ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 4 ಕೋಟಿ ರು ಅನುದಾನ ಬಿಡುಗಡೆ: ಆರಗ ಜ್ಞಾನೇಂದ್ರ
ಬೆಂಗಳೂರು/ತೀರ್ಥಹಳ್ಳಿ, ಅಕ್ಟೋಬರ್ 3: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರುಪಾಯಿಗಳಷ್ಟು ಅನುದಾನ ನಿಗದಿ ಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು, ತಕ್ಷಣಕ್ಕೆ ರೈತರಿಗೆ ವಿತರಿಸಲು, ಬಿಡುಗಡೆ ಮಾಡಲಾಗಿದೆ.
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಹೇಳಿಕೆ ನೀಡಿದ್ದು, ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಸಾವಿರ ಹೆಕ್ಟೇರ್ ಅಡಿಕೆ ಬೆಳೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದ್ದು, ಇದರ ನಿಯಂತ್ರಣ ಬಗ್ಗೆ, ತೋಟಗಾರಿಕೆ ಇಲಾಖೆ ಔಷಧಿ ಹಾಗೂ ಸಿಂಪಡಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ ಗೊಳಿಸಿದ್ದು, ರೈತ ಬಾಂಧವರು ಇದರ ಸದುಪಯೋಗ ಪಡೆಯಬೇಕು ಎಂದು ವಿನಂತಿಸಿದ್ದಾರೆ.
ಭಾರತಕ್ಕೆ ಭೂತಾನ್ ದೇಶದಿಂದ ಅಡಿಕೆ ಆಮದು: ಆತಂಕ ಬೇಡ ಎಂದ ಆರಗ ಜ್ಞಾನೇಂದ್ರ
ರೋಗ ನಿಯಂತ್ರಣಕ್ಕೆ, ಉತ್ತಮ ಗುಣ ಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು, ಪ್ರತಿ ಹೆಕ್ಟೇರ್ಗೆ, 4000 ರೂಪಾಯಿ ಅನುದಾನವನ್ನು, ಮೊದಲ ಸಿಂಪರಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ರೈತರಿಗೆ, ಅನುದಾನ ಒದಗಿಸಲಾಗುವುದು.
ಎಲೆ ಚುಕ್ಕೆ ಬಾಧೆ ಕುರಿತು, ಕಳೆದ ವಾರ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ತೋಟಗಾರಿಕಾ ಸಚಿವ ಮುನಿರತ್ನ, ಮೀನುಗಾರಿಕೆ ಸಚಿವ ಅಂಗಾರ ಅವರೊಂದಿಗೆ, ಸಭೆ ನಡೆಸಿ, ರೋಗ ನಿಯಂತ್ರಣದ ಅಗತ್ಯದ ಬಗ್ಗೆ ಚರ್ಚಿಸಿದ್ದರು.
ಸುಮಾರು 20000 ಹೆಕ್ಟೇರ್ ಅಡಿಕೆ ಬೆಲೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಬಾಧಿಸುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ, ಹಾಗೂ ರೋಗ ನಿಯಂತ್ರಣಕ್ಕೆ ಒಟ್ಟು ಎಂಟು ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ ಎಂದು ತೋಟಗಾರಿಕಾ ತಜ್ಞರು, ಶಿಫಾರಸು ಮಾಡಿದ್ದಾರೆ.
ತೀರ್ಥಹಳ್ಳಿ: ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಶಿವಮೊಗ್ಗ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಇವರ ಸಹಯೋಗದಲ್ಲಿ ಎಲೆ ಚುಕ್ಕಿ ರೋಗ ಬಾಧಿತ ರೈತರ ಬೃಹತ್ ಪ್ರತಿಭಟನಾ ಸಮಾವೇಶ ಹಾಗೂ ಮೇಗರವಳ್ಳಿ ಅರೆಕಲ್ ಶಾಂತವೇರಿ ಗೋಪಾಲ ಗೌಡ ವೃತ್ತದಿಂದ ಮೆರವಣಿಗೆ ಶುರುವಾಗಿ ನಾಡ ಕಚೇರಿವರಗೆ ಹೋಗಿ ಉಪ ತಹಶೀಲ್ದಾರ್ ರವರಿಗೆ ಒತ್ತಾಯ ಪತ್ರ ಸಲ್ಲಿಸಲು ನಿರ್ಧರಿಸಿದೆ.
ದೇಶಕ್ಕೆ ಭೂತಾನ್ ಅಡಿಕೆ ಆಮದಿಗೆ ಆಂತಕ ವ್ಯಕ್ತಪಡಿಸಿದ ಕೋಟೆ ನಾಡಿನ ರೈತರು!
ಅಕ್ಟೋಬರ್ 6ರಂದು ನಡೆಯುವ ಈ ಸಭೆಗೆ ಅರೇಹಳ್ಳಿ, ತೀರ್ಥಮುತ್ತೂರು, ಕೆಂದಾಳ ಬೈಲು, ಉಂಟುರು ಕಟ್ಟೆ ಕೈಮರ, ಮುಲುಬಾಗಿಲು, ಮೇಗರವಳ್ಳಿ, ನಾಲೂರು, ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಲು ಕೋರಲಾಗಿದೆ.
ರಾಜ್ಯ ರೈತ ಮುಖಂಡರು ಕೆ.ಟಿ .ಗಂಗಾಧರ್, ಹೊಸಕೊಪ್ಪ ಸುಂದರೇಶ, ನೆಂಪೆದೇವರಾಜ್,ಕೋಡ್ಲು ವೆಂಕಟೇಶ್ ,ಕಂಬಳಿಗೆರೆ ರಾಜೇಂದ್ರ, ಶಿವಾನಂದ ಕರ್ಕಿ, ಅನಿತಾ ಪ್ರವೀಣ್,ಕೆ ಪಿ ಶ್ರೀಪಾಲ್ ಆಗಮಿಸಲಿದ್ದಾರೆ, ಪ್ರಗತಿಪರ ರೈತರು, ಚಿಂತಕರು, ಕನ್ನಡಪರ ಹೋರಾಟಗಾರರು ಆಗಮಿಸಬೇಕಾಗಿ ಪಡುವಳ್ಳಿ ಹರ್ಷೇಂದ್ರಕುಮಾರ್ ಹಾಗೂ ಕೊರೋಡಿ ಕೃಷ್ಣಪ್ಪ ಮನವಿ ಮಾಡಿದ್ದಾರೆ.