ಮೈಸೂರು ಬೆಟ್ಟದಪುರದಲ್ಲಿ ಅಪರೂಪದ ದೀವಿಟಿಗೆ ಜಾತ್ರೆ; ಏನಿದರ ವಿಶೇಷತೆ?
ಮೈಸೂರು, ನವೆಂಬರ್ 04: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮತ್ತು ಕುಡುಕೂರು ಗ್ರಾಮದಲ್ಲಿ ನಡೆದ ದೀವಟಿಗೆ ಜಾತ್ರೆ ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ವಿಭಿನ್ನ ಮತ್ತು ವಿಶಿಷ್ಟ ಜಾತ್ರೆಗೆ ಸಹಸ್ರಾರು ಮಂದಿ ಪಂಜಿನ ಮೆರವಣಿಗೆಯಲ್ಲಿ ತೆರಳಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರೊಂದಿಗೆ ವೈಶಿಷ್ಟ್ಯವಾದ ಆಕರ್ಷಣೀಯ ಜಾತ್ರೆಗೆ ಸಾಕ್ಷಿಯಾದರು.
ಹಾಗೆನೋಡಿದರೆ ಈ ದೀವಟಿಗೆ ಜಾತ್ರೆ ರಾತ್ರಿ ನಡೆಯುತ್ತಿದ್ದು ಕರ್ನಾಟಕ ರಾಜ್ಯದಲ್ಲಿಯೇ ಈ ಜಾತ್ರೆಗೆ ತನ್ನದೇ ಆದ ಮಹತ್ವವಿರುವುದು ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಈ ಜಾತ್ರೆ ಸ್ಥಳೀಯ ಮಾತ್ರವಲ್ಲದೆ ದೂರದ ಊರಿನಿಂದ ಭಕ್ತರು ಬರುವುದರೊಂದಿಗೆ ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸುವುದು ಮಾಮೂಲಿಯಾಗಿದೆ. ಇನ್ನು ಈ ಜಾತ್ರೆ ಹೇಗೆ ನಡೆಯುತ್ತದೆ ಎನ್ನವುದನ್ನು ನೋಡಿದ್ದೇ ಆದರೆ ಈ ಜಾತ್ರೆಗೂ ಬೆಟ್ಟದಪುರ ಗ್ರಾಮದ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿಗೂ ನಂಟಿರುವುದು ಗೋಚರಿಸುತ್ತದೆ.

ದೀವಿಟಿಗೆ ಜಾತ್ರೆಯಂದು ಶಿಡ್ಲು ಮಲ್ಲಿಕಾರ್ಜುನ ದೇವಾಲಯದಿಂದ ಬೆಳ್ಳಿ ಬಸಪ್ಪ ದೇವರು ಮತ್ತು ಈಶ್ವರ ಮೂರ್ತಿಯ ಬೆಳ್ಳಿಯ ಮೂರ್ತಿಗಳನ್ನು ಹೊರಡಿಸಲಾಗುತ್ತದೆ. ಇಲ್ಲಿಂದ ಮೂರ್ತಿಗಳನ್ನು ಹೊತ್ತು ಬೆಟ್ಟದಪುರದ ಸುತ್ತಮುತ್ತ ಗ್ರಾಮಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಬೆಟ್ಟದಪುರದ ಗ್ರಾಮದ ಸುತ್ತಮುತ್ತಲ ನೂರಾರು ಹಳ್ಳಿಯ ಜನರು ದೀವಟಿಗೆಗಳನ್ನು (ಪಂಜು) ಹಿಡಿದು ದೇವರ ಹಾಡುಗಳನ್ನು ಹಾಡುತ್ತಾ, ಬೆಟ್ಟದ ಸುತ್ತಲೂ ಇರುವ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಪ್ರತಿ ಗ್ರಾಮದಲ್ಲೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಕುಡುಕೂರು ಬಸವೇಶ್ವರ ದೇವರ ದೇವಾಲಯಕ್ಕೆ ಆಗಮಿಸಿದ ಪಂಜಿನ ಮೆರವಣಿಗೆ ದೇವಾಲಯದ ಸುತ್ತಲೂ ಸುತ್ತು ಹೊಡೆಯುವ ಮೂಲಕ ಬೆಳ್ಳಿ ಬಸಪ್ಪನನ್ನು ಹೊತ್ತು ನೆರವಣಿಗೆಯ ಮಾಡಿ ದೀವಟಿಗೆ ಜಾತ್ರೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಅರಸು ಮನೆತನದ ಹಲವು ಕುಟುಂಬಗಳು ಅಲ್ಲಲ್ಲಿ ಚಪ್ಪರಗಳನ್ನು ಹಾಕಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಗ್ರಾಮಗಳ ಭಕ್ತರು ಗುಂಪು ಗುಂಪುಗಳಾಗಿ ದೀವಟಿಗೆಗಳನ್ನು ಹಿಡಿದು ತಮ್ಮ ಹರಕೆ ಒಪ್ಪಿಸುವ ಮೂಲಕ ಪೂಜೆ ಸಲ್ಲಿಸುವುದು ವಿಶೇಷವಾಗಿರುತ್ತದೆ.

ಇನ್ನು ಶಿಡ್ಲು ಮಲ್ಲಿಕಾರ್ಜುನ ದೇಗುಲವಿರುವ ಬೆಟ್ಟವು ನಿಸರ್ಗ ಸುಂದರ ತಾಣದಲ್ಲಿ ನೆಲೆ ನಿಂತಿದ್ದು, ಈ ಬೆಟ್ಟವನ್ನೇರುವುದೇ ವಿಶೇಷ. ಬೆಟ್ಟವೇರುತ್ತಾ ಹೋದರೆ ನಿಸರ್ಗದ ಸುಂದರ ಪರಿಸರ ಖುಷಿಕೊಡುತ್ತದೆ. ಈ ಬೆಟ್ಟವು ಮೈಸೂರು ಜಿಲ್ಲೆಯಲ್ಲಿರುವ ಅತಿ ಎತ್ತರದ ಬೆಟ್ಟಗಳಲ್ಲಿ ಒಂದಾಗಿದ್ದು, ಈ ಬೆಟ್ಟವೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲನ್ನು ಹತ್ತುತ್ತಾ ಹೋದರೆ ನಿಸರ್ಗದ ಸುಂದರ ದೃಶ್ಯಗಳು ಒಂದರ ಮೇಲೊಂದರಂತೆ ಕಣ್ಮುಂದೆ ಹಾದು ಹೋಗುತ್ತದೆ. ಹೀಗಾಗಿಯೇ ದೇವರ ದರ್ಶನ ಜತೆಗೆ ಚಾರಣ ಮಾಡಲು ಅನುಕೂಲವಾಗಿದೆ.
ಚೋಳರ ಕಾಲದಲ್ಲಿ ನಿರ್ಮಿಸಿದ ದೇಗುಲ
ಬೆಟ್ಟದ ಮೇಲಿರುವ ಶಿಡ್ಲುಮಲ್ಲಿಕಾರ್ಜುನ ದೇಗುಲ ಇವತ್ತು ನಿನ್ನೆಯದಲ್ಲ. ಎತ್ತರವಾದ ಬೆಟ್ಟದ ಮೇಲೆ ನೆಲೆನಿಂತಿರುವ ದೇಗುಲ ಆಕರ್ಷಣೀಯವಾಗಿದೆ. ಇಲ್ಲಿ ಈ ದೇಗುಲವನ್ನು ನಿರ್ಮಿಸಿದ್ದು ಚೋಳ ರಾಜರು ಎಂದು ಹೇಳಲಾಗಿದ್ದು, ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇಗುಲ ಇತಿಹಾಸದ ಕಥೆ ಹೇಳಲೆಂದೇ ಬೆಟ್ಟದ ಮೇಲೆ ಮೈದಾಳಿ ನಿಂತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಶಿಡ್ಲು ಮಲ್ಲಿಕಾರ್ಜುನ ಬೆಟ್ಟವು ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿಗಳ ಸಾಲಿಗೆ ಸೇರ್ಪಡೆಯಾಗಿದ್ದು, ನೆಲಮಟ್ಟದಿಂದ ಸುಮಾರು 3600 ಮೆಟ್ಟಿಲೇರಿ ಬೆಟ್ಟದ ಮೇಲೆ ತೆರಳಿದರೆ ಮಲ್ಲಿಕಾರ್ಜುನ ದೇಗಲವನ್ನು ತಲುಪಬಹುದಾಗಿದೆ. ಇಲ್ಲಿರುವ ಮಲ್ಲಿಕಾರ್ಜುನ ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿದ್ದಾನೆ.
ಶಿಡ್ಲುಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳುವುದೇ ಒಂದು ಮರೆಯಲಾರದ ಅನುಭವ ಅದರಲ್ಲೂ ಇಲ್ಲಿ ಮುಂಜಾನೆ ತೆರಳಿದರೆ ಅಲ್ಲಿ ಕಾಣುವ ನಿಸರ್ಗದ ನೋಟ ಹುರುಪು ನೀಡುತ್ತದೆ. ಅದರಲ್ಲೂ ದೂರದಿಂದಲೇ ಇಡೀ ಬೆಟ್ಟವನ್ನೇ ಆವರಿಸುವ ಮಂಜು ಖುಷಿಕೊಡುತ್ತದೆ. ಬೆಟ್ಟವೇರುತ್ತಾ ಹೋದಂತೆಲ್ಲ ಮಂಜಿನ ತೆರೆಯನ್ನು ಸೀಳಿ ಬಂದು ಸ್ಪರ್ಶಿಸುವ ಸೂರ್ಯ ರಶ್ಮಿ ಮೈಮನವನ್ನು ಪುಳಕಗೊಳಿಸುತ್ತದೆ. ಇದರ ಜತೆಗೆ ಬೆಟ್ಟದಲ್ಲಿ ಬೀಡುಬಿಟ್ಟ ಪಕ್ಷಿಗಳ ಚಿಲಿಪಿಲಿ ನಿನಾದ ನಮ್ಮ ಆಯಾಸವನ್ನು ಬದಿಗೊತ್ತಿ ಮುಂದೆ ಸಾಗುವಂತೆ ಮಾಡುತ್ತದೆ.












Click it and Unblock the Notifications