ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಬೀಳಲಿದೆ ದಂಡ
ಪ್ರಯಾಣ ಎನ್ನುವುದು ಜನರ ದಿನನಿತ್ಯದ ಜೀವನದ ಒಂದು ಭಾಗವಾಗಿದೆ. ಬಸ್, ಕಾರು, ವಿಮಾನಗಳ ಜೊತೆಗೆ ರೈಲು ಪ್ರಯಾಣಕ್ಕೂ ತನ್ನದೇ ಆದ ವಿಶೇಷ ಆಕರ್ಷಣೆ ಇದೆ. ಭಾರತೀಯ ರೈಲ್ವೆ ಇಲಾಖೆಯು ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುವ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಕಿಟಕಿಯ ಮೂಲಕ ಸುಂದರವಾದ ದೃಶ್ಯಗಳು, ಸ್ಟೇಷನ್ಗಳಲ್ಲಿ ಸಿಗುವ ಬಿಸಿ ಚಹಾ, ಕಾಫಿ, ಸುದೀರ್ಘ ಪ್ರಯಾಣದಲ್ಲಿ ಪರಿಚಯವಾಗುವ ಹೊಸ ಜನರು - ಇವೆಲ್ಲವೂ ರೈಲು ಪ್ರಯಾಣವನ್ನು ನೆನಪಿನಲ್ಲಿರುವಂತೆ ಮಾಡುತ್ತವೆ. ಇದೇ ಕಾರಣಕ್ಕೆ ಅನೇಕರು ರೈಲು ಪ್ರಯಾಣದ ವೇಳೆ ಬೇಕಾದ ಎಲ್ಲ ವಸ್ತುಗಳನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಹೋಗುತ್ತಾರೆ.
ಆದರೆ, ರೈಲಿನಲ್ಲಿ ಪ್ರಯಾಣಿಸುವಾಗ ಭಾರತೀಯ ರೈಲ್ವೆಯ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲೇಬೇಕು. ಅಪಾಯಕಾರಿ ವಸ್ತುಗಳನ್ನು ಸಾಗಿಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು.

ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ
ಭಾರತಿಯ ರೈಲ್ವೆ ನಿಯಮಗಳ ಪ್ರಕಾರ ಬೆಂಕಿ ಹೊತ್ತಿಕೊಳ್ಳುವ ಅಥವಾ ಸ್ಫೋಟ ಸಂಭವಿಸುವಂತಹ ವಸ್ತುಗಳನ್ನು ರೈಲಿನಲ್ಲಿ ಸಾಗಿಸಲು ಅವಕಾಶ ಇರುವುದಿಲ್ಲ. ಪೆಟ್ರೋಲ್, ಡೀಸೆಲ್, ಕೆರೋಸಿನ್, ಗ್ಯಾಸ್ ಸಿಲಿಂಡರ್, ಸ್ಟೌವ್ ಇಂಧನ, ಪಟಾಕಿ ಹಾಗೂ ರಾಸಾಯನಿಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಿಶೇಷವಾಗಿ ಬೆಟ್ಟ ಪ್ರದೇಶಗಳಿಗೆ ಅಥವಾ ದೂರದ ಪ್ರವಾಸಗಳಿಗೆ ಹೋಗುವವರು ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ಅಥವಾ ಡಬ್ಬಿಗಳಲ್ಲಿ ಇಂಧನವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಇದು ರೈಲಿನಲ್ಲಿ ಕೊಂಡೊಯ್ಯಲು ನಿಷೇಧಿಸಲಾಗಿದೆ. ಕೆಲವೊಮ್ಮೆ ಈ ತರಹದ ವಸ್ತುಗಳನ್ನು ತೆಗೆದುಕೊಂಡು ಹೋಗುವುದರಿಂದ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಪಟಾಕಿ ಮತ್ತು ರಾಸಾಯನಿಕ ವಸ್ತುಗಳಿಗೂ ನಿರ್ಬಂಧ
ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ಮತ್ತು ಕೆಲ ರಾಸಾಯನಿಕ ಪದಾರ್ಥಗಳನ್ನು ಸಾಗಿಸುವುದಕ್ಕೂ ಭಾರತೀಯ ರೈಲ್ವೆ ಇಲಾಖೆಯು ಕಟ್ಟುನಿಟ್ಟಾದ ನಿರ್ಬಂಧವನ್ನು ಹೇರಿದೆ. ಇಂತಹ ವಸ್ತುಗಳನ್ನು ಸಾಗಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದಾಗಿದೆ. ಅಧಿಕಾರಿಗಳಿಗೆ ಅಪಾಯದ ಅನುಮಾನ ಬಂದರೆ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
ಇದೇ ರೀತಿಯಾಗಿ ಆಮ್ಲಗಳು, ಕ್ಲೀನಿಂಗ್ ಆಸಿಡ್, ಕೀಟನಾಶಕಗಳು ಮತ್ತು ರಾಸಯನಿಕ ದ್ರವ್ಯಗಳನ್ನು ಪ್ರಯಾಣಿಕರು ಕೊಂಡುಯ್ಯಲು ಅವಕಾಶವಿಲ್ಲ.
ದೊಡ್ಡ ಗಾತ್ರದ ಸಾಮಾನುಗಳಿಗೂ ನಿಯಮ
ಅದೇ ರೀತಿ ಬೋಗಿಯ ಒಳಗಿನ ದಾರಿ, ಬಾಗಿಲುಗಳು ಅಥವಾ ತುರ್ತು ನಿರ್ಗಮನ ಮಾರ್ಗಗಳನ್ನು ಅಡ್ಡವಾಗುವಷ್ಟು ದೊಡ್ಡ ಗಾತ್ರದ ಸಾಮಾನುಗಳನ್ನು ಸಾಗಿಸುವುದಕ್ಕೂ ಭಾರತೀಯ ರೈಲ್ವೆ ನಿರ್ಬಂಧ ಹೇರಿದೆ.
ಕೆಲ ಪ್ರಯಾಣಿಕರು ಹೆಚ್ಚು ಲಗೇಜ್, ದೊಡ್ಡ ಪೆಟ್ಟಿಗೆಗಳು ಅಥವಾ ವ್ಯಾಪಾರಿಕ ಸರಕುಗಳನ್ನು ಬೋಗಿಯ ದಾರಿಯಲ್ಲಿ ಇಡುವುದರಿಂದ ಇತರ ಪ್ರಯಾಣಿಕರಿಗೆ ಸಂಚಾರದಲ್ಲಿ ತೊಂದರೆ ಉಂಟಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಬೇಗನೆ ಹೊರಬರಬೇಕಾದ ಸಂದರ್ಭಗಳಲ್ಲಿ ಇಂತಹ ಸಾಮಾನುಗಳು ಅಪಾಯಕ್ಕೆ ಕಾರಣವಾಗಬಹುದು. ಇದರಿಂದ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಇಲಾಖೆ ಅಗತ್ಯ ಮಿತಿಗಿಂತ ಹೆಚ್ಚು ಅಥವಾ ದಾರಿಯನ್ನು ಅಡ್ಡಿಪಡಿಸುವ ಲಗೇಜ್ಗಳನ್ನು ಸಾಗಿಸಬಾರದು ಎಂದು ಸೂಚಿಸಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಸಾಧ್ಯತೆಯೂ ಇದೆ.
ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳಿಗೆ ಸಂಪೂರ್ಣ ನಿಷೇಧ
ಸರಿಯಾದ ದಾಖಲೆಗಳು ಮತ್ತು ಅನುಮತಿ ಇಲ್ಲದೆ ಶಸ್ತ್ರಾಸ್ತ್ರ, ಗನ್ ಅಥವಾ ಗುಂಡುಗಳನ್ನು ರೈಲಿನಲ್ಲಿ ಸಾಗಿಸುವುದು ಗಂಭೀರ ಅಪರಾಧವಾಗಿದೆ. ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳಿಗೂ ವಿಶೇಷ ನಿಯಮಗಳಿವೆ.
ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಮುಖ್ಯವಾಗಿದೆ.














Click it and Unblock the Notifications