Krishna janmashtami 2023: ಕರ್ನಾಟಕದಲ್ಲಿನ ಟಾಪ್ 5 ಶ್ರೀ ಕೃಷ್ಣ ದೇವಾಲಯಗಳಿವು, ವಿವರ ಇಲ್ಲಿದೆ
ಹಿಂದೂಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪವಿತ್ರ ಹಬ್ಬಗಳಲ್ಲಿ ಒಂದಾದ ಶ್ರೀ ಕೃಷ್ಣ ಜನ್ಮಾಷ್ಟಮಿಯು ಈ ವರ್ಷ ಸೆಪ್ಟೆಂಬರ್ 6 ಬುಧವಾರದಂದು ಬಂದಿದ್ದು, ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಪ್ರಸಿದ್ಧ ಅವತಾರಗಳಲ್ಲಿ ಒಂದಾದ ಶ್ರೀಕೃಷ್ಣನು ಜನಿಸಿದ ದಿನ ಎಂದು ಅಷ್ಟಮಿಯನ್ನು ಹಿಂದೂಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ ಮಹತ್ವದ ಹಬ್ಬವಾಗಿ ಆಚರಿಸಲಾಗುತ್ತದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಕೆಲವರು ಮನೆಯಲ್ಲೇ ಶ್ರೀಕೃಷ್ಣನ ವಿಗ್ರಹಗಳನ್ನು ಪೂಜಿಸಿ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಇನ್ನೂ ಕೆಲವರು ಸಮೀಪದ ಶ್ರೀಕೃಷ್ಣನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಕರ್ನಾಟಕದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಭೇಟಿ ನೀಡಬಹುದಾದ ದೇವಾಲಯಗಳ ಪಟ್ಟಿ ಇಲ್ಲಿದೆ.

ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಈ ದೇವಾಲಯಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಹಬ್ಬದ ದಿನ ನೀವು ಈ ದೇವಾಲಯಗಳಿಗೆ ಭೇಟಿ ನೀಡಿದರೆ ಮಾಧವನ ದರ್ಶನದ ಜೊತೆಗೆ ಕಣ್ಣುಗಳಿಗೂ ಹಬ್ಬವಾಗುವುದರಲ್ಲಿ ಎರಡು ಮಾತಿಲ್ಲ.
ಉಡುಪಿ ಶ್ರೀ ಕೃಷ್ಣ ಮಠ
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕೃಷ್ಣ ದೇವಾಲಯಗಳಲ್ಲಿ ಒಂದಾದ ಉಡುಪಿ ಶ್ರೀ ಕೃಷ್ಣ ಮಠವು ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಸುಂದರವಾದ ದೇವಾಲಯವಾಗಿದೆ. ದಾಖಲೆಗಳ ಪ್ರಕಾರ, ಈ ದೇವಾಲಯವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ,
ಈ ದೇವಾಲಯವು ಹಿಂದೂ ಭಕ್ತರಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಅಷ್ಟಮಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದೇ ಧನ್ಯ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ದೇವಾಲಯವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗುತ್ತದೆ. ಹಾಗೂ ದಿನಕ್ಕೊಂದು ಉತ್ಸಾಹದಂತೆ ಮಠದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.
ಅಷ್ಟಮಿಯ ದಿನ ಆರ್ಘ್ಯ ಪ್ರದಾನ ಮುಗಿದ ನಂತರ, ಶ್ರೀ ಕೃಷ್ಣ ಲೀಲೋತ್ಸವದ ಸಂಭ್ರಮ ರಥ ಬೀದಿಯನ್ನು ಆವರಿಸಿಬಿಡುತ್ತದೆ. ಅನೇಕ ಮಂದಿ ಉಪವಾಸ, ಪೂಜೆ ಪುನಸ್ಕಾರಗಳ ಮೂಲಕ ಕೃಷ್ಣನ ಆರಾಧನೆ ಮಾಡುತ್ತಾರೆ. ಜೊತೆಗೆ ಕಲಾರಾಧನೆಯ ಮೂಲಕ ಕೃಷ್ಣನ ಪೂಜೆ ಮಾಡುವವರು ಸಾವಿರಾರು ಮಂದಿ. ಹರಕೆ ಹೊತ್ತು ವೇಷ ಧರಿಸಿ ಕೃಷ್ಣನ ಸೇವೆ ಮಾಡುತ್ತಾರೆ. ಹುಲಿ ವೇಷ, ಹುಲಿ ಕುಣಿತದ ಅಬ್ಬರವಂತೂ ಮುಗಿಲು ಮುಟ್ಟಿರುತ್ತದೆ. ಜೊತೆಗೆ ವಿಟ್ಲಪಿಂಡಿಯ ದಿನ ಮೊಸರು ಕುಡಿಕೆ ಉತ್ಸವ ಸಹ ನಡೆಯುತ್ತದೆ. ಲಕ್ಷಾಂತರ ಮಂದಿ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.
ಇನ್ನು ಉಡುಪಿಯ ಅಷ್ಠ ಮಠಗಳಿಗೆ ಭೇಟಿ ನೀಡಿದ ಬಳಿಕ 1,000 ವರ್ಷಗಳಿಗಿಂತಲೂ ಹಳೆಯದಾದ ಸಮೀಪದ ಅನಂತೇಶ್ವರ ದೇವಸ್ಥಾನಕ್ಕೂ ನೀವು ಭೇಟಿ ನೀಡಬಹುದಾಗಿದೆ.
ಬೆಂಗಳೂರಿನ ಇಸ್ಕಾನ್ ದೇವಾಲಯ
ಆಧುನಿಕ ಯುಗದಲ್ಲಿ ನಿರ್ಮಾಣವಾಗಿರುವ ಸುಂದರವಾದ ದೇವಾಲಯಗಳಲ್ಲಿ ಒಂದು ಬೆಂಗಳೂರಿನ ಇಸ್ಕಾನ್ ದೇವಾಲಯ. ಸುಂದರವಾದ ಉದ್ಯಾನವನ, ನೋಡಿದಷ್ಟು ಮುಗಿಯದ ಇಲ್ಲಿನ ವಾಸ್ತುಶಿಲ್ಪ, ಆಚಾರ ವಿಚಾರ, ಇಲ್ಲಿನ ರಾಧ-ಕೃಷ್ಣರನ್ನು ಆರಾಧಿಸುವ ಪರಿ. ಹೀಗೆ ಬೆಂಗಳೂರಿನ ಇಸ್ಕಾನ್ ದೇವಾಲಯ ಹಲವು ವಿಚಾರಗಳಿಂದ ತನ್ನದೇ ಆದ ವಿಶೇಷತೆ ಹೊಂದಿದೆ.
ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯವು ಕರ್ನಾಟಕದ ಅತ್ಯಂತ ಜನಪ್ರಿಯ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ದೇಶ ವಿದೇಗಳಿಂದ ದಿನ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು 1997 ರಲ್ಲಿ ನಿರ್ಮಿಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಪೂಜಾ ಕೈಕಾರ್ಯಗಳ ಜೊತೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಾಗ ದೇವಾಲಯದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಲು ಅಷ್ಟಮಿಯ ದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿರುವ ಇದು, ಭಕ್ತರನ್ನು ಮಂತ್ರಮುಗ್ಧಗೊಳಿಸುವುದರಲ್ಲಿ ಎರಡು ಮಾತಿಲ್ಲ.
ಹಂಪಿಯ ಬಾಲಕೃಷ್ಣ ದೇವಾಲಯ
ಐತಿಹಾಸಿಕ ಕ್ಷೇತ್ರ ಎಂದೇ ಕರೆಯಲ್ಪಡುವ ಕರ್ನಾಟಕದ ಹಂಪಿಯಲ್ಲಿ ನೀವು ಹತ್ತಾರು ದೇವಾಲಯಗಳನ್ನು ನೋಡಬಹುದು. ಅದರಲ್ಲಿ ಬಾಲಕೃಷ್ಣ ದೇವಾಲಯವು ಕೂಡ ಒಂದು. 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಈ ಬಾಲಕೃಷ್ಣ ದೇವಾಲಯವನ್ನು ನಿರ್ಮಿಸಲಾಯಿತು ಎನ್ನುವುದು ಇತಿಹಾಸ.
ಇತಿಹಾಸದ ಬಗ್ಗೆ ಅಧ್ಯಯನ ಮಾಡುವವರು, ಆಸಕ್ತಿ ಇರುವವರು ಹಾಗೂ ಸ್ಥಳೀಯ ಸ್ಥಳೀಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸದ್ಯ ಪಾಳುಬಿದ್ದಂತಿರುವ ಈ ದೇವಾಯದಲ್ಲಿ ಹುದುಗಿಹೋದ ಅದೆಷ್ಟೋ ಗತಕಾಲದ ವೈಭವವಿದೆ. ಭಗವಾನ್ ಕೃಷ್ಣನಿಗೆ ಸಂಬಂಧಿಸಿರುವ ಈ ಸ್ಥಳದಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಇರುವವರು ಸಂಶೋಧನೆ ನಡೆಸಬಹುದು. ಒಂದು ಕಾಲದಲ್ಲಿ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದ ಶ್ರೀಕೃಷ್ಣನ ವಿಗ್ರಹವನ್ನು ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನು ಯುದ್ಧಗೆದ್ದು ತಂದನೆಂದು ಹೇಳಲಾಗುತ್ತದೆ. ಪ್ರಸ್ತುತ, ವಿಗ್ರಹವನ್ನು ಚೆನ್ನೈನ ರಾಜ್ಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.
ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನ
ಸಾವಿರಾರು ಹಿಂದೂ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುವ ಮತ್ತೊಂದು ಸುಂದರವಾದ ದೇವಾಲಯವೆಂದರೆ ಅದರ ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಾಲಯ. 12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕೆಆರ್ಎಸ್ ಜಲಾಶಯದ ದಂಡೆಯ ಮೇಲಿರುವ ಮನಮೋಹಕ ದೇವಾಲಯ ಪ್ರಕೃತಿ ಸೌಂದರ್ಯದ ಜೊತೆಗೆ ವಿಭಿನ್ನವಾದ ವಾಸ್ತುಶಿಲ್ಪದ ಸೌಂದರ್ಯದಿಂದ ಸಮೃದ್ಧವಾಗಿದೆ.
ಈ ದೇವಾಲಯದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಪೂಜಿಸುವುದರ ಜೊತೆಗೆ ವೇಣುಗೋಪಾಲ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಇಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಷ್ಟಮಿ ಸಮಯದಲ್ಲಿ ಮೈಸೂರಿಗೆ ಭೇಟಿ ನೀಡಿದರೆ, ಈ ದೇವಾಲಯಕ್ಕೆ ಹೋಗುವುದನ್ನು ಮಿಸ್ ಮಾಡಬೇಡಿ.
ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಮಂಗಳೂರು
ಮಂಗಳೂರಿನ ಅತ್ಯಂತ ಜನಪ್ರಿಯ ಕೃಷ್ಣ ದೇವಸ್ಥಾನ, ಶ್ರೀ ಗೋಪಾಲ ಕೃಷ್ಣ ದೇವಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸೂಕ್ತವಾದ ಸ್ಥಳವಾಗಿದೆ. ಈ ಹಬ್ಬದ ಸಮಯದಲ್ಲಿ, ದೇವಾಲಯವು ಪ್ರವಾಸಿಗರು ಮತ್ತು ಭಕ್ತರಿಂದ ತುಂಬಿರುತ್ತದೆ. ಶ್ರೀ ಗೋಪಾಲ ಕೃಷ್ಣನನ್ನು ಆರಾಧಿಸುವ ಭಕ್ತರ ಉತ್ಸಾಹದಿಂದ ಅಲ್ಲಿನ ಸಂಪೂರ್ಣ ವಾತಾವರಣದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಈ ದೇವಾಲಯಕ್ಕೆ ಸ್ಥಳೀಯರಲ್ಲದೇ ಅಂತರ್ ಜಿಲ್ಲೆಯಿಂದಲೂ ಭಕ್ತರು ಬಂದು ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗಿಯಾಗುತ್ತಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications