ಇದು ಬ್ಯಾಂಗಲೋರ್ ಸಿಟಿಯೋ ಬೆಂಗಳೂರು ನಗರವೋ?
* ಕನ್ನಡಿಗರ ರಾಜಧಾನಿಯ ಹೆಸರನ್ನು "ಬ್ಯಾಂಗಲೋರ್" ನಿಂದ "ಬೆಂಗಳೂರು" ಎಂದು ಅಧಿಕೃತವಾಗಿ ಬದಲಾಯಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಯಾಕೋ ಏನೋ ಸರ್ಕಾರ, ಕನ್ನಡದ ಸಾಹಿತಿಗಳು, ಕನ್ನಡ ಪ್ರೇಮಿಗಳು ಈ ವಿಷಯವನ್ನು ಮರೆತುಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಹೊತ್ತಿಗಾದರೂ ಕನ್ನಡಿಗರ ಈ ಕನಸು ನನಸಾಗುವುದೇ?
*. ಬೆಂಗಳೂರಿನಲ್ಲಿರುವ ಮಲ್ಲೇಶ್ವರಂ, ಶೇಷಾದ್ರಿಪುರಂ, ಮಹಾಲಕ್ಷ್ಮಿಪುರಂ, ಕೃಷ್ಣರಾಜಪುರಂ, ಓಕಳಿಪುರಂ, ರಾಮನಗರಂ ಇತ್ಯಾದಿ ಹೆಸರುಗಳಲ್ಲಿರುವ "ಅಂ" ಕಾರಗಳನ್ನು ತೆಗೆದು ಕನ್ನಡೀಕರಣ ಮಾಡುವ ಬಗ್ಗೆಯೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.
* ಬೆಂಗಳೂರಿನಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡುವ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ 10,000 ರೂಪಾಯಿಗಳ ದಂಡವನ್ನು ಹಾಕುತ್ತೇವೆ ಎಂದು ಪ್ರಕಟಿಸಿ ಬಹುದಿನಗಳಾದರೂ ಇನ್ನೂ ಇದು ಜಾರಿಯಾಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಲಾದರೂ ಈ ಅದೇಶವನ್ನು ಜಾರಿಗೊಳಿಸಬೇಕೆಂದು ಕೋರುತ್ತೇನೆ.
* ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಬಿ.ಟಿ.ಎಂ ಬಡಾವಣೆಯನ್ನು ಕುವೆಂಪು ನಗರವೆಂದು ಬೆಂಗಳೂರು ಮಹಾನಗರ ಪಾಲಿಕೆ ಬಹಳ ಹಿಂದೆಯೇ ನಾಮಕರಣ ಮಾಡಿತ್ತು. ಆದರೆ ಇದು ಅಧಿಕೃತವಾಗಿ ಇನ್ನೂ ಜಾರಿಮಾಡದೆ ಪಾಲಿಕೆಯು ಕುವೆಂಪು ಅವರಿಗೆ ಅಗೌರವ ತೋರಿದೆ. ಇಲ್ಲಿನ ಅಂಗಡಿ ಮುಂಗಟ್ಟುಗಳು ಹಾಗೂ ಕಛೇರಿಗಳ ನಾಮಫಲಕಗಳಲ್ಲಿ ಹಾಗೂ ಜನರ ಬಾಯಲ್ಲಿ ಇನ್ನೂ ಬಿ. ಟಿ. ಎಂ ಬಡಾವಣೆ ಎಂದು ಚಲಾವಣೆಯಲ್ಲಿರುವುದು ಖೇದದ ಸಂಗತಿ.
ಆದರೆ ಬೆಂಗಳೂರು ಮಹಾನಗರ ಸಾರಿಗೆಯವರು ಇಲ್ಲಿನ ನಿಲ್ದಾಣಕ್ಕೆ ಕುವೆಂಪುನಗರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿರುವುದು ಅಭಿನಂದನೀಯ ವಿಷಯ. ಇದೇ ರೀತಿ ಬೆಂಗಳೂರು ಮಹಾನಗರ ಪಾಲಿಕೆಯೂ ಬಿ.ಟಿ.ಎಂ ಬಡಾವಣೆಯನ್ನು ಕುವೆಂಪು ನಗರವೆಂದು ಅಧಿಕೃತವಾಗಿ ನಾಮಕರಣ ಮಾಡಿ ಜಾರಿಗೆ ತರಬೇಕೆಂದು ಕೋರುತ್ತೇನೆ.