ಬೆಂಗಳೂರು ಕೃಷಿ ವಿವಿ ನೂತನ ಕುಲಪತಿಯಾಗಿ ಡಾ. ರಾಜೇಂದ್ರ ಪ್ರಸಾದ್
ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ)ಯ ನೂತನ ಕುಲಪತಿಯಾಗಿ ಡಾ.ಎಸ್. ರಾಜೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ.
ರಾಜೇಂದ್ರ ಪ್ರಸಾದ್ ಅವರನ್ನು ಮುಂದಿನ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿ ರಾಜ್ಯಪಾಲರಾದ ವಿ.ಆರ್. ವಾಲಾ ಆದೇಶ ಹೊರಡಿಸಿದ್ದಾರೆ. ರಾಜೇಂದ್ರ ಪ್ರಸಾದ್ ಅವರು ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದವರು.ಇದುವರೆಗೆ 295 ವೈಜ್ಞಾನಿಕ ಪ್ರಕಟಣೆಗಳನ್ನು ಪ್ರಕಟಿಸಿರುತ್ತಾರೆ. ಏಳು ಪಿಹೆಚ್.ಡಿ, ಹದಿನಾಲ್ಕು ಎಂ.ಎಸ್ಸಿ(ಕೃಷಿ) ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಇವರ ವಿದ್ಯಾರ್ಥಿಯು ಪ್ರಧಾನಮಂತ್ರಿಯ ಫೋಲೋಶಿಪ್ ಪಡೆದಿದ್ದಾರೆ. ಥೈಲ್ಯಾಂಡ್, ನೆದರ್ ಲ್ಯಾಂಡ್ಸ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಬೀಜೋತ್ಪಾದನೆಯ ಕುರಿತು ಫೋಲೋಶಿಪ್ ಉನ್ನತ ತರಬೇತಿಯನ್ನು ಪಡೆದಿದ್ದಾರೆ.

ಆರಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋದನಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಪಡೆದಿರುತ್ತಾರೆ ಮತ್ತು ಹದಿಮೂರಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಅಧ್ಯಕ್ಷ , ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಆರಕ್ಕೂ ಹೆಚ್ಚು ರಾಜ್ಯ , ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಫಿಲಿಪೈನ್ಸ್, ತೈವಾನ್, ನೆದರ್ ಲ್ಯಾಂಡ್ಸ್, ಜರ್ಮನಿ, ಪ್ರಾನ್ಸ್, ಬೆಲ್ಜಿಯಮ್, ಮಲೇಷಿಯ, ನೇಪಾಳ, ಸಿಂಗಾಪುರ, ಅಮೇರಿಕ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಕಾರ್ಯಗಾರ, ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. ಹದಿನೆಂಟಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಿಗೆ ಪ್ರಧಾನ ಸಂಶೋಧಕರಾಗಿದ್ದಾರೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ಭಾರತೀಯ ಬೀಜ ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಪ್ರಸ್ತತ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಜಿಕೆವಿಕೆಯ ಕೃಷಿ ಕಾಲೇಜಿನ ಡೀನ್(ಕೃಷಿ)ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications