South Western Railway: ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳಿವು
ಹುಬ್ಬಳ್ಳಿ, ಸೆಪ್ಟೆಂಬರ್, 13: ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 23ನೇ ಸಭೆ ನಗರದಲ್ಲಿ ನಡೆಯಿತು. ಈ ವೇಳೆ ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ರೈಲ್ವೆ ಬಳಕೆದಾರರೊಂದಿಗೆ ಉತ್ತಮ ಪ್ರಾತಿನಿಧ್ಯ ಮತ್ತು ಸಮಾಲೋಚನೆಗಾಗಿ ಆಯೋಜಿಸಿದ್ದ ಈ ಸಭೆಯ ಅಧ್ಯಕ್ಷತೆಯನ್ನು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ವಹಿಸಿದ್ದು, ಈ ವೇಳೆ ಪ್ರಯಾಣಿಕರ ಸೌಕರ್ಯಗಳು, ರೈಲು ಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರವಾಗಿ ರ್ಚಚಿಸಲಾಯಿತು.

2022-23ರಲ್ಲಿ ಪ್ರಮುಖ ಕಾರ್ಯ ಕ್ಷಮತೆ ಸೂಚ್ಯಂಕಗಳ (ಕೆಪಿಐ) ವಿಷಯದಲ್ಲಿ ಇತರ ವಲಯಗಳಿಗೆ ಹೋಲಿಸಿದರೆ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನದಲ್ಲಿದೆ. ರೈಲ್ವೆ ಸಚಿವಾಲಯವು "ಸ್ವಚ್ಛತಾ ಪಖ್ವಾಡಾ 2022" ಸಮಯದಲ್ಲಿ ನೖಋತ್ಯ ರೈಲ್ವೆಯನ್ನು ಅತ್ಯುತ್ತಮ ಕಾರ್ಯಕ್ಷಮತೆಯ ರೈಲ್ವೆ ವಲಯ ಎಂದು ಪರಿಗಣಿಸಲಾಗಿದೆ. ವಾಸ್ಕೊ, ಮೈಸೂರು ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ಸೇರಿದಂತೆ ನೈಋತ್ಯ ರೈಲ್ವೆಯ 50ಕ್ಕೂ ಹೆಚ್ಚು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಸಂಜೀವ ಕಿಶೋರ್ ತಿಳಿಸಿದರು.
ಹಬ್ಬ ಮತ್ತು ರಜಾ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 83 ವಿಶೇಷ ರೈಲುಗಳು ಮತ್ತು 1,798 ಹೆಚ್ಚುವರಿ ಬೋಗಿಗಳನ್ನು ರೈಲುಗಳಿಗೆ ಜೋಡಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ಶೇಕಡಾ 71ರಷ್ಟು ವಿದ್ಯುದ್ದೀಕರಿಸಲಾಗಿದೆ. 2022-23ರಲ್ಲಿ 228 ಕಿಲೋ ಮೀಟರ್ ಹೊಸ ಮಾರ್ಗ ಮತ್ತು ಜೋಡಿ ಮಾರ್ಗ ಮತ್ತು 874 ಕಿಲೋ ಮೀಟರ್ ವಿದ್ಯುದೀಕರಣ (ಒಂದು ವರ್ಷದಲ್ಲಿ ಅತ್ಯಧಿಕ ದಾಖಲೆ) ಮಾಡಲಾಗಿದೆ ಎಂದು ವಿವರಿಸಿದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಷ ಹೆಗಡೆ ಸಭೆಯ ನಂತರ ಸಭೆಯಲ್ಲಿ ಚರ್ಚೆ ಆದ ಮಹತ್ವದ ವಿಷಯಗಳ ಕುರಿತು ವಿವರಿಸಿದ್ದು, ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೊಸ ಹೊಸ ಯೋಜನೆ, ರೈಲು ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ, ವಂದೇ ಮಾತರಂ ರೈಲು ಯೋಜನೆ ಅನುಕೂಲತೆ ಕುರಿತು ಮತ್ತು ಸಲಹಾ ಸಮಿತಿಯ ಸದಸ್ಯರು ನೀಡಿದ ಸಲಹೆಗಳನ್ನು ಪಡೆಯಲಾಯಿತು ಎಂದರು.
ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ ಸದಸ್ಯರಾದ ಮಹೇಂದ್ರ ಸಿಂಘಿ ಮಾತನಾಡಿ, ಇದು ಮಹತ್ವವಾದ ಸಭೆ ಆಗಿದ್ದು, ನೈರುತ್ಯ ರೈಲ್ವೆ ವಲಯವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಚರ್ಚೆ ನಡೆಸಲಾಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ಅಪಾರ ಪ್ರಮಾಣದ ಭಕ್ತರನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ಕ್ಷೇತ್ರಕ್ಕೆ ರೈಲು ಯೋಜನೆ ಸಂಪರ್ಕ ಹಾಗೂ ಶಿರಡಿ ಕ್ಷೇತ್ರಕ್ಕೆ ರೈಲು ಸಂಪರ್ಕ ಕುರಿತು ಚರ್ಚಿಸಲಾಯಿತು ಎಂದರು.
ಜೊತೆಗೆ ದಿವಂಗತ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಧಾರವಾಡ - ಕಿತ್ತೂರು - ಬೆಳಗಾವಿ ರೈಲು ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನ ಕುರಿತು ಚರ್ಚೆ ಮಾಡಲಾಗಿದ್ದು, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅವರು ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸಿದರು ಎಂದರು.
ಈ ವೇಳೆ ರಾಜ್ಯಸಭೆ ಸದಸ್ಯ ನಾರಾಯಣ ಕೊರಗಪ್ಪ, ಗೋವಾ ಸಚಿವ ನಿಲೇಶ್ ಕಬ್ರಾಲ್, ಸಮಿತಿ ಸದಸ್ಯರಾದ ಜಿ.ಕೆ.ಆದಪ್ಪ ಗೌಡರ, ವೇಣು ಯಾದವ್, ರವಿಕುಮಾರ್ ವೇಮುಲಪಲ್ಲಿ, ದಾಮೋದರದಾಸ ರಾಠಿ, ವಿನಯ ಜವಳಿ, ಎಂ.ಬಾಬು ರಾವ್, ದೇವಾನಂದ ನಾಯ್ಕ, ಕೆ.ವಿ. ವಸಂತ ಕುಮಾರ್, ಸುರೇಶ್ ಕುಮಾರ್, ಮಾರ್ಚಲ ಸುಕುಮಾರ್, ಕ್ಯಾಪ್ಟನ್ ಹಿಮಾಂಶು ಶೇಖರ್, ಪಿ.ಕೆ.ದೖವಸಿಗಮಣಿ, ಕೃಷ್ಣಮೂರ್ತಿ ಪಿ. ಮತ್ತು ಪ್ರಸಾದ್ ಕುಲಕರ್ಣಿ, ರೈಲ್ವೆ ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬರಾವ್ ಹಾಗೂ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications