ಭಾರತಕ್ಕೆ ಭೂತಾನ್ ದೇಶದಿಂದ ಅಡಿಕೆ ಆಮದು: ಆತಂಕ ಬೇಡ ಎಂದ ಆರಗ ಜ್ಞಾನೇಂದ್ರ
ಬೆಂಗಳೂರು, ಸೆಪ್ಟೆಂಬರ್ 30: ನೆರೆಯ ದೇಶ ಭೂತಾನ್ನಿಂದ ಪ್ರತಿ ವರ್ಷ 17,000 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿ ಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಅವಕಾಶ ನೀಡಿದೆ. ಇದರಿಂದ ದೇಶಿಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದ ಅಡಿಕೆ ಬೆಳೆಗಾರರಿಗೆ ಅಭಯ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ಅವರು, ''ಪ್ರಸ್ತುತ ಭಾರತದ ದೇಶದಿಂದ ಭೂತಾನ್ ದೇಶಕ್ಕೆ ಸಂಸ್ಕರಿತ ಅಡಿಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದೆ. ಭೂತಾನ್ ನಿಂದ ಕೇವಲ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಮಾತ್ರ ಕೇಂದ್ರ ಸರ್ಕಾರ ಅನುಮತಿಸಿದೆ'' ಎಂದು ಅವರು ಹೇಳಿದರು.
''ನೆರೆಯ ಭೂತಾನ್ ದೇಶವು, ಭಾರತದ ಪರಂಪರಾಗತ ಮಿತ್ರ ದೇಶವಾಗಿದೆ. ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆದುಕೊಂಡು ಬಂದಿದೆ. ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದು ಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ಭೂತಾನ್ ಅಡಿಕೆ ಆಮದು ವಿಚಾರವಾಗಿಯೂ ಕೇಂದ್ರದೊಂದಿಗೆ ಮಾತುಕತೆ ನಡೆಸಲಾಗಿದೆ. ಬೆಳೆಗಾರರಿಗೆ, ಯಾವುದೇ ಗೊಂದಲ ಆತಂಕ ಬೇಡ'' ಎಂದು ಸಚಿವರು ತಿಳಿಸಿದ್ದಾರೆ.

ದೆಹಲಿಗೆ ನಿಯೋಗ ಕರೆದೊಯತ್ತೇವೆ
ವಿದೇಶಿ ಹಸಿರು ಅಡಿಕೆಯಿಂದ ಕರ್ನಾಟಕದ ಅಡಿಕೆ ಉತ್ಪನ್ನದಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಮನವರಿಕೆ ಮಾಡಿಕೊಡಲಾಗುವುದು. ಈ ಸಂಬಂಧ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗ ಒಂದನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರ ಕಳೆದ ಬುಧವಾರ ವಾರ್ಷಿಕವಾಗಿ ಭೂತಾನ್ನಿಂದ ಕನಿಷ್ಠ ಆಮದು ಬೆಲೆ (ಎಂಐಪಿ) ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಅನುಮತಿ ನೀಡಿದೆ. ಇದರ ಬೆನ್ನಲ್ಲೆ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದಿಂದ ನೋಂದಣಿ ಪ್ರಮಾಣ ಪತ್ರ ಪಡೆದವರು ಆಮದು ಮಾಡಿಕೊಳ್ಳಲು ಸಜ್ಜಾಗಲಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕದ ಬೆಳೆಗಾರರು, ಮಾರುಕಟ್ಟೆ ವ್ಯಾಪಾರಿಗಳು ಆತಂಕಗೊಂಡಿದ್ದರು ಎನ್ನಲಾಗಿದೆ.












Click it and Unblock the Notifications