ಬಳ್ಳಾರಿ ಭಾಗಕ್ಕೆ ಬೇಡಿಕೆ ಇಟ್ಟಿರುವ ಹೆಚ್ಚುವರಿ ರೈಲುಗಳ ಪಟ್ಟಿ
ಬಳ್ಳಾರಿ, ನವೆಂಬರ್ 28; ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ನಿಯೋಗ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿ ಮಾಡಿದೆ. ಬಳ್ಳಾರಿ ಭಾಗಕ್ಕೆ ಹೆಚ್ಚುವರಿ ರೈಲು ಸೌಲಭ್ಯವನ್ನು ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿದೆ. ಯಾವ-ಯಾವ ರೈಲು ಓಡಿಸಬೇಕು ಎಂದು ಸಹ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದೆ.
ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರಸ್ವಾಮಿ ನೇತೃತ್ವದ ನಿಯೋಗ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಯಾಣಿಕರ ರೈಲುಗಳ ಸಂಚಾರ ಮುಖ್ಯಸ್ಥ ಪ್ರಶಾಂತ್ ಕುಮಾರ್ ಅವರ ಕಾರ್ಯದರ್ಶಿ ಸುನಿಲ್ ಗೋಪಿನಾಥ ರಾವ್ ಹಾಗೂ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ವಲಯದ ಮುಖ್ಯ ಅಭಿಯಂತರ ಲಕ್ಷ್ಮಣ ಸಿಂಗ್ ಭೇಟಿ ಮಾಡಿತು.

ನಿಯೋಗ ಬಳ್ಳಾರಿ ಭಾಗಕ್ಕೆ ವಿವಿಧ ರೈಲ್ವೆ ಸೌಕರ್ಯ ಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿತು. ಗಂಗಾವತಿ- ದರೋಜಿ ನೂತನ ರೈಲ್ವೆ ಯೋಜನೆಯ ಜತೆಗೆ ಕಂಪ್ಲಿ- ಎಮ್ಮಿಗನೂರು-ಕುರುಗೋಡು-ಬಾದನಹಟ್ಟಿ ಸಿದ್ದಮ್ಮನಹಳ್ಳಿ- ಕೊಳಗಲ್ಲು ಮಾರ್ಗದ ಮುಖೇನ ಬಳ್ಳಾರಿ ಕಂಟೋನ್ಮೆಂಟ್ ಮಾರ್ಗದ ನೂತನ ರೈಲು ಯೋಜನೆಯ ಆರ೦ಭಿಸಬೇಕು ಎಂದು ಬೇಡಿಕೆ ಇಟ್ಟಿತು.
ಯಾವ-ಯಾವ ರೈಲುಗಳು?; ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ನಿಯೋಗ ಹಗಲು ಸಂಚಾರ ನಡೆಸುವ ಹುಬ್ಬಳ್ಳಿ-ಗುಂತಕಲ್-ಹುಬ್ಬಳ್ಳಿ ರೈಲು, ಗುಂತಕಲ್ ತಲುಪದೇ ಕೇವಲ ತೋರಣಗಲ್ನಲ್ಲಿ ಕಳೆದ ಎರಡು ತಿಂಗಳುಗಳಿಂದ ನಿಲ್ಲುತ್ತಿದೆ. ಈ ರೈಲು ಕೂಡಲೇ ಬಳ್ಳಾರಿಗೆ ಬರಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿತು.
ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣದ ಮೂಲಕ ಸಾಗುವ ಹೊಸಪೇಟೆ- ಬೆಂಗಳೂರು ಎಕ್ಸ್ಪ್ರೆಸ್, ಕಾರಟಗಿ-ಬಳ್ಳಾರಿ-ಯಶವಂತಪುರ ರೈಲು, ಮೈಸೂರು-ಬಳ್ಳಾರಿ-ಶಿರಡಿ ಎಕ್ಸ್ಪ್ರೆಸ್ ರೈಲುಗಳು ಬಳ್ಳಾರಿಯ ನೂತನ ಬೈಪಾಸ್ ರೈಲ್ವೆ ನಿಲ್ದಾಣ ರಚನೆಯಾಗುವವರೆಗೆ ಬಳ್ಳಾರಿ ನಿಲ್ದಾಣದ ಮೂಲಕ ಸಂಚರಿಸುವಂತೆ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಬಳ್ಳಾರಿ ಮಾರ್ಗದಲ್ಲಿ ಸಂಚಾರ ನಡೆಸುವ ಶಿವಮೊಗ್ಗ-ಚೆನ್ನೈ-ಎಕ್ಸ್ಪ್ರೆಸ್ ಸೇರಿದಂತೆ ರದ್ದಾಗಿರುವ ಎಲ್ಲ ರೈಲುಗಳನ್ನು ಪುನರಾರಂಭಿಸಬೇಕು. ಹಂಪಿ ಎಕ್ಸ್ಪ್ರೆಸ್ ಸೇರಿದಂತೆ ಅನೇಕ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತಿಲ್ಲ. ಮುರ್ನ್- ಬೆಳಗಾವಿ ಎಕ್ಸ್ಪ್ರೆಸ್ ರೈಲು, ಬಳ್ಳಾರಿ- ದಾವಣಗೆರೆ ಡೆಮೋ ರೈಲು, ತಿರುಪತಿ- ಹುಬ್ಬಳ್ಳಿ ರೈಲು ಸೇರಿದಂತೆ ಇತರೆ ರೈಲುಗಳು ನಿಗದಿತ ಸಮಯಕ್ಕೆ ಓಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಸಂಜೆ 7.30ಕ್ಕೆ ಹುಬ್ಬಳ್ಳಿಯಿಂದ ತಿರುಪತಿಗೆ ಹೋಗಲು ರೈಲು ಇರುವುದರಿಂದ ಇದೇ ಸಮಯದಲ್ಲಿ ಸಂಜೆ 7.30ಕ್ಕೆ ಹುಬ್ಬಳ್ಳಿ ಇಂದ ಹೊರಡುವ ಹುಬ್ಬಳ್ಳಿ-ವಿಜಯವಾಡ ಎಕ್ಸ್ಪ್ರೆಸ್ ರೈಲು ಒಂದು ಗಂಟೆ ತಡವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಈ ಭಾಗದ ಜನರು ಬೆಳಗ್ಗೆ 7.30ಕ್ಕೆ ಶ್ರೀಶೈಲ ತಲುಪಲು ಮಾರ್ಕಾಪುರಂ ರೈಲ್ವೆ ಸ್ಟೇಷನ್ನಲ್ಲಿ ಇಳಿಯಲು ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಕೆ ಮಾಡಲಾಯಿತು.
ಬಳ್ಳಾರಿ ರೈಲು ನಿಲ್ದಾಣ ಅತ್ಯಂತ ಪುರಾತನ ರೈಲ್ವೆ ನಿಲ್ದಾಣವಾಗಿದೆ. ರೈಲು ನಿಲ್ದಾಣದ ಅಭಿವೃದ್ಧಿಗೆ 250 ಕೋಟಿ ಮಂಜೂರು ಮಾಡಿ ಸಮಗ್ರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮಾಡಿ ಪ್ಲಾಟ್ ಫಾರಂಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications