ಮಂಗಳೂರು-ಲಕ್ಷದ್ವೀಪ ಪ್ರಯಾಣಿಕ ಹಡಗು ಸೇವೆ ಮತ್ತೆ ಆರಂಭ, ದರಪಟ್ಟಿ
ಮಂಗಳೂರು, ಮೇ 03: ಲಕ್ಷದ್ವೀಪಕ್ಕೆ ಪ್ರವಾಸ ಹೋಗುವ ಕರ್ನಾಟಕದ ಜನರಿಗೆ ಸಿಹಿಸುದ್ದಿಯೊಂದಿದೆ. ಮಂಗಳೂರು-ಲಕ್ಷದ್ವೀಪ ನಡುವಿನ ಪ್ರಯಾಣಿಕ ಹಡಗು ಸೇವೆ ಮತ್ತೆ ಆರಂಭವಾಗಿದೆ. ಇದರಿಂದಾಗಿ ಕಡಿಮೆ ದರ ಮತ್ತು ಸಮಯದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಕರ್ನಾಟಕ ಜಲಸಾರಿಗೆ ಮಂಡಳಿ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು-ಲಕ್ಷದ್ವೀಪ ಪ್ರಯಾಣಿಕ ಹಡಗು ಸೇವೆಯನ್ನು ಮರು ಆರಂಭಿಸಿದೆ. ಗುರುವಾರ ಲಕ್ಷದ್ವೀಪದಿಂದ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು ಮೂವರು ಸಿಬ್ಬಂದಿ ಹಡಗಿನಲ್ಲಿ ಮಂಗಳೂರು ಹಳೆ ಬಂದರಿಗೆ ಆಗಮಿಸಿದರು.

ಮೊದಲು ಲಕ್ಷದ್ವೀಪ-ಮಂಗಳೂರು ಹಳೆ ಬಂದರು ನಡುವಿನ ಸಂಚಾರಕ್ಕೆ ಪ್ರಯಾಣಿಕ ಹಡಗು 13 ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ಮೂಲಕ 7 ಗಂಟೆಗಳಲ್ಲಿ, ರೂ. 450 ದರದಲ್ಲಿ ಸಂಚಾರ ನಡೆಸಬಹುದಾಗಿದೆ.
ಸಂಸದರ ಪೋಸ್ಟ್: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. 'ನಮ್ಮ ಮನವಿ ಮತ್ತು ಒತ್ತಾಯವನ್ನು ಪರಿಗಣಿಸಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು - ಲಕ್ಷದ್ವೀಪ ಪ್ರಯಾಣಿಕ ಹಡಗು ಸೇವೆಯನ್ನು ಮರು ಆರಂಭಕ್ಕೆ ಚಾಲನೆ ನೀಡಿರುವುದು ಪ್ರವಾಸೋದ್ಯಮದ ಬೆಳವಣಿಗೆಗೆ ಸಂಬಂಧಪಟ್ಟಂತೆ ಉತ್ತಮ ಹೆಜ್ಜೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ದೂರದೃಷ್ಟಿಯ ಚಿಂತನೆಯನ್ನು ಸಾಕಾರಗೊಳಿಸಬೇಕಾಗಿ ವಿನಂತಿ' ಎಂದು ಮನವಿ ಮಾಡಿದ್ದಾರೆ.
ಲಕ್ಷದ್ವೀಪ-ಮಂಗಳೂರು ನಡುವಿನ ಪ್ರಯಾಣಿಕರ ಹಡಗು ಸೇವೆಯಿಂದ ಜನರ ಸಮಯ, ಹಣ ಉಳಿತಾಯವಾಗಲಿದೆ. ಕೋವಿಡ್ ಪರಿಸ್ಥಿತಿಗೂ ಮೊದಲು ಈ ಹಡಗು ಸೇವೆ ಇತ್ತು. ಬಳಿಕ ಸ್ಥಗಿತಗೊಂಡಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ಹಡಗು ಸೇವೆಯನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈಗ ಪ್ರಯಾಣಿಕ ಹಡಗು ಸೇವೆ ಮತ್ತೆ ಆರಂಭವಾಗಿದೆ.
ನೇರ ಪ್ರಯಾಣಿಕ ಹಡಗು ಸೇವೆ ಇಲ್ಲದ ಕಾರಣ ಜನರು ಲಕ್ಷದ್ವೀಪದಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಮಂಗಳೂರಿಗೆ ತಲುಪಬೇಕಿತ್ತು. ಇದರಿಂದಾಗಿ ಸಮಯ ಹೆಚ್ಚು ಬೇಕಾಗುತ್ತಿತ್ತು. ಲಕ್ಷದ್ವೀಪ ಸ್ಥಳೀಯ ಆಡಳಿತ ಸಹ ಲಕ್ಷದ್ವೀಪ-ಮಂಗಳೂರು ನಡುವಿನ ಪ್ರಯಾಣಿಕ ಹಡಗು ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಲಕ್ಷದ್ವೀಪ-ಮಂಗಳೂರು ಪ್ರಯಾಣಿಕ ಹಡಗಿನಲ್ಲಿ ಮಂಗಳೂರು ಹಳೆ ಬಂದರಿಗೆ ಆಗಮಿಸಿದ ಪ್ರಯಾಣಿಕರನ್ನು ಸ್ವಾಗತಿಸಲಾಯಿತು. ಲಕ್ಷದ್ವೀಪದ ಮಾಜಿ ಸಂಸದ ಅಮ್ದುಲ್ಲಾ ಸೈಯದ್ ಸಹ ಮಂಗಳೂರಿಗೆ ಆಗಮಿಸಿದರು. ಲಕ್ಷದ್ವೀಪ-ಮಂಗಳೂರು ನಡುವೆ ಪ್ರಯಾಣಿಕ ಹಡಗು ಸೌಲಭ್ಯವನ್ನು ಪುನಃ ಆರಂಭಿಸುವ ಕುರಿತು ಯು. ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆ ಚರ್ಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಭಾರತದಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಿಂದಲೂ ಹಲವು ಪ್ರವಾಸಿಗರು ಲಕ್ಷದ್ವೀಪಕ್ಕೆ ಭೇಟಿ ನೀಡುತ್ತಾರೆ. ಈಗ ನೇರ ಪ್ರಯಾಣಿಕ ಹಡಗು ಸೇವೆ ಆರಂಭವಾಗಿದ್ದು, ಅವರಿಗೆ ಅನುಕೂಲವಾಗಿದೆ.












Click it and Unblock the Notifications