Vande Bharat express: ರೈಲ್ವೆ ಹಳಿ ಆದ್ಮೇಲೆ "ಕುಂದಾನಗರಿ"ಗೂ ವಂದೇ ಭಾರತ್ ರೈಲು ಸೇವೆ: ಪ್ರಲ್ಹಾದ್ ಜೋಶಿ ಭರವಸೆ
ಧಾರವಾಡ, ಜೂನ್, 27: ಧಾರವಾಡ-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಇಂದಿನಿಂದ ಕಾರ್ಯಾರಂಭ ಮಾಡಿದೆ. ಈ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಿ ಎಂಬ ಒತ್ತಾಯಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರತಿಕ್ರಿಯಿಸಿದ್ದು, ಧಾರವಾಡ-ಕಿತ್ತೂರು ಮಧ್ಯೆ ರೈಲ್ವೆ ಹಳಿ ಆದ ನಂತರ ಬೆಳಗಾವಿವರೆಗೂ ಈ ರೈಲನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ಇಂದು ಧಾರವಾಡದ ರೈಲು ನಿಲ್ದಾಣದಲ್ಲಿ ವಂದೇ ಭಾರತ ರೈಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇವತ್ತು ಧಾರವಾಡಕ್ಕೆ ಐತಿಹಾಸಿಕ ದಿನವಾಗಿದೆ. ಇಲ್ಲಿಗೆ ರೈಲ್ವೆ ಸಚಿವರು ಬಂದಾಗ ಧಾರವಾಡಕ್ಕೂ ವಂದೇ ಭಾರತ ರೈಲು ನೀಡುವಂತೆ ಮನವಿ ಮಾಡಿದ್ದೆ. ಅವರು ಹಳಿ ಡಬಲಿಂಗ್ ನಂತರ ರೈಲು ಆರಂಭ ಮಾಡುವ ಭರವಸೆ ಕೊಟ್ಟಿದ್ದರು. ಅದರಂತೆಯೇ ಇದೀಗ ಧಾರವಾಡಕ್ಕೆ ವಂದೇ ಭಾರತ್ ರೈಲು ತಂದಿದ್ದೇವೆ. ನಾವು ರಾಜಕೀಯ ಕಾರಣಕ್ಕೆ ಆಶ್ವಾಸನೆ ಕೊಡುವುದಿಲ್ಲ. ಮಾಡಿ ತೋರಿಸುವ ಭರವಸೆ ಕೊಡುತ್ತೇವೆ ಎಂದರು.

ಧಾರವಾಡದಿಂದ ವಂದೇ ಭಾರತ ರೈಲು ಓಡುವುದಿಲ್ಲ ಎಂದಿದ್ದರು. ಈಗ ಅದನ್ನು ನಾವು ಮಾಡಿ ತೋರಿಸಿದ್ದೇವೆ. ವಂದೇ ಭಾರತ್ ರೈಲಿನ ಸಮಯ ಬದಲಾವಣೆ ಆಗಬೇಕೆಂಬ ಬೇಡಿಕೆಯಿದೆ. ಈ ರೈಲಿನ ನಿರ್ವಹಣೆ ಬೆಂಗಳೂರಿನಲ್ಲಿ ಮಾತ್ರ ಇದೆ. ಹುಬ್ಬಳ್ಳಿ, ಧಾರವಾಡದಲ್ಲಿ ಅದರ ನಿರ್ವಹಣೆ ವ್ಯವಸ್ಥೆಯಿಲ್ಲ. ಇಲ್ಲಿಯೂ ನಿರ್ವಹಣೆ ಮಾಡುವಂತಾದಾಗ ಅದರ ಸಮಯ ಬದಲಾವಣೆ ಮಾಡುತ್ತೇವೆ. ಈ ರೈಲು 5 ಗಂಟೆಯಲ್ಲಿ ಧಾರವಾಡದಿಂದ ಬೆಂಗಳೂರಿಗೆ ಹೋಗಬೇಕು ಎಂದರು.
ಈ ರೈಲು ರಾಷ್ಟ್ರ ನಿರ್ಮಿತ. ಮೊದಲು ಎಲ್ಲವನ್ನೂ ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ರಫ್ತು ಮಾಡುತ್ತಿದ್ದೇವೆ. ಮೊದಲು ವಿದ್ಯುತ್ ರೈಲು ಇರಲಿಲ್ಲ. ಈಗ ಅಭಿಮಾನದಿಂದ ಹೇಳಬಹುದು ನಮ್ಮಲ್ಲೂ ವಿದ್ಯುತ್ ರೈಲು ಇದೆ ಎಂದು. ಈಗ ನಾವೇ ವಿದ್ಯುತ್ ರಫ್ತು ಮಾಡುತ್ತಿದ್ದೇವೆ ಎಂದರು.
ವಂದೇ ಭಾರತ್ ರೈಲಿಗೆ ಚಾಲನೆ
ಉತ್ತರ ಕರ್ನಾಟಕದ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ಚಾಲನೆ ನೀಡಲಾಗಿದೆ. ಬೆಂಗಳೂರು ಹಾಗೂ ಧಾರವಾಡ ಮಧ್ಯೆ ದಿನಕ್ಕೆ ಎರಡು ಬಾರಿ ಈ ರೈಲು ಸಂಚಾರ ಮಾಡಲಿದೆ. ಇಂದಿನಿಂದ ಅಧಿಕೃತವಾಗಿ ಈ ರೈಲು ಸಂಚಾರ ಮಾಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ರೈಲಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಿದ್ದಾರೆ.
ಕರ್ನಾಟಕ, ಭೋಪಾಲ್, ಗೋವಾ ಹಾಗೂ ಜಾರ್ಖಂಡ್ ಸೇರಿ ಕರ್ನಾಟಕದ ಈ ವಂದೇ ಭಾರತ ರೈಲಿಗೆ ಏಕಕಾಲಕ್ಕೆ ಚಾಲನೆ ದೊರೆತಿದೆ. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕ ಭಾಗದ ಅದರಲ್ಲೂ ಹುಬ್ಬಳ್ಳಿ, ಧಾರವಾಡ ಅವಳಿನಗರದ ಜನತೆಯ ಬಹು ನಿರೀಕ್ಷಿತ ವಂದೇ ಭಾರತ ರೈಲು ನಾಳೆಯಿಂದ ಅಧಿಕೃತವಾಗಿ ಸಂಚಾರ ಮಾಡಲಿದೆ.
ಇನ್ನು ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ವೇಸ್ಟ್ ಆದ ಥರ್ಮಕೋಲ್ ಹಾಗೂ ಫ್ಲೈವುಡ್ ಪೀಸ್ಗಳಿಂದ 3X2 ಅಳತೆಯ ವಂದೇ ಭಾರತ ರೈಲು ನಿರ್ಮಿಸಿದ್ದಾರೆ. ಅಲ್ಲದೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಕಲಾಕೃತಿಯನ್ನೂ ರಚಿಸಿದ್ದಾರೆ. ಅಲ್ಲದೆ ಧಾರವಾಡ-ಬೆಂಗಳೂರು ಜಂಕ್ಷನ್ ಎಂದು ಬೋರ್ಡ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಈ ರೀತಿಯ ಕಲಾಕೃತಿ ರಚಿಸುವ ಮೂಲಕ ಕಲಾವಿದ ಮಂಜುನಾಥ ಹಿರೇಮಠ ಇಂದಿನಿಂದ ಆರಂಭವಾಗಿರುವ ವಂದೇ ಭಾರತ್ ರೈಲಿಗೆ ಶುಭಾಶಯ ಕೋರಿದ್ದಾರೆ. ಇನ್ನು ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ ರೈಲು ಉದ್ಘಾಟಿಸಲು ಸ್ವತಃ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೇ ಧಾರವಾಡದ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಎಸ್.ವಿ.ಸಂಕನೂರ, ಮೇಯರ್ ವೀಣಾ ಭರದ್ವಾಡ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.












Click it and Unblock the Notifications