ರೈತರ ಆತ್ಮಹತ್ಯೆಗಳಿಗೆ ಮಿಡಿಯದ ನಾಗರೀಕತೆ ಕೊನೆಯಾಗುವ ಮುನ್ಸೂಚನೆ
ಕೃಷಿ ಕ್ಷೇತ್ರದ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು, ಇದಕ್ಕೆ ಕಾರಣಗಳು ಹಲವು. ಲೋಕದಲ್ಲಿ ಏನೇ ಬದಲಾವಣೆ ಆದರೂ ಅದು ರೈತನ ಬುಡಕ್ಕೇ ಬಂದು ನಿಲ್ಲುವುದನ್ನು ನಾವೆಲ್ಲಾ ಕಾಣುತ್ತಿದ್ದೇವೆ. ಅದಕ್ಕೆ ಇತ್ತೀಚಿನ ಕೊರೊನಾ ಸೋಂಕು ಕೂಡಾ ಒಂದು ಉದಾಹರಣೆ.
ಕೃಷಿ ಬಿಕ್ಕಟ್ಟು ರೈತರ ಮತ್ತು ರೈತ ಕಾರ್ಮಿಕರ ಆತ್ಮಹತ್ಯೆ ರೂಪದಲ್ಲಿ ಪ್ರಕಟವಾಗುತ್ತಾ ಬಂದಿರುವುದು ಆಧುನಿಕ ಭಾರತದ, ಜಾಗತೀಕರಣದ ಸದಸ್ಯ ಭಾರತದ ಸಮಕಾಲೀನ ಇತಿಹಾಸ.
ಇದೀಗ NCRB ರೈತರ ಆತ್ಮಹತ್ಯೆಗಳ ಸಂಬಂಧ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ದೇಶವನ್ನು ಯೋಚಿಸುವಂತೆ ಮಾಡಬೇಕಿತ್ತು. ಸರ್ಕಾರಗಳು, ಮಾಧ್ಯಮಗಳು ಅದರ ಬಗ್ಗೆ ಗಂಭೀರವಾಗಿ ಮಾತನಾಡಬೇಕಿತ್ತು.

ಆದರೆ ವಾಸ್ತವದಲ್ಲಿ ಇನ್ನಾವುದೋ ಕಾಮಗಾರಿ ವರದಿಯನ್ನು ನೋಡುವ ಕಣ್ಣುಗಳಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳ ವರದಿಗಳನ್ನೂ ನೋಡುವ ಕರುಳಿಲ್ಲದ, ಕಣ್ಣಿಲ್ಲದ, ಹೃದಯವಿಲ್ಲದ ಸಮಾಜ ನಿರ್ಮಾಣಗೊಂಡಿದೆ. ಇಂಥದೊಂದು ಸ್ಥಿತಿ ನಾಗರಿಕತೆಯ ಅಂತ್ಯದ ಮುನ್ನುಡಿಯಂತೆ ನನಗೆ ಗೋಚರವಾಗುತ್ತಿದೆ.
2019ರಲ್ಲಿ ರೈತರ ಆತ್ಮಹತ್ಯೆಗಳು
ಕೃಷಿ ಕ್ಷೇತ್ರದಲ್ಲಿ ತೊಡಗಿರುವ 10,281 ಮಂದಿ 2019 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 5,957 ಮಂದಿ ರೈತರು, 4,324 ಕೃಷಿ ಕಾರ್ಮಿಕರು ಸೇರಿದ್ದಾರೆ. ದೇಶದ ಒಟ್ಟಾರೆ ಆತ್ಮಹತ್ಯೆ ಪ್ರಕರಣಗಳಲ್ಲಿ ಇದು ಶೇಕಡಾ 7.4 ರಷ್ಟು. ರೈತರ ಒಟ್ಟು ಆತ್ಮಹತ್ಯಾ ಪ್ರಕರಣ 5,957 ರಲ್ಲಿ 5,563 ಮಂದಿ ಪುರುಷರು, ಇನ್ನುಳಿದ 394 ಮಂದಿ ಮಹಿಳೆಯರಾಗಿದ್ದಾರೆ. ಅದೇ ರೀತಿ ಕೃಷಿ ಕಾರ್ಮಿಕರ ಪೈಕಿ ಒಟ್ಟು 4,324 ಮಂದಿಯಲ್ಲಿ 3,749 ಮಂದಿ ಪುರುಷರು ಇನ್ನುಳಿದ 575 ಮಂದಿ ಮಹಿಳೆಯರಾಗಿದ್ದಾರೆ.

ಎಂದಿನಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಿವೆ. ನಂತರದಲ್ಲಿ ಅಂಧ್ರಪ್ರದೇಶ, ಮಧ್ಯಪ್ರದೇಶ, ಚತ್ತೀಸಘಡ ಮತ್ತು ತೆಲಂಗಾಣ ರಾಜ್ಯಗಳು ಸ್ಥಾನ ಪಡೆದಿವೆ.
ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಉತ್ತರಾಖಂಡ, ಮಣಿಪುರ, ಚಂಡೀಘರ್, ದಮನ್ ಮತ್ತು ದಿಯು, ದೆಹಲಿ, ಲಕ್ಷದ್ವೀಪ ಮತ್ತು ಪುದುಚೇರಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ರೈತರ ಅಥವಾ ರೈತ ಕಾರ್ಮಿಕರ ಆತ್ಮಹತ್ಯಾ ಪ್ರಕರಣಗಳು ವರದಿಯಾಗಿಲ್ಲ.












Click it and Unblock the Notifications