Water Metro Project: ಕರ್ನಾಟಕದ ಮೊದಲ ವಾಟರ್ ಮೆಟ್ರೋ ಯೋಜನೆ, ಎಲ್ಲಿ ಜಾರಿ?
ಮಂಗಳೂರು, ನವೆಂಬರ್ 05: ಕೇರಳದ ಕೊಚ್ಚಿಯಲ್ಲಿ ವಾಟರ್ ಮೆಟ್ರೋ ಯೋಜನೆ ಈಗಾಗಲೇ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಸೇವೆಯನ್ನು ಆರಂಭಿಸಲು ಚಿಂತನೆ ನಡೆದಿದೆ. ಮೊದಲು ಹಂತದಲ್ಲಿ ಸುಮಾರು 30 ಕಿ. ಮೀ. ಮಾರ್ಗದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಇದಕ್ಕಾಗಿ ಡಿಪಿಆರ್ ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ.
ವಾಟರ್ ಮೆಟ್ರೋ ಯೋಜನೆ ಕರ್ನಾಟಕದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಜಾರಿಗೆ ಬರಲಿದೆ. ಒಟ್ಟು 30 ಕಿ. ಮೀ. ಮಾರ್ಗದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ವಿಸ್ತ್ರತ ಯೋಜನಾ ವರದಿಯನ್ನು ಸಿದ್ಧಗೊಳಿಸಲಿದೆ. ಬಳಿಕ ಸರ್ಕಾರದ ಒಪ್ಪಿಗೆ ಪಡೆದು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ಮಂಗಳೂರು ವಾಟರ್ ಮೆಟ್ರೋ ಯೋಜನೆ (ಎಂಡಬ್ಲ್ಯುಎಂಪಿ) ವಿವಿಧ ಪ್ರದೇಶಗಳನ್ನು ಈ ಯೋಜನೆ ಮೂಲಕ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ನೇತ್ರಾವತಿ ಮತ್ತು ಗುರುಪುರ ನದಿ ತೀರದ ಗ್ರಾಮಗಳನ್ನು ಸಂಪರ್ಕಿಸಲು ಈ ಯೋಜನೆಯನ್ನು ಬಳಕೆ ಮಾಡಲು ಡಿಪಿಆರ್ ತಯಾರು ಮಾಡಲಾಗುತ್ತದೆ.
ವಾಟರ್ ಮೆಟ್ರೋ ಯೋಜನೆ: ನೇತ್ರಾವತಿ ಮತ್ತು ಗುರುಪುರ ನದಿಗಳ ತೀರದ ಗ್ರಾಮಗಳನ್ನು ಮೊದಲ ಹಂತದಲ್ಲಿ 30 ಕಿ. ಮೀ. ವಾಟರ್ ಮೆಟ್ರೋ ಯೋಜನೆ ಮೂಲಕ ಸಂಪರ್ಕಿಸಲಾಗುತ್ತದೆ. ನೇತ್ರಾವತಿ ನದಿಯ ಬಜಲ್ನಿಂದ ಗುರುಪುರ ಮರವೂರು ಸೇತುವೆಗೆ ಸಂಪರ್ಕಿಸಲು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ 17 ನಿಲ್ದಾಣ ಬರಲಿದೆ.
ಕೊಚ್ಚಿ ಬಳಿಕ ಮಂಗಳೂರಿನಲ್ಲಿ ದೊಡ್ಡ ಜಾಲ ಹೊಂದಿರುವ ವಾಟರ್ ಮೆಟ್ರೋ ಯೋಜನೆ ಜಾರಿಗೊಳಿಸಲು ಡಿಪಿಆರ್ ಸಿದ್ಧಗೊಳಿಸಲಾಗುತ್ತದೆ. ಇದು ಪ್ರದೇಶಗಳ ಅಭಿವೃದ್ಧಿ, ಜನರ ಜೀವನ ಮಟ್ಟ ಸುಧಾರಣೆಗೆ ಸಹ ಸಹಾಯಕವಾಗಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
ಪರಿಸರ ಸ್ನೇಹಿಯಾಗಿ, ಆರ್ಥಿಕವಾಗಿ ಅಧಿಕ ವೆಚ್ಚವಾಗದಂತೆ, ಜನರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ರೂಪಿಸಲಾಗುತ್ತದೆ. ಈ ಯೋಜನೆಯಡಿ ಆಧುನಿಕ ಎಲೆಕ್ಟ್ರಿಕಲ್ ಮತ್ತು ಡೀಸಲ್ ಬೋಟ್ಗಳನ್ನು ಬಳಕೆ ಮಾಡಲಾಗುತ್ತದೆ. ಬೋಟ್ಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024-25ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರಾವತಿ ಮತ್ತು ಗುರುಪುರ ನದಿಗಳ ತೀರದ ಗ್ರಾಮಗಳನ್ನು ಸಂಪರ್ಕಿಸಲು ವಾಟರ್ ಮೆಟ್ರೋ ಯೋಜನೆ ಜಾರಿಗೊಳಿಸಲು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.
ವಾಟರ್ ಮೆಟ್ರೋ ಯೋಜನೆಯ ವೆಚ್ಚ, ನಿಲ್ದಾಣಗಳು, ಜನರಿಗೆ ಅನುಕೂಲವಾಗುವ ಬಗೆ, ಪರಿಸರದ ಮೇಲೆ ಆಗುವ ಪರಿಣಾಮದ ಕುರಿತು ಡಿಪಿಅರ್ ಸಿದ್ಧಗೊಳಿಸಲು ಈಗ ಕರ್ನಾಟಕ ಜಲಸಾರಿಗೆ ಮಂಡಳಿ ಟೆಂಡರ್ ಕರೆದಿದೆ. ಬೇಡಿಕೆ, ಭೂಮಿಯ ಲಭ್ಯತೆ, ಸಂಚಾರ ನಡೆಸುವ ಜನರ ಸಂಖ್ಯೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವರವಾದ ವರದಿಯನ್ನು ತಯಾರು ಮಾಡಲಾಗುತ್ತದೆ.
ಕೇವಲ ಜನರ ಸಂಚಾರ ಮಾತ್ರವಲ್ಲ ಮಂಗಳೂರು ಹಳೆಯ ಬಂದರಿನಿಂದ ವಸ್ತುಗಳ ಸಾಗಾಟಕ್ಕೂ ಅನುಕೂಲವಾಗುವಂತೆ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ. ಬಫರ್ ಝೋನ್ ವ್ಯಾಪ್ತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ಅಡೆತಡೆಗಳಿವೆಯೇ, ಯಾವ ಇಲಾಖೆ ಒಪ್ಪಿಗೆ ಪಡೆಯಬೇಕು ಎಂದು ವರದಿಯಲ್ಲಿ ವಿವರಿಸಲಾಗುತ್ತದೆ.
ಕೊಚ್ಚಿ ವಾಟರ್ ಮೆಟ್ರೋ ಯೋಜನೆಯನ್ನು 2023ರ ಏಪ್ರಿಲ್ 25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. 78 ಬೋಟ್ ಮತ್ತು 28 ಜೆಟ್ಟಿಗಳನ್ನು ಈ ಯೋಜನೆಗಾಗಿ ಬಳಕೆ ಮಾಡಲಾಗುತ್ತಿದೆ. 10 ದ್ವೀಪಗಳ 76 ಕಿ. ಮೀ. ವ್ಯಾಪ್ತಿಯನ್ನು ಈ ವಾಟರ್ ಮೆಟ್ರೋ ಯೋಜನೆ ಒಳಗೊಂಡಿದೆ. ಯೋಜನೆಗೆ ಜನರಿಗೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.












Click it and Unblock the Notifications