ಪಿಎಂ ಕಿಸಾನ್ ಯೋಜನೆಯಡಿ ರೈತ ಫಲಾನುಭವಿಗಳ ಸಂಖ್ಯೆ 10 ಕೋಟಿ
ನವದೆಹಲಿ, ನವೆಂಬರ್ 22: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪಿಎಂ ಕಿಸಾನ್ ಯೋಜನೆಯಡಿ ರೈತರ ಫಲಾನುಭವಿಗಳ ಸಂಖ್ಯೆಯು 10 ಕೋಟಿ ದಾಟಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಸೋಮವಾರ ನೀಡಿದೆ. 2019ರ ಆರಂಭದಲ್ಲಿ ಮೊದಲ ಕಂತಿನ ಅವಧಿಯಲ್ಲಿ ಫಲಾನುಭವಿಗಳ ಸಂಖ್ಯೆ 3.16 ಕೋಟಿ ಇತ್ತು ಎಂದು ಕೇಂದ್ರ ತಿಳಿಸಿದೆ. ಹೀಗಾಗಿ ರೈತ ಫಲಾನುಭವಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಸರ್ಕಾರದ ಕಡೆಯಿಂದ ಈ ಮಾಹಿತಿಯನ್ನು ನೀಡಲಾಗಿದೆ. ಪ್ರತಿ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಖರ್ಗೆ ಆರೋಪಿಸಿದ್ದರು.
ಜೀವ ಬಿಟ್ಟೆವು, ಜಮೀನು ಬಿಡುವುದಿಲ್ಲ: ಕೈಗಾರಿಕಾ ಕಾರಿಡಾರ್ಗೆ ಬ್ಯಾಡಗಿ ರೈತರ ವಿರೋಧ
10 ಕೋಟಿ ರೈತರಿಗೆ ಲಾಭ ಈ ಯೋಜನೆಯಡಿ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಲಾಭವನ್ನು ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಈ ಯೋಜನೆಯನ್ನು ಫೆಬ್ರವರಿ 2019ರಲ್ಲಿ ಘೋಷಿಸಲಾಯಿತು. ಆದರೆ, ಇದನ್ನು ಡಿಸೆಂಬರ್, 2018ರಿಂದ ಜಾರಿಗೆ ತರಲಾಯಿತು. ಕೃಷಿ ಸಚಿವಾಲಯ ಹೇಳಿಕೆಯಲ್ಲಿ ಪಿಎಂ ಕಿಸಾನ್ ಅಡಿಯಲ್ಲಿ ಯಾವುದೇ ಕಂತಿನ ಅವಧಿಗೆ ಪ್ರಯೋಜನಗಳನ್ನು ವಿತರಿಸುವ ರೈತರ ಸಂಖ್ಯೆಯು ಈಗ 10 ಕೋಟಿಗೂ ಅಧಿಕ ರೈತರನ್ನು ದಾಟಿದೆ. ಆರಂಭದಲ್ಲಿ ಫಲಾನುಭವಿಗಳ ಈ ಸಂಖ್ಯೆಯು 3.16 ಕೋಟಿ ಇತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
2 ಲಕ್ಷ ಕೋಟಿ ರೂ. ಹೆಚ್ಚು ಆರ್ಥಿಕ ಸಹಾಯ
'ಪ್ರಧಾನಿ ಕಿಸಾನ್ ಯೋಜನೆಯು ಮೂರು ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಕೋಟ್ಯಂತರ ಅಗತ್ಯವಿರುವ ರೈತರಿಗೆ ಎರಡು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಆರ್ಥಿಕ ಸಹಾಯವನ್ನು ಯಶಸ್ವಿಯಾಗಿ ಒದಗಿಸಿದೆ' ಎಂದು ಸಚಿವಾಲಯ ಹೇಳಿದೆ. ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಇದುವರೆಗೆ 12 ಕಂತುಗಳನ್ನು ಬಿಡುಗಡೆ ಮಾಡಿ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ.
3ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ
ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ಜನರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿದ್ದರೆ ಇನ್ನೊಂದೆಡೆ, ಕೇಂದ್ರ ಸರ್ಕಾರವು ಅನೇಕ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ನಡೆಸುತ್ತಿದೆ. ಉದಾಹರಣೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರವು ರೈತರಿಗಾಗಿ ನಡೆಸುತ್ತಿದೆ. ಈ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈ ಯೋಜನೆಯಡಿ ತಲಾ 2000 ರೂ.ಗಳಂತೆ 3 ಕಂತುಗಳಲ್ಲಿ ವಾರ್ಷಿಕವಾಗಿ 6,000 ರೂ. ನೀಡಲಾಗುತ್ತದೆ. ಈವರೆಗೆ 12 ಕಂತುಗಳನ್ನು ರೈತರ ಬ್ಯಾಂಕ್ ಖಾತೆಗೆ ಕಳುಹಿಸಲಾಗಿದ್ದು, ಇದೀಗ 13ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ.
ಈ ಯೋಜನೆಯಲ್ಲಿ ಮತ್ತಷ್ಟು ಪಾರದರ್ಶಕತೆ
ರೈತರು 13ನೇ ಕಂತಿನ ಪ್ರಯೋಜನವನ್ನು ಪಡೆಯಲು ಬಯಸಿದರೆ ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ ಕೆವೈಸಿಯ ಸ್ಥಿತಿಯನ್ನು ಪರಿಶೀಲಿಸಬೇಕು. ನೀವು ಮೊದಲು ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ, ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಸ್ತಿತ್ವದಲ್ಲಿರುವ ಫಲಾನುಭವಿಗಳ ಭೂಮಿಯ ವಿವರಗಳನ್ನು ರಾಜ್ಯಗಳ ಭೂ ದಾಖಲೆಗಳ ಪ್ರಕಾರ ಬಿತ್ತನೆ ಮಾಡಲಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ರಾಜ್ಯಗಳ ಡಿಜಿಟಲ್ ಭೂ ದಾಖಲೆಗಳೊಂದಿಗೆ ಕ್ರಿಯಾತ್ಮಕ ಸಂಪರ್ಕವನ್ನು ಸರಾಗವಾಗಿ ಖಾತ್ರಿಪಡಿಸಲಾಗುತ್ತದೆ, " ಎಂದು ಪಿಎಂ ಕಿಸಾನ್ ಯೋಜನೆಯಲ್ಲಿ ಹೇಳಲಾಗಿದೆ. ಈ ಯೋಜನೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರಲು ರೈತರ ಇ-ಕೆವೈಸಿ ಮತ್ತು ಆಧಾರ್ ಪಾವತಿ ಸೇತುವೆ (ಎಪಿಬಿ) ಬಳಸಿಕೊಂಡು ಪಾವತಿಗಳನ್ನು ಸಹ ಸಚಿವಾಲಯವು ಪ್ರಾರಂಭಿಸಿದೆ.
ಪಿಎಂ ಕಿಸಾನ್ ಕೆವೈಸಿ ಚೆಕ್ ಮಾಡಿ
ಈ ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಅರ್ಹವಾಗಿರುವ ರೈತ ಕುಟುಂಬಗಳನ್ನು ಗುರುತಿಸಲಾಗುತ್ತದೆ. ಉನ್ನತ ಆರ್ಥಿಕ ಸ್ಥಿತಿಯ ಕೆಲವು ವರ್ಗಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ. ಇನ್ನು ರೈತರು ನಿಮ್ಮ ಸ್ಟೇಟಸ್ನಲ್ಲಿರುವ ಅಗತ್ಯ ಮಾಹಿತಿಯನ್ನು ಪರಿಶೀಲಿಸುವುದು ಅವಶ್ಯಕ. ಏಕೆಂದರೆ ಈ ಮಾಹಿತಿ ನೀವು ತಿಳಿದುಕೊಂಡರೆ ಮಾತ್ರ ರೈತರು ಮುಂದಿನ ಕಂತಿನ ಹಣವನ್ನು ಪಡೆಯಬಹುದು. ಹಾಗಾಗಿ ರೈತರು ತಮ್ಮ 13ನೇ ಕಂತಿಗಾಗಿ ತಮ್ಮ ಪಿಎಂ ಕಿಸಾನ್ ಯೋಜನೆಯ ಕೆವೈಸಿಯನ್ನು ಒಮ್ಮೆ ಸರಿಯಾಗಿ ಚೆಕ್ ಮಾಡಿಕೊಳ್ಳುವುದು ಒಳಿತು.