ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಶಾಲು ಪ್ರೀತಿ
ಬೆಂಗಳೂರು, ಮೇ 17: ನೂತನ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರ ಮುಖದಲ್ಲಿ ಸಂಭ್ರಮ ಎದ್ದುಕಾಣುತ್ತಿದೆ. ತಮ್ಮ 'ಟ್ರೇಡ್ಮಾರ್ಕ್' ಹಸಿರು ಶಾಲ್ ಧರಿಸಿ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಸಿರು ಶಾಲಿನೊಂದಿಗೆ ಅವರು ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ.
ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಯಡಿಯೂರಪ್ಪ ಹಸಿರು ಶಾಲ್ ಧರಿಸಿ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ರೈತರ ಕುರಿತಾದ ತಮ್ಮ ಬದ್ಧತೆಯನ್ನು ಪ್ರಕಟಪಡಿಸಲು ಅವರು ಹಸಿರು ಶಾಲಿನ ಮೊರೆಹೋಗಿದ್ದರು. ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಸಹ ಅವರ ಹೆಗಲಿನ ಮೇಲೆ ಹಸಿರು ಶಾಲು ಇತ್ತು.
ಚುನಾವಣೆಗೂ ಮುನ್ನ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವುದು ಅವರು ಮುಖ್ಯಮಂತ್ರಿಯಾಗಿ ತೆಗೆದುಕೊಳ್ಳುವ ಮೊದಲ ನಿರ್ಧಾರ ಆಗುವ ನಿರೀಕ್ಷೆಯಿದೆ.
ಚಿತ್ರಗಳು : ಸರ್ಕಾರ ರಚಿಸಿ, ಮುಖ್ಯಮಂತ್ರಿಯಾದ ಯಡಿಯೂರಪ್ಪ

ಯಡಿಯೂರಪ್ಪ ಅವರು ಯಾವಾಗಲೂ ಬಿಳಿ ಸಫಾರಿಯನ್ನು ಧರಿಸುತ್ತಾರೆ. ಆರ್ಎಸ್ಎಸ್ ಕಾರ್ಯಕರ್ತನಾಗಿ ಚಟುವಟಿಕೆ ಆರಂಭಿಸಿದ ಅವರು ರಾಜಕೀಯಕ್ಕೆ ಬಂದ ಬಳಿಕ ಸಫಾರಿ ಸೂಟ್ ಧರಿಸತೊಡಗಿದರು. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಅವರು ಸಫಾರಿ ಸೂಟ್ನಲ್ಲಿಯೇ ಕಾಣಿಸಿಕೊಂಡಿದ್ದರು. ಆಗ ಅವರು ಏಳು ದಿನಗಳಷ್ಟೇ ಮುಖ್ಯಮಂತ್ರಿಯಾಗಿದ್ದರು.
ಎರಡನೆಯ ಬಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಹಸಿರು ಶಾಲು ಮತ್ತೆ ಅವರ ಹೆಗಲೇರಿದೆ. ಇದು ರೈತರೆಡೆಗಿನ ಅವರ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರ ಆಪ್ತರು ಹೇಳುತ್ತಾರೆ. ಯಡಿಯೂರಪ್ಪ ಅವರು ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಕರ್ನಾಟಕ ಮೊದಲ ಮುಖ್ಯಮಂತ್ರಿ.
ಕೃಷಿ ಮತ್ತು ಪ್ರಕೃತಿಯೆಡೆಗಿನ ಅವರ ಪ್ರೀತಿ ಬಹಳ ಹಿಂದಿನಿಂದಲೂ ಇದೆ. ಹೀಗೆಂದು ಅವರು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಬರೆದುಕೊಂಡಿದ್ದಾರೆ. ಕಳೆದ 45 ವರ್ಷಗಳಿಂದ, ಇಂದಿಗೂ ಕೂಡ ನಾನು ನನ್ನ ಹೊಲಕ್ಕೆ ಹೋಗುತ್ತೇನೆ. ನನ್ನ ಮಾವು ಮತ್ತು ತೆಂಗಿನ ತೋಟವಿದೆ. ಭತ್ತ ಮತ್ತು ತರಕಾರಿಗಳನ್ನು ಬೆಳೆಯುತ್ತೇವೆ. ನನ್ನ ಊರು ಶಿಕಾರಿಪುರಕ್ಕೆ ಈಗ ಹೋದಾಗಲೂ ಹೊಲಗಳಿಗೆ ಹೋಗಿ ಅಲ್ಲಿ ಸಮಯ ಕಳೆಯುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications