ಕಬ್ಬಿನ ದರ ಹೆಚ್ಚಳ ಮಾಡದಿದ್ರೆ ಉಗ್ರ ಹೋರಾಟ; ಮಂಡ್ಯದಲ್ಲಿ ಸಿಡಿದೆದ್ದ ರೈತರು
ಮಂಡ್ಯ, ಅಕ್ಟೋಬರ್, 05: ಒಂದುಟನ್ ಕಬ್ಬಿಗೆ 4,500 ರೂಪಾಯಿ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಾನುವಾರುಗಳೊಂದಿಗೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದರು. ಹೆದ್ದಾರಿ ತಡೆ ಮಾಡುತ್ತಿದ್ದ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.
ನಗರ ಹೊರವಲಯದ ವಿ.ಸಿ.ಫಾರಂ ಗೇಟ್ ಬಳಿ ನೂರಾರು ರೈತ ಸಂಘದ ಕಾರ್ಯಕರ್ತರು ಸೇರಿದ್ದರು. ಟ್ರ್ಯಾಕ್ಟರ್, ಎತ್ತಿನಗಾಡಿ, ಜಾನುವಾರುಗಳೊಂದಿಗೆ ಆಗಮಿಸಿದ್ದ ರೈತ ಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ ಧರಣಿ ಕುಳಿತ್ತಿದ್ದರು. ಬಳಿಕ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, "ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ದರ ಪರಿಷ್ಕರಣೆ ಮಾಡಿಲ್ಲ. ಐದು ವರ್ಷಗಳಲ್ಲಿ ಕೇವಲ 120 ರೂಪಾಯಿ ಬೆಲೆ ಹೆಚ್ಚಿಸಿದೆ. ಹಾಗಾಗಿ ಟನ್ ಕಬ್ಬಿಗೆ 4,500 ರೂಪಾಯಿ ಹಣ ನೀಡಬೇಕು" ಎಂದು ಒತ್ತಾಯಿಸಿದರು.
ಮಂಡ್ಯ; ಅಕ್ಟೋಬರ್ 6ರಿಂದ ಮಹದೇಶ್ವರ ಜ್ಯೋತಿ ಯಾತ್ರೆ, ಇಲ್ಲಿದೆ ಮಾಹಿತಿ
ಹಣದುಬ್ಬರದ ಹೆಸರಿನಲ್ಲಿ ಅಗತ್ಯವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡಿರುವಾಗ, ರೈತರ ಬೆಳೆಗಳಿಗೆ ಬೆಲೆ ಯಾಕೆ ಕೊಡುತ್ತಿಲ್ಲ? ಅನ್ನದಾತರು ಬೆಳೆದ ಕಬ್ಬು, ಭತ್ತ, ರಾಗಿ ಸೇರಿದಂತೆ ಅನೇಕ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸದೆ ಶೋಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಕ್ಯಾರೆ ಅನ್ನದ ಜನಪ್ರತಿನಿಧಿಗಳು, ಜನಾಕ್ರೋಶ
ನಾವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿದ್ದವು. ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರು ರೈತರ ಬೇಡಿಕೆಗಳನ್ನು ಪರಾಮರ್ಶಿಸಿ ಈಡೇರಿಸುವ ಭರವಸೆಯನ್ನು ನೀಡಿದ್ದರು. ಆದರೆ ಎರಡು ತಿಂಗಳಾದರೂ ಕೂಡ ರೈತರ ಮನವಿಗೆ ಅವರು ಸ್ಪಂದಿಸಿಲ್ಲ. ರೈತ ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ವಂಚಿಸಿದ್ದಾರೆ. ಈಗಲೂ ಅನ್ನದಾತರ ಕೂಗಿಗೆ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ತಡೆ ಚಳವಳಿ ನಡೆಸುತ್ತಿರುವುದಾಗಿ ಹೇಳಿದ್ದರು.
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಟನ್ ಕಬ್ಬಿಗೆ 4,500 ರೂಪಾಯಿ ನೀಡಬೇಕು ಎನ್ನುವುದು ರೈತ ಸಂಘದ ಪ್ರಮುಖ ಬೇಡಿಕೆ ಆಗಿದೆ. ಈ ಬೇಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸದೆ ನಿರ್ಲಕ್ಷ್ಯವಹಿಸಿವೆ. ರಾಜಕೀಯ ಪಕ್ಷಗಳ ನಾಯಕರಿಗೆ ರೈತರ ಸಂಕಷ್ಟ, ಸಮಸ್ಯೆಗಳ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ಲ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳನ್ನು ದೊರಕಿಸುವ ಬಗ್ಗೆ ಅವೇಶನದಲ್ಲಾಗಲಿ ಮತ್ತು ಬೇರೆ ಸಮಯದಲ್ಲೂ ಮಾತನಾಡದೆ ಮೌನದಿಂದ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಸಿದರು.
ವೋಟ್ ರಾಜಕಾರಣಿಗಳು ಎಂದು ಕಿಡಿ
ನಂತರ ರೈತ ಸಂಘದ ಹಿರಿಯ ಮುಖಂಡ ಮರಿಚನ್ನೇಗೌಡ ಮಾತನಾಡಿ, "ಚುನಾವಣೆ ಬಂದ ಸಮಯಲ್ಲಿ ಮಾತ್ರ ರೈತರು ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ರೈತರ ಅಭ್ಯುದಯಕ್ಕೆ ಯಾವುದೇ ಪಕ್ಷಗಳು ಕೊಡುಗೆ ನೀಡಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ರೈತನ ಸಂಕಷ್ಟ ದೂರವಾಗಿಲ್ಲ. ಅನ್ನದಾತರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಯಾವೊಬ್ಬ ರಾಜಕಾರಣಿಯೂ ಆಲೋಚನೆಯನ್ನೇ ನಡೆಸದಿರುವುದು ಈ ದೇಶದ ದುರಂತ," ಎಂದು ಅಸಮಾಧಾನವನ್ನು ಹೊರಹಾಕಿದರು. ಬರೀ ಕಬ್ಬು ಮಾತ್ರವಲ್ಲದೇ, ಹಾಲು, ಭತ್ತ, ರಾಗಿ, ಜೋಳ ಸೇರಿದಂತೆ ರೈತರು ಉತ್ಪಾದಿಸುವ ಯಾವುದೇ ಬೆಳೆಗಳಿಗೂ ಸರಿಯಾದ ಬೆಲೆ ನೀಡದೆ ವಂಚಿಸುತ್ತಾ ಬರುತ್ತಿವೆ.
ಸಮಸ್ಯೆಗೆ ಸ್ಪಂದಿಸದಿದ್ದರೆ ಚಳವಳಿ ಎಚ್ಚರಿಕೆ
ಸ್ವಾಮಿನಾಥನ್ ವರದಿ ಜಾರಿಗೊಳಿಸದೆ ರೈತರಿಗೆ ಅನ್ಯಾಯ ಮಾಡುತ್ತಿವೆ. ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಮೈಸೂರು ದಸರಾ ತಡೆ ನಡೆಸುತ್ತಿದ್ದೇವೆ. ಮುಂದೆಯೂ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಕೋಣನಹಳ್ಳಿ ಜವರೇಗೌಡ, ತಗ್ಗಹಳ್ಳಿ ಪ್ರಸನ್ನ, ಗೋಪಾಲಪುರ ಜವರೇಗೌಡ, ಸುರೇಶ್, ಪಣಕನಹಳ್ಳಿ ರಮೇಶ್, ಧನಂಜಯ, ಬೊಮ್ಮೇಗೌಡ, ಶಿವಳ್ಳಿ ಚಂದ್ರ, ಮಲ್ಲನಾಯಕನಕಟ್ಟೆ ವಿಜಯಕುಮಾರ್, ಗೋವಿಂದೇಗೌಡ, ಹರವು ಪ್ರಕಾಶ್, ಹುಲಿವಾನ ಜಗದೀಶ್, ರಾಘವೇಂದ್ರ, ಮಂಜೇಶ್, ಟಿ.ಎಸ್.ಪ್ರಸನ್ನ ಇತರರಿದ್ದರು.