ರಾಹುಲ್ ಗಾಂಧಿಗೆ ಕೇಂದ್ರ ಸಚಿವರಿಂದ ಓಪನ್ ಚಾಲೆಂಜ್
ನವದೆಹಲಿ, ಡಿಸೆಂಬರ್ 26: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧ, ಟೀಕೆ ಮಾಡಿರುವ ವಿರೋಧ ಪಕ್ಷಗಳಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸವಾಲು ಹಾಕಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಡಿಎಂಕೆ ಪಕ್ಷಗಳಿಗೆ ಜಾವಡೇಕರ್ ಸವಾಲು ಹಾಕಿದ್ದು, ಕೃಷಿ ಕಾಯ್ದೆ ಕುರಿತು ಮುಕ್ತ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಸರ್ಕಾರದ ಈ ಕಾಯ್ದೆಗಳು ರೈತರ ಪರವಾಗಿದೆಯೇ ಇಲ್ಲವೇ, ರೈತರ ಹಿತಾಸಕ್ತಿಯಿಂದ ಇವುಗಳನ್ನು ರೂಪಿಸಿದ್ದೇ ಇಲ್ಲವೇ ಎಂಬುದನ್ನು ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ.
ಮಾತುಕತೆಗೆ ಮೋದಿ ಕರೆ; ರೈತರ ಮುಂದಿನ ನಡೆಯೇನು?
ಚೆನ್ನೈನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ, "ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಹೇಳಿಕೆ ನೀಡುತ್ತಿದ್ದಾರೆ. ಕೃಷಿ ಕಾಯ್ದೆಗಳ ಕುರಿತು ರಾಹುಲ್ ಗಾಂಧಿ ಹಾಗೂ ಡಿಎಂಕೆ ಪಕ್ಷವನ್ನು ಮುಕ್ತವಾಗಿ ಚರ್ಚಿಸಲು ಆಹ್ವಾನಿಸುತ್ತಿದ್ದೇನೆ. ಬನ್ನಿ ರೈತರ ಕುರಿತು ಚರ್ಚಿಸೋಣ" ಎಂದು ಸವಾಲು ಹಾಕಿದ್ದಾರೆ.
ಗುರುವಾರ ದೆಹಲಿಯಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರಾಹುಲ್ ಗಾಂಧಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. "ಇವು ರೈತ ವಿರೋಧಿ ಕಾಯ್ದೆಗಳು. ಈ ಸತ್ಯಾಗ್ರಹದಲ್ಲಿ ಅನ್ನದಾತನಿಗೆ ನಾವೆಲ್ಲಾ ಬೆಂಬಲ ನೀಡಬೇಕಿದೆ" ಎಂದು ಹೇಳಿದ್ದರು.
ದೆಹಲಿಯಲ್ಲಿ ರೈತರ "ದೆಹಲಿ ಚಲೋ" ಶನಿವಾರಕ್ಕೆ 31ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೂ ಐದು ಸುತ್ತಿನ ಮಾತುಕತೆ ನಡೆದಿದ್ದು, ಶುಕ್ರವಾರವಷ್ಟೇ ಪ್ರಧಾನಿ ಮೋದಿ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಈ ಕುರಿತು ರೈತರು ಶನಿವಾರ ನಿರ್ಧಾರ ಕೈಗೊಳ್ಳಲಿದ್ದಾರೆ.