Get Updates
Get notified of breaking news, exclusive insights, and must-see stories!

Kodagu Tourism: ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ವೇಗ ಬೇಕಿದೆ: ಯಾಕೆ ಗೊತ್ತಾ?

ಮಡಿಕೇರಿ, ಜೂನ್‌ 08: ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಡ್ಜರ್ ಲ್ಯಾಂಡ್ ಎಂದೆಲ್ಲ ಅನ್ವರ್ಥ ನಾಮಗಳಿಂದ ಕರೆಯಿಸಿಕೊಳ್ಳುವ ಕೊಡಗು ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸಿಗರ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರು ಇತ್ತ ಬರಲಾರಂಭಿಸಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೌಡು ಎದ್ದು ಕಾಣಿಸುತ್ತಿದೆ. ಇದು ಖುಷಿಕೊಡುವ ವಿಚಾರವಾಗಿದ್ದರೂ ಬಹಳಷ್ಟು ಪ್ರವಾಸಿಗರು ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡು ಹೋಗುವುದು ಮಾಮೂಲಿಯಾಗಿದೆ.

ಪ್ರವಾಸಿಗರನ್ನು ಕೊಡಗಿನ ವಾತಾವರಣ ಒಂದೆಡೆ ಸೆಳೆದರೆ ಮತ್ತೊಂದೆಡೆ ಇಲ್ಲಿರುವ ನಿಸರ್ಗ ನಿರ್ಮಿತ ತಾಣಗಳಾದ ಬೆಟ್ಟಗುಡ್ಡಗಳು, ಜಲಪಾತಗಳು, ಅರಣ್ಯಗಳು, ಪಾರಂಪರಿಕ ತಾಣಗಳಾದ ಅರಮನೆ, ಕೋಟೆ, ದೇಗುಲಗಳು, ಚರ್ಚ್, ಮಸೀದಿ, ಜಲಾಶಯಗಳು, ನದಿತೊರೆಗಳು ಹೀಗೆ ಹತ್ತಾರು ಸ್ಥಳಗಳು ಗಮನಾರ್ಹವಾಗಿವೆ. ಹಾಸನ, ಮೈಸೂರು, ದಕ್ಷಿಣಕನ್ನಡ ಹಾಗೂ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕಾರಣ ಎಲ್ಲೆಡೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

Why Kodagu District Tourist Need Speed Development

ಸದಾ ಕೆಲಸದ ಒತ್ತಡದಲ್ಲಿ ಕಳೆದು ಹೋದವರು ಒಂದಷ್ಟು ಸಮಯವನ್ನು ಸುಂದರ ಪರಿಸರದಲ್ಲಿ ಕಳೆದು ಹೋಗೋಣವೆಂದು ಕೊಡಗಿನತ್ತ ಬರುವುದು ಮಾಮೂಲಿಯಾಗಿದೆ. ಹೀಗೆ ಬಂದವರು ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಲ್ಲಿ ತಂಗಿದ್ದು, ಇಲ್ಲಿನ ಪ್ರವಾಸಿತಾಣಗಳನ್ನು ನೋಡಿಕೊಂಡು ಹಿಂತಿರುಗುತ್ತಾರೆ. ಹೀಗೆ ಬರುವವರು ಇಲ್ಲಿ ಇದ್ದಷ್ಟು ದಿನ ಖುಷಿಯಾಗಿ ಇರುವ ವಾತಾವರಣವನ್ನು ಸೃಷ್ಟಿಸಿಕೊಡಬೇಕಾಗುತ್ತದೆ. ಆದರೆ ಎಲ್ಲೋ ಒಂದು ಕಡೆ ಪ್ರವಾಸೋದ್ಯಮದಿಂದ ಬೊಕ್ಕಸಕ್ಕೆ ಹಣ ಹರಿದು ಹೋಗುತ್ತಿದ್ದರೂ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ವರ್ಷಕ್ಕೆ 35 ಲಕ್ಷ ಪ್ರವಾಸಿಗರ ಭೇಟಿ

ಒಂದು ಅಂದಾಜಿನ ಪ್ರಕಾರ ವಾರ್ಷಿಕ ಸುಮಾರು 35ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಹೇಳಲಾಗಿದ್ದು, ಹಾಗಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿತಾಣಗಳನ್ನು ಕೂಡ ಸಕಲ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕಲ್ಲವೆ? ಇವತ್ತು ಜಿಲ್ಲೆಯ ಬಹಳಷ್ಟು ಪ್ರವಾಸಿತಾಣಗಳಲ್ಲಿ ಹೇಳುವವರು, ಕೇಳುವವರು ಇಲ್ಲದಾಗಿದೆ. ಜತೆಗೆ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳೇ ಇಲ್ಲದಾಗಿದೆ. ಒಂದು ವೇಳೆ ಇತ್ತ ಗಮನಹರಿಸಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಿದರೆ ಪ್ರವಾಸಿಗರು ಕೂಡ ಸಂತಸದಿಂದ ಸಮಯ ಕಳೆಯಲು ಸಾಧ್ಯವಾಗಲಿದೆ.

ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುವುದು ಇಲ್ಲಿನ ವಾತಾವರಣ ಮತ್ತು ನಿಸರ್ಗ ಸೌಂದರ್ಯವನ್ನು ಅನುಭವಿಸಲಷ್ಟೆ. ಹೀಗಾಗಿ ಮೂಲ ಸೌಲಭ್ಯವಿಲ್ಲದಿದ್ದರೂ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮೊದಲಿನಂತೆ ಕೊಡಗು ಈಗ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಎಲ್ಲೆಡೆ ಹೇಗೆ ಅಭಿವೃದ್ಧಿಥಯಾಗಿದೆಯೋ ಇಲ್ಲಿಯೂ ಹಾಗೆಯೇ ಆಗಿದೆ. ಮೊದಲಿಗೆ ಹೋಲಿಸಿದರೆ ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಬೆಟ್ಟಗುಡ್ಡ ಅದರಾಚೆಗೆ ತೋಟ, ಗದ್ದೆ ಬಯಲು ಸೇರಿದಂತೆ ಎಲ್ಲೆಡೆಯೂ ಕಟ್ಟಡಗಳು ತಲೆ ಎತ್ತಿವೆ.

Why Kodagu District Tourist Need Speed Development

ಅಭಿವೃದ್ಧಿಗೆ ಪೂರಕವಾದ ಕಾರ್ಯ ಅಗತ್ಯ

ಮೊದಲೆಲ್ಲ ಕೊಡಗನ್ನು ಕಾಫಿನಾಡು, ಕಿತ್ತಳೆ ನಾಡು ಎಂದೆಲ್ಲ ಕರೆಯುತ್ತಿದ್ದರು. ಈಗ ಕೃಷಿಗಿಂತ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕಿತ್ತಳೆ ಮರೆಯಾಗುತ್ತಿದೆ. ಕಾಫಿಯಷ್ಟೇ ಉಳಿದುಕೊಂಡಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕೂಲಿಕಾರ್ಮಿಕರು ಸೇರಿದಂತೆ ಹಲವು ಸಮಸ್ಯೆಗಳು ಕಾಫಿ ಬೆಳೆಗಾರರನ್ನು ಕಾಡುತ್ತಿದೆ. ಗದ್ದೆಯಂತು ಪಾಳು ಬೀಳುವಂತಾಗಿದೆ. ಭೂ ಪರಿವರ್ತನೆಗಳು ಹೆಚ್ಚಾಗುತ್ತಿವೆ. ನಿಧಾನವಾಗಿ ಕಾಂಕ್ರಿಟ್ ಕಾಡುಗಳು ತಲೆ ಎತ್ತುತ್ತಿವೆ. ಹೊರಗಿನ ಶ್ರೀಮಂತರಿಗೆ ಮೋಜಿನ ಮತ್ತು ಹಣ ಮಾಡುವ ತಾಣವಾಗುತ್ತಿದ್ದು, ಕಾಫಿ ತೋಟಗಳನ್ನು ಖರೀದಿ ಮಾಡಿ ಅದರ ನಡುವೆ ಹೋಂಸ್ಟೇ, ರೆಸಾರ್ಟ್ ನಿರ್ಮಾಣ ಮಾಡಿ ಹಣ ಸಂಪಾದಿಸುತ್ತಿದ್ದಾರೆ.

ಓದಿಕೊಂಡವರು ಕೆಲಸ ಅರಸಿ ಹೊರಗಡೆ ಹೋಗುತ್ತಿದ್ದಾರೆ. ಹೀಗಾಗಿ ಕಾಫಿ ತೋಟಗಳನ್ನು ಹೊರಗಿನವರು ನಿರ್ವಹಣೆ ಮಾಡಬೇಕಾದ ದುಸ್ಥಿತಿ ಬಂದಿದೆ. ಇದೆಲ್ಲದರ ನಡುವೆಯೂ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ಆದಾಯ ಹರಿದು ಬರುತ್ತಿದೆ. ಆದರೆ ಅಭಿವೃದ್ಧಿ ಕಾರ್ಯ ಮಾಡದ ಕಾರಣ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸುವುದು, ತ್ಯಾಜ್ಯಗಳ ತೊಟ್ಟಿ, ಶೌಚಾಲಯ ನಿರ್ಮಿಸುವುದು, ಪ್ರವಾಸಿಗರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡುವುದು, ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವುದು, ಶೈಕ್ಷಣಿಕ ಪ್ರವಾಸ ಬರುವ ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಕಲ್ಪಿಸುವುದು ಹೀಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಕಾರ್ಯ ಮಾಡಬೇಕಾಗಿದೆ.

ಪ್ರವಾಸಿ ಸ್ನೇಹಿ ವಾತಾವರಣ ಸೃಷ್ಟಿಯಾಗಲಿ

ಇವತ್ತಿಗೂ ಕೆಲವು ಪ್ರವಾಸಿತಾಣಗಳಿಗೆ ಸರಿಯಾದ ರಸ್ತೆಯೇ ಇಲ್ಲದಾಗಿದೆ. ಜತೆಗೆ ಮಾಹಿತಿ ನೀಡುವವರು ಇಲ್ಲವೇ ಇಲ್ಲ. ಹೀಗಾಗಿ ಪ್ರವಾಸಿಗರಿಗೆ ಅನಾನುಕೂಲವಾಗುತ್ತಿದೆ. ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡುವತ್ತ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಹೊಸವರ್ಷಾಚರಣೆ, ಸರ್ಕಾರಿ ರಜೆಯ ಸಮಯದಲ್ಲಿ ಒಮ್ಮೆಗೆ ಜಿಲ್ಲೆಗೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದಾಗ ಅವರ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಇನ್ನು ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದನ್ನು ತಡೆಯಬೇಕಿದೆ.

Why Kodagu District Tourist Need Speed Development

ಜಿಲ್ಲೆಯ ಸಂಬಾರ ಪದಾರ್ಥಗಳು ಹೂ ಹಣ್ಣುಗಳು, ಗುಡಿ ಕೈಗಾರಿಕೆಗಳು, ತಿಂಡಿ ತಿನಿಸುಗಳು, ಹೋಂ ಮೇಡ್ ವೈನ್ ಗಳು ಜೇನು, ಇವುಗಳ ಸಿದ್ಧತೆ ಮತ್ತು ಮಾರಾಟವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸದ್ಯಕ್ಕೆ ಬದಲಾದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನತೆ ಪ್ರವಾಸೋದ್ಯಮದಿಂದ ಒಂದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು ನೀಡಬೇಕಾಗುತ್ತದೆ. ಜತೆಗೆ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಹೋಂಸ್ಟೇ ನಡೆಸುವ ಮಾಲೀಕರು ಸೇರಿದಂತೆ ಎಲ್ಲರೂ ಪ್ರವಾಸಿ ಸ್ನೇಹಿಯಾಗಿ ನಡೆದುಕೊಳ್ಳುವ ಅಗತ್ಯವಿದೆ. ಇದು ಸಾಧ್ಯವಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+