ದರೋಜಿ-ಗಂಗಾವತಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ, ವಿವರ
ಕೊಪ್ಪಳ, ಫೆಬ್ರವರಿ 26; ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬಳ್ಳಾರಿ ಜಿಲ್ಲೆಯ ದರೋಜಿ ನಡುವಿನ ನೂತನ ರೈಲು ಮಾರ್ಗವನ್ನು ಬಾಗಲಕೋಟೆ ತನಕ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಕೊಪ್ಪಳದ ಬಿಜೆಪಿ ಸಂಸದ ಸಂಗಣ್ಣ ಕರಡಿ ಈ ಕುರಿತು ಮಾಹಿತಿ ನೀಡಿದ್ದಾರೆ. "ದರೋಜಿ ಗಂಗಾವತಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಬಾಗಲಕೋಟೆ ತನಕ ಈ ಮಾರ್ಗ ವಿಸ್ತರಣೆಯಾಗಲಿದೆ" ಎಂದು ಹೇಳಿದ್ದಾರೆ.

2022ರಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿಯ ದರೋಜಿ ತನಕ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಇಂಜಿನಿಯರಿಂಗ್ ಹಾಗೂ ಟ್ರಾಫಿಕ್ ಪ್ರಾಥಮಿಕ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದರು. ಸಮೀಕ್ಷೆ ಮುಗಿದು ವರದಿಯೂ ಸಚಿವಾಲಯಕ್ಕೆ ಸಲ್ಲಿಕೆಯಾಗಿತ್ತು.
ಬಳಿಕ ಈ ಹೊಸ ರೈಲು ಮಾರ್ಗವನ್ನು ಬಾಗಲಕೋಟೆ ತನಕ ವಿಸ್ತರಣೆ ಮಾಡಬೇಕು ಎಂದು ಕೊಪ್ಪಳ ಸಂಸದರು ನೈಋತ್ಯ ರೈಲ್ವೆಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸಹ ಒಪ್ಪಿಗೆ ನೀಡಿದ್ದು, ರೈಲು ಬಾಗಲಕೋಟೆ ತನಕ ವಿಸ್ತರಣೆ ಮಾಡಲು ಈಗ ಕೇಂದ್ರ ಒಪ್ಪಿಗೆ ನೀಡಿದೆ. ಕಾಮಗಾರಿ ಸೇರಿದಂತೆ ಇತರ ಮಾಹಿತಿ ಇನ್ನೂ ತಿಳಿದುಬರಬೇಕಿದೆ.
ಯೋಜನೆ ವಿವರ: ಕೊಪ್ಪಳದ ಗಂಗಾವತಿ-ದರೋಜಿ ನೂತನ ರೈಲು ಮಾರ್ಗವನ್ನು ಕನಕಗಿರಿ, ಕುಷ್ಟಗಿ, ಇಲಕಲ್ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆ ತನಕ ವಿಸ್ತರಣೆ ಮಾಡಿದರೆ ಸುಮಾರು 157 ಕಿ. ಮೀ. ಉದ್ದದ ಹೊಸ ಮಾರ್ಗ ನಿರ್ಮಾಣವಾಗುತ್ತದೆ. ಈ ನೂತನ ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ಆಗ ಕೇಂದ್ರ ಸರ್ಕಾರ ರೂ.78.50 ಲಕ್ಷ ಅನುದಾನ ಮಂಜೂರು ಮಾಡಿತ್ತು.
ಈ ನೂತನ ರೈಲು ಮಾರ್ಗ ನಿರ್ಮಾಣದಿಂದ ಕೊಪ್ಪಳ ಜಿಲ್ಲೆ ಮಾತ್ರವಲ್ಲ ಬಾಗಲಕೋಟೆ ಭಾಗದ ಪ್ರಯಾಣಿಕರಿಗೆ ಬೆಂಗಳೂರು, ತಿರುಪತಿ ಪ್ರಯಾಣದ ದೂರ ಮತ್ತು ಸಮಯ ಕಡಿಮೆಯಾಗಲಿದೆ. ಈ ನೂತನ ಮಾರ್ಗದ ಕಾರ್ಯ ಸಾಧ್ಯತಾ ವರದಿಯನ್ನು ಪರಿಶೀಲಿಸಿದ ಬಳಿಕ ರೈಲ್ವೆ ಸಚಿವಾಲಯ ಯೋಜನೆಗೆ ಒಪ್ಪಿಗೆ ನೀಡಿದೆ.
ಗಂಗಾವತಿ ಕೊಪ್ಪಳ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ. ಇಲ್ಲಿ ಬೆಳೆಯುವ ಅಕ್ಕಿ ದೇಶದ ಹಲವು ರಾಜ್ಯಗಳು ಮಾತ್ರವಲ್ಲ ವಿದೇಶಗಳಿಗೆ ಸಹ ರಫ್ತಾಗುತ್ತದೆ. ಆದ್ದರಿಂದ ಗಂಗಾವತಿ-ದರೋಜಿ ರೈಲು ಮಾರ್ಗ ಬಾಗಲಕೋಟೆ ತನಕ ವಿಸ್ತರಣೆಗೊಂಡರೆ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿಗೆ ಸಹ ನೆರವಾಗುತ್ತದೆ.
ದರೋಜಿ-ಗಂಗಾವತಿ ರೈಲು ಮಾರ್ಗ ನಿರ್ಮಾಣಕ್ಕೆ 919 ಕೋಟಿ ರೂ. ವೆಚ್ಚವಾಗಲಿದೆ. 36 ಕಿ. ಮೀ. ದೂರದ ಈ ಮಾರ್ಗದಲ್ಲಿ 6 ನಿಲ್ದಾಣಗಳು ಬರಲಿವೆ ಎಂದು ಸಮೀಕ್ಷೆ ಅಂದಾಜಿಸಿತ್ತು. ಆದರೆ ಈಗ ಬಾಗಲಕೋಟೆ ತನಕ ರೈಲು ಮಾರ್ಗ ವಿಸ್ತರಣೆಗೊಂಡರೆ ಎಷ್ಟು ವೆಚ್ಚವಾಗಲಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.












Click it and Unblock the Notifications