸಾನ್ ಮೋರ್ಚಾ?
ನವದೆಹಲಿ, ಜುಲೈ 20: ಭಾರತದಲ್ಲಿ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವುದಕ್ಕಾಗಿ ಕೇಂದ್ರ ಸರ್ಕಾರದ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯ ಭಾಗವಾಗಲು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ನಿರಾಕರಿಸಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತ ಸಂಘಟನೆಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕೂಡ ಒಂದಾಗಿದೆ. ಹೀಗಾಗಿ ಸರ್ಕಾರದ ಸಮಿತಿಯ ಸದಸ್ಯರಾಗುವುದಕ್ಕೆ ರೈತ ಸಂಘಟನೆಯು ತಿರಸ್ಕರಿಸಿದ್ದು, ಅಲ್ಲದೇ ಅದರ ಹಿಂದಿನ ಕಾರಣವನ್ನೂ ತೆರೆದಿಟ್ಟಿದೆ.
ರಾಜಕೀಯವಿಲ್ಲದ ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ರಾಜಕಾರಣಿಗಳ ಪಾತ್ರವೇನು?
ಸಂಯುಕ್ತ ಕಿಸಾನ್ ಮೋರ್ಚಾದ ಪ್ರಕಾರ, ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ರಚಿಸಿದ ಸಮಿತಿಯಲ್ಲಿ ಸದಸ್ಯರಾದವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಿಜೆಪಿ ಅಥವಾ ಆರ್ಎಸ್ಎಸ್ ನೀತಿ ನಿಲುವುಗಳನ್ನು ಬೆಂಬಲಿಸಬೇಕಾಗುತ್ತದೆ. ಒಂದು ಕಾಲದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಘಟನೆಯು ಈಗ ಅದೇ ಸರ್ಕಾರದ ರಚಿಸುವ ಸಮಿತಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡುವುದಕ್ಕೆ ಹೊರಟಿದೆ.
ಕನಿಷ್ಠ ಬೆಂಬಲ ಬೆಲೆಗೆ ರೈತರ ಹೋರಾಟ ಹೇಗಿದೆ?. ಸರ್ಕಾರದ ವಿರುದ್ಧ ರೈತರ ಡಿಮ್ಯಾಂಡ್ ಹೇಗಿದೆ?. ರೈತರಿಗಾಗಿ ಸರ್ಕಾರ ರಚಿಸಿರುವ ಸಮಿತಿಯು ಯಾವ ರೀತಿ ಕೆಲಸ ಮಾಡುತ್ತದೆ?. ಸಂಯುಕ್ತ ಕಿಸಾನ್ ಮೋರ್ಚಾದ ನಡೆಯ ಹಿಂದಿನ ಉದ್ದೇಶವೇನು? ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ವಿವಾದಾತ್ಮಕ ಕೃಷಿ ಕಾಯ್ದೆಗೆ ಜೈ ಎಂದವರಿಗೆ ಸ್ಥಾನ
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಇಡೀ ರೈತ ಸಮುದಾಯಗಳೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಕಾಲವದು. ಅಂದು ಸರ್ಕಾರಕ್ಕೆ ಛೀಮಾರಿ ಹಾಕುತ್ತಾ ರೈತರು ಧಿಕ್ಕಾರ ಕೂಗುತ್ತಿದ್ದರೆ, ಈ ಐವರು ನಾಯಕರು ಮಾತ್ರ ರೈತರೊಂದಿಗೇ ಇದ್ದುಕೊಂಡು ಸರ್ಕಾರಕ್ಕೆ ಜೈ ಎನ್ನುತ್ತಿದ್ದರು. ಪಾಲ್, ಹನ್ನನ್ ಮೊಲ್ಲಹ್, ಜೋಗಿಂದರ್ ಸಿಂಗ್ ಉಗ್ರಹಾನ್, ಯುಧವೀರ್ ಸಿಂಗ್ ಮತ್ತು ಯೋಗೇಂದ್ರ ಯಾದವ್ ಸಮಿತಿಗೆ ರೈತರು ವಿರೋಧಿಸುತ್ತಿದ್ದಾರೆ. ಬಿಜೆಪಿಯ ಹಿಂಬಾಲಕರಾಗಿ ವರ್ತಿಸುತ್ತಾ ಕೃಷಿ ಕಾಯ್ದೆಗೆ ಬೆಂಬಲ ನೀಡುತ್ತಿದ್ದ ಐವರು ನಾಯಕರನ್ನೇ ಕೇಂದ್ರ ಸರ್ಕಾರವು ಈಗ ಸಮಿತಿಯಲ್ಲಿ ಸೇರಿಸಿಕೊಂಡಿದೆ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಸಮಿತಿಯಲ್ಲಿ ಹೆಸರಿಸಲಾದ ಐವರು ರೈತ ಮುಖಂಡರ ಆಯ್ಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ವಿರೋಧ ವ್ಯಕ್ತಪಡಿಸಿದೆ.
ಸರ್ಕಾರದ ಸಮಿತಿ ಸೇರಲ್ಲ ಎಂದಿದ್ದೇಕೆ ಸಂಯುಕ್ತ ಕಿಸಾನ್ ಮೋರ್ಚಾ?
ಕೇಂದ್ರ ಸರ್ಕಾರವು ರಚಿಸುತ್ತಿರುವ ಸಮಿತಿಯ ಅಧಿಕಾರ ವ್ಯಾಪ್ತಿ ಮತ್ತು ನಿಯಮಗಳನ್ನು ಸ್ಪಷ್ಟಪಡಿಸಬೇಕು. ಇದರ ಹೊರತಾಗಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಮಿತಿಗೆ ಪ್ರತಿನಿಧಿಯೊಬ್ಬರ ನಾಮನಿರ್ದೇಶನ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಜುಲೈ 3ರಂದು ನಡೆದ ಸಂಯುಕ್ತ ಕಿಸಾನ್ ಮೋರ್ಚಾರದ ರಾಷ್ಟ್ರೀಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಅಲ್ಲದೇ ಈ ಸಮಿತಿಯ ಕಾರ್ಯಸೂಚಿಯಲ್ಲಿ ಎಂಎಸ್ಪಿ ಕುರಿತು ಕಾನೂನನ್ನು ಮಾಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸರ್ಕಾರದ ಸಮಿತಿಯನ್ನು ಈಗಾಗಲೇ ಸ್ಥಾಪಿಸಿರುವ ಕಾರ್ಯಸೂಚಿಯಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಕೃಷಿ ಮಾರುಕಟ್ಟೆಯ ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರವು ಮತ್ತೊಮ್ಮೆ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸಬಹುದು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯಾಯಯುತ ಬೆಲೆ ಖಾತ್ರಿಪಡಿಸಿಕೊಳ್ಳಲು ಸೂಕ್ತ ಕಾನೂನು
ಭಾರತದಲ್ಲಿ ರೈತರು ಬೆಳೆದಿರುವ ಬೆಳೆಗೆ ನ್ಯಾಯಯುತ ಬೆಲೆಯನ್ನು ಖಾತ್ರಿಪಡಿಸುವ ಕನಿಷ್ಠ ಬೆಂಬಲ ಬೆಲೆ ಕಾಯ್ದೆಗಾಗಿ ಹೋರಾಟವನ್ನು ಮುಂದುವರಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದಕ್ಕಾಗಿಯೇ ಹೊಸ ಸಮಿತಿಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಅದಾಗಿ ಎಂಟು ತಿಂಗಳ ನಂತರದಲ್ಲಿ ಕಳೆದ ಸೋಮವಾರ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿದೆ. ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ಸಮಿತಿಯ ಅಧ್ಯಕ್ಷರಾಗಿದ್ದು, ಸಮಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮೂವರು ಸದಸ್ಯರನ್ನು ಸೇರಿಸಲು ಕೇಂದ್ರ ಸರ್ಕಾರ ನಿಬಂಧನೆ ಮಾಡಿದೆ.
ಸರ್ಕಾರದ ಸಮಿತಿ ಬೋಗಸ್ ಎಂದ ಎಸ್ಕೆಎಂ
ದೇಶದ ರೈತರ ಕಾನೂನು ಹಕ್ಕುಗಳ ಬಗ್ಗೆ ಖಾತ್ರಿಯಾಗಿ ಮಾತನಾಡದ ಕೇಂದ್ರ ಸರ್ಕಾರದ ಸಮಿತಿಯೇ ಬೋಗಸ್ ರೀತಿಯಲ್ಲಿ ಕಾಣುತ್ತಿದೆ," ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹಿರಿಯ ಸದಸ್ಯ ದರ್ಶನ್ ಪಾಲ್ ಆರೋಪಿಸಿದ್ದಾರೆ. ಕೇಂದ್ರದ ಸಮಿತಿಯಲ್ಲಿ ಪಂಜಾಬ್ನಿಂದ ಯಾವುದೇ ಪ್ರತಿನಿಧಿಯು ಇಲ್ಲ. ಕೇಂದ್ರ ರಚಿಸಿರುವ ಸಮಿತಿಯು ರೈತರ ಕಾನೂನು ಹಕ್ಕುಗಳನ್ನು ಖಾತರಿಪಡಿಸುವ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇಂಥ ಲಕ್ಷಣಗಳಿಂದಲೇ ಇದೊಂದು ಬೋಗಸ್ ಸಮಿತಿ ಎಂಬುದು ಪಕ್ಕಾ ಆಗುತ್ತದೆ," ಎಂದು ದರ್ಶನ್ ಪಾಲ್ ದೂಷಿಸಿದ್ದಾರೆ.
ಎಂಎಸ್ಪಿ ಸಮಿತಿ ರಚನೆ ಬಗ್ಗೆ ಭರವಸೆ ನೀಡಿದ್ದ ಪ್ರಧಾನಮಂತ್ರಿ
ದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ನೂರಾರು ಸಂಘಟನೆಗಳ ಸಾವಿರಾರು ರೈತರು ಉಗ್ರ ಪ್ರತಿಭಟನೆ ನಡೆಸಿದರು. ಕಳೆದ ವರ್ಷ ನವೆಂಬರ್ನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ಕನಿಷ್ಠ ಬೆಂಬಲ ಬೆಲೆಗಾಗಿ ಕಾನೂನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ರೈತರ ಬೇಡಿಕೆಗಳ ಬಗ್ಗೆ ಚರ್ಚಿಸಲು ವಿಶೇಷ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವಾಲಯವು ಗೆಜೆಟ್ ಅಧಿಸೂಚನೆಯನ್ನು ಸಹ ಹೊರಡಿಸಿದೆ.
ಕೇಂದ್ರ ಸರ್ಕಾರ ರಚಿಸಿದ ವಿಶೇಷ ಸಮಿತಿಯು ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಭಾರತೀಯ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಕೃಷಿ-ಅರ್ಥಶಾಸ್ತ್ರಜ್ಞ ಸಿಎಸ್ಸಿ ಶೇಖರ್ ಮತ್ತು ಐಐಎಂ-ಅಹಮದಾಬಾದ್ನ ಸುಖಪಾಲ್ ಸಿಂಗ್ ಮತ್ತು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಹಿರಿಯ ಸದಸ್ಯ ನವೀನ್ ಪಿ ಸಿಂಗ್ ಅನ್ನು ಒಳಗೊಂಡಿದೆ.
ಕೇಂದ್ರ ಸರ್ಕಾರದ ಎಂಎಸ್ಪಿ ಸಮಿತಿಯಲ್ಲಿ ಇರುವವರಾರು?
ರೈತ ಪ್ರತಿನಿಧಿಗಳ ಪೈಕಿ, ಸಮಿತಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಭರತ್ ಭೂಷಣ ತ್ಯಾಗಿ, ಎಸ್ಕೆಎಂನ ಮೂವರು ಸದಸ್ಯರು ಮತ್ತು ಇತರ ರೈತ ಸಂಘಟನೆಗಳ ಐವರು ಸದಸ್ಯರಾದ ಗುನ್ವಂತ್ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಕುಮಾರ್ ಚೌಧರಿ, ಗುಣಿ ಪ್ರಕಾಶ್ ಮತ್ತು ಸೈಯ್ಯದ್ ಪಾಶಾ ಪಟೇಲ್ ಇದ್ದಾರೆ.
ರೈತ ಸಹಕಾರಿ ಸಂಘದ ಇಬ್ಬರು ಸದಸ್ಯರು, ಇಫ್ಕೊ ಅಧ್ಯಕ್ಷ ದಿಲೀಪ್ ಸಂಘಾನಿ ಮತ್ತು ಸಿಎನ್ಆರ್ಐ ಪ್ರಧಾನ ಕಾರ್ಯದರ್ಶಿ ಬಿನೋದ್ ಆನಂದ್ ಅನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳ ಹಿರಿಯ ಸದಸ್ಯರು, ಐದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಕರ್ನಾಟಕ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾದ ಮುಖ್ಯ ಕಾರ್ಯದರ್ಶಿಗಳು ಸಹ ಸಮಿತಿಯ ಭಾಗವಾಗಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ ವಾಪಸ್ ಪಡೆದ ಕೃಷಿ ಕಾಯ್ದೆಗಳು
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು.
Recommended Video