ಬೆಳೆಗಾರರಿಗೆ ಸಿಹಿ ಸುದ್ದಿ; ಕಬ್ಬಿಗೆ FRP ದರ ನಿಗದಿ ಮಾಡಲಿರುವ ಸಿಎಂ
ಬೆಂಗಳೂರು, ನವೆಂಬರ್ 10: ಕಬ್ಬಿಗೆ ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಯದಾಯಕ ದರ) ಹೆಚ್ಚುವರಿ ದರ ನಿಗದಿಗೆ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿಗೆ ಐದು ದಿನದಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ. ನ.20ರ ಒಳಗಾಗಿ ಸಲ್ಲಿಕೆಯಾಗುವ ವರದಿ ಆಧರಿಸಿ ಮುಖ್ಯಮಂತ್ರಿಗಳು ಹೆಚ್ಚುವರಿ ಬೆಲೆ ಘೋಷಣೆ ಮಾಡಲಿದ್ದಾರೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಎಫ್ಆರ್ಪಿ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ಕೆಲವು ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ರಾಜ್ಯದ ಜಿಲ್ಲೆಗಳಲ್ಲಿ ಕಳೆದ 11 ದಿನದಿಂದ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಗುರುವಾರ ಸಭೆ ನಡೆಸಿದರು. ಈ ವೇಳೆ ನಭೆ ನಡೆಸಿ ರೈತರ ಸಮಸ್ಯೆ ಆಲಿಸಿದ ಸಚಿವರು ಈ ರೀತಿ ಭರವಸೆ ನೀಡಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು. ಕಬ್ಬಿನ ಉತ್ಪಾದನಾ ವೆಚ್ಚ ಶೇ. 20ರಷ್ಟು ಏರಿಕೆಯಾಗಿದೆ. ರಸಗೊಬ್ಬರ, ಡೀಸೆಲ್, ಬೀಜ, ಕೂಲಿ ಸಾಗಾಣಿಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ಆರ್ಪಿ ಬೆಲೆಯು ಇಳುವರಿ ಆಧಾರ ಪರಿಗಣಿಸುವ ಕಾರಣ ರೈತರಿಗೆ ಕಳೆದ ವರ್ಷಕ್ಕಿಂತ ಪ್ರತಿ ಟನ್ಗೆ ಸರಾಸರಿ 50 ರೂ. ಕಡಿಮೆ ಹಣ ಸಿಗುತ್ತಿದೆ ಈ ಅನ್ಯಾಯ ಸರಿಪಡಿಸಬೇಕು ಎಂದರು.

ಎಫ್ಆರ್ಪಿ ದರ ಕನಿಷ್ಠ 3500 ನಿಗದಿ ಮಾಡಿ
ಕಬ್ಬಿನ ಎಫ್ಆರ್ಪಿ ದರ ಕನಿಷ್ಠ 3500 ನಿಗದಿಗೊಳಿಸಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಳೆದ ವರ್ಷಕ್ಕಿಂತ 250- 300 ಏರಿಕೆ ಕಂಡಿದೆ. ಕಬ್ಬಿನ ಉಪ ಉತ್ಪನ್ನಗಳ ಲಾಭ, ಯಥೆನಾಲ್ ಲಾಭ ಸೇರಿಸಿ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಬೇಕು.
ಕಬ್ಬಿನ ಕಟಾವು ಬಳಿಕವು ವಿಳಂಬ ಮಾಡುವ ಕಾರ್ಖಾನೆಗಳು ಕಟಾವಿನ ವಿಳಂಬದ ಅವಧಿಯ ನಾಲ್ಕರಿಂದ ಐದು ತಿಂಗಳ ಅವಧಿಗೆ ಶೇ. 15ರಷ್ಟು ಹೆಚ್ಚುವರಿ ಬಡ್ಡಿ ಸೇರಿಸಿ ಹಣ ರೈತರಿಗೆ ಕೊಡಬೇಕು. ಇದರಿಂದ ರೈತರಿಗೆ ತೂಕದಲ್ಲಿ, ಇಳುವರಿಯಲ್ಲಿ, ಸಾಲದ ಬಡ್ಡಿ ಪಾವತಿಯಲ್ಲಿ ನಷ್ಟವಾಗುವುದು ತಪ್ಪುತ್ತದೆ ಎಂದು ಅವರು ವಿವರಿಸಿದರು.
ಕಬ್ಬು ಬೆಳೆ ಕಟಾವು ಕೂಲಿಕಾರರು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಸಂದರ್ಭದಲ್ಲಿ, ಆಯಾ ಕಾರ್ಖಾನೆಗಳನ್ನು ಜವಾಬ್ದಾರಿ ಮಾಡಿ ಕಾರ್ಖಾನೆಗಳಿಂದ ಹೆಚ್ಚುವರಿ ವಸೂಲಿ ಮಾಡಿ ರೈತರಿಗೆ ಮರಳಿ ಕೊಡಿಸಬೇಕು.

ನೆರೆ ರಾಜ್ಯಗಳಲ್ಲಿ ಟನ್ ಕಬ್ಬಿಗೆ ಹೆಚ್ಚು ಬೆಲೆ ಇದೆ
ಉತ್ತರ ಪ್ರದೇಶದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರೂ., ಪಂಜಾಬ್ ರಾಜ್ಯದಲ್ಲಿ 3,800 ದರ ನಿಗದಿ ಮಾಡಿದ್ದಾರೆ. ಆಂಧ್ರ ಪ್ರದೇಶದಲ್ಲಿ 9.5 ಇಳುವರಿ ಬರುವ ಕಬ್ಬಿಗೆ ಎಫ್ಆರ್ಪಿ ದರಕ್ಕಿಂತ ಹೆಚ್ಚುವರಿಯಾಗಿ 300 ರೂ. ದರ ನಿಗದಿ ಮಾಡಿ ರೈತರಿಗೆ ಕೂಡಿಸುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಹೆಚ್ಚು ಇಳುವರಿ ಇರುವ ಕಾರಣ ಕನಿಷ್ಠ 500ರೂ. ಅನ್ನು ಹೆಚ್ಚುವರಿಯಾಗಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಸಂಪೂರ್ಣವಾಗಿ ಭರಿಸುತ್ತವೆ. ರಾಜ್ಯ ಸರ್ಕಾರ ಪ್ರತಿ ಟನ್ಗೆ 190 ರೂ. ಗಳನ್ನು ರೈತರ ಖಾತೆಗೆ ಸಹಾಯಧನ ರೂಪದಲ್ಲಿ ನೇರವಾಗಿ ನೀಡುತ್ತದೆ. ಇದನ್ನು ಕರ್ನಾಟಕದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.

ಪ್ರತಿ ಎಕರೆ ಕಬ್ಬು ಬೆಳೆಗಾರರಿ 5,000 ಸಹಾಯಧನ
ತೆಲಂಗಾಣ ರಾಜ್ಯದಲ್ಲೂ ಸಹ ಪ್ರತಿ ಎಕರೆ ಕಬ್ಬು ಬೆಳೆಯಲು 5,000 ಸಹಾಯಧನ ನೀಡಲಾಗುತ್ತಿದೆ. ಟನ್ ಕಬ್ಬಿಗೆ 3150 ನಿಗದಿ ಮಾಡಿದ್ದು, ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಕಟಾವು ಕೂಲಿಕಾರರನ್ನು ಕರೆದುಕೊಂಡು ಬರುವ ಕಾರಣ ಲಾರಿ ಟ್ರ್ಯಾಕ್ಟರ್ ಮಾಲೀಕರು, ಅವರ ಅಧೀನದಲ್ಲಿ ಇರುತ್ತವೆ. ಅಂತೆಯೇ ನಮ್ಮ ರಾಜ್ಯದಲ್ಲೂ ಏಕ ರೀತಿಯಲ್ಲಿ ಕಟಾವು ಸಾಗಾಣಿಕೆ ಹೊಣೆಯನ್ನು ಸಂಪೂರ್ಣ ಕಾರ್ಖಾನೆಗಳಿಗೆ ವಹಿಸಬೇಕು. ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ, ಕಟಾವು ಸಾಗಾಣಿಕೆಯಲ್ಲಿ ರೈತರು ಮೋಸ ಹೋಗುವುದು ತಪ್ಪುತ್ತದೆ.
ಕಬ್ಬಿನ ಬಿತ್ತನೆ, ದ್ವಿಪಕ್ಷಿಯ ಒಪ್ಪಂದ, ಜೇಷ್ಠತೆ ಆಧಾರದ ಕಟಾವು, ಕಬ್ಬಿನ ತೂಕ, ಹಣ ಪಾವತಿ, ಸಕ್ಕರೆ ಇಳುವರಿ, ಡಿಜಿಟಲೀಕರಣಗೂಳಿಸ ಬೇಕು. ಇದು ಪಾರದರ್ಶಕವಾಗುವುದರಿಂದ ರೈತರು ಅನ್ಯಾಯಕ್ಕೆ ಒಳಗಾಗುವುದಕ್ಕೆ ಕೊನೆಯಾಗುತ್ತದೆ.
ಇಂದಿನ ಸಭೆಯಲ್ಲಿ ಚರ್ಚೆಯಾದ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಬೇಡಿಕೆ ಈಡೇರದಿದ್ದರೆ ನ.21ರಿಂದ ಮತ್ತೆ ಹೋರಾಟ
ಈ ಹಿಂದೆ ರಾಜ್ಯ ಸರ್ಕಾರ ನಾಲ್ಕು ಬಾರಿ ಸಭೆ ನಡೆಸಿದರು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಸಭೆಯಲ್ಲಿದ್ದ ರೈತರು ಬೇಸರ ವ್ಯಕ್ತಪಡಿಸಿದರು. ಹೀಗಾಗಿಯೇ ರಾಜ್ಯದ್ಯಂತ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ 10 ದಿನಗಳಿಂದ ನಿರಂತರ ಆಹೋ ರಾತ್ರಿ ಧರಣಿ ನಡೆಸಲಾಗುತ್ತಿದೆ. ಒಂದು ವೇಳೆ ಸರ್ಕಾರ ವರದಿ ಬಂದ ಮೇಲೂ ನೀಡಿದ ಭರವಸೆ ಹುಸಿಗೊಳಿಸಿದರೆ ಇದೇ ನ.21ರಿಂದ ಮತ್ತೆ ರೈತರು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಗೇರಿ, ರೈತ ಪ್ರತಿನಿಧಿ ಸಿದ್ದುಗೌಡ ಮೋದಗಿ, ಬಸವರಾಜ್, ಮಂಡ್ಯ ವೆಂಕಟೇಶ್, ಬೆಳವಣಿಗೆ ಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು











Click it and Unblock the Notifications