Vande Bharat Train: ವಂದೇ ಭಾರತ್ ರೈಲಿಗೆ ತುಮಕೂರಲ್ಲಿ ನಿಲುಗಡೆ, ಅನುಕೂಲಗಳು
ತುಮಕೂರು, ಆಗಸ್ಟ್ 24: ತುಮಕೂರು ಜನರ ಬೇಡಿಕೆಗೆ ರೈಲ್ವೆ ಇಲಾಖೆ ಮನ್ನಣೆ ನೀಡಿದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ತುಮಕೂರು ನಗರದಲ್ಲಿ ನಿಲುಗಡೆ ಸಿಕ್ಕಿದೆ. ಈ ಸೌಲಭ್ಯಕ್ಕೆ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶುಕ್ರವಾರ ಚಾಲನೆ ನೀಡಿದ್ದಾರೆ. ತುಮಕೂರು ರೈಲ್ವೆ ಬಳಕೆದಾರರು ಸಚಿವ ವಿ. ಸೋಮಣ್ಣ, ರೈಲ್ವೆ ಇಲಾಖೆ ಅಭಿನಂದನೆ ಸಲ್ಲಿಸಿದ್ದಾರೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ತುಮಕೂರಿನಲ್ಲಿ ನಿಲುಗಡೆ ಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಈಗ ಅದನ್ನು ಒಪ್ಪಿಗೆ ಸಿಕ್ಕಿದ್ದು, ಇನ್ನು ಮುಂದೆ ರೈಲು ದಾವಣಗೆರೆ, ಧಾರವಾಡ ಮತ್ತು ಹುಬ್ಬಳ್ಳಿ ಜೊತೆಗೆ ತುಮಕೂರಿನಲ್ಲಿಯೂ ನಿಲುಗಡೆಗೊಳ್ಳಲಿದೆ. ಇದರಿಂದಾಗಿ ಪ್ರಯಾಣಿಕರಿಗೆ ಆಗುವ ಲಾಭಗಳೇನು?.

ವಂದೇ ಭಾರತ್ ನಿಲುಗಡೆ ಪ್ರಯೋಜನಗಳು: ತುಮಕೂರು ಪ್ರದೇಶದಿಂದ ಬೆಂಗಳೂರು ನಗರಕ್ಕೆ ವ್ಯಾಪಾರ ಮತ್ತು ಸಾಫ್ಟ್ವೇರ್ ವೃತ್ತಿಪರರಿಗೆ ಈ ರೈಲು ಸೇವೆಯಿಂದ ಪ್ರಯೋಜನಕಾರಿಯಾಗಿದೆ. ಯಾತ್ರಿಕರು, ಪ್ರವಾಸಿಗರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಲು ಅನುಕೂಲಕರವಾಗಿದೆ.
ಧಾರವಾರ ಮತ್ತು ತುಮಕೂರು ನಡುವಿನ ವೇಗದ ಸಂಪರ್ಕ ಸಾಮಾಜಿಕ, ಆರ್ಥಿಕ ವಹಿವಾಟನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ತುಮಕೂರು ಮತ್ತು ಸುತ್ತಮುತ್ತಲಿನ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಇತರ ಸೌಲಭ್ಯವನ್ನು ಹೆಚ್ಚಿಸುತ್ತದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ತುಮಕೂರು ಭಾಗದ ಜನರಿಗೆ ಅನುಕೂಲವಾಗಲಿದೆ. ನಗರಕ್ಕೆ ವೇಗವಾಗಿ ತಲುಪಿ, ಇಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಬಹುದಾಗಿದೆ.
ರೈಲು ವೇಳಾಪಟ್ಟಿ, ನಿಲ್ದಾಣಗಳು: ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರು (6 ದಿನ ಮಂಗಳವಾರ ಹೊರತುಪಡಿಸಿ) 13:15ಕ್ಕೆ ಧಾರವಾಡದಿಂದ ಹೊರಟು, ಎಸ್ಎಸ್ಎಸ್ ಹುಬ್ಬಳ್ಳಿ 13:35/13:40, 15:38/15:40 ದಾವಣಗೆರೆ, 18:18/18:20 ತುಮಕೂರು, 18.58/ 19:00 ಯಶವಂತಪುರ, 19:45 ಕೆಎಸ್ಆರ್ ಬೆಂಗಳೂರು ಆಗಮನ/ ನಿರ್ಗಮನ.
ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು-ಧಾರವಾಡ (6 ದಿನ ಮಂಗಳವಾರ ಹೊರತುಪಡಿಸಿ) 5:45ಕ್ಕೆ ಕೆಎಸ್ಆರ್ ಬೆಂಗಳೂರು ನಿರ್ಗಮನ. ಯಶವಂತಪುರ 05.55/05.57, ತುಮಕೂರು 06.32/06.34, ದಾವಣಗೆರೆ 09.15/09.17, ಎಸ್ಎಸ್ಎಸ್ ಹುಬ್ಬಳ್ಳಿ 11.00/11.05, ಧಾರವಾಡ 12.10 ಆಗಮನ/ ನಿರ್ಗಮನ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 27, 2023ರಂದು ಮಧ್ಯಪ್ರದೇಶದ ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ 5 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದರು. ಇವುಗಳಲ್ಲಿ ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಸಹ ಸೇರಿತ್ತು. ಕರ್ನಾಟಕದ 2ನೇ ವಂದೇ ಭಾರತ್ ರೈಲು ಸೇವೆ ಇದಾಗಿದೆ.
ಧಾರವಾಡ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿ, ಪ್ರಯಾಣಿಸಿದ್ದರು.
ಈ ರೈಲು ಸೇವೆಯಿಂದ ಧಾರವಾಡ-ಬೆಂಗಳೂರು ನಡುವಿನ ಸಂಪರ್ಕ ಸುಧಾರಿಸುತ್ತದೆ. ಇದು ರಾಜ್ಯದಲ್ಲಿ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ವಂದೇ ಭಾರತ್ ರೈಲು ಹೆಚ್ಚು ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡಲು ಅನುಕೂಲ ಮಾಡಿಕೊಡಲಿದೆ ಎಂದು ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಟ್ವೀಟ್ ಮಾಡಲಾಗಿತ್ತು.
ಈ ರೈಲುನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. 2023ರ ನವೆಂಬರ್ನಲ್ಲಿ ಬೆಂಗಳೂರು-ಬೆಳಗಾವಿ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ನಡೆದಿದೆ. ಆದರೆ ಇನ್ನೂ ಸಹ ಬೆಳಗಾವಿ ತನಕ ರೈಲು ಸೇವೆ ಆರಂಭವಾಗಿಲ್ಲ.












Click it and Unblock the Notifications